Advertisement

ಕ್ರೀಡೆಯಲ್ಲಿ ಸೋಲಿನ ಭಯ ಇಲ್ಲದೇ ಗೆಲ್ಲಲೇಬೇಕೆಂದು ಆಡಿ : ಸಿಎಂ

08:05 PM Apr 24, 2022 | Team Udayavani |

ಬೆಂಗಳೂರು : ಗೆಲ್ಲಲೇಬೇಕೆಂಬ ಛಲದೊಂದಿಗೆ ಆಟ ಆಡಿ. ಸೋಲಲೇಬಾರದು ಎಂದು ಆಡಿ. ಸೋಲಿನ ಭಯ ಇಲ್ಲದಿದ್ದರೆ ಗೆಲುವು ನಿಮ್ಮದಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರೀಡಾಪಟುಗಳಿಗೆ ಕರೆ ನೀಡಿದರು

Advertisement

ಇಂದು ಕಂಠೀರವ ಕ್ರೀಡಾಂಗಣದಲ್ಲಿ ಇಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಉದ್ಘಾಟಿಸಿದ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಷ್ಟಮಟ್ಟದಲ್ಲಿ ಯಾವುದೇ ಕ್ರೀಡಾ ಕೂಟ ಇದ್ದರೂ ಪ್ರಥಮ ಆದ್ಯತೆಯನ್ನು ಬೆಂಗಳೂರಿಗೆ ನೀಡಬೇಕು. ಈ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟ ಆಯೋಜಿಸಲು ನಮ್ಮ ಮೂಲಭೂತ ಸೌಕರ್ಯಗಳನ್ನು ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೇವೆ. ಕ್ರೀಡಾಕೂಟ ಆಯೋಜಿಸಲು ಜೈನ್ ಯೂನಿವರ್ಸಿಟಿ ಬಹಳ ದೊಡ್ಡ ಬೆಂಬಲವನ್ನು ನೀಡಿದೆ. ಕ್ರೀಡಾಕೂಟದ ನಂತರ ಮೌಲ್ಯ ಮಾಪನವನ್ನು ಮಾಡಿ ಕ್ರೀಡಾಕೂಟ ಗಳನ್ನು ಆಯೋಜಿಸಲು ಬೆಂಗಳೂರಿಗೆ ಆದ್ಯತೆ ನೀಡಬೇಕು ಎಂದರು.

ಗೆಲ್ಲಲೇಬೇಕೆಂದು ಆಟವಾಡಿ
ಕ್ರೀಡಾ ಪಟುಗಳು ಕ್ರೀಡೆಗಳನ್ನು ಪ್ರಾಮಾಣಿಕವಾಗಿ ಆಡಬೇಕು. ಸೋಲು, ಗೆಲುವು ಆಟದ ಭಾಗ. ಎರಡನ್ನೂ ಸಮನಾಗಿ ತೆಗೆದುಕೊಂಡು ಕ್ರೀಡಾ ಸ್ಪೂರ್ತಿಯಿಂದ ಮುಂದೆಹೋಗೋಣ. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಆದರೆ ಭಾಗವಹಿಸಲು ಅವಕಾಶ ಸಿಕ್ಕಿದೆ. ಸೋತವರಿಗೆ ಗೆಲ್ಲಲು ಮತ್ತೊಂದು ಅವಕಾಶ ದೊರೆಯುತ್ತದೆ. ಗೆಲ್ಲಲೆಂದೇ ಆಡಿ, ಸೋಲಬಾರದು ಎಂದು ಆಡಿ. ಸೋಲಿನ ಭಯ ಇಲ್ಲದಿದ್ದರೆ ಗೆಲುವು ನಿಮ್ಮದಾಗುತ್ತದೆ ಎಂದು ಕರೆ ನೀಡಿದರು.

