ಎರಡು ಸ್ಟಾರ್ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿವೆ ಎಂದಾಗ ಸಹಜವಾಗಿಯೇ ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಒಂದು ಆತಂಕವಿತ್ತು. ಜನ ಹೇಗೆ ಸ್ವೀಕರಿಸುತ್ತಾರೋ, ಎರಡೂ ಸಿನಿಮಾಗಳಿಗೂ ತೊಂದರೆಯಾದರೆ ಕಷ್ಟ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈಗ ಎರಡೂ ಸಿನಿಮಾಗಳನ್ನು ಜನ ಇಷ್ಟಪಟ್ಟಿದ್ದಾರೆ.
ಮಾಸ್-ಕ್ಲಾಸ್ ಎರಡು ವರ್ಗ ಕೂಡಾ ತೃಪ್ತಿಪಟ್ಟಿದೆ. ಆದರೆ, ಈ ಸಂಭ್ರಮವನ್ನು ಇಡೀ ಚಿತ್ರರಂಗ ಸಂಭ್ರಮಿಸುವ ಮೂಡ್ನಲ್ಲಿಲ್ಲ. ಅದಕ್ಕೆ ಕಾರಣ ಸದ್ಯ ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿರುವ ವಿವಾದ.
“ಕೋಟಿಗೊಬ್ಬ-3′ ಚಿತ್ರ ಒಂದು ದಿನ ತಡವಾಗಿ ಬಿಡುಗಡೆಯಾಗುವ ಮೂಲಕ ವಿವಾದ ಆರಂಭವಾಗಿದೆ. ಒಂದು ಕಡೆ ಒಂದಷ್ಟು ಮಂದಿ ಸೇರಿಕೊಂಡು “ಕೋಟಿಗೊಬ್ಬ-3′ ಚಿತ್ರವನ್ನು ನಿಲ್ಲಿಸಲು ಷಡ್ಯಂತ್ರ ಮಾಡಿದರು ಎಂಬ ಆರೋಪ ಒಂದು ಕಡೆಯಾದರೆ, ಪರೋಕ್ಷವಾಗಿ ಒಂದಷ್ಟು ಮಂದಿಯ ಹೆಸರುಗಳು ಇದರ ಹಿಂದೆ ತೇಲಿಬರುತ್ತಿದೆ. ಈ ಮೂಲಕ ಚಿತ್ರರಂಗದ ಒಂದಷ್ಟು ಮನಸ್ಸುಗಳಲ್ಲಿ ವೈಮನಸ್ಸು ಉಂಟಾಗಿದೆ.
ಇದನ್ನೂ ಓದಿ:ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ
ಈಗಷ್ಟೇ ಚೇತರಿಕೆ ಕಾಣುತ್ತಿರುವ ಚಿತ್ರರಂಗ ಈಗ ವಿವಾದದ ಮೂಲಕ ಸುದ್ದಿಯಾ ಗುತ್ತಿರೋದು ಬೇಸರದ ಸಂಗತಿ ಎಂಬುದು ಅಭಿಮಾನಿಗಳ ಮಾತು. ಎರಡು ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಅದನ್ನು ಸಂಭ್ರಮಿಸುವ ಮೂಡ್ನಲ್ಲಿ ಈಗ ಚಿತ್ರರಂಗ ಇಲ್ಲ.
ಚಿತ್ರರಂಗದಲ್ಲಿ ಸದ್ಯ ನಡೆಯುತ್ತಿರುವ ಕೋಲ್ಡ್ವಾರ್ ನಡುವೆಯೇ “ಸಲಗ’ ಹಾಗೂ “ಕೋಟಿಗೊಬ್ಬ-3′ ಚಿತ್ರದ ನಾಯಕರಾದ ವಿಜಯ್ ಸಿನಿಮಾದ ಗೆಲುವನ್ನು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ.
“ದುನಿಯಾ’ ವಿಜಯ್ ಹಾಗೂ ತಂಡ ಇತ್ತೀಚೆಗೆ “ಸಲಗ’ ಗೆದ್ದಿದ್ದನ್ನು ಸಂಭ್ರಮಿಸಿದ್ದಾರೆ.”ಟಿಣಿಂಗ ಮಿಣಿಂಗ ಟಿಶ್ಯಾ, ಸಲಗ ಸೂಪರ್ ಹಿಟ್ ಆಯ್ತೋ ಶಿಷ್ಯ’ ಎಂದು ಬರೆದುಕೊಂಡಿದ್ದಾರೆ. ನಟ ಸುದೀಪ್, “ಕೋಟಿಗೊಬ್ಬ-3′ ಚಿತ್ರವನ್ನು ತಬ್ಬಿಕೊಂಡಿರುವ ಹಾಗೂ ಸಂಕಷ್ಟದ ಕಾಲದಲ್ಲಿ ಕೈ ಹಿಡಿದ ಅಭಿಮಾನಿಗಳಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ.