Advertisement

ನಾಳೆಯಿಂದ ಪುರಾತನ ಮಠ-ಮಂದಿರ ಸಚ್ಛತಾ ಅಭಿಯಾನ

01:01 PM Dec 12, 2021 | Team Udayavani |

ಹುಬ್ಬಳ್ಳಿ: ಕಾಶಿ ವಿಶ್ವನಾಥ ಕ್ಷೇತ್ರದಲ್ಲಿ ಅಂದಾಜು 800 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನ ಕಾರ್ಯಕೈಗೊಳ್ಳಲಾಗಿದ್ದು, ಅದರ ಲೋಕಾರ್ಪಣೆಯ ಭವ್ಯಕಾಶಿ-ದಿವ್ಯ ಕಾಶಿ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಡಿ.13ರಂದು ಉದ್ಘಾಟಿಸಲಿದ್ದಾರೆ.  ಅದರ ಅಂಗವಾಗಿ ರಾಜ್ಯದಲ್ಲಿ ಡಿ. 13ರಿಂದ ಜ. 14ವರೆಗೆ ಪುರಾತನ ಮಠ-ಮಂದಿರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಪಕ್ಷದಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶಿ ಕ್ಷೇತ್ರ ಪುನರುಜ್ಜೀವನ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮುಂದಾಗಿದ್ದರು. ಯೋಜನೆ ಅಂಗವಾಗಿ ಕಾಶಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಾಗ ಮುಚ್ಚಿ ಹೋಗಿದ್ದ ಸುಮಾರು 40 ದೇವಾಲಯಗಳು ಪತ್ತೆಯಾಗಿವೆ. ಅವುಗಳ ಪುನರುಜ್ಜೀವನಗೊಳಿಸಲಾಗಿದೆ ಎಂದರು.

ಡಿ. 13ರಂದು ಕಾಶಿಯಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರವನ್ನು ದೇಶದ ಸುಮಾರು 51 ಸಾವಿರ ಸ್ಥಳಗಳಲ್ಲಿ ಎಲ್‌ಇಡಿ ಪರದೆ ಮೇಲೆ ತೋರಿಸಲಾಗುತ್ತದೆ. ಕಾರ್ಯಕ್ರಮದಲ್ಲಿರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧಮುಖ್ಯಮಂತ್ರಿಗಳು ಭಾಗಿಯಾಗುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದ ಆವರಣದಲ್ಲಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಭವ್ಯಕಾಶಿ-ದಿವ್ಯಕಾಶಿ ಕಾರ್ಯಕ್ರಮದ ಅಂಗವಾಗಿ ರಾಜ್ಯದಲ್ಲಿ ಒಂದು ತಿಂಗಳವರೆಗೆ ಪುರಾತನ ಮಠ-ಮಂದಿರಗಳ ಸ್ವಚ್ಛತಾ ಕಾರ್ಯಕ್ರಮವನ್ನು ಬಿಜೆಪಿ ಸಂಘಟನಾತ್ಮಕ 37 ಜಿಲ್ಲೆ 311 ಮಂಡಲಗಳಲ್ಲಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದೆ. ಆಯಾ ಜಿಲ್ಲೆ-ಮಂಡಲಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ಸಚಿವರು, ಶಾಸಕರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಶಾಸಕ ಅರವಿಂದ ಬೆಲ್ಲದ, ಮುಖಂಡರಾದ ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ, ಬಸವರಾಜ ಗರಗ, ಸಿದ್ದು ಮೊಗಲಿಶೆಟ್ಟರ, ರವಿ ನಾಯಕ ಇನ್ನಿತರರು ಇದ್ದರು.

Advertisement

ಬಿಜೆಪಿ ಸಿಎಂ-ಡಿಸಿಎಂಗಳ ಸಭೆ :

ಡಿ. 14ರಂದು ಕಾಶಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಮತ್ತು ಉಪ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಡಿ. 17ರಂದು ಕಾಶಿಯಲ್ಲಿ ಮೇಯರ್‌-ಉಪಮೇಯರ್‌ ಗಳ ಸಮ್ಮೇಳನವನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ, ಉತ್ತರ ಪ್ರದೇಶ ನಗರಾಭಿವೃದ್ಧಿ ಸಚಿವಾಲಯಗಳಿಂದ ಆಯೋಜಿಸಲಾಗಿದೆ ಎಂದು ಮಹೇಶ ಟೆಂಗಿನಕಾಯಿ ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ನಾಲ್ಕು ಕಡೆ ಪಕ್ಷದಿಂದ ಪ್ರಭಾರಿಗಳನ್ನು ನೇಮಕ ಮಾಡಲಾಗಿದೆ. ಗದಗ-ಬೆಟಗೇರಿ ನಗರಸಭೆಗೆ ನಾರಾಯಣ ಜರತಾರಘರ,ಅಣ್ಣಿಗೇರಿ ಪುರಸಭೆಗೆ ಈರಣ್ಣ ಜಡಿ, ಹಾವೇರಿ ಜಿಲ್ಲೆ ಬಂಕಾಪುರಕ್ಕೆ ಭೋಜರಾಜ ಕರೂದಿ, ಗುತ್ತಲ ಪಪಂಗೆ ಮಂಜುನಾಥ ಓಲೇಕಾರ ಅವರನ್ನು ನೇಮಕ ಮಾಡಲಾಗಿದೆ. –ಮಹೇಶ ಟೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next