Advertisement

ವಿಟಿಯು ವಿಭಜನೆಗೆ ಬ್ರೇಕ್‌: ಮನವಿಗೆ ಸ್ಪಂದಿಸಿದ ಸಿಎಂ

12:30 AM Feb 16, 2019 | |

ಬೆಂಗಳೂರು: ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಿ ಹಾಸನದಲ್ಲಿ ಮತ್ತೂಂದು ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಬ್ರೇಕ್‌ ಬಿದ್ದಿದೆ.

Advertisement

ಫೆಬ್ರವರಿ 8ರಂದು ನಡೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಟಿಯು ವಿಭಜನೆಯ ಘೋಷಣೆ ಮಾಡಿದ ತಕ್ಷಣ ಎಚ್ಚೆತ್ತುಕೊಂಡ ಉತ್ತರ ಕರ್ನಾಟಕದ ರಾಜಕೀಯ ನಾಯಕರು, ಗೃಹ ಸಚಿವ ಎಂ.ಬಿ.ಪಾಟೀಲರ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವಿಟಿಯು ವಿಭಜಿಸದಂತೆ ಪಕ್ಷಾತೀತವಾಗಿ ಒತ್ತಾಯಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಮೂರೂ ಪಕ್ಷಗಳನಾಯಕರು, ಗುರುವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವಿಟಿಯು ವಿಭಜಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದು, ವಿವಿ ವಿಭಜಿಸಿದರೆ, ಬೆಳಗಾವಿ ವಿಟಿಯು ಮುಚ್ಚಬೇಕಾಗುತ್ತದೆ ಎನ್ನುವುದನ್ನು ಮನವರಿಕೆಮಾಡಿಕೊಟ್ಟಿದ್ದಾರೆ. ಸಚಿವ ರೇವಣ್ಣ ವಿರೋಧದ ನಡುವೆಯೂ ಸಿಎಂ ಉತ್ತರ ಕರ್ನಾಟಕದ ನಾಯಕರ ಮನವಿಗೆ ಅಸ್ತು ಎಂದಿದ್ದಾರೆ. ಹೀಗಾಗಿ, 2019-20ನೇ ಸಾಲಿನ ಬಜೆಟ್‌ನಲ್ಲಿ ವಿಟಿಯು ವಿಭಜಿಸಿ ಹಾಸನದಲ್ಲಿ ಹೊಸ ತಾಂತ್ರಿಕ ವಿವಿ ತೆರೆಯುವ ಘೋಷಣೆ ಮಾಡಿರುವ ಪ್ರಸ್ತಾಪ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.

ವಿಭಜನೆ ಏಕೆ ಬೇಡ?: ರಾಜ್ಯದಲ್ಲಿ ತಾಂತ್ರಿಕ ವಿವಿಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ತೆರೆದರೆ, ದಕ್ಷಿಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಹಾಗೂ ಜನರೂ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಲು ಅವಕಾಶವಾಗುತ್ತದೆ. ಅದರೊಂದಿಗೆ ದಕ್ಷಿಣ ಕರ್ನಾಟಕ ಭಾಗದ ಜನರಿಗೆ ಉತ್ತರ ಕರ್ನಾಟಕ ಭಾಗದ ಪರಿಚಯವಾಗುತ್ತದೆ ಎನ್ನುವ ಕಾರಣಕ್ಕೆ ಜೆ.ಎಚ್‌.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ತಾಂತ್ರಿಕ ವಿವಿ ಆರಂಭಿಸಿದ್ದರು.

ರಾಜ್ಯದಲ್ಲಿ ವಿಟಿಯು ವ್ಯಾಪ್ತಿಯಲ್ಲಿ ಒಟ್ಟು 216 ತಾಂತ್ರಿಕ ಕಾಲೇಜುಗಳಿವೆ. ಅವುಗಳಲ್ಲಿ ಶೇಕಡಾ 70ರಷ್ಟು ಕಾಲೇಜುಗಳು ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿಯೇ ಸ್ಥಾಪಿತವಾಗಿವೆ. ಅವುಗಳಲ್ಲಿ ಬೆಂಗಳೂರು ವಿಭಾಗದಲ್ಲಿ 106 ಎಂಜಿನಿಯರಿಂಗ್‌ ಕಾಲೇಜುಗಳು, ಮೈಸೂರು ವಿಭಾಗದಲ್ಲಿ 58, ಕಲಬುರಗಿ ವಿಭಾಗದಲ್ಲಿ 18 ಹಾಗೂ ಬೆಳಗಾವಿ ವಿಭಾಗದಲ್ಲಿ 34 ಎಂಜಿನಿಯರಿಂಗ್‌ ಕಾಲೇಜುಗಳಿವೆ.

