Advertisement

ಕ್ರಿಸ್ಮಸ್‌: ವಿವಿಧ ಕ್ರೈಸ್ತ ಧರ್ಮಪ್ರಾಂತಗಳ ಧರ್ಮಾಧ್ಯಕ್ಷರ ಸಂದೇಶ

12:26 AM Dec 24, 2022 | Team Udayavani |

ಮಂಗಳೂರು: ಕ್ರಿಸ್ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು. “ಎನಗಿಂತ ಕಿರಿಯರಿಲ್ಲ’ ಎಂಬಂತೆ ದೇವರು ಅತೀ ಸಣ್ಣವರಾಗಿ ಮಾನವರ ನಡುವೆ ಜನಿಸಿದರು.

Advertisement

ಕೊಟ್ಟಿಗೆಯಲ್ಲಿ ಯೇಸುವಿನ ಜನನ ನಮ್ಮ ಗಮನವನ್ನು ಸೆಳೆಯುತ್ತದೆ. ನಮ್ಮನ್ನು ಆತ್ಮೀಯವಾಗಿ ಆಕರ್ಷಿಸುವ ಸುಂದರವಾದ ಕಂದ-ಬಾಲಯೇಸು. ಅವನಿಂದ ಪ್ರೀತಿಯ ಕಲೆಯನ್ನು ಕಲಿಯಲು| ಅವನು ನಮ್ಮನ್ನು ಇಂದು ತನ್ನತ್ತ ಸೆಳೆಯುತ್ತಿದ್ದಾನೆ.

ಯೇಸುಕ್ರಿಸ್ತರ ಬೋಧನೆಗಳನ್ನು ಸ್ವಾಮಿ ವಿವೇಕಾನಂದರು, ಮಹಾತ್ಮಾ ಗಾಂಧೀಜಿಯವರು ಇಷ್ಟಪಟ್ಟಿದ್ದರು. ಅವರ ಅಹಿಂಸಾ ಚಳವಳಿ ಯೇಸುಕ್ರಿಸ್ತರ ಉಪದೇಶಗಳಿಗೆ ಸರಿಸಮಾನಾಗಿಯೇ ಇತ್ತು. ಪ್ರೀತಿ ಹಾಗೂ ಕ್ಷಮೆಗಳು ಯೇಸುವಿನ ಬೋಧನೆಯಲ್ಲಿ ಪ್ರಾಬಲ್ಯ ವಹಿಸಿದರೆ, ಅವುಗಳ ನಿಜವಾದ ಪರಿಪಾಲನೆಯನ್ನು ನಾವು ಗಾಂಧೀಜಿಯವರ ಜೀವನದಲ್ಲಿ ಕಾಣುತ್ತೇವೆ.

ನೈಜ ದೈವಭಕ್ತಿ ಮಾತ್ರ ನಮ್ಮನ್ನು ಹಾಗೂ ಮುಂದಿನ ಪೀಳಿಗೆಯನ್ನು ಅತಿರೇಕಗಳಿಂದ ರಕ್ಷಿಸ ಬಲ್ಲುದು. ನಮ್ಮ ಸುತ್ತ ಭ್ರಷ್ಟಾಚಾರವು ಕ್ಯಾನ್ಸರ್‌ನಂತೆ ತಾಂಡವ ವಾಡುತ್ತಿದೆ. ಬಲಾಡ್ಯರು ಹಾಗೂ ಧನಾಡ್ಯರಾಗುವುದೇ ನಮ್ಮ ಧ್ಯೇಯ ಎಂದು ಭಾಸವಾಗುತ್ತಿದೆ. ಧರ್ಮವು ಕೇವಲ ಬಾಹ್ಯಾಚರಣೆಗೆ ಸೀಮಿತವಾಗಿ ಮನಃಪರಿವರ್ತನೆಗೊಳಿಸುವಲ್ಲಿ ವಿಫ‌ಲವಾಗಿದೆ. ನಮ್ಮ ನೈಜ ಸ್ವಭಾವವನ್ನು ಅರಿತುಕೊಳ್ಳುವಂತೆ ಯೇಸು ಬಯಸುತ್ತಾರೆ. ಪ್ರೀತಿಸುವ ಮತ್ತು ಸ್ವ-ತ್ಯಾಗದ ಕಲೆಯನ್ನು ನಮಗೆ ಕಲಿಸಲು ದೇವರು ಮಾನವನಾದನು.

