Advertisement

ಸಿನಿಮಾ ಮಂದಿಗೆ ಪ್ರೇಕ್ಷಕರದ್ದೇ ಭಯ!

04:16 AM Jun 07, 2020 | Lakshmi GovindaRaj |

ಚಿತ್ರರಂಗ ಈಗ ಮೊದಲಿನಂತಿಲ್ಲ. ಮೊದ ಮೊದಲು ಸಿನಿಮಾಗಳು ತೆರೆಕಂಡರೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಯಾವ ಸಿನಿಮಾಗಳೇ ಬಿಡುಗಡೆಯಾದರೂ ಅಲ್ಲಿ ಮೊದಲ ಪ್ರದರ್ಶನಕ್ಕೇ ಪ್ರೇಕ್ಷಕರ ಅನುಪಸ್ಥಿತಿ ಕಾಡುತ್ತಿತ್ತು. ನಂತರದ ಪ್ರದರ್ಶನಕ್ಕಾದರೂ ಜನ ಬರುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಂಡರೂ ಜನ ಅಪ್ಪಿ ತಪ್ಪಿಯೂ ಚಿತ್ರಮಂದಿರಗಳತ್ತ ಮುಖ ಮಾಡುತ್ತಿರಲಿಲ್ಲ. ಕೆಲವೇ ಕೆಲವು ಸ್ಟಾರ್ಸ್ ನಟರ ಚಿತ್ರಗಳಿಗೆ ಮಾತ್ರ ಚಿತ್ರಮಂದಿರಗಳಲ್ಲಿ ಜನಜಾತ್ರೆ ಆಗುತ್ತಿತ್ತು. ಹೊಸಬರ ಸಿನಿಮಾಗಳಿಗಂತೂ ಅಂತಹ ಓಪನಿಂಗ್ ಸಿಗುತ್ತಲೇ ಇರಲಿಲ್ಲ.

Advertisement

ಈಗ ಕೋವಿಡ್‌ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯ ನಂತರ ಚಿತ್ತರಂಗದ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಹೌದು, ಲಾಕ್ ಡೌನ್ ಪರಿಣಾಮ ಎಲ್ಲರ ಬದುಕು ಚೆಲ್ಲಾಪಿಲ್ಲಿಯಾಗಿದೆ. ಈ ನಿಟ್ಟಿನಲ್ಲಿ ಮೆಲ್ಲನೆ ಲಾಕ್ ಡೌನ್ ಸಡಿಲಿಕೆಯಾಗಿದೆ. ಸದ್ಯಕ್ಕೆ ಚಿತ್ರೋದ್ಯಮ ಉಸಿರಾಡುವಂತಾಗಿದೆ. ಹಾಗಂತ, ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ ಸಿಕ್ಕಿದೆ. ಇದೊಂದು ರೀತಿಯ ಸಮಾಧಾನದ ವಿಷಯ. ಆದರೆ, ನಿರ್ಮಾಪಕರೂ ಸೇರಿದಂತೆ ಸಿನಿಮಾ ಮಂದಿಗೆ ಈಗ ಭಯ ಕಾಡುತ್ತಿರುವುದಂತೂ ನಿಜ. ಅದಕ್ಕೆ ಕಾರಣ, ಮತ್ತದೇ ಕೋವಿಡ್‌ 19.

