Advertisement

ಸ್ವಚ್ಛ ಭಾರತ ಪ್ರತಿಯೋರ್ವನ ಜವಾಬ್ದಾರಿ: ವಂ|ಅಕ್ವೀನ್‌ ನರೋನ್ಹ

10:48 AM May 13, 2019 | Suhan S |

ಮಹಾನಗರ, ಮೇ 12: ಶ್ರೀ ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ನಗರದಲ್ಲಿ ಜರಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 23ನೇ ರವಿವಾರದ ಶ್ರಮದಾನ ಮೇ 12ರಂದು ಅಶೋಕನಗರದ ಸೇಂಟ್ ಡೊಮಿನಿಕ್‌ ಚರ್ಚ್‌ ವ್ಯಾಪ್ತಿಯಲ್ಲಿ ನಡೆಯಿತು.

Advertisement

ಸಂತ ಡೊಮಿನಿಕ್‌ ಚರ್ಚ್‌ನ ಮುಖ್ಯಸ್ಥ ವಂ| ಅಕ್ವೀನ್‌ ನರೋನ್ಹ, ಉದ್ಯಮಿ ರಾಮಕುಮಾರ್‌ ಬೇಕಲ್ ಜಂಟಿಯಾಗಿ ಅಭಿಯಾನಕ್ಕೆ ಹಸುರು ನಿಶಾನೆ ತೋರಿದರು. ಉಮಾಪ್ರಸಾದ್‌ ಕಡೇಕಾರ್‌, ಪ್ರೊ| ಸತೀಶ್‌ ಭಟ್, ಸರಿತಾ ಶೆಟ್ಟಿ, ರಾಮಚಂದ್ರ ಶೆಟ್ಟಿ, ಕೇಶವ ಶೆಟ್ಟಿಗಾರ್‌, ಪ್ರಕಾಶ್‌ ಎಸ್‌.ಎನ್‌., ಕಿರಣಕುಮಾರ್‌ ಕೋಡಿಕಲ್, ಶಿವರಾಜ್‌ ಶೆಟ್ಟಿ, ದತ್ತ ಪಾರಡೈಸ್‌ ನಿವಾಸಿಗಳು ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.

ವಂ| ಅಕ್ವೀನ್‌ ನರೋನ್ಹ ಮಾತನಾಡಿ, ಭಗವಂತನು ಮಾನವನನ್ನು ಸೃಷ್ಟಿಸಿದಂತೆ ಹಲವು ಜೀವಿಗಳನ್ನು ಸೃಷ್ಟಿಸಿದ್ದಾನೆ. ಎಲ್ಲ ಜೀವಿಗಳಂತೆ ಮರಗಿಡಗಳಲ್ಲಿಯೂ ಜೀವವಿದೆ. ಆದರೆ ಅವನ್ನೆಲ್ಲ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಈ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್‌ನ ಈ ಅಭಿಯಾನ ಶ್ಲಾಘನೀಯ. ಮಹಾತ್ಮಾ ಗಾಂಧೀ ಜಿಯವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ಎಲ್ಲರೂ ಶ್ರಮಿಸಬೇಕಿದೆ. ಇದು ಕೇವಲ ಸರಕಾರಿ ಕಾರ್ಯಕ್ರಮವಾಗದೇ ಇದು ದೇಶದ ಪ್ರತಿಯೊಬ್ಬರ ಜವಾಬ್ದಾರಿ ಯಾಗಬೇಕಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ವಾಗಿಡುವುದು ನಮ್ಮ ಕರ್ತವ್ಯವಾಗಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ನಿಗದಿತ ಡಬ್ಬಿಯಲ್ಲಿ ಹಾಕುವ ಪ್ರಜ್ಞೆ ಬೆಳೆಸಿಕೊಂಡಾಗ ಸ್ವಚ್ಛ ಭಾರತ ಯಶಸ್ವಿಯಾಗುತ್ತದೆ ಎಂದರು.

ಶ್ರಮದಾನ:

ಸ್ವಾಮಿ ಏಕಗಮ್ಯಾನಂದಜೀ ಹಾಗೂ ವಂ| ಅಕ್ವೀನ್‌ ಕೆಲಕಾಲ ರಸ್ತೆಯನ್ನು ಗುಡಿಸಿದರು. ಬಳಿಕ ಸ್ವಯಂಸೇವಕರು ಡೊಮಿನಿಕ್‌ ಚರ್ಚ್‌ ಜಂಕ್ಷನ್‌ನಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಶ್ರಮದಾನ ಮಾಡಿದರು. ಚರ್ಚ್‌ ಎದುರಿನ ತ್ಯಾಜ್ಯ ತುಂಬಿದ ಸ್ಥಳವನ್ನು ಮೊದಲು ಸ್ವಚ್ಛಗೊಳಿಸಲಾಯಿತು. ಅಲ್ಲಿದ್ದ ನಿರುಪಯುಕ್ತ ಗೂಡಂಗಡಿ ತೆರವುಗೊಳಿಸಲಾಯಿತು. ಅನಂತರ ಅನೇಕ ವರ್ಷಗಳಿಂದ ಅಲ್ಲಿ ತೋಡಿದ್ದ ಗುಂಡಿಯನ್ನು ಮಣ್ಣು ಹಾಕಿ ಮುಚ್ಚಲಾಯಿತು. ಅಲ್ಲಿಯ ನೆಲವನ್ನು ಸಮತಟ್ಟುಗೊಳಿಸಿ ಅಲ್ಲಿ ಮತ್ತೆ ಕಸಹಾಕದಂತೆ ಗಿಡಗಳನ್ನಿಟ್ಟು ಸುಂದರ ತಾಣವನ್ನಾಗಿಸಲಾಗಿದೆ. ಚರ್ಚ್‌ ಮುಂಭಾಗದಿಂದ ಕೋಡಿಕಲ್ ಹೋಗುವ ರಸ್ತೆಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್‌ ತ್ಯಾಜ್ಯ, ಕಲ್ಲು ಮಣ್ಣುಗಳ ರಾಶಿ ತೆಗೆದು ಹಸನು ಮಾಡಲಾಯಿತು.