ಯೇಸು ಸ್ವಾಮಿ ನಮ್ಮಲ್ಲಿ ನಿಜವಾದ ಪ್ರೀತಿಯನ್ನು ಹುಟ್ಟುಹಾಕಲಿ. ಪ್ರತಿಯೊಬ್ಬ ಕ್ರೈಸ್ತ ಪ್ರೀತಿ ಮತ್ತು ಸೇವೆಯನ್ನು ವ್ಯಕ್ತಪಡಿಸುತ್ತಾನೆ. ಕೆಲವು ಜನರು ಕ್ರಿಸ್ತನ ಅನುಯಾಯಿಗಳನ್ನು ಅನುಮಾನದಿಂದ ನೋಡಲು ಮೋಸಗಾರರಾಗಿ ದಾರಿ ತಪ್ಪಿಸುತ್ತಾರೆ. ಆದರೆ ಕರ್ತನು ನಮ್ಮನ್ನು ಪ್ರೀತಿಸಿದಂತೆ ನಿಜವಾದ ಕ್ರೈಸ್ತನು ಪ್ರೀತಿಸುತ್ತಾನೆ. ದ್ವೇಷವನ್ನು ಉತ್ತೇಜಿಸುವವರು ಇತರರನ್ನು ನಾಶಮಾಡುವ ಮೊದಲು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. ಅವರಲ್ಲಿ ದೇವರಿಲ್ಲ ಮತ್ತು ಅವರಲ್ಲಿ ಭರವಸೆಯೂ ಇಲ್ಲ. ಈ ಕ್ರಿಸ್ಮಸ್‌ ಹಬ್ಬಕ್ಕೆ ನಾನು ನಿಮ್ಮನ್ನು ಹೃತೂ³ರ್ವಕವಾಗಿ ಅಭಿನಂದಿಸುತ್ತೇನೆ. ನಮ್ಮ ರಕ್ಷಕನಾದ ಯೇಸುವಿನ ಜನನವು ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದಲ್ಲಿ ಒಳ್ಳೆಯತನ ಮತ್ತು ಪ್ರೀತಿಯನ್ನು ತುಂಬಲಿ. ಎಲ್ಲರಿಗೂ ಕ್ರಿಸ್ಮಸ್‌ ಹಬ್ಬದ ಮತ್ತು ಹೊಸ ವರ್ಷದ ಶುಭಾಶಯಗಳು.
– ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ
ಧರ್ಮಾಧ್ಯಕ್ಷರು, ಮಂಗಳೂರು ಧರ್ಮಪ್ರಾಂತ

Advertisement

ಬೆಳಗು ಬಾ ಹಣತೆಯನು…
ಉಡುಪಿ: “ಬೆಳಗು ಬಾ ಜ್ಯೋತಿಯನು, ಎದೆಯ ಮಂದಿರದಲ್ಲಿ ಜಗಕೆ ಬೆಳಕಾಗುವೇ ಶುಭ ಘಳಿಗೆಯಲ್ಲಿ ಇನಿತುಜಡ ನಾನು ಬಂದಚೇತನ ನೀನು ನಿನ್ನ ಶಕ್ತಿಯ ಬಲದಿ – ವ್ಯಕ್ತಿಯಾದೆನು ನಾನು ಈ ಲೋಕದಲ್ಲಿ ಬೆಳಗು ಬಾ ಹಣತೆಯನು… ನನ್ನೆದೆಯ ಗುಡಿಯಲ್ಲಿ ಚಿರಕಾಲ ಪ್ರಜ್ವಲಿಸಿ ಬೆಳಗುವಂತೆ’ ಜಿ.ಎಸ್‌. ಶಿವರುದ್ರಪ್ಪನವರ ಬದುಕಿಗೆ ಬೆಳಕಿನ ಮಹತ್ವ ಸಾರುವ ನುಡಿಗಳಿವು.

