Advertisement

ಮಾತೃಭಾಷೆಯ ಮಹತ್ವವನ್ನು ಅರಿತ ಸಮುದಾಯ ಬಹಳ ಶ್ರೀಮಂತವಾಗಿ ಬೆಳೆಯುತ್ತದೆ:ಬಸವರಾಜ ಬೊಮ್ಮಾಯಿ

10:29 PM Aug 18, 2021 | Team Udayavani |

ಬೆಂಗಳೂರು: ಮಾತೃಭಾಷೆಯ ಮಹತ್ವವನ್ನು ಅರಿತ ಸಮುದಾಯ ಬಹಳ ಶ್ರೀಮಂತವಾಗಿ ಬೆಳೆಯುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯ ಪಟ್ಟರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ 2019- 20 ನೇ  ಸಾಲಿನ ವಿವಿಧ ರಾಜ್ಯ ಪ್ರಶಸ್ತಿ ಹಾಗೂ ಬಸವ ರಾಷ್ಟ್ರೀಯ ಪ್ರಶಸ್ತಿಯನ್ನು  ಪ್ರದಾನ ಮಾಡಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಮಾನವೀಯ ಮತ್ತು ಮಾತೃ ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು ಎಂದ ಮುಖ್ಯಮಂತ್ರಿಗಳು ಇಂದು ಪ್ರಶಸ್ತಿ ಪಡೆದವರೆಲ್ಲಾ ಸಾಧಕರು.  ದಾರ್ಶನಿಕರು ಸತ್ಯವನ್ನು ನೋಡುವ ಶಕ್ತಿಯನ್ನು ಪಡೆದಿರುತ್ತಾರೆ.  ಬದುಕನ್ನು ಹುಟ್ಟು ಸಾವಿನ ಮಧ್ಯದ ಬದುಕಿಗೆ ಸಾಧಕರು  ಸೀಮಿತಗೊಳಿಸುವುದಿಲ್ಲ. ಸಾವಿನ ನಂತರವೂ ಅವರ ಬದುಕು, ವಿಚಾರಗಳು, ಮಾರ್ಗದರ್ಶನಗಳು ನಮ್ಮ ಮಧ್ಯೆ ಇರುತ್ತವೆ. ಬುದ್ಧ, ಬಸವ, ಅಲ್ಲಮ, ಶಂಕರರು, ಮೊಹಮ್ಮದ್ ಪೈಗಂಬರ್ ಕಾಲಾತೀತವಾಗಿ ಬದುಕಿ, ಅವರ ಸಾಧನೆಯೂ ಕಾಲಾತೀತವಾಗಿದೆ .  ಕಲೆ, ಸಂಸ್ಕೃತಿಗೂ ಬೆಲೆ ಕಟ್ಟುವ ಕಲಿಯುಗದಲ್ಲಿ   ಬೆಲೆಯನ್ನು ಬದಿಗಿಟ್ಟು ಅರ್ಥ ಕೊಡುವ ಕೆಲಸವನ್ನು ಇಂದು ಪ್ರಶಸ್ತಿ ಪಡೆದವರೆಲ್ಲರೂ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ  ಬಗ್ಗೆ ನಿಜವಾದ ಚಿಂತನೆ ಮಾಡಿ ಅನುಷ್ಠಾನ ಮಾಡುತ್ತಿರುವವರು ವೀರೇಂದ್ರ ಹೆಗ್ಗಡೆಯವರು. ಭಾಲ್ಕಿಯ ಬಸಲಿಂಗ ಪಟ್ಟದೇವರು ಅಪಾರ ಸಾಧನೆ ಮಾಡಿಯೂ ಮಾಡದಂತೆ ಇರುತ್ತಾರೆ.ಬಸವ ತತ್ವಗಳನ್ನು ಸಂಪೂರ್ಣವಾಗಿ   ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ  ಬದುಕುತ್ತಿದ್ದಾರೆ. ಬೀದರ್ ಜಿಲ್ಲೆಯಿಂದ ಕೊಳ್ಳೇಗಾಲದವರೆಗೂ ಅವರ ವಿಚಾರಗಳು ವ್ಯಾಪಿಸಿದೆ.  ಜಾನಪದ, ಕಲೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕರಿದ್ದಾರೆ ಎಂದರು.

