Advertisement
ಬಿಬಿಎಂಪಿ ವತಿಯಿಂದ ಟೆಂಡರ್ ಶ್ಯೂರ್ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವದರ್ಜೆಯ ಚರ್ಚ್ ಸ್ಟ್ರೀಟ್ನಲ್ಲಿ ಕಳಪೆ ಕಾಮಗಾರಿ ನಡೆದಿರುವುವು ಅಲ್ಪಾವಧಿಯಲ್ಲೇ ಬಯಲಾಗಿದೆ. ಯೂರೋಪ್ ಮಾದರಿಯಲ್ಲಿ ಕಾಬಲ್ ಸ್ಟೋನ್ ಬಳಸಿ ಇದೇ ಮೊದಲ ಬಾರಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಸಾರ್ವಜನಿಕರ ಬಳಕೆಗೆ ಮುಕ್ತವಾದ ಮೂರು ತಿಂಗಳಲ್ಲಿಯೇ ಚರ್ಚ್ಸ್ಟ್ರೀಟ್ಗೆ ಅಳವಡಿಸಿರುವ ಕಾಬಲ್ ಸ್ಟೋನ್ಗಳು ಕಿತ್ತು ಹೊರಬರುತ್ತಿವೆ.
Related Articles
Advertisement
ರಸ್ತೆಯ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಪಾಲಿಕೆ ವತಿಯಿಂದ ರಸ್ತೆಯ ಎರಡೂ ಬದಿಯಲ್ಲಿ ಹೂವಿನ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಬಹುತೇಕ ಭಾಗಗಳಲ್ಲಿ ಗಿಡಗಳು ಹಾಗೂ ಪಾದಚಾರಿ ಮಾರ್ಗದ ಮೇಲೆ ಸಿಗರೇಟ್ ತುಂಡುಗಳು, ಕಾಫಿ-ಟಿ ಕಪ್, ಗುಟ್ಕಾ ಪಾಕೇಟ್ ಸೇರಿದಂತೆ ಇತರೆ ತ್ಯಾಜ್ಯ ಸೇರಿ ರಸ್ತೆಯ ಸೌಂದರ್ಯವನ್ನು ಹಾಳು ಮಾಡುತ್ತಿವೆ.
ರಸ್ತೆಯಲ್ಲೇ ನಿಲ್ಲುವ ಮಳೆನೀರು: ಮಳೆನೀರು ಹರಿದುಹೋಗಲು ಸಮರ್ಪಕ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಕೆಲ ಭಾಗಗಳಲ್ಲಿ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಇದರಿಂದ ಭೂಮಿಗೆ ನೀರಿಳಿದು ಕಲ್ಲುಗಳು ಸಡಿಲಗೊಳ್ಳುತ್ತಿದ್ದು, ವಾಹನಗಳು ಸಂಚಾರಿಸಿದಾಗ ಕಲ್ಲುಗಳು ಕಿತ್ತು ಬರುತ್ತಿವೆ. ತ್ಯಾಜ್ಯ ಸಂಗ್ರಹಣೆಗಾಗಿ ರಸ್ತೆಯ ಎರಡೂ ಬದಿಯ ಅಲ್ಲಲ್ಲಿ ಕಸದ ಡಬ್ಬಿಗಳನ್ನು ಅಳವಡಿಸಲಾಗಿದೆ.
ಆದರೆ, ಪೌರಕಾರ್ಮಿಕರು ಕಾಲಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ತ್ಯಾಜ್ಯ, ಡಬ್ಬಿಗಳಲ್ಲಿಯೇ ಉಳಿದಿದೆ. ಮಳೆ ನೀರು ಡಸ್ಟ್ಬಿನ್ ಸೇರಿದ್ದರಿಂದ ಕಸ ಕೊಳೆತು, ದುರ್ವಾಸನೆ ಹೊಮ್ಮುತ್ತಿದೆ. ಇನ್ನೂ ಕೆಲವೆಡೆ ಪಾದಚಾರಿ ಮಾರ್ಗದಲ್ಲಿಯೇ ತ್ಯಾಜ್ಯ ಸುರಿದಿದ್ದು, ಪಾದಚಾರಿಗಳು ನಡೆದಾಡಲು ತೊಂದರೆಯಾಗುತ್ತಿದೆ.
ಚರ್ಚ್ಸ್ಟ್ರೀಟ್ನಲ್ಲಿ ಅಳವಡಿಸಲಾಗಿರುವ ಕಾಬಲ್ ಸ್ಟೋನ್ಗಳು ಕಿತ್ತು ಬಂದಿರುವುದು ಗಮನಕ್ಕೆ ಬಂದಿದೆ. ಕಾಬಲ್ ಕಲ್ಲುಗಳಿಂದ ನಿರ್ಮಿಸಿದ ರಸ್ತೆ ಕನಿಷ್ಠ 25 ವರ್ಷ ಬಾಳಿಕೆ ಬರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೂ ಕಲ್ಲುಗಳು ಕಿತ್ತು ಬರಲು ಕಾರಣವೇನು ಎಂಬ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. -ಆರ್.ಸಂಪತ್ರಾಜ್, ಮೇಯರ್