Advertisement

Language: ಭಾಷಾಸ್ಪುಟತೆಗೆ ಉಚ್ಚಾರ ಸ್ಪಷ್ಟತೆ ಅಪೇಕ್ಷಣೀಯ

12:22 AM Dec 27, 2023 | Team Udayavani |

ಉಚ್ಚಾರದ ಆಚಾರವು ಪ್ರತಿಯೊಂದು ಭಾಷೆಗೂ ಇರುವುದು ವೇದ್ಯ. ಜಗತ್ತಿನಲ್ಲಿ ಅದೆಷ್ಟೋ ಸಾವಿರ ಭಾಷೆಗಳಿವೆ. ನಮ್ಮ ದೇಶದಲ್ಲೇ ಸಾವಿರಾರು ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಜಾಡಿದೆ, ಜಾಯಮಾನವಿದೆ, ಉಚ್ಚಾರಣ ತಂತ್ರವಿದೆ. ಕೆಲವು ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು “ವ್ಯಾವಹಾರಿಕ ಪ್ರಪಂಚ’ದಿಂದ ದೂರವಿಡಲಾಗಿದೆ. ಆದರೂ ಅವು ಗ್ರಂಥಸ್ತವಾಗಿ ಲಭ್ಯವಿವೆ. ಇನ್ನು ಕೆಲವು ಗ್ರಾಂಥಿಕ ಮತ್ತು ಆಡುಭಾಷೆಗಳೆರಡಾಗಿಯೂ ಇವೆ. ಮತ್ತೆ ಕೆಲವು ಬರೀ ಆಡುಭಾಷೆಗಳಾಗಿವೆ. ಕೆಲವು ಭಾಷೆಗಳು ವ್ಯಾವಹಾರಿಕವಾಗಿ “ಮುಖ್ಯ’ ಭಾಷೆಗಳಾಗಿವೆ. ಏನೇ ಆದರೂ ಪ್ರತೀ ಭಾಷೆಗೂ ಅದರದ್ದೇ ಆದ ಚೌಕಟ್ಟು ಇದೆಯೆಂಬುದು ಸುಸ್ಪಷ್ಟ. ಭಾಷಾ ಉಚ್ಚಾರವು ಇಂದ್ರಿಯಗಳು ಹಾಗೂ ಅಂಗಗಳ ಕಾರ್ಯವಾದರೂ ಭಾಷೆ ಯಿಂದ ಭಾಷೆಗೆ ಉಚ್ಚಾರವು ವಿಶಿಷ್ಟ, ಪ್ರತ್ಯೇಕ. ಒಂದು ಮುಖ್ಯಭಾಷೆಯ ಉಚ್ಚಾರವನ್ನೇ ಅದರ ಉಪಭಾಷೆಗಳು ಹೋಲುವುದಾದರೂ ಅಲ್ಲೂ ಕೂಡ ಸೂಕ್ಷ್ಮ ವ್ಯತ್ಯಾಸಗಳನ್ನು ಖಂಡಿತಾ ಗಮನಿ ಸಬಹುದಾಗಿದೆ.
ಮೂಲತಃ “ಮಾತು’ ಎಂದರೆ “ಶಬ್ದೋಚ್ಚಾರ’, ಸ್ಮತಿಯಾಧಾರಿತ ಧ್ವನಿ-ಸಂಕೇತಗಳ ಪ್ರಕಟ.

