Advertisement

ಆದೇಶ ಹಿಂಪಡೆಯಲು ಸಿಎಂ ಒಪ್ಪಿಗೆ: ಪ್ರಕಾಶ್‌

11:22 PM Jun 05, 2019 | Team Udayavani |

ಬಂಟ್ವಾಳ: ಸರಕಾರಿ ಶಾಲೆಗಳ ಒಂದನೇ ತರಗತಿಯ 30 ಮಕ್ಕಳಿಗೆ ಮಾತ್ರ ಆಂಗ್ಲ ಮಾಧ್ಯಮ ಶಿಕ್ಷಣ ಎಂಬ ಆದೇಶವನ್ನು ಹಿಂಪಡೆಯಲು ಸರಕಾರ ಒಪ್ಪಿಕೊಂಡಿದ್ದು, ದಾಖಲಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ ಎಂದು “ಸರಕಾರಿ ಶಾಲೆ ಉಳಿಸಿ, ಬೆಳೆಸಿ’ ರಾಜ್ಯ ಸಮಿತಿಯ ಅಧ್ಯಕ್ಷ ಪ್ರಕಾಶ್‌ ಅಂಚನ್‌ ತಿಳಿಸಿದ್ದಾರೆ.

Advertisement

ಈ ಬಾರಿ ರಾಜ್ಯ ಸರಕಾರವು ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಕೆಗೆ ಅನುಮತಿ ನೀಡಿತ್ತು. ಹೀಗಾಗಿ ಅಂತಹ ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದರು. ಆದರೆ, ಸರಕಾರವು ಜೂ.1ರಂದು ಆದೇಶ ಹೊರಡಿಸಿ, ಕೇವಲ 30 ಮಕ್ಕಳಿಗೆ ಮಾತ್ರ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡಬೇಕೆಂದು ತಿಳಿಸಿತ್ತು.

ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದರು. ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ “ಸರಕಾರಿ ಶಾಲೆ ಉಳಿಸಿ, ಬೆಳೆಸಿ’ ರಾಜ್ಯ ಸಮಿತಿಯು ತಕ್ಷಣ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು.

ಈ ಕುರಿತು ಸಮಿತಿಯಿಂದ ಮಾಹಿತಿ ಪಡೆದ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರು ಮುಖ್ಯಮಂತ್ರಿ ಜತೆ ಚರ್ಚಿಸಿ, ಆದೇಶ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು. ಈ ಕುರಿತು ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಭೋಜೇಗೌಡ ತಿಳಿಸಿದ್ದು, ಸರಕಾರದ ಪರಿಷ್ಕೃತ ತೀರ್ಮಾನವು ಸ್ವಾಗತಾರ್ಹ ಎಂದು ಪ್ರಕಾಶ್‌ ಅಂಚನ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next