ಸಿನಿಮಾ ಚಿತ್ರೀಕರಣದ ಜೊತೆಯಲ್ಲಿ ಚಿತ್ರಮಂದಿರಗಳಿಗೂ ಅನುಮತಿ ಕೊಟ್ಟರೆ, ಶೂಟಿಂಗ್ ತನ್ನ ಪಾಡಿಗೆ ತಾನು ನಡೆಯುತ್ತದೆ. ಸರ್ಕಾರ ಸೂಚಿಸುವ ಮಾರ್ಗಸೂಚಿ ಪ್ರಕಾರ, ಈಗಾಗಲೇ ಪೆಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಹಾಗೇಯೇ, ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕರೂ ಸಾಮಾಜಿಕ ಅಂತೆ ಕಾಪಾಡಿಕೊಂಡು ಕೆಲಸ ಮಾಡುವ ಯೋಚನೆಯಲ್ಲೂ ಸಿನಿಮಾ ಮಂದಿ ಇದ್ದಾರೆ. ಆದರೆ ಸಿನಿಮಾ ಮಂದಿಗೆ ಇರುವ ಭಯ ಅಂದರೆ, ಚಿತ್ರಮಂದಿರಗಳಿಗೆ ತೆರೆಯುವ ಅವಕಾಶ ಬಂದರೆ, ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಾರ? ಎಂಬ ಭಯ ಅವರನ್ನು ಕಾಡುತ್ತಿದೆ.

ಕೋವಿಡ್‌ 19 ಸೋಂಕು ಅಂಥದ್ದೊಂದು ಭಯ ಹುಟ್ಟಿಸಿದೆ. ಹಿಂದೆ ಒಳ್ಳೊಳ್ಳೆಯ ಸಿನಿಮಾಗಳು ಬಿಡುಗಡೆ ಕಂಡರೂ ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕಡಿಮೆ ಇತ್ತು. ಈಗ ಇಂತಹ ಸಮಯದಲ್ಲಿ ಜನರು ಚಿತ್ರಮಂದಿರಗಳಿಗೆ ಧೈರ್ಯವಾಗಿ ಬರುತ್ತಾರಾ ಎಂಬ ಆತಂಕ ಮನೆಮಾಡಿದೆ. ಕೋಟಿಗಟ್ಟಲೆ ಹಣ ಹಾಕಿ ನಿರ್ಮಾಣ ಮಾಡಿರುವ ನಿರ್ಮಾಪಕರು, ಜನರಿಗಾಗಿಯೇ ಸಿನಿಮಾ ಮಾಡಿದ್ದಾರೆ. ಈಗ ಚಿತ್ರಮಂದಿರಗಳಲ್ಲಿ ಅವರೇ ಕಾಣದಿದ್ದರೆ ನಮ್ಮ ಗತಿ ಏನು ಎಂಬ ಗೊಂದಲದಲ್ಲಿದ್ದಾರೆ.

ಸ್ಟಾರ್ಸ್ ಸಿನಿಮಾಗಳು ಕೂಡ ಚಿತ್ರಮಂದಿರಗಳಿಗೆ ಬರಬೇಕಾ? ಬೇಡವಾ? ಎಂಬ ಪ್ರಶ್ನೆಯಲ್ಲಿವೆ. ಹೀಗಿರುವಾಗ, ಇನ್ನಿತರೆ ಹೊಸಬರ ಚಿತ್ರಗಳು ಪ್ರೇಕ್ಷಕರನ್ನೇ ನಂಬಿಕೊಂಡು ಬಿಡುಗಡೆಗೆ ಮುಂದಾದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂಬ ಸತ್ಯ ಅರಿತಿದ್ದಾರೆ. ಆದರೂ, ಈಗ ಅವರ ಮುಂದೆ ಉಳಿದಿರೋದು ಒಂದೇ ಪ್ರಶ್ನೆ, ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಬಿಡುಗಡೆ ಮಾಡಿದರೆ ಜನರು ಬರುತ್ತಾರಾ ಅನ್ನೋದು. ಕೆಲವು ನಿರ್ಮಾಪಕರುಗಳು ಈಗಾಗಲೇ ಬೇರೆ ಮಾರ್ಗ ಕಂಡುಕೊಡಿದ್ದಾರೆ. ಈಗಿರುವ ಪರಿಸ್ಥಿಯಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಟ್ಟರೂ, ಜನರು ಬಂದು ಕೂರುತ್ತಾರೆಬ ನಂಬಿಕೆ ಇಲ್ಲ.