ಖೇಲೋ ಇಂಡಿಯಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಬೆಂಗಳೂರು ಇಡೀ ಭಾರದ ದೇಶದಲ್ಲಿಯೇ ಅತ್ಯಂತ ಪ್ರಗತಿಪರವಾಗಿರುವ ರಾಜಧಾನಿ. ಅಂತರರಾಷ್ಟ್ರೀಯ ನಗರ. ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಯೂನಿವರ್ಸಿಟಿ ಕ್ರೀಡಾಕೂಟ ಜರುಗುತ್ತಿದೆ. ಸುಮಾರು 3800 ಕ್ರೀಡಾಪಟುಗಳು 20 ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

Advertisement

ಜೈನ್ ಕ್ರೀಡಾ ವಿಶ್ವವಿದ್ಯಾಲಯದ ಅವರ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಕ್ರೀಡೆಗೆ ಮೀಸಲಾಗಿರುವ ರಾಷ್ಟ್ರ ಮಟ್ಟದ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಇರುವುದು ನಮ್ಮ ಹೆಮ್ಮೆ ಎಂದರು. ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮ ಆಯೋಜಿಸಲು ಹಗಲಿರುಳು ಶ್ರಮಿಸಿ, ಯಶಸ್ವಿಗೊಳಿಸಲು ಪಣ ತೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಇದನ್ನೂ ಓದಿ : ಬಾಂಧವ್ಯ ಕಲುಷಿತಗೊಳಿಸಲು ಕೆಲ ಶಕ್ತಿಗಳ ಪ್ರಯತ್ನ: ಇಫ್ತಿಯಾರ್ ಕೂಟದಲ್ಲಿ ಹೆಚ್ ಡಿಕೆ

ಆತಿಥ್ಯ ಒದಗಿಸಲು ಅವಕಾಶ
ಬೆಂಗಳೂರಿನಲ್ಲಿ ಕ್ರೀಡಾಕೂಟ ಅಯೋಜಿಸುವ ಮೂಲಕ ಕರ್ನಾಟಕದ ಆತಿಥ್ಯ, ಕ್ರೀಡೆಗಳ ಕುರಿತಾದ ಪ್ರೀತಿ ಮತ್ತು ರಾಷ್ಟ್ರದ ಒಗ್ಗಟ್ಟಿಗೆ ಕೊಡುಗೆ ನೀಡುವ ಅವಕಾಶ ಒದಗಿದೆ. ಕ್ರೀಡೆಗಳ ಹಾಗೂ ಸಂಸ್ಕೃತಿಗಳ ಸಮನ್ವಯಕ್ಕೂ ಇದೊಂದು ಅವಕಾಶ ಕಲ್ಪಿಸಿದಂತಾಗಿದೆ ಎಂದರು.

ಕ್ರೀಡೆಗಳಲ್ಲಿ ತೊಡಗಿರುವವರು ಉತ್ತಮ ಗುಣವುಳ್ಳವರು
ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗ. ಸ್ವಾಭಾವಿಕವಾಗಿ ಮಾನವ ಸಾಹಸಿ. ಕ್ರೀಡೆ ಹಾಗಾಗಿ ಸ್ವಾಭಾವಿಕ ಚಟುವಟಿಕೆ. ಕ್ರೀಡೆಗಳು ಛಲ, ಶಿಸ್ತು ಮತ್ತು ಚಾರಿತ್ರ್ಯವನ್ನು ಬೆಳೆಸುತ್ತದೆ. ಛಲ, ಪರಿಶ್ರಮ, ಕ್ರೀಡೆಗಳು ಚಾರಿತ್ರ್ಯವನ್ನು ಕಟ್ಟುವ ಚಟುವಟಿಕೆಯ ಭಾಗವಾಗಿದೆ. ಈ ಗುಣಗಳು ಇರುವುದರಿಂದ ಕ್ರೀಡೆಗಳಲ್ಲಿ ತೊಡಗಿರುವವರು ಉತ್ತಮ ಗುಣವುಳ್ಳ ವ್ಯಕ್ತಿಗಳಾಗಿರುತ್ತಾರೆ. ಅವರು ಸಾಧಕರು ಎಂದರು.

