Advertisement

ಶಿಡ್ಲಘಟ್ಟ : ಪ್ರತಿಭಟನಾ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ

09:06 PM Feb 09, 2022 | Team Udayavani |

ಶಿಡ್ಲಘಟ್ಟ : ಕೊತ್ತನೂರು ಗ್ರಾಮ ಪಂಚಾಯಿತಿಯಲ್ಲಿ ಸುಮಾರು 14 ವರ್ಷಗಳಿಂದ ಬೀಡುಬಿಟ್ಟಿರುವ ಕಾರ್ಯದರ್ಶಿಯ ವರ್ಗಾವಣೆ, ನರೇಗಾ ತಾಂತ್ರಿಕ ಸಿಬ್ಬಂದಿ ಮತ್ತು ಗಣಕಯಂತ್ರದ ಆಪರೇಟರ್ ಗಳನ್ನು ಬದಲಾಯಿಸುವ ವಿಚಾರದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಎರಡು ಗುಂಪುಗಳ ನಡುವೆ ವಾದ-ಪ್ರತಿವಾದ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆಯಿತು.

Advertisement

ಕಾಂಗ್ರೆಸ್ ಮುಖಂಡ ಎ. ಪಂಚಾಕ್ಷರಿ ರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಸುಮಾರು 14 ವರ್ಷಗಳಿಂದ ಬೀಡುಬಿಟ್ಟಿರುವ ಕಾರ್ಯದರ್ಶಿ ಅಶ್ವತ್ಥಪ್ಪ ಹಾಗೂ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಮತ್ತು ನರೇಗಾ ತಾಂತ್ರಿಕ ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪಂಚಾಕ್ಷರಿರೆಡ್ಡಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಪ್ರತಿಯೊಂದಕ್ಕೂ ಇಲ್ಲಿ ಕೈಬಿಸಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು ಜೊತೆಗೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಅಶ್ವತ್ಥಪ್ಪ ಅವರು 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಇದೇ ವೇಳೆ ಪ್ರತಿಭಟನಾ ಸಭೆಗೆ ಬಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಅವರು ಗ್ರಾಮ ಪಂಚಾಯತಿಯಲ್ಲಿ ಪಾರದರ್ಶಕವಾಗಿ ಆಡಳಿತವನ್ನು ನಡೆಸುತ್ತಿದ್ದೇವೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿದ್ದೇನೆ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶಗಳ ನೀಡಿಲ್ಲ ಯಾರು ಬೇಕಾದರೂ ತನಿಖೆ ನಡೆಸಬಹುದು ಎಂದು ಸವಾಲು ಹಾಕಿ ಸಾರ್ವಜನಿಕರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಬಾರದು ನನ್ನಿಂದ ಅಕ್ರಮವಾಗಿದ್ದರೆ ಪ್ರಶ್ನೆ ಮಾಡಿ ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದರು.

ಇದನ್ನೂ ಓದಿ : ಸಿಗದ ತುರ್ತು ಆರೋಗ್ಯ ವಾಹನ ; ಉಸಿರಾಟದ ಸಮಸ್ಯೆಯಿಂದ 45 ದಿನದ ಮಗು ಸಾವು

Advertisement

ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ವರ್ಗಾವಣೆಯನ್ನು ಮಾಡಲು ಸಭೆ ನಡೆಸುತ್ತಿದ್ದೇನೆ ತಮ್ಮ ಬಗ್ಗೆ ಯಾರು ಮಾತನಾಡಿಲ್ಲ ಎಂದು ಎ.ಪಂಚಾಕ್ಷರಿರೆಡ್ಡಿ ಹೇಳಿದರಲ್ಲದೆ ಒಂದೇ ಕಾಲುವೆಯನ್ನು ಮೂರು ಬಾರಿ ಕೆಲಸ ಮಾಡಿ ಬಿಲ್ಲು ಮಾಡಿಕೊಳ್ಳಲಾಗಿದೆ ಅನಧಿಕೃತ ವ್ಯಕ್ತಿಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಏನು ಕೆಲಸ ಆಕ್ರೋಶ ವ್ಯಕ್ತಪಡಿಸಿದರು ಇದೇ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಎ.ಪಂಚಾಕ್ಷರಿರೆಡ್ಡಿ ಅವರ ಬೆಂಬಲಿಗರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಕೂಡಲೇ ಎಚ್ಚೆತ್ತುಕೊಂಡ ಗ್ರಾಮದ ಹಿರಿಯರು ಎರಡು ಕಡೆಯ ಗುಂಪಿನವರಿಗೆ ಸಮಾಧಾನಪಡಿಸಿ ಇಲ್ಲಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಹಾಗೂ ಆಪರೇಟರ್ ವಿರುದ್ಧ ಹೋರಾಟ ನಡೆಯುತ್ತಿದೆ ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿ ಗಲಾಟೆಯನ್ನು ಶಮನಗೊಳಿಸಿದರು.

ಗ್ರಾಮ ಪಂಚಾಯತಿಯ ಮುಂದೆ ಪ್ರತಿಭಟನೆ ನಡೆಯುತ್ತಿರುವ ಮಾಹಿತಿಯನ್ನು ಅರಿತ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿಯ ಮೂಲಕ ಸಂಪರ್ಕ ಮಾಡಿ ಪ್ರತಿಭಟನಕಾರರ ರೊಂದಿಗೆ ಮಾತನಾಡಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯನ್ನು ಮತ್ತು ನರೇಗಾ ತಾಂತ್ರಿಕ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾ ಸಭೆಯನ್ನು ವಾಪಸ್ಸು ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಜಗದೀಶರೆಡ್ಡಿ, ಜ್ಞಾನೇಶ್, ಸ್ವರೂಪ್‍ರೆಡ್ಡಿ ಅನಿತಾ ಮುನಿಯಪ್ಪ ಮತ್ತಿತರರು ಭಾಗವಹಿಸಿದರು, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಿಡಿಓ ಪವಿತ್ರಾ ಹಾಗೂ ಗ್ರಾಪಂ ಕಾರ್ಯದರ್ಶಿ ಅಶ್ವತ್ಥಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next