Advertisement

ಯಾವುದೇ ಭಾಷೆಯಾದರೂ “ವ್ಯವಸ್ಥಿತ ಮಾತು’ ಮಾತುಗಾರಿಕೆ ಅನಿಸಿಕೊಳ್ಳುತ್ತದೆ. ಉಚ್ಚಾರದ ವ್ಯವಸ್ಥೆಯಲ್ಲಿ ನಮ್ಮ ಅಂತರ್‌ ಇಂದ್ರಿಯಗಳಾದ ಮನೋಬುದ್ಧಿಗಳ ಹಾಗೂ ಧ್ವನ್ಯಂಗಗಳ ಕಾರ್ಯ ಮಹತ್ವದ್ದು. ಮಾತಿನ ಪೂರ್ವಸಿದ್ಧತೆಯಲ್ಲಿ ಮತ್ತು ಪ್ರಯೋಗದಲ್ಲಿ ಮೆದುಳಿನ ಪಾತ್ರವಿದೆ. ಮಾನಸಿಕ-ದೈಹಿಕ ಪೂರ್ವ ಸಿದ್ಧತೆಯೂ ಇದೆ. ಬಾಹ್ಯ ಮತ್ತು ಆಂತರಿಕ ಒತ್ತಡಗಳಿಂದ ಅಂತರಂಗದಿಂದೆದ್ದ ಭಾವವು ಧ್ವನಿ- ಶಬ್ದಗಳ ಮೂಲಕ ಬಹಿರಂಗಗೊಳ್ಳುವುದು. ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ| ಆರ್‌. ಗಣೇಶ್‌ ಒಂದೆಡೆ ಹೀಗೆ ಹೇಳಿದ್ದಾರೆ: “ಪರಮತಾ ತ್ಪರ್ಯದಿಂದ ಭಾಷೆಯು ವಾಕ್ಯ ಸ್ಫೋಟ. ಇದನ್ನೇ ಅಖಂಡಸ್ಫೋಟವೆಂದು ವೈಯಾ ಕರಣರು ಹೇಳುತ್ತಾರೆ.’

ಉಚ್ಚಾರದಲ್ಲಿ ತುಟಿ, ನಾಲಗೆ, ಹಲ್ಲು, ವಸಡು, ಶ್ವಾಸಕೋಶ, ಶ್ವಾಸನಾಳ, ಅನ್ನನಾಳ, ಗಂಟಲು, ಧ್ವನಿಪೆಟ್ಟಿಗೆ, ಕಿರುನಾಲಗೆ ಇತ್ಯಾದಿ ಅಂಗಗಳ ಮಹತ್ಕಾರ್ಯವಿದೆ. ಧ್ವನಿಯ ಉತ್ಪತ್ತಿಯ ಹಿಂದಿನ ಶಕ್ತಿ ಉಸಿರೇ ಆಗಿದೆ. ಮಾತೆಂಬ ಶಬ್ದೋತ್ಪತ್ತಿ ಮತ್ತು ಉಚ್ಚಾರಣೆಯ ಹಿಂದಿನ ಅಂಗಗಳನ್ನು ಅಲಕ್ಷಿಸಿ ಧ್ವನಿಶಾಸ್ತ್ರ-ವಿಜ್ಞಾನಗಳು ರೂಪುಗೊಂಡಿವೆ. ವಿವಿಧ ಧ್ವನಿಗಳ ಉಚ್ಚಾರಣ ಸ್ಥಾನಗಳನ್ನು ಅನುಸರಿಸಿ, ಸ್ಥೂಲವಾಗಿ – ಕಂಠ್ಯ, ತಾಲವ್ಯ, ಮೂರ್ಧನ್ಯ, ದಂತ್ಯ, ಓಷ್ಠ ಎಂಬುದಾಗಿ-ಧ್ವನಿಗಳನ್ನು ಧ್ವನಿ ಶಾಸ್ತ್ರಜ್ಞರು ವ್ಯಂಜನಾಕ್ಷರ, ಅನುಸ್ವಾರ, ನಿಸರ್ಗ, ಹ್ರಸ್ವಸ್ವರ, ದೀರ್ಘ‌ಸ್ವರ, ಪ್ಲುತಸ್ವರ, ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕ ಎಂದೆಲ್ಲ ಬಹಳ ಅರ್ಥಪೂರ್ಣವಾಗಿ ಮಾರ್ಗದರ್ಶನ ಮಾಡಿ ದ್ದಾರೆ. ಇದು ಉಚ್ಚಾರಣ ವಿಜ್ಞಾನ. ಅಂದರೆ, ಭಾಷಾಸು#ಟತೆಯು ಉಚ್ಚಾರ ಸ್ಪಷ್ಟತೆಯನ್ನು ಅಪೇಕ್ಷಿಸುತ್ತದೆಯೆಂಬುದು ತಾತ್ಪರ್ಯ, ಉಚ್ಚಾರ ಸ್ಪಷ್ಟತೆಯು ಮಾತನ್ನು ಸಮೃದ್ಧಗೊಳಿಸುವುದು ಎಂಬುದೂ ಸತ್ಯ. ಭಾಷೆಯು ಒಂದು ಕರಣ ಮಾತ್ರವಲ್ಲ ಉಪಕರಣವೂ ಹೌದು. ಅದಕ್ಕೆ ವ್ಯಾಕರಣವಿದೆ. ಉಚ್ಚಾರಕ್ಕೊಂದು ಲಯವಿದೆ; ಮಾತ್ರಾಕಾಲ’ವಿದೆ. ಮೇಲಾಗಿ “ಶ್ರುತಿ’ಯಿದೆ. ಇದು ಎಲ್ಲ ಭಾಷೆಗಳಿಗೂ ಅನ್ವಯ.

ನಾವು ಸಂಗೀತವನ್ನು ಗಮನಿಸೋಣ. ಅಲ್ಲಿ ಸಪ್ತಸ್ವರಗಳಿವೆ. ಅವುಗಳ ವ್ಯವಸ್ಥಿತ ಬಳಕೆಯಿಂದ ಸಂಗೀತವು ಆಸ್ವಾದ್ಯವೂ ಆಪ್ಯಾಯಮಾನವು ಆಗುವುದು. ಸ್ವರ-ಶ್ರುತಿ-ಲಯ-ತಾಳಗಳ ಮೇಳೈಸುವಿಕೆಯಿಂದ ಸಂಗೀತವು ಕರ್ಣಾನಂ ದಕರ. ಸ್ವರ-ಶ್ರುತಿ-ಲಯ-ತಾಳಗಳನ್ನು ಒಪ್ಪ ಓರಣಗೊಳಿಸದಿದ್ದರೆ ಸಂಗೀತವು ಕರ್ಣಕರ್ಕಶ.

ಸಂಸ್ಕೃತವು ನಮ್ಮ ದೇಶದ ಶಾಸ್ತ್ರೀಯ ಭಾಷೆ ಯಾಗಿದೆ. ಸಮಸ್ತ ವೈದಿಕ ವಾಞ್ಮಯವು ಮೂಲತಃ ಸಂಸ್ಕೃತದ್ದು. ಅವುಗಳಲ್ಲಿ ಬಹಳ ಪ್ರಾಚೀನವಾದದ್ದು ವೇದಗಳು. ಸಂಸ್ಕೃತದ ಉಚ್ಚಾರವು ವಿಶಿಷ್ಟ; ಅದರಲ್ಲೂ ವೇದಗಳಲ್ಲಿ ಬರುವ ಮಂತ್ರಗಳ ಉಚ್ಚಾರ ಮತ್ತೂ ವಿಶಿಷ್ಟ ; ವೇದವನ್ನು “ಶ್ರುತಿ’ ಎನ್ನುವರು. ಮೂಲದಲ್ಲಿ ವೇದವೆಲ್ಲ ಶ್ರವಣ, ಮನನ ಮತ್ತು ನಿದಿಧ್ಯಾಸನಗಳಿಂದಲೇ ಹರಿದು ಬಂದದ್ದು. ಸಂಸ್ಕೃತದ ದೇವತಾಪ್ರಾರ್ಥನೆಯನ್ನು ಎರಡು ಭಾಗ ಮಾಡಬಹುದು. ಒಂದು: ಶ್ಲೋಕಗಳು – ಶ್ಲೋಕವು ಪದ್ಯವೇ ಆಗಿದೆ. ಅದರ ಉಚ್ಚಾರಕ್ಕೂ ಒಂದು ರೀತಿಯಿದೆ. ಎರಡು: ಮಂತ್ರಗಳು – ದೇವತೆಗಳ, ಗುರುಗಳ ಅನುಗ್ರಹ ಸಂಪಾದನೆಗಾಗಿ ಹೇಳುವ ವಾಕ್ಯ ; ಮಂತ್ರಗಳು ವೇದದ ಒಂದು ಭಾಗ. ಇವುಗಳನ್ನು “ಸಂಹಿತಾ’ ಎನ್ನುವರು.