ಪ್ರಧಾನಿಗಳ ಬೆಂಬಲ
ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕ್ರೀಡಾ ಜಗತ್ತಿಗೆ ಹೊಸ ಆಯಾಮವನ್ನು ನೀಡಿದ್ದಾರೆ. ಕ್ರೀಡಾಪಟುಗಳ ಮನಸ್ಥಿತಿಯನ್ನು ಬದಲಾಯಿಸಿದ್ದಾರೆ. ಒಲಂಪಿಕ್ಸ್ ನಲ್ಲಿ ನಾವು ಭಾಗವಹಿಸಿದರೂ ಪದಕ ಗೆಲ್ಲಲಾಗುವುದಿಲ್ಲ ಎಂಬ ಮಾತಿತ್ತು. ಆದರೆ ಪ್ರಧಾನಿಗಳು ‘ಖೇಲೋ ಇಂಡಿಯಾ’ , ಫಿಟ್ ಇಂಡಿಯಾ, ಜೀತೋ ಇಂಡಿಯಾ ಘೋಷವಾಕ್ಯಗಳನ್ನು ನೀಡಿದರು. ಅದರ ಫಲಿತಾಂಶವಾಗಿ ಭಾರತ ಅತಿ ಹೆಚ್ಚು ಪದಕಗಳನ್ನು ಟೋಕಿಯೋ ಒಲಂಪಿಕ್ಸ್ ನಲ್ಲಿ ಗೆದ್ದಿತು. ನರೇಂದ್ರ ಮೋದಿಯವರ ಸ್ಫೂರ್ತಿ ಹಾಗೂ ಬೆಂಬಲದಿಂದ ಕ್ರೀಡಾಪಟುಗಳ ಸಾಹಸಗಾಥೆ, ಪರಿಶ್ರಮ ಮತ್ತು ಸಾಧನೆ ಮುಂದುವರಿಯಬೇಕು. ಆದ್ದರಿಂದ ವಿಶ್ವವಿದ್ಯಾಲಯ ಕ್ರೀಡಾಕೂಟಗಳು ಖೇಲೋ ಇಂಡಿಯಾದ ಪ್ರಮುಖ ಭಾಗ ಎಂದರು.

ಅಸಾಧ್ಯವಾದುದನ್ನು ಸಾಧಿಸಬಹುದು
ವಿಶ್ವವಿದ್ಯಾಲಯಗಳು ನಿಮ್ಮೊಳಗಿನ ಅತ್ಯುತ್ತಮವಾದುದನ್ನು ಹೊರಕ್ಕೆ ತೆಗೆದು ಅವಕಾಶಗಳನ್ನು ಒದಗಿಸುವ ಸ್ಥಳ. ಶಿಕ್ಷಣ, ಕ್ರೀಡೆ ಹಾಗೂ ವ್ಯಕ್ತಿತ್ವಗಳನ್ನು ರೂಪಿಸುತ್ತದೆ. ನಿಮ್ಮ ರೆಕ್ಕೆಗಳನ್ನು ತೆರೆದು ಅಸಾಧ್ಯವಾದುದನ್ನು ಸಾಧಿಸಬಹುದು. ಬೆಂಗಳೂರಿನಲ್ಲಿ ಅತ್ಯುತ್ತಮ ಸ್ಥಳಗಳು, ಸಂಸ್ಕೃತಿ, ಹವಾಮಾನವನ್ನು ಆಸ್ವಾದಿಸಲು ಕ್ರೀಡಾ ಜಗತ್ತಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿಗಳು ಇಲ್ಲಿನ ವ್ಯವಸ್ಥೆ ಮಾತ್ರವಲ್ಲ, ಆತಿಥ್ಯ, ಸ್ನೇಹ, ಮಾರ್ಗದರ್ಶನವನ್ನು ಇತರೆ ರಾಜ್ಯ ಗಳಿಂದ ಆಗಮಿಸಿರುವವರಿಗೆ ನೀಡುತ್ತೇವೆ. ಈ ಕಾರ್ಯಕ್ರಮವನ್ನು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ನಮ್ಮ ಆತಿಥ್ಯವಿರುತ್ತದೆ. ಕರ್ನಾಟಕಕ್ಕೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಭಾರತ ಸರ್ಕಾರ ಹಾಗೂ ಕ್ರೀಡಾ ಮಂತ್ರಾಲಯಕ್ಕೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next