Advertisement

ಸಿಎಂ ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟ್

11:43 AM Jun 10, 2019 | Team Udayavani |

ಮಂಡ್ಯ: ನಾವು ಕಾಂಗ್ರೆಸ್‌ನಲ್ಲಿ ಉಳಿಯ ಬೇಕೋ ಅಥವಾ ಬಿಜೆಪಿಗೆ ಹೋಗ ಬೇಕೋ ಎಂದು ಹೇಳಲು ಅವನ್ಯಾರು ಎಂದು ಪ್ರಶ್ನಿಸುವ ಮೂಲಕ ಶಾಸಕ ಸುರೇಶ್‌ಗೌಡ ವಿರುದ್ಧ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಏಕವಚನ ದಲ್ಲಿ ವಾಗ್ಧಾಳಿ ನಡೆಸಿದರು.

Advertisement

ದೇವೇಗೌಡರನ್ನು ನೋಡಿಯೋ ಅಥವಾ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಲಿ ಎಂಬ ಕಾರಣಕ್ಕೆ ಜಿಲ್ಲೆಯ ಜನರು ಜೆಡಿಎಸ್‌ನ್ನು ಗೆಲ್ಲಿಸಿದ್ದಾರೆ. ಆದರೆ, ಇವರು ನಾಲಿಗೆಗೂ ಮತ್ತು ಮೆದುಳಿಗೂ ಸಂಬಂಧವೇ ಇಲ್ಲದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಸೋತರೆಂದು ಹತಾಶರಾಗಬಾರದು: ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ಮೇಲೆ ಸಚಿವ ಡಿ.ಸಿ.ತಮ್ಮಣ್ಣ ದರ್ಪ ತೋರಿದ ವಿಚಾರದ ಬಗ್ಗೆ ಮಾತನಾಡಿದ ಸಿಆರ್‌ಎಸ್‌, ಅದು ತಪ್ಪು. ಸೋತ ತಕ್ಷಣ ಹತಾಶರಾಗಿ ಮಾತನಾಡುವುದು ಸರಿಯಲ್ಲ. ಕ್ಷೇತ್ರದ ಜನರು ಅವರನ್ನ ಗೆಲ್ಲಿಸಿರುವುದಕ್ಕೇ ಮಂತ್ರಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಲೋಕಸಭೆ ಚುನಾವಣಾ ತೀರ್ಮಾನ ಜನರಿಗೆ ಬಿಟ್ಟಿದ್ದು. ಜನರು ನಮ್ಮನ್ನ ಕೇಳಿಕೊಂಡು ತೀರ್ಮಾನ ತೆಗೆದು ಕೊಳ್ಳಬೇಕು ಎಂದು ಹೇಳಲು ಆಗುವುದಿಲ್ಲ ಎಂದರು.

ಜನಪ್ರತಿನಿಧಿಗೆ ಗೌರವವಲ್ಲ: ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಸೋತಿಲ್ಲವೇ, ಅವರಿಗಿಂತ ಬಹಳ ಪ್ರಭಾವಿನಾ. ಇಂದಿರಾಗಾಂಧಿ, ವಾಜ ಪೇಯಿ ಸೋಲು ಕಂಡಿಲ್ಲವೇ ಇವರ ಕ್ಷೇತ್ರದಲ್ಲಿ ಹಿನ್ನೆಡೆಯಾದರೆ ಜನರನ್ನ ಗೆಟೌಟ್ ಎನ್ನುವುದು ಜನಪ್ರತಿನಿಧಿಗೆ ಗೌರವ ತರುವಂತದ್ದಲ್ಲ. ಅವರಿಗೆ ಸಿಎಂ ಎಚ್ಚರಿಕೆ ಕೊಟ್ಟಿರಬೇಕು. ಆದ್ದರಿಂದ, ಹತಾಶರಾಗಿ ಮಾತನಾಡಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ರಾಜಕೀಯ ನಾಟಕವೇ ಹೊರತು ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕುರಿತು ಟೀಕೆ ಮುಂದುವರಿಸಿದ್ದಾರೆ.

Advertisement

ಸರ್ಕಾರ ಅಭಿವೃದ್ಧಿ ಕೆಲಸದ ಮೂಲಕ ಜನರ ಹತ್ತಿರ ಹೋಗಬೇಕೇ ಹೊರತು ಗ್ರಾಮ ವಾಸ್ತವ್ಯದಿಂದಲ್ಲ. ಒಂದಿಬ್ಬರು ಬಡವರನ್ನು ಮಾತಾಡಿಸುವುದರಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಡವರಲ್ಲಿ ಒಬ್ಬರನ್ನು ಮಾತಾಡಿಸಿದರೆ ಮತ್ತೂಬ್ಬರನ್ನು ಬಿಡುವುದೂ ಅಲ್ಲ. ರಾಜ್ಯದ ಎಲ್ಲ ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬದುಕು ಕಟ್ಟಿಕೊಡಿ: ರಾಜ್ಯದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಬೇಕು. ಅದನ್ನು ಬಿಟ್ಟು ನಾವು ಸಿಕ್ಕಕಡೆ ಪೋಟೋ ತೆಗೆಸಿಕೊಂಡು ಅವರಿಗೆ ಸಹಾಯ ಮಾಡಿದೆ, ಇವರಿಗೆ ಸಹಾಯ ಮಾಡಿದೆ ಎನ್ನುವುದಲ್ಲ. ಅದನ್ನು ನಾನೂ ಮಾಡಬಹುದು. ನೀವೂ ಮಾಡಬಹುದು. ಮುಖ್ಯಮಂತ್ರಿಯಾದ ಮೇಲೆ ಸಹಾಯ ಮಾಡುವುದು ದೊಡ್ಡಸ್ತಿಕೆ ಅಲ್ಲ. ರಾಜ್ಯದ ಎಲ್ಲರಿಗೂ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಇನ್ನು ಈಗಾಗಲೇ ಒಂದು ವರ್ಷದಲ್ಲಿ ಅವರು ಯಾರು ಮಾಡಿಕೊಳ್ಳದೆ ಇರುವಷ್ಟು ಡ್ಯಾಮೇಜ್‌ ಅವರಾಗಿಯೇ ಮಾಡಿಕೊಂಡಿದ್ದಾರೆ ಎಂದರು.