Advertisement

ಮಂತ್ರವು ವೈದಿಕ ಸಾಹಿತ್ಯದ ಶ್ರೇಷ್ಠ ಕೊಡುಗೆ. ಮಂತ್ರವು “ಮನನ’ ಮಾಡುವುದಕ್ಕಾಗಿಯೇ ಇರುವಂಥದ್ದು. “ಮನನಾತ್‌ತ್ರಾಯತೇ ಇತಿ ಮಂತ್ರಃ’-ಎಂಬುದಾಗಿ “ಮಂತ್ರ’ ಶಬ್ದದ ವುತ್ಪತ್ತಿಯನ್ನು ಹೇಳಲಾಗಿದ್ದು, ಮಂತ್ರವು ಮನಬಂದಂತೆಲ್ಲ ಉಚ್ಚರಿಸುವಂಥದ್ದಲ್ಲ ಎಂಬ ಮಾತು ರೂಢಿಯಲ್ಲೇ ಬಂದಿದೆ. ಅಂದರೆ, ಮಂತ್ರವಿರುವುದು ಮನಸ್ಸಿನಲ್ಲಿ ಚಿಂತನ ಮಾಡುವುದಕ್ಕೆ, ಬೊಬ್ಬೆ ಹೊಡೆಯು ವುದಕ್ಕಲ್ಲ ಎಂಬುದು ಸಂದೇಶ. ಆದರೆ ಯಜ್ಞದ ಸಂದರ್ಭದಲ್ಲಿ, ವಿವಿಧ ಉಪಾ ಸನೆ-ಆರಾಧನೆ-ಸಂಸ್ಕಾರಗಳ ಸಂದರ್ಭ ದಲ್ಲಿ ಮಂತ್ರಗಳನ್ನು ಗಟ್ಟಿಯಾಗಿ ಉಚ್ಚರಿಸುವ ಪರಿಪಾಠವಿದೆ.