Advertisement

ಕಾಲು ದಾರಿಯಲ್ಲಿದ್ದ ಕಲ್ಲುಗಳನ್ನು ತೆಗೆದು ನಡೆದು ಹೋಗುವವರಿಗೆ ಅನುಕೂಲ ಮಾಡಿಕೊಡಲಾಯಿತು. ಮೂರನೇ ತಂಡ ಉರ್ವ ಸ್ಟೋರ್‌ನತ್ತ ಸಾಗುವ ಮಾರ್ಗ, ಅದೇ ರಸ್ತೆಯ ತಿರುವಿನಲ್ಲಿದ್ದ ಕಾಂಕ್ರೀಟ್ ಕಸದ ತೊಟ್ಟಿಯನ್ನು ಜೇಸಿಬಿ ಮೂಲಕ ತೆರವು ಮಾಡಿ ಸ್ವಚ್ಛಗೊಳಿಸಲಾಯಿತು. ಇದೀಗ ಆ ಜಾಗದಲ್ಲಿ ಸುಂದರ ಗಿಡಗಳ ಕುಂಡಗಳನ್ನಿಡಲಾಗಿದೆ. ಮೆಹಬೂಬ ಖಾನ್‌, ರಾಮಚಂದ್ರ ಭಟ್, ಸಂತೋಷ ಸುವರ್ಣ, ವಿಟuಲದಾಸ್‌ ಪ್ರಭು, ಸುಮಾಶಿವು, ಪ್ರಶಾಂತ ಉಪ್ಪಿನಂಗಡಿ, ದಿನೇಶ್‌ ಶೆಟ್ಟಿ, ಅಭಿಯಾನದ ಮುಖ್ಯ ಸಂಯೋಜಕ ದಿಲ್ರಾಜ್‌ ಆಳ್ವ ಸಹಿತ ಕಾರ್ಯಕರ್ತರು ಸುಮಾರು ಮೂರು ಗಂಟೆಗಳ ಕಾಲ ಶ್ರಮದಾನ ಮಾಡಿದರು.

ಕಳೆದ ವಾರದಂತೆ ಈ ವಾರವೂ ಜಗನ್‌ ಕೋಡಿಕಲ್ ನೇತೃತ್ವದಲ್ಲಿ ಸ್ವಚ್ಛತಾ ಯೋಧರ ಕಣ್ಗಾವಲು ಪಡೆ ತ್ಯಾಜ್ಯ ಬೀಳುತ್ತಿದ್ದ ಸ್ಥಳದಲ್ಲಿ ಕಾಯ್ದು ನಿಂತು ಮತ್ತೆ ಆ ಜಾಗದಲ್ಲಿ ಸಾರ್ವಜನಿಕರು ಕಸ ಹಾಕದಂತೆ ಮುನ್ನೆಚ್ಚರಿಕೆ ವಹಿಸಲಿದೆ.

ಸ್ವಚ್ಛ ಪುತ್ತೂರು:

ರಾಮಕೃಷ್ಣ ಮಿಷನ್‌ ಮಾರ್ಗ ದರ್ಶನದಲ್ಲಿ ಪುತ್ತೂರಿನಲ್ಲಿ ಮೂರನೇ ವರ್ಷದ ಸ್ವಚ್ಛತಾ ಅಭಿಯಾನದ 6ನೇ ಶ್ರಮದಾನ ನೆಹರೂ ನಗರದ ವಿವೇಕಾನಂದ ಕಾಲೇಜಿನ ಸಂಪರ್ಕ ರಸ್ತೆಯಲ್ಲಿ ಜರಗಿತು. ಎಂ.ಎಸ್‌. ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉಪನ್ಯಾಸಕ ಗೋಪಾಲಕೃಷ್ಣ ಭಟ್, ಶಂಕರ ಮಲ್ಯ ಇರ್ದೆ, ಸಂತೋಷ ವಾಗ್ಲೆ, ದೇವಿಪ್ರಸಾದ್‌ ಮಲ್ಯ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು. ಕೃಷ್ಣ ಜಿ. ಕಾರ್ಯಕ್ರಮ ಸಂಯೊಜಿಸಿದರು.

ಸ್ವಚ್ಛ ಕಾಯರ್ತಡ್ಕ:

ರಾಮಕೃಷ್ಣ ಮಿಷನ್‌ ಆಶ್ರಯದಲ್ಲಿ ಕಾಯರ್ತಡ್ಕದಲ್ಲಿ 5ನೇ ಶ್ರಮದಾನ ಜರಗಿತು. ಊರಿನ ಸೇತುವೆಗೆ ಬಣ್ಣ ಬಳಿದು ಸುಂದರಗೊಳಿಸಿ, ಬಳಿಕ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ವಿಜೇತ್‌ ಕುಲಾಡಿ, ಪ್ರವೀಣ ಪಾಂಗಳ, ಪ್ರದೀಪ್‌ ಕುಲಾಲ್ ಹಂಕರ್ಜಾಲು ಸಹಿತ ಅನೇಕರು ಭಾಗಿಯಾಗಿದ್ದರು. ಯೋಗೀಶ್‌ ಕಾಯರ್ತಡ್ಕ ಶ್ರಮದಾನದ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next