ಹಾರ್ಟ್‌ ಟು ಹಾರ್ಟ್‌ ಸೇರಿ ಕೆಲಸ: ಕಾಂಗ್ರೆಸ್‌ ವಿರೋಧ ಪಕ್ಷದಲ್ಲಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ 8ರಿಂದ 10 ಸೀಟು ಗೆಲ್ಲುತ್ತಿತ್ತು. ಮತ್ತೆ ಚುನಾವಣೆಗೆ ಹೋಗಬೇಕು ಎನ್ನುವುದು ಒಬ್ಬರಿಬ್ಬರ ತೀರ್ಮಾನ ಅಲ್ಲ. ರಾಜ್ಯದಲ್ಲಿ 224 ಶಾಸಕರಿದ್ದಾರೆ. ಅವರು ಯಾರೂ ಚುನಾವಣೆಗೆ ಹೋಗಬೇಕು ಎನ್ನುತ್ತಿಲ್ಲ. ಸರ್ಕಾರ ನಾಲ್ಕು ವರ್ಷ ಪೂರೈಸಬೇಕು ಎಂಬ ಆಸೆ ಎಲ್ಲರಿಗೂ ಇದೆ. ಅವಕಾಶ ಸಿಗುವವರು ಗೌರವಯುತವಾಗಿ ಕೆಲಸ ಮಾಡಬೇಕು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಾರ್ಟ್‌ ಟು ಹಾರ್ಟ್‌ ಸೇರಿ ಜನಪರ ಕೆಲಸ ಮಾಡಿಕೊಂಡು ಹೋಗಿದ್ದರೆ ಎಲ್ಲವೂ ಸರಿ ಹೋಗುತ್ತಿತ್ತು ಎಂದು ಹೇಳಿದರು.

ಸರಿ ಪಡಿಸಿಕೊಳ್ಳುತ್ತಾರಾ: ಸರ್ಕಾರದ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ನಿಮಗೂ ಗೊತ್ತು, ನಮಗೂ ಗೊತ್ತು. ಆದ್ದರಿಂದ, ಚೆನ್ನಾಗಿಲ್ಲ ಎಂಬುದನ್ನ ಚರ್ಚೆ ಮಾಡುವುದಲ್ಲ. ಅದು ವಾಸ್ತವವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅದನ್ನು ಸರಿ ಪಡಿಸಿಕೊಳ್ಳುತ್ತಾರಾ, ಕ್ಲೋಸ್‌ ಮಾಡುತ್ತಾರಾ ಅಥವಾ ಬೇರೆಯವರು ಇವರನ್ನ ಕ್ಲೋಸ್‌ ಮಾಡುತ್ತಾರಾ, ಅದೆಲ್ಲವನ್ನ ಮುಂದೆ ನೋಡೋಣ ಎಂದು ನೇರವಾಗಿ ಹೇಳಿದರು.

ಒಳ್ಳೆಯದಕ್ಕೆ ಮಾತ್ರ ಮಾಧ್ಯಮ ಬೇಕೆ: ಸಿಆರ್‌ಎಸ್‌ ಪ್ರಶ್ನೆ

ಒಳ್ಳೆಯದು ಹೇಳಿದಾಗ ಮಾಧ್ಯಮದವರು ಬೇಕು. ಆದರೆ, ತಪ್ಪನ್ನು ಹೇಳಿದಾಗ ಮಾತ್ರ ಬೇಡ. ಈ ದ್ವಂದ್ವ ನಿಲುವು ಸರಿಯಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಾಧ್ಯಮದವರಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿರುವುದನ್ನು ನೋಡಿದ್ದೇನೆ. ಮಾಧ್ಯಮಗಳಿಗೂ ಸ್ವಾತಂತ್ರ್ಯಇದೆ. ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ತಮಗೆ ಸಿಕ್ಕಂತಹ ಮಾಹಿತಿಯನ್ನ ಕೊಡುವುದು ಮಾಧ್ಯಮಗಳ ಜವಾಬ್ದಾರಿ. ನೀವು ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿ ತೋರಿಸಿ ಎಂದು ಹೇಳುವುದು ಸರಿಯಲ್ಲ. ಆಗಿರುವವರು ಕೆಲಸ ಮಾಡಿ ತೋರಿಸಬೇಕು. ಆಗದಿರುವವರನ್ನು ನೀವು ಬಂದು ಕೆಲಸ ಮಾಡಿ ಎಂದು ಹೇಳಿದರೆ ಹೇಗೆ? ಮನೆಯಿಂದ ಅವರನ್ನು ಬಲವಂತ ಮಾಡಿ ಯಾರೂ ಕರೆದುಕೊಂಡು ಬಂದಿಲ್ಲ. ನೀವು ಬರದೇ ಇದ್ದರೆ ರಾಜಕೀಯ ವ್ಯವಸ್ಥೆಯೇ ಇರಲ್ಲವೆಂದು ಯಾರು ಹೇಳಿಲ್ಲ . ಮಾಧ್ಯಮದವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next