ಅದು ಹೇಗೆ? ಅಲ್ಲೂ ಶಾಸ್ತ್ರವಿದೆ! ಅನುದಾತ್ತ, ಉದಾತ್ತ, ಸ್ವರಿತಗಳೆಂಬ ಸ್ವರಗಳನ್ನು ಹೇಳಲಾಗಿದೆ. ಸುಶಿಕ್ಷಿತ ವೈದಿಕರ ಮಂತ್ರೋಚ್ಚಾರಣೆಯಲ್ಲಿ ಇದನ್ನು ಎಲ್ಲರೂ ಗಮನಿಸಬಹುದಾಗಿದೆ. ಮಂತ್ರಗಳನ್ನು ಮನನ ಮಾಡುವಾಗಲೂ ಸ್ವರಾನುಲಕ್ಷ್ಯವು ಅಗತ್ಯವೆಂದೇ ಪಾಠ. ಅಂದರೆ, “ಮಂತ್ರ’ಕ್ಕೊಂದು “ಆಚಾರ’ವಿದೆ. ಅದು “ಉಚ್ಚಾರ’ಕ್ಕೆ ಸಂಬಂಧಿಸಿದ್ದೇ ಆಗಿದೆ. ಮಂತ್ರದ ಉಚ್ಚಾರ ಮತ್ತು ಪ್ರಯೋಗಕ್ಕೆ ಪೂರ್ವದಲ್ಲಿ ಗುರೂಪದೇಶವು ಕಡ್ಡಾಯ. ಮಂತ್ರವು “ಪವಿತ್ರ’ವೆಂಬ ಭಾವನೆಯಿದೆ, ಅದರ ಹಿಂದೆ ಭಕ್ತಿಯಿದೆ. ಮಂತ್ರಗಳ ಸ್ಪಷ್ಟ ಉಚ್ಚಾರವು ಪುಣ್ಯಪ್ರದವೆಂದು ಹೇಳಲಾಗಿದೆ. ವೈಜ್ಞಾನಿಕವಾಗಿ ನೋಡಿದರೆ ಅದರ ಹಿಂದೆ “ಆರೋಗ್ಯಸೂತ್ರ’ವಿದೆ. ಮನಬಂದಂತೆ ಮಂತ್ರವನ್ನುಚ್ಚರಿಸುವುದು ದೋಷಕರವೆಂದೂ ಹೇಳಲಾಗಿದೆ. ಇನ್ನು ಈ ಪುಣ್ಯ-ಪಾಪಗಳ ವಿಚಾರವನ್ನು ಬದಿಗಿಟ್ಟು ನೋಡಿದರೂ, ಮಂತ್ರಗಳನ್ನು ಬೇಕು ಬೇಕಾದಂ ತೆಲ್ಲ ಬೇಕಾಬಿಟ್ಟಿಯಾಗಿ ಒಟ್ಟಾರೆಯಾಗಿ ಉಚ್ಚರಿಸುವುದು ಅದರ ಗುಣಮಟ್ಟವನ್ನು ಅವಗಣಿಸಿದಂತಾಗುವುದಿಲ್ಲವೇ? ಆ ಮೂಲಕ ಒಂದು ಭಾಷೆ ಮತ್ತು ಅದರೊಂದಿಗೆ ಬೆಸೆದಿರುವ ಸಂಸ್ಕೃತಿಗೆ ಅಪಚಾರ ಎಸಗಿದಂತಾಗುವುದಿಲ್ಲವೇ? ಒಂದು ಭಾಷೆಯನ್ನೊ, ಸಂಸ್ಕೃತಿಯನ್ನೋ ಸಾಧ್ಯವಿದ್ದರೆ ಉಪಚರಿಸಬೇಕು. ಆದರೆ ಅದು ಅಸಾಧ್ಯವಾದಲ್ಲಿ ಅಪಚಾರವನ್ನಂತೂ ಎಸಗಬಾರ ದೆಂಬುದು ಪ್ರಾಜ್ಞರೆಲ್ಲರ ಅಭಿಮತ.

ಭಾಷೆ ಯಾವುದೇ ಇರಲಿ – ಉಚ್ಚಾರವು ದೋಷಪೂರಿತವಾದರೆ ಆಯಾ ಭಾಷೆಗಳ ಸೌಂದರ್ಯವು ಕೆಡುವುದು. ಉಚ್ಚಾರವು ಅಸ್ಪಷ್ಟವಾದರೆ ಸಂವಹನವೋ ಅಭಿವ್ಯಕ್ತಿಯೋ ಪರಿಣಾಮಕಾರಿಯಾಗದು. ಭಾವವು ನಿರೀಕ್ಷಿತ – ಅಪೇಕ್ಷಿತ ಮಟ್ಟವನ್ನು ತಲುಪದು. ಅಪೇಕ್ಷಿತ ಪರಿಣಾಮವನ್ನು ಉಂಟು ಮಾಡದ ಭಾಷೆಯು ಕ್ರಮೇಣ ಉಪೇಕ್ಷಿಸಲ್ಪಡಬಹುದು. ಭಾವ ವ್ಯತ್ಯಾಸ ಅರ್ಥವ್ಯತ್ಯಾಸಗಳಿಂದಾಗಿ ಮಾತು ಹಾಳಾಗಿಹೋಗಬಹುದು. ಹಾಗಾಗ ಕೂಡದೆಂಬ ಎಚ್ಚರಿಕೆಯಿಂದ ನಮ್ಮ ಪೂರ್ವಿಕರು ಸಾಕಷ್ಟು ಅಧ್ಯಯನ-ಸಂಶೋಧನೆಗಳನ್ನು ಮಾಡಿ ಮಾತನ್ನು ಉಚ್ಚರಿಸಬೇಕಾದ ವಿಧಿ-ವಿಧಾನಗಳನ್ನೆಲ್ಲ – ಒಂದರ್ಥದಲ್ಲಿ – ಶಾಸನ ಮಾಡಿ ಹೋಗಿದ್ದಾರೆ.

