Advertisement

ಸಾಮರಸ್ಯ ಜೀವನಕ್ಕೆ ಪೂರಕ ಕ್ರಮ ಕೈಗೊಳ್ಳಲು ಆಗ್ರಹ

02:20 AM Jul 15, 2017 | Team Udayavani |

ಮಹಾನಗರ: ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಧರ್ಮಪ್ರಾಂತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ.ಪಿ.ನೊರೊನ್ಹಾ ನೇತೃತ್ವದಲ್ಲಿ ನಿಯೋಗವು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ರೂಪ್‌ ಕುಮಾರ್‌ ದತ್ತ ಅವರನ್ನು ಭೇಟಿ ಮಾಡಿ  ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದ ಜೀವನ ನಡೆಸಲು ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿತು.

Advertisement

ರಾಜ್ಯ ಮಟ್ಟದಿಂದ ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಶಾಂತಿ ಸಮಿತಿ ರಚಿಸಿ, ಇದರಲ್ಲಿ ಸಮುದಾಯದ ಮೇಲೆ ನಿಯಂತ್ರಣ ಇರುವ ಸಮುದಾಯದ ಸದಸ್ಯರನ್ನು ಸೇರಿಸಬೇಕು ಮತ್ತು ಸಮಿತಿಗೆ ಶಾಸನಾತ್ಮಕ ಅಧಿಕಾರ ನೀಡಿ ನಡವಳಿಕೆಗಳನ್ನು ಕಾರ್ಯತಗೊಳಿಸುವಂತಿರಬೇಕು. ಗುಪ್ತಚರ ಇಲಾಖೆ ಚುರುಕುಗೊಳಿಸಿ ಕಾನೂನು ಭಂಗ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಯಾವುದೇ ಅಹಿತಕರ ಘಟನೆ ನಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ದಂಡ ಪ್ರಕ್ರಿಯೆ ಸಂಹಿತೆ ಕಲಂ 106ರಿಂದ 110ರಲ್ಲಿ ನಮೂದಿಸಿದಂತೆ ಮುಚ್ಚಳಿಕೆ ಬರೆದು ತೆಗೆದುಕೊಳ್ಳಬೇಕು. ಪೊಲೀಸ್‌ ಠಾಣೆಗಳಲ್ಲಿ ಸ್ಥಳೀಯ ಅಧಿಕಾರಿಗಳನ್ನು ನೇಮಿಸಿದಲ್ಲಿ ಸಾಮರಸ್ಯ ಕಾಪಾಡಲು ಸಹಕಾರಿಯಾಗಲಿದೆ. ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಯಿತು. ಪ್ರಚೋದನಕಾರಿ ಸಂದೇಶ ನೀಡುವ ಹಾಗೂ ಕಳುಹಿಸುವ ವ್ಯಕ್ತಿಗಳ ಮೇಲೆ ರಾಜಕೀಯ ಪ್ರಭಾವವನ್ನು ಪರಿಗಣಿಸದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಲ್ಲಿ ಮಂಗಳೂರು ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿ ಹೊಂದಲು ಪೂರಕವಾಗಲಿದೆ ಎಂದು ಮನವಿ ಮಾಡಿದರು. 

ಎಡಿಜಿಪಿ ಅಲೋಕ್‌ ಮೋಹನ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಧರ್ಮಪ್ರಾಂತ್ಯದ ನಾಗರಿಕ ಮತ್ತು ಪ್ರಗತಿ ಸಮಿತಿ ಸಂಚಾಲಕ ವಂ| ಜೆ.ಬಿ.ಕ್ರಾಸ್ತ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ವಿಲಿಯಂ ಮಿನೇಜಸ್‌, ಫಾದರ್‌ ಮುಲ್ಲರ್ಸ್‌ ಮೆಡಿಕಲ್‌ ಕಾಲೇಜಿನ ನಿರ್ದೇಶಕ ವಂ|ರಿಚರ್ಡ್‌ ಕುವೆಲ್ಲೊ, ಕೆಥೋಲಿಕ್‌ ರಾಷ್ಟ್ರೀಯ ಪರಿಷತ್ತಿನ ಸದಸ್ಯರಾದ ಸುಶೀಲ್‌ ನೊರೊನ್ಹಾ ಮತ್ತು ಪ್ರೊ| ಎಡ್ವರ್ಡ್‌ ಡಿ’ಸಿಲ್ವ,  ಕೆಥೋಲಿಕ್‌ ಸಭಾ ಅಧ್ಯಕ್ಷ ಅನಿಲ್‌ ಲೋಬೋ, ಧರ್ಮಪ್ರಾಂತ್ಯದ ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್‌, ಕಾರ್ಯಕಾರಿ ಸಮಿತಿ ಸದಸ್ಯರಾದ ಹಿಲ್ಡಾ ಆಳ್ವ ಮತ್ತು ಎಲಿಜಬೆತ್‌ ರೋಚ್‌ ಹಾಗೂ ಶಾಲೆಟ್‌ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next