ನಡುರಾತ್ರಿಯಲ್ಲಿ ಕ್ರಿಸ್ತನ ಜನನವಾಯಿತು. ಜ್ಯೋತಿಯ ಉದಯವಾಯಿತು. ಸೂರ್ಯ ಮುಳುಗಿದ್ದರೂ ಅಂಧಕಾರ ಜಗವನ್ನು ಆವರಿಸಿದ್ದರೂ ಜಗದ ರಕ್ಷಕ ಕ್ರಿಸ್ತನ ಜನನದಿಂದ ಮೂಡಿದ ಬೆಳಕು ಮನುಜರ ಬಾಳಲ್ಲಿ ಹೊಸತನ ಮೂಡಿಸಿತು. ನೊಂದು- ಬೆಂದ ಮನುಜನಿಗೆ ಬೆಚ್ಚನೆಯ ಪ್ರೀತಿಯ ಅನುಭವ ನೀಡಿದ ಬೆಳಕದು. ಅಂಧಕಾರ ದಲ್ಲಿದ್ದು ರಕ್ಷಕನ ಅರಸಿದ ಮನಗಳನ್ನು ತಣಿಸಿದ ಬೆಳಕದು.

ನಮ್ಮ ಮನೆ-ಮನಗಳ ಅಂಧಕಾರ ನೀಗಿಸುವ “ಬೆಳಕು’ ಪ್ರಭು ಯೇಸುವಾದರು. ಜಗದಲ್ಲಿರುವ ಅಸತ್ಯವನ್ನು ಅಳಿಸಿ, ಸತ್ಯವನ್ನು ಉಳಿಸಿ ಮೇಳೈಸಲು, ಸಾವಿನ ಕರಾಳ ಛಾಯೆಯ ಬಂಧನ ಬಿಡಿಸಿ, ಪುನರುತ್ಥಾನದ ಮೂಲಕ ನಿತ್ಯಜೀವಕ್ಕೆ ನಮ್ಮನ್ನು ಎಬ್ಬಿಸಲು, ದೇವ ಮಾನವನ ನಡುವೆ ಸತ್ಸಂಬಂಧ ಬೆಳೆಸುವ, ಮಾನವ-ಮಾನವರ ಮಧ್ಯೆ ಮೈತ್ರಿಯನ್ನು ಮೊಳಗಿಸುವ ಮಹಾಪುರುಷ ಪ್ರಭು ಯೇಸುವಾದರು. ಜಗಜ್ಯೋತಿಯಾದ ಯೇಸು ಪ್ರೀತಿಯ ಕ್ಷಮೆಯ ಶಿಖರವಾಗಿದ್ದಾರೆ. ಸೂರ್ಯನ ಪ್ರಕಾಶ ಜಗದ ಸರ್ವವನ್ನು ಆಲಂಗಿಸುವಂತೆ, ಪ್ರಭುಯೇಸು ಸರ್ವರನ್ನೂ ಆಲಂಗಿಸುತ್ತಾರೆ. ಕ್ರಿಸ್ತಜಯಂತಿ ಸಂಭ್ರಮದಲ್ಲಿರುವ ನಾವು ಬರಿಯ ಜ್ಯೋತಿಗಳಾಗುವುದಲ್ಲ ಬದಲಾಗಿ ದೀಪಸ್ಥಂಭದ ಮೇಲಿಟ್ಟ ದೀಪಗಳಾಗಬೇಕು. ಪ್ರಭುವಿನ ಸಹನೆ, ನಮ್ಮಲ್ಲಿ ನೆಲೆಯಾಗಬೇಕು. ಆಗ ಮಾತ್ರ ನೈಜ ಕ್ರಿಸ್ತಜಯಂತಿಯ ಸಂಭ್ರಮ ನಮ್ಮದಾಗುತ್ತದೆ. ಎಲ್ಲರಿಗೂ ಕ್ರಿಸ್ತಜಯಂತಿ ಹಾಗೂ ಹೊಸವರ್ಷದ ಶುಭಾಶ‌ಯಗಳು.
– ಡಾ| ಜೆರಾಲ್ಡ್ ಐಸಾಕ್‌ ಲೋಬೋ
ಬಿಷಪ್‌, ಉಡುಪಿ ಧರ್ಮಪ್ರಾಂತ

ಅಭದ್ರತೆ, ಕಷ್ಟ ದೂರವಾಗಲಿ
ಕಡಬ: ಯೇಸು ಕಂದ ನಮ್ಮೆಲ್ಲರ ಹೃದಯವೆಂಬ ಗೋದಲಿಯಲ್ಲಿ ಹುಟ್ಟಿದಾಗ ಮಾತ್ರ ನಾವು ಆಚರಿಸುವ ಕ್ರಿಸ್ತ ಜಯಂತಿ ಹಬ್ಬವು ಸಾರ್ಥಕವಾಗುವುದು. ಎಲ್ಲ ರೀತಿಯ ಅಭದ್ರತೆಗಳಿಂದ, ಕಷ್ಟ-ಕಾರ್ಪಣ್ಯಗಳಿಂದ ನಮ್ಮ ಜೀವನವು ಬಿಡುಗಡೆ ಹೊಂದಲಿ.