ಉಚ್ಚಾರಣೆಗೆ ಘನವಿದ್ವತ್‌ ಬೇಡ! ಆದರೆ ಧ್ವನ್ಯಂಗಗಳ ಸಮರ್ಪಕ ಬಳಕೆ ಬೇಕು! ಅದಕ್ಕೆ ಸರಿಯಾದ ತರಬೇತಿ ಸಿಗಬೇಕು. ಮುಖ್ಯವಾಗಿ ತರಬೇತಿ ಪಡೆದುಕೊಳ್ಳಲು ಆಸಕ್ತಿ ಬೇಕು. ಆದರೆ ಬರೀ ಆಸಕ್ತಿಯೊಂದೇ ಸಾಕಾಗದು, ಪ್ರಯತ್ನವೂ ಬೇಕು. ಮೇಲಾಗಿ, ಪ್ರತೀ ಭಾಷೆಯ ಹಿಂದೆ ಒಂದು ಸಂಸ್ಕಾರ, ಸಂಸ್ಕೃತಿ ಇದೆ. ಉಚ್ಚಾರಣಾಸಕ್ತ ವ್ಯಕ್ತಿಯ “ಸ್ವಭಾವ’ವಿದೆ. ನೈಸರ್ಗಿಕ-ದೇಶಿಕ-ಪ್ರಾದೇಶಿಕ ಕೊಡುಗೆಯಿದೆ. ಒಟ್ಟಿನಲ್ಲಿ, ತರತಮವೇ ಗಟ್ಟಿಯಾಗುಳ್ಳ ನಮ್ಮಿà ಭೂಮಿಯಲ್ಲಿ ಭಾಷಿಕ ತರತಮವೂ ವೇದ್ಯ. ಯಾವ ಭಾಷೆಯೂ ಮೇಲಲ್ಲ; ಯಾವ ಭಾಷೆಯೂ ಕೀಳಲ್ಲ . ಭಾಷೆಗಳನ್ನು ಬೇಕು ಬೇಕಾದಂತೆ ಉಚ್ಚರಿಸುವುದೋ, ಬಳಸುವುದೋ ಮಾಡಿದಲ್ಲಿ ಆಯಾ ಭಾಷೆಗಳ ಸೌಂದರ್ಯ -ಸ್ವಾರಸ್ಯವು ಹಾಳಾಗುವುದು. ಗದ್ಯ ಬೇರೆ; ಪದ್ಯ ಬೇರೆ ; ಹಾಡು ಬೇರೆ; ಮಂತ್ರ ಬೇರೆ – ಎಲ್ಲವೂ ಒಂದೇ ಅಲ್ಲ ಎನ್ನುವ ಅರಿವು ಅಗತ್ಯ.

ಜಯಪ್ರಕಾಶ್‌ ಎ., ನಾಕೂರು

Advertisement

Udayavani is now on Telegram. Click here to join our channel and stay updated with the latest news.

Next