Advertisement

ನಾಗಿಣಿ ರಿಟರ್ನ್ಸ್ : ಚೌಕಟ್ಟಿನೊಳಗೆ ಹೊಸಬರ ಬದುಕು-ಬವಣೆ

09:29 AM Sep 21, 2018 | |

ನಟಿ ದೀಪಿಕಾ ದಾಸ್‌ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸುತ್ತಲೇ, ಕಿರುತೆರೆಯಲ್ಲಿ ಸಿಕ್ಕ ಅವಕಾಶವನ್ನು ಅಪ್ಪಿಕೊಂಡು “ನಾಗಿಣಿ’ಯಾಗಿ ಕಾಣಿಸಿಕೊಂಡರು. ಅವರಿನ್ನು ಕಿರುತೆರೆಯಲ್ಲೇ ನೆಲೆಯೂರುತ್ತಾರೆ ಅಂದುಕೊಳ್ಳುತ್ತಿದ್ದಂತೆಯೇ ಯೂಟರ್ನ್ ತೆಗೆದುಕೊಂಡಿದ್ದಾರೆ. ಹೌದು, ದೀಪಿಕಾ ದಾಸ್‌ ಈಗ ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು “ಚೌಕಟ್ಟು’. ಚಿತ್ರಕ್ಕೆ ಬುಧವಾರ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ನಾಗೇಂದ್ರ ಪ್ರಸಾದ್‌ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದ್ದಾರೆ. 

Advertisement

ಈ ಚಿತ್ರಕ್ಕೆ ಸಂದೀಪ್‌ ಕೋಟ್ಯಾನ್‌ ನಿರ್ದೇಶಕರು. ಮೂಲತಃ ಮಂಗಳೂರಿನವರಾದ ನಿರ್ದೇಶಕರಿಗೆ ಇದು ಕನ್ನಡದ ಮೊದಲ ಚಿತ್ರ. ಈ ಹಿಂದೆ ತುಳು ಭಾಷೆಯಲ್ಲೊಂದು ಚಿತ್ರ ನಿರ್ದೇಶಿಸಿದ್ದಾರೆ. ಹಾಗೆಯೇ ಕಿರುಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಇದು ಏಳು ಜನರ ನಡುವೆ ನಡೆಯುವ ಕಥೆ ಎಂದು ಹೇಳಿಕೊಳ್ಳುವ ನಿರ್ದೇಶಕರು, ನಾಲ್ವರು ಹುಡುಗರು, ಇಬ್ಬರು ಹುಡುಗಿಯರ ಸುತ್ತ ಕಥೆ ಸಾಗುತ್ತದೆ. ದುಡ್ಡಿನ ಅಹಂಕಾರದಿಂದ ಮೋಜು, ಮಸ್ತಿ ಮಾಡಿ, ಕೊನೆಯಲ್ಲಿ ಹೇಗೆ ಕಷ್ಟಕ್ಕೆ ಸಿಲುಕುತ್ತಾರೆ ಎಂಬುದು ಕಥೆಯ ಸಾರ. ಯಾಕೆ ಅವರೆಲ್ಲ ಕಷ್ಟಕ್ಕೆ ಸಿಲುಕುತ್ತಾರೆ ಎಂಬುದು ಸಸ್ಪೆನ್ಸ್‌’ ಎಂಬ ವಿವರ ಕೊಡುತ್ತಾರೆ ನಿರ್ದೇಶಕರು.

ಈ ಚಿತ್ರದಲ್ಲಿ ದೀಪಿಕಾ ದಾಸ್‌ ಜೊತೆ ಪೂಜಾ ಶೆಟ್ಟಿ ನಾಯಕಿಯಾಗಿದ್ದಾರೆ. ಈ ಹಿಂದೆ ಎರಡು ತುಳು ಚಿತ್ರಗಳಲ್ಲಿ ನಟಿಸಿರುವ ಪೂಜಾ ಶೆಟ್ಟಿ ಅವರಿಗೆ ಇದು ಮೊದಲ ಚಿತ್ರ. ಅವರಿಗಿಲ್ಲಿ ಬೋಲ್ಡ್‌ ಹುಡುಗಿಯ ಪಾತ್ರವಂತೆ. ಉಳಿದಂತೆ ಅರುಣ್‌ಕುಮಾರ್‌, ಪ್ರಶಾಂತ್‌, ಭರತ್‌ ಕಲ್ಯಾಣ್‌ಕುಮಾರ್‌, ಚಂದನ್‌ ಆಚಾರ್‌ ನಟಿಸಿದ್ದಾರೆ. ಈ ಚಿತ್ರಕ್ಕೆ ಮಂಜುನಾಥ್‌ ನಿರ್ಮಾಪಕರು. ಅವರೂ ಇಲ್ಲೊಂದು ಪಾತ್ರ ನಿರ್ವಹಿಸಿದ್ದಾರೆ. ಆ ಪಾತ್ರ ವಿಶೇಷವಾಗಿದ್ದು, ಚಿತ್ರದ ತಿರುವು ಎನ್ನುತ್ತಾರೆ ಸಂದೀಪ್‌ ಕೋಟ್ಯಾನ್‌.

ಚಿತ್ರಕ್ಕೆ ಅನಿಲ್‌ ಸಂಗೀತ ನೀಡಿದ್ದಾರೆ. ಆರು ಹಾಡುಗಳಿದ್ದು, ವಿ. ಮನೋಹರ್‌, ನಾಗೇಂದ್ರ ಪ್ರಸಾದ್‌ ಹಾಗೂ ಹೊಸ ಪ್ರತಿಭೆ ಗಿರಿ ಹಾಡುಗಳನ್ನು ಬರೆದಿದ್ದಾರೆ. ಬೆಂಗಳೂರು, ಮಂಗಳೂರು, ಹಾಸನ, ಬೇಲೂರು ಸೇರಿದಂತೆ ಇತರ ಕಡೆ 30 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಚನೆ ನಿರ್ದೇಶಕರದ್ದು. ಚಿತ್ರಕ್ಕೆ ಮನೋಜ ಕುಮಾರ್‌ ಸಹ ನಿರ್ಮಾಣವಿದೆ. ಕೌಶಿಕ್‌ ಚಿತ್ರದ ಛಾಯಾಗ್ರಾಹಕರು.

Advertisement

Udayavani is now on Telegram. Click here to join our channel and stay updated with the latest news.

Next