Advertisement

ಹಾಗಾಗಿಯೇ, ಕೆಲವು ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಚಿತ್ರಮಂದಿರ ನಂಬಿಕೊಂಡು ಅನೇಕ ಸಿನಿಮಾ ಮಂದಿ ಇದ್ದರೂ, ಇಂತಹ ಸಮಯದಲ್ಲಿ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಜನರು ಭಯ, ಭೀತಿ ಇಲ್ಲದೆ ಬಂದು ನೋಡುತ್ತಾರಾ ಎಂಬ ಸಣ್ಣದ್ದೊಂದು ಭಯ ಇದ್ದೇ ಇದೆ. ಅದೇನೆ ಇರಲಿ, ಕೋವಿಡ್‌ 19 ಸಾಕಷ್ಟು ಸಮಸ್ಯೆ ಹುಟ್ಟುಹಾಕಿದೆ. ಸರ್ಕಾರ ಚಿತ್ರೀಕರಣಕ್ಕೆ ಹಾಗೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಟ್ಟರೂ, ಆ ದಿನಗಳು ಮರುಕಳಿಸುತ್ತವಾ ಎಂಬ ಪ್ರಶ್ನೆಯಂತೂ ಇದೆ.

ಲಾಕ್ ಡೌನ್ ಸಂಪೂರ್ಣ ಸಡಿಲಗೊಂಡು ಮೊದಲಿನಂತೆ, ಎಲ್ಲವೂ ನಡೆದರೆ ಚಂದನವನ ಚೆನ್ನಾಗಿರುತ್ತೆ. ಇಲ್ಲವಾದರೆ ಕಷ್ಟ ಕಟ್ಟಿಟ್ಟ ಬುತ್ತಿ.  ಮಾಹಿತಿ ಪ್ರಕಾರ ಸಿನಿಮಾರಂಗ ಚೇತರಿಕೆಗೆ ವರ್ಷವೇ ಬೇಕಿದೆ. ಅದರಲ್ಲೂ ಚಿತ್ರಮಂದಿರಗಳ ಪ್ರಾರಂಭ ಕೂಡ ಹೇಳುವಷ್ಟು ಸುಲಭವಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಹಲವು ವರ್ಷಗಳಿಂದಲೂ ಚಿತ್ರರಂಗ ಒಂದಷ್ಟು ಸಮಸ್ಯೆ ಎದುರಿಸುತ್ತಲೇ ಬಂದಿದೆ.ಆ ಸಾಲಿಗೆ ಕೋವಿಡ್‌ 19 ಸಂಕಷ್ಟ ಇನ್ನಷ್ಟು ಚಿಂತೆಗೀಡು ಮಾಡಿರುವುದಂತೂ ನಿಜ.

ಈ ಬಣ್ಣದ ಬದುಕನ್ನೇ ನಂಬಿದವರ ಪಾಲಿಗೆ ಕೋವಿಡ್‌ 19 ಅಕ್ಷರಶಃ ಯಮಸ್ವರೂಪಿ. ಅದೇನೆ ಸಮಸ್ಯೆ ಇದ್ದರೂ, ಈ ಮನರಂಜನೆ ಕ್ಷೇತ್ರ ತಕ್ಕಮಟ್ಟಿಗೆ ಎಲ್ಲಾ ನೋವನ್ನು ಮರೆಸುತ್ತದೆ. ಆದರೆ ಈಗ ಈ ಮನರಂಜನಾ ಕ್ಷೇತ್ರಕ್ಕೇ ತಲೆನೋವಾಗಿದೆ. ಎಲ್ಲಾ ಸಮಸ್ಯೆಗು ಇರುವಂತೆ ಇದಕ್ಕೂ ಒಂದು ಪರಿಹಾರ ಇದ್ದೇ ಇರುತ್ತೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಎಂಬ ಆಶಾಭಾವನೆಯಲ್ಲೇ ಸಿನಿಮಾ ಮಂದಿ ದಿನ ಸವೆಸುತ್ತಿದ್ದಾರೆ.

* ವಿಜಯ್ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next