Advertisement

ಎರಡನೇ ಹಂತದ ಪ್ಯಾಕೇಜ್‌: ಸ್ವಾಗತಾರ್ಹ ಕ್ರಮ

11:14 PM Jun 03, 2021 | Team Udayavani |

ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ವರ್ಗಗಳ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 500 ಕೋಟಿ ರೂ.ಗಳ 2ನೇ ಪ್ಯಾಕೇಜ್‌ ಘೋಷಿಸಿ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿದೆ.

Advertisement

ಮೊದಲನೇ ಪ್ಯಾಕೇಜ್‌ನಲ್ಲಿ ದಿನದ ದುಡಿಮೆ ನಂಬಿ ಜೀವನ ನಡೆಸುತ್ತಿರುವವರು, ಬೆಳೆ ಬೆಳೆದು ನಷ್ಟ ಅನುಭವಿಸಿದ ರೈತರು ಹಾಗೂ ಕೆಲಸ ಇಲ್ಲದೆ ಕಷ್ಟ ಆನುಭವಿಸುತ್ತಿರುವ ಆಟೋ, ಟ್ಯಾಕ್ಸಿ ಚಾಲಕರು, ಕುಶಲ ಕರ್ಮಿಗಳು, ಬೀದಿ ವ್ಯಾಪಾರಿಗಳು ಸೇರಿ ಶ್ರಮಿಕ ವರ್ಗಕ್ಕೆ 1,250 ಕೋಟಿ ರೂ. ಆರ್ಥಿಕ ಪ್ಯಾಕೇಜ್‌ ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ ಲಾಕ್‌ಡೌನ್‌ನಿಂದ ಕಷ್ಟ ಅನುಭವಿಸುತ್ತಿದ್ದ ಇತರ ವರ್ಗದವರಿಗೂ 500 ಕೋಟಿ ರೂ. ಪ್ಯಾಕೇಜ್‌ ಘೋಷಿಸಲಾಗಿದೆ. ಈ ಮೂಲಕ ಸಾಧ್ಯವಾದಷ್ಟೂ ಜನರಿಗೆ ನೆರವು ಒದಗಿಸುವ  ಪ್ರಯತ್ನ ಆಗಿದೆ ಎಂದೇ ಹೇಳಬಹುದು.

ಮೊದಲನೇ ಪ್ಯಾಕೇಜ್‌ ಘೋಷಣೆಯ ಅನಂತರ ಆಡಳಿತ ಪಕ್ಷದ ಶಾಸಕರಿಂದಲೇ ಮತ್ತಷ್ಟು ಪ್ಯಾಕೇಜ್‌ಗೆ ಒತ್ತಡವಿತ್ತು. ವಿಪಕ್ಷಗಳು ಆಗ್ರಹಿಸಿದ್ದವು. ಸಾಕಷ್ಟು ಸಂಘ-ಸಂಸ್ಥೆಗಳಿಂದಲೂ ಮನವಿಗಳು ಬಂದಿ ದ್ದವು. ಹೀಗಾಗಿ, ಸರಕಾರ ಅದಕ್ಕೆ ಸ್ಪಂದಿಸಿದಂತಾಗಿದೆ.

ಪ್ರಮುಖವಾಗಿ ಪವರ್‌ಲೂಮ್‌ ನೇಕಾರರಿಗೆ ಮೂರು ಸಾವಿರ ರೂ. ಘೋಷಣೆ ಮಾಡಿರುವುದು 59 ಸಾವಿರ ಜನರಿಗೆ ನೆರವಾಗಲಿದೆ. ಅದೇ ರೀತಿ ಚಿತ್ರೋದ್ಯಮದ ಅಸಂಘಟಿತ ಕಾರ್ಮಿಕರು, ಕಲಾವಿದರಿಗೆ 3 ಸಾವಿರ ರೂ. ನೀಡಿದ್ದು 22 ಸಾವಿರ ಮಂದಿಗೆ ಅನುಕೂಲವಾಗಲಿದೆ. ಕರಾವಳಿ ಭಾಗ ಸೇರಿ  ಒಳನಾಡಿನ ಮೀನುಗಾರರ ನೆರವಿಗೂ ಧಾವಿಸಿ 3 ಸಾವಿರ ರೂ. ಪ್ಯಾಕೇಜ್‌ ನೀಡಿದ್ದು ಇದರಿಂದ 25 ಸಾವಿರ ಜನರಿಗೆ ಸಹಾಯ ವಾಗಲಿದೆ. ಇದು ಒಂದು ರೀತಿಯಲ್ಲಿ ಕಷ್ಟಕ್ಕೆ ಸಿಲುಕಿದ್ದರೂ ಗುರುತಿಸಲಾರದ ವರ್ಗದ ಸಹಾಯಕ್ಕೂ ಸರಕಾರ ಬಂದಂತಾಗಿದೆ. ದೇವಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡುಗೆ ಕೆಲಸಗಾರರು, ಸಿಬಂದಿ ಮತ್ತು ಮಸೀದಿಗಳಲ್ಲಿ  ಕೆಲಸ ಮಾಡುವ ಮೌಜ್ವಾನ್‌ ಹಾಗೂ ಇಮಾಮ್‌ಗಳಿಗೂ ನೆರವು ವಿಸ್ತರಿಸಿದ್ದು ಸಂಕಷ್ಟದಲ್ಲಿರುವ 36 ಸಾವಿರ ಮಂದಿಗೆ ನೆರವಾಗಲಿದೆ. ಎಲ್ಲ ವರ್ಗಕ್ಕೂ ಪ್ಯಾಕೇಜ್‌ ಸಿಕ್ಕಿದಂತಾಗಿದೆ.