ನಾಗರಿಕತೆ ಮತ್ತು  ಸಂಸ್ಕೃತಿಯನ್ನು ನಾವು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ನಮ್ಮ ಬಳಿಯಿರುವ ವಸ್ತುಗಳು ನಾಗರೀಕತೆ. ನಾವೇನಾಗಿದ್ದೇವೆ ಎನ್ನುವುದು ಸಂಸ್ಕೃತಿ. ನಮ್ಮಲ್ಲಿ ಮೌಲ್ಯಗಳು ಎಷ್ಟರಮಟ್ಟಿಗೆ ಇವೆ. ಸಾಮಾಜಿಕ ಪ್ರಜ್ಞೆ, ಮಾನವೀಯ ಮೌಲ್ಯಗಳು ನಾಗರಿಕ ಕರ್ತವ್ಯ ಪ್ರಜ್ಞೆ ಇವೆಲ್ಲಾ ಸಂಸ್ಕೃತಿ ಎನಿಸಿಕೊಳ್ಳುತ್ತವೆ. ಕನ್ನಡ ಭಾಷೆ ನಮ್ಮ ಸಂಸ್ಕೃತಿ. ಭಾವಗಳ ಜೋಡಿಸುವ ಸಂಕೋಲೆ. ಭಾವನೆಗಳನ್ನು ಉಕ್ಕಿಸುವ ಭಾಷೆ ಕನ್ನಡ. ಹುಟ್ಟುವ ಮುನ್ನವೇ ಬೆಳೆಸುವ ಸಂಬಂಧ ತಾಯಿಯ ಸಂಬಂಧ. ಆದ್ದರಿಂದ ಮಾತೃಭಾಷೆಯನ್ನು ಕಡೆಗಣಿಸಬಾರದು ಇತರೆ ಭಾಷೆಗೆ ಹೋಲಿಸಬಾರದು ಎಂದರು.

Advertisement

ಕಾರ್ಯಕ್ರಮ ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ , ಇಲಾಖೆ ನಿರ್ದೇಶಕ ರಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.

ನಾಟ್ಯರಾಣಿ ಶಾಂತಲಾ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಬಿ.ಕೆ. ವಸಂತಲಕ್ಷ್ಮಿ, ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪಡೆದ ಶ್ರೀ ಚಿ.ಸು. ಕೃಷ್ಣಶೆಟ್ಟಿ,  ಜಕಣಾಚಾರಿ ಪ್ರಶಸ್ತಿ ಪಡೆದ ಶ್ರೀ.ಬಿ.ಎಸ್. ಯೋಗಿರಾಜ,  ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಶ್ರೀ ಮದಿರೆ ಮರಿಸ್ವಾಮಿ,

ಜಾನಪದ ಶ್ರೀ ಪ್ರಶಸ್ತಿ ಪಡೆದ ಬಿ.ಟಾಕಪ್ಪ ಕಣ್ಣೂರು, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪಡೆದ ಶ್ರೀ ರಾ.ನಂ. ಚಂದ್ರಶೇಖರ,  ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪಡೆದ ಡಾ. ಚೂಡಾಮಣಿ ನಂದಗೋಪಾಲ,  ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪಡೆದ ಪ್ರೊ. ಸಿದ್ದಣ್ಣ ಉತ್ನಾಳ,  ಅಕ್ಕ ಮಹಾದೇವಿ ಪ್ರಶಸ್ತಿ ಪಡೆದ ಡಾ. ಜಯಶ್ರೀ ದಂಡೆ,  ನಿಜಗುಣ ಪುರಂದರ ಪ್ರಶಸ್ತಿ ಪಡೆದ ಶ್ರೀಮತಿ ಗೌರಿ ಕುಪ್ಪುಸ್ವಾಮಿ,  ಸಂತ ಶಿಶುನಾಳ ಷರೀಫ ಪ್ರಶಸ್ತಿ ಪಡೆದ ಪಂ. ವಾದಿರಾಜ ನಿಂಬರಗಿ, ಕುಮಾರವ್ಯಾಸ ಪ್ರಶಸ್ತಿ ಪಡೆದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಪಡೆದ ಪಂಡಿತ ನರಸಿಂಹಲು ವಡವಾಟಿ ಅವರುಗಳಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ನೀಡಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next