ಪ್ರಭು ಕ್ರಿಸ್ತರ ಜನನದ ಸಂದೇಶವನ್ನು ಪಡೆದಂತಹ ಆ ದೀನ ಕುರುಬರು ಬಾಲ ಏಸುವನ್ನು ಹುಡುಕುತ್ತಾ ಹೊರಟರು. ಜ್ಞಾನಿಗಳು ಬಾಲ ಯೇಸುವನ್ನು ಹುಡುಕಿ ಅವರ ದರ್ಶನ ಪಡೆದು ತಮ್ಮ ಅಮೂಲ್ಯವಾದ ಕೊಡುಗೆಗಳನ್ನು ಅರ್ಪಿಸಿ ಜಯಂತಿಯ ಸಂದೇಶವನ್ನು ಇತರರಿಗೂ ತಿಳಿಸುವ ಮುಖಾಂತರ ಸುವಾರ್ತೆಯನ್ನು ಸಾರುವವರಾಗಿ ಹೊರಬಂದರು. ನಾವು ಪ್ರತಿಯೊಬ್ಬರೂ ಶಾಂತಿಯ ದೂತರಾಗಿ ಏಸುವಿನ ಅನ್ವೇಷಣೆಗೆ ತೊಡಗೋಣ. ವಿಶ್ವ ಶಾಂತಿಯ ಸಾಧಕರಾಗೋಣ, ಹೊಸ ವರುಷದಲ್ಲಿ ಕ್ರಿಸ್ತರ ಅನುಯಾಯಿಗಳು ಹಾಗೂ ಅನುರೂಪಿಗಳಾಗಿ ಹೊಸ ಬಾಳನ್ನು ಆರಂಭಿಸಿ ದೀನ-ದಲಿತರೊಡನೆ ಸಮಾನತೆಯಿಂದ ಬಾಳ್ಳೋಣ. ಮನುಷ್ಯತ್ವ ಹಾಗೂ ಮಾನವೀಯತೆ ಮರೀಚಿಕೆಯಾಗುವಂತಹ ಪ್ರಸ್ತುತ ಸಮಾಜದಲ್ಲಿ ದೇವರೂ ಸಂಪೂರ್ಣ ಮಾನವರೂ ಆದ ಯೇಸು ಕ್ರಿಸ್ತರ ಜಯಂತಿ ಮಾನವ ಕುಲದ ಭಾವೈಕ್ಯ ಹಾಗೂ ನೈತಿಕತೆಯನ್ನು ಜ್ಞಾಪಿಸುವಂತಾಗಲಿ. ಪ್ರಭು ಯೇಸು ನಮ್ಮ ಜೀವನದ ಅಮೂಲ್ಯ ನಿಧಿಯಾಗಿ ಬದುಕಿಗೆ ಅರ್ಥ, ಮೌಲ್ಯ ಹಾಗೂ ಸುರಕ್ಷೆಯನ್ನು ಒದಗಿಸಿ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
– ರೈ| ರೆ| ಡಾ| ಗೀವರ್ಗೀಸ್‌ ಮಾರ್‌ ಮಕಾರಿಯೋಸ್‌,
ಧರ್ಮಾಧ್ಯಕ್ಷರು, ಪುತ್ತೂರು ಧರ್ಮಪ್ರಾಂತ

ಸಕಲ ಜನರೂ ಸಂತೋಷವನ್ನು ಅನುಭವಿಸಬೇಕು
ಬೆಳ್ತಂಗಡಿ: ನಾಡಿನ ಸಕಲರಿಗೂ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳನ್ನು ಪ್ರೀತಿಯಿಂದ ಕೋರುತ್ತೇನೆ. ಲೋಕ ರಕ್ಷಕರಾದ ಯೇಸು ಸ್ವಾಮಿಯವರು ಜನಿಸಿದ ಹಬ್ಬ ಕ್ರಿಸ್ಮಸ್‌. ಜಗಕ್ಕೆಲ್ಲಾ ಪರಮಾನಂದವನ್ನು ತರುವ ಕ್ರಿಸ್ಮಸ್‌ ಹಬ್ಬದಂದು ದೇವರ ಪುತ್ರರಾದ ಯೇಸುಕ್ರಿಸ್ತರು ನಮ್ಮ ನಾಡನ್ನು ಆಶೀರ್ವದಿಸಲಿ.

ರೋಗ-ರುಜಿನಗಳಿಂದ ಮತ್ತು ಪಾಪಗ್ರಸ್ಥವಾದ ಜೀವನದಿಂದ ತೊಳಲುತ್ತಿದ್ದ ಮಾನವರಿಗೆ ಮುಕ್ತಿಯನ್ನು ಕೊಟ್ಟು ಸ್ವರ್ಗದೊಂದಿಗೆ ಅವರನ್ನು ಜೋಡಿಸಲು ಬಂದವರೇ ಕ್ರಿಸ್ತರು. ಅವರು ಪ್ರೀತಿಸಲು ಕಲಿಸಿಕೊಟ್ಟರು. ಮಾನವರೆಲ್ಲರೂ ಸಹಬಾಳ್ವೆಯಿಂದ, ಪ್ರೀತಿಯಿಂದ ಮತ್ತು ಪರಿಶುದ್ಧವಾಗಿ ಜೀವಿಸಿದರೆ ಶಾಂತಿಯನ್ನು ಅನುಭವಿಸಬಹುದು ಎಂದು ನಮಗೆ ತಿಳಿಹೇಳಿದರು. ಅಸತ್ಯ, ಅಜ್ಞಾನ ಮತ್ತು ಮರಣದಲ್ಲಿ ಮುಳುಗಿ ದಾರಿ ಕಾಣದೆ ಕತ್ತಲಲ್ಲಿ ವಾಸಿಸುತ್ತಿದ್ದ ಜನರಿಗೆ ಸತ್ಯವನ್ನೂ ಬೆಳಕನ್ನೂ ನಿತ್ಯಜೀವವನ್ನೂ ನೀಡಲೆಂದು ಬಂದವರೇ ಯೇಸುಕ್ರಿಸ್ತರು. ಅವರಲ್ಲಿ ನಂಬಿಕೆಯಿಟ್ಟು ಅವರನ್ನು ತಮ್ಮ ಹೃದಯಕ್ಕೆ ಬರಮಾಡಿಕೊಳ್ಳುವವರಿಗೆ ದೇವರ ಮಕ್ಕಳಾಗಲು ಶಕ್ತಿಯನ್ನು ಅವರು ನೀಡುವರು.

ಹಬ್ಬದ ಆಚರಣೆಯು ಬಾಹ್ಯ ಆಡಂಬರಗಳಿಗೆ ಮಾತ್ರ ಸೀಮಿತವಾದರೆ ಹಬ್ಬದ ಉದ್ದೇಶವೇ ವಿಫಲವಾಗುತ್ತದೆ. ದೇವರ ಪುತ್ರರನ್ನು ಸ್ವೀಕರಿಸುತ್ತಾ ಹಬ್ಬವನ್ನು ಆಚರಿಸೋಣ. ಶಾಂತಿಗಾಗಿ ಹಾತೊರೆಯುವ ಪ್ರತಿಯೊಬ್ಬರೂ ದೇವಪುತ್ರರಾದ ಯೇಸುಕ್ರಿಸ್ತರು ಬೋಧಿಸಿದ ಪರಿಶುದ್ಧ ಪ್ರೀತಿಯಲ್ಲಿ ಜೀವಿಸಬೇಕು. ದ್ವೇಷ, ಕಲಹ, ಭಿನ್ನತೆ, ಕೆಡುಕು ಇವೆಲ್ಲವನ್ನೂ ತ್ಯಜಿಸಿ ಪರಿಶುದ್ಧ ಹೃದಯದಿಂದ ಜೀವಿಸಿ, ಸಕಲ ಜನರೂ ಸಂತೋಷವನ್ನು ಅನುಭವಿಸಬೇಕೆಂಬುದೇ ಕ್ರಿಸ್ಮಸ್‌ ಹಬ್ಬದ ಸಂದೇಶ.
– ರೈ| ರೆ| ಡಾ| ಲಾರನ್ಸ್‌ ಮುಕ್ಕುಯಿ,
ಬಿಷಪ್‌, ಬೆಳ್ತಂಗಡಿ ಧರ್ಮಪ್ರಾಂತ

Advertisement

Udayavani is now on Telegram. Click here to join our channel and stay updated with the latest news.

Next