Advertisement

ಒಂದು ವೇಳೆ ವಿಶ್ವವಿದ್ಯಾಲಯ ವಿಭಜನೆ ಮಾಡಿದರೆ, ಬೆಂಗಳೂರು, ಮೈಸೂರು ವಿಭಾಗದ ಹಳೆ ಮೈಸೂರು ಭಾಗಕ್ಕೆ 164 ಕಾಲೇಜುಗಳು ಬರಲಿದ್ದು, ಬೆಳಗಾವಿ ಕಲಬುರಗಿ ವಿಭಾಗದ ವ್ಯಾಪ್ತಿಯಲ್ಲಿ ಕೇವಲ 52 ಕಾಲೇಜುಗಳು ಮಾತ್ರ ಉಳಿಯುತ್ತವೆ. ಅಲ್ಲದೆ, ವಿಟಿಯು ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ 1.80 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು, ಅವರಲ್ಲಿ 1.40 ಲಕ್ಷ ವಿದ್ಯಾರ್ಥಿಗಳು ದಕ್ಷಿಣ ಕರ್ನಾಟಕ ಭಾಗದ ಕಾಲೇಜುಗಳಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಕೇವಲ 40 ಸಾವಿರ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ.

ಹೀಗಾಗಿ ವಿಶ್ವವಿದ್ಯಾಲಯ ವಿಭಜಿಸಿ ಹಾಸನದಲ್ಲಿ ಮತ್ತೂಂದು ವಿಶ್ವವಿದ್ಯಾಲಯ ತೆರೆದರೆ, ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ವಿವಿ ವ್ಯಾಪ್ತಿಗೊಳಪಡುವ ಕಾಲೇಜುಗಳ ಸಂಖ್ಯೆ ಕಡಿಮೆಯಾಗುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಸಂಶೋಧನೆಗೆ ಯುಜಿಸಿಯಿಂದ ದೊರೆಯುವ ಅನುದಾನ ಪ್ರಮಾಣ ಕಡಿಮೆಯಾಗುವುದರಿಂದ ವಿಶ್ವವಿದ್ಯಾಲಯದ ಘನತೆಗೂ ಧಕ್ಕೆಯಾಗುತ್ತದೆ. ಇದರಿಂದ ವಿಶ್ವ ವಿದ್ಯಾಲಯಕ್ಕೆ ಆದಾಯದ ಕೊರತೆ ಉಂಟಾಗಿ ಬಾಗಿಲು ಮುಚ್ಚಬೇಕಾಗುತ್ತದೆ.

ರೇವಣ್ಣ ಅಸಮಾಧಾನ: ಹಾಸನದಲ್ಲಿ ಹೊಸ ತಾಂತ್ರಿಕ ವಿವಿ ಸ್ಥಾಪನೆಗೆ ಮುಂದಾಗಿದ್ದ ಸಚಿವ ಎಚ್‌.ಡಿ.ರೇವಣ್ಣ, ಬಜೆಟ್‌ ಘೋಷಣೆಯನ್ನು ಕೈ ಬಿಡದಂತೆ ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ. ಆದರೆ, ಕುಮಾರಸ್ವಾಮಿಯವರು ಪ್ರತ್ಯೇಕ ವಿವಿ ತೆರೆಯುವ ಬದಲು ವಿಟಿಯು ವ್ಯಾಪ್ತಿಯಲ್ಲಿಯೇ ಹಾಸನದಲ್ಲಿ ಪ್ರಾದೇಶಿಕ ಕಚೇರಿ ತೆರೆಯಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನು ವಿಭಜಿಸಿ ಕೋಲಾರದಲ್ಲಿ ಪ್ರತ್ಯೇಕ ತಾಂತ್ರಿಕ ವಿವಿ ಸ್ಥಾಪಿಸುವಂತೆ ಕೋಲಾರ ಜಿಲ್ಲೆಯ ಮುಖಂಂಡರು ಬಜೆಟ್‌ ಪೂರ್ವ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದರು. ಇದನ್ನು  ಅರಿತ ರೇವಣ್ಣ, ಅದನ್ನು ಹಾಸನದಲ್ಲಿ ಸ್ಥಾಪಿಸುವಂತೆ ಒತ್ತಡ ಹೇರಿದ್ದರು ಎಂದು ತಿಳಿದು ಬಂದಿದೆ.

ವಿಟಿಯು ವಿಭಜನೆ ಇಲ್ಲ: ಕುಮಾರಸ್ವಾಮಿ

ಹಾಸನ: ದೇವೇಗೌಡರ ಕನಸಿನಂತೆ ಹಾಸನದಲ್ಲಿ ಐಐಟಿಗಿಂತಲೂ ಉತ್ಕೃಷ್ಟಶಿಕ್ಷಣ ನೀಡುವ ವಿಶ್ವದರ್ಜೆಯ ತಾಂತ್ರಿಕ ಶಿಕ್ಷಣದ ಕ್ಯಾಂಪಸ್‌ ನಿರ್ಮಾಣ ಮಾಡಬೇಕೆಂಬುದು ನನ್ನ ಉದ್ದೇಶವೇ ಹೊರತು ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯನ್ನು ವಿಭಜನೆ ಮಾಡಬೇಕೆಂಬ ಉದೆಟಛೀಶವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿ, ದೇವೇಗೌಡರ ಒತ್ತಾಸೆಯಂತೆ ಹಾಸನದಲ್ಲಿ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ವಿಶ್ವವಿದ್ಯಾನಿಲಯ ನಿರ್ಮಾಣವಾಗಬೇಕೆಂಬುದು ಸಚಿವ ಎಚ್‌.ಡಿ.ರೇವಣ್ಣ ಅವರ ಬಯಕೆ. ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ, ಉತ್ತರ ಕರ್ನಾಟಕ ಭಾಗದ ಶಾಸಕರು ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ವಿಭಜನೆ ಮಾಡಿ ಹಾಸನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಭಾವನೆ ಮೂಡಿಸಲು ಹೊರಟಿದ್ದಾರೆ ಎಂದರು.

ವಿಟಿಯು ವಿಭಜಿಸದಂತೆ ಕುಮಾರಸ್ವಾಮಿಗೆ ಉತ್ತರ ಕರ್ನಾಟಕ ಭಾಗದ ಎಲ್ಲ ಸಚಿವರು ಹಾಗೂ ಶಾಸಕರು ಮನವಿ ಮಾಡಿದ್ದೇವೆ. ವಿಭಜಿಸಿದರೆ ಕಾಲೇಜು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಬೆಳಗಾವಿ ವಿವಿ ಮುಚ್ಚಬೇಕಾಗುತ್ತದೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಅಭಿನಂದನೆಗಳು.
● ಮಹಾಂತೇಶ್‌ ಕೌಜಲಗಿ, ಶಾಸಕ

 ಇದರಲ್ಲಿ ಎರಡು ವಿವಿ ಮಾಡುವ ಅಗತ್ಯವಿರಲಿಲ್ಲ. ಬೆಂಗಳೂರು ವಿವಿಯಲ್ಲಿ 600 ಕ್ಕೂ ಹೆಚ್ಚು ಕಾಲೇಜುಗಳು ಇದ್ದಿದ್ದರಿಂದ 3 ವಿವಿಗಳಾಗಿ ವಿಭಜಿಸಲಾಗಿತ್ತು. ಹಾಸನದಲ್ಲಿ ಇನ್ನೊಂದು ವಿವಿ ಸ್ಥಾಪಿಸಿದರೆ ಬೆಳಗಾವಿ ವಿಟಿಯುಗೆ ಹೊಡೆತ ಬೀಳುತ್ತದೆ.● ಪ್ರೊ. ಎನ್‌.ಪ್ರಭುದೇವ್‌,

ಉ.ಕ. ಭಾಗದಲ್ಲಿ ತಾಂತ್ರಿಕ ಶೈಕ್ಷಣಿಕ ಆದ್ಯತೆ ನೀಡಬೇಕು ಎನ್ನುವ ಕಾರಣಕ್ಕೆ ಬೆಳಗಾವಿಯಲ್ಲಿ ಆರಂಭಿಸಲಾಗಿದೆ. ಹಾಸನದಲ್ಲಿ ಪ್ರತ್ಯೇಕ ತಾಂತ್ರಿಕ ವಿವಿ ತೆರೆದರೆ, ಮುಂದಿನ ದಿನಗಳಲ್ಲಿ
ಬೆಳಗಾವಿ ತಾಂತ್ರಿಕ ವಿವಿಗೆ ಮಹತ್ವ ಕಳೆದುಕೊಂಡು ಮುಚ್ಚುವ ಸ್ಥಿತಿಗೆ
ಬರಬಹುದು.
● ಪ್ರೊ.ಸಿದ್ದಲಿಂಗಸ್ವಾಮಿ, ಸಿಎಂಡಿಆರ್‌ ಸಂಸ್ಥೆ ಪ್ರಾಧ್ಯಾಪಕ ಬೆಂಗಳೂರು ವಿವಿ ನಿವೃತ್ತ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next