ಕೋವಿಡ್ ನಿಯಂತ್ರಣ ಸೇರಿ ವಾರಿಯರ್ಸ್‌ ರೀತಿಯಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆಯೂ ಸರಕಾರ ಕಾಳಜಿ ತೋರಿರುವುದು ಸ್ವಾಗತಾರ್ಹ.  ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ನಂತೆ 42,574 ಮಂದಿಗೆ, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರಿಗೆ ತಲಾ 2 ಸಾವಿರ ರೂ. ನಂತೆ 64,423 ಮಂದಿಗೆ ನೆರವು ನೀಡಲಾ ಗಿ ದೆ.

Advertisement

ಶಾಲೆ ಮುಚ್ಚಿದ್ದರಿಂದ ಮಕ್ಕಳು ಮಧ್ಯಾಹ್ನದ ಬಿಸಿಯೂಟ ತಪ್ಪಿದಂತಾಗಿತ್ತು. ಬಿಸಿಯೂಟ ಬದಲಿಗೆ  ಆಹಾರಧಾನ್ಯ ಮನೆಗೆ ತಲುಪಿಸುವ ತೀರ್ಮಾನ ಕೈಗೊಂಡಿದ್ದರಿಂದ ಮಕ್ಕಳ ಹೆತ್ತವರಿಗೂ ಅನುಕೂಲವಾಗಿತ್ತು. ಇದೀಗ ಆಹಾರ ಧಾನ್ಯದ ಜತೆಗೆ ಅರ್ಧ ಕೆ.ಜಿ. ಹಾಲಿನ ಪುಡಿ ಎರಡು ತಿಂಗಳು ನೀಡಲು ತೀರ್ಮಾನಿಸಿರುವುದು ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಸಹಕಾರಿಯಾಗಲಿದೆ.

ಖುದ್ದು ಸಭಾಪತಿಯವರು ಸೇರಿದಂತೆ ಶಿಕ್ಷಕರು ಹಾಗೂ ಪದ ವೀಧರರನ್ನು ಪ್ರತಿನಿಧಿಸುವ ವಿಧಾನಪರಿಷತ್‌ ಸದಸ್ಯರು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಮೇಲೆ ಹೇರಿದ್ದ ಒತ್ತಡದಿಂದಾಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ 5 ಸಾವಿರ ರೂ. ಅದೇ ರೀತಿ ವಕೀಲರ ಸಂಘದ ಬೇಡಿಕೆಗೆ ಸ್ಪಂದಿಸಿ ಕಲ್ಯಾಣ ನಿಧಿಗೆ 5 ಕೋಟಿ ರೂ. ಒದಗಿಸಿರುವುದು  ಈಗಿನ ಅಗತ್ಯತೆಗೆ ಸ್ಪಂದನೆಯ ಕೆಲಸವಾಗಿದೆ.

ಇವೆಲ್ಲರ ಜತೆಗೆ ಕೈಗಾರಿಕೆಗಳಿಗೂ ಸ್ವಲ್ಪ ಮಟ್ಟಿನ ರಿಯಾಯಿತಿ, ವಿನಾಯಿತಿ ಘೋಷಣೆ ಮಾಡುವ ಮೂಲಕ ಸರಕಾರ ನಿಮ್ಮ ಜತೆಗಿದೆ ಎಂಬ ಧೈರ್ಯ ತುಂಬಿರುವುದು ಒಳ್ಳೆಯ ಬೆಳವಣಿಗೆ.

Advertisement

Udayavani is now on Telegram. Click here to join our channel and stay updated with the latest news.

Next