Advertisement

ಮಗನ್ನ ಕೊಂದವ್ರನ್ನ ಗಲ್ಲಿಗೇರಿಸಿ ನ್ಯಾಯ ಕೊಡಿಸ್ರಿ…: ಕೊಲೆಯಾದ ವಿಜಯ್ ಕಾಂಬಳೆ ತಾಯಿಯ ಅಳಲು

08:38 PM May 29, 2022 | Team Udayavani |

ವಾಡಿ (ಚಿತ್ತಾಪುರ): ನಾನು ಈಗಾಗಲೇ ಪತಿಯನ್ನು ಕಳೆದುಕೊಂಡು ಸಾಕಷ್ಟು ಸಂಕಟ ಅನುಭವಿಸಿದ್ದೇನೆ. ಪಾಪಿಗಳು ಈಗ ಇದ್ದೊಬ್ಬ ಮಗನ ಕುತ್ತಿಗೆ ಕೊಯ್ದು ಸಾಯಿಸಿದ್ದಾರೆ. ಅವರನ್ನು ಬಂಧಿಸಿ ಜೈಲಿಗೆ ಹಾಕಿ ನನಗೆ ಪರಿಹಾರದ ಚೆಕ್ ಕೊಟ್ಟಿದ್ದಾರೆ. ಇದು ನನಗೆ ಸಮಾಧಾನ ತರಿಸಿಲ್ಲ. ನನ್ನ ಕರುಳಿನ ಕುಡಿಯನ್ನು ಕತ್ತರಿಸಿ ಬೀಸಾಡಿದ ಮೃಗಗಳನ್ನು ಗಲ್ಲಿಗೇರಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಇತ್ತೀಚೆಗೆ ಮುಸ್ಲಿಂ ಯುವಕರಿಂದ ಕೊಲೆಯಾದ ಸ್ಥಳೀಯ ದಲಿತ ಯುವಕ ವಿಜಯ್ ಕಾಂಬಳೆ ಎಂಬಾತನ ತಾಯಿ ರಾಜೇಶ್ವರಿ ಸರ್ಕಾರವನ್ನು ಆಗ್ರಹಿಸಿದರು.
ಈ ಕುರಿತು ರವಿವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ವಕೀಲ, ದಲಿತ ಮುಖಂಡ ಶ್ರವಣಕುಮಾರ ಮೊಸಲಗಿ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಲಿತ ಮಹಿಳೆ ರಾಜೇಶ್ವರಿ, ನನ್ನ ಮಗ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದು ತಪ್ಪಾಗಿದ್ದರೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಶಿಕ್ಷೆ ಕೊಡಿಸಬಹುದಾಗಿತ್ತು. ಅಥವ ನನ್ನ ಜಾತಿಯ ಹಿರಿಯ ಗಮನಕ್ಕೆ ತಂದು ನ್ಯಾಯ ಮಾಡಿಸಬಹುದಾಗಿತ್ತು. ಆದರೆ ಹೀಗೆ ಕೊರಳಿಗೆ ಚೂರಿ ಇರಿದು ಸಾಯಿಸಿ ಮೋಸ ಮಾಡಿದರು. ನನಗೆ ಆಸರೆಯಾಗಿದ್ದ ಏಕೈಕ ಮಗನನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇನೆ. ಮಗನನ್ನು ಕೊಂದು ರೊಕ್ಕದ ಚೆಕ್ ಕೈಗಿಟ್ಟಿದ್ದಾರೆ. ನನಗೆ ನನ್ನ ಮಗ ಬೇಕು ಯಾರು ತಂದು ಕೊಡುತ್ತಾರೆ? ಎಂದು ಪ್ರಶ್ನಿಸುವ ಮೂಲಕ ರಾಜೇಶ್ವರಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

Advertisement

ಈ ವೇಳೆ ಮಾತನಾಡಿದ ವಕೀಲ, ದಲಿತ ಮುಖಂಡ ಶ್ರವಣಕುಮಾರ ಮೊಸಲಗಿ, ಮುಸ್ಲಿಂ ಯುವತಿಯನ್ನು ದಲಿತ ಯುವಕ ವಿಜಯ ಪ್ರೀತಿಸಿರುವುದು ಅಕ್ಷರಶಃ ನಿಜ. ಆ ಯುವತಿಯೂ ಕೂಡ ಅಷ್ಟೇ ಗಾಢವಾಗಿ ವಿಜಯ್‌ನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಯನ್ನು ಬೆಂಬಲಿಸಿ ಸೌಹಾರ್ಧತೆ ಮೆರೆಯಬೇಕಾದ ಕುಟುಂಬ ಕೊಲ್ಲುವ ಕೃತ್ಯಕ್ಕೆ ಕೈಹಾಕಿದ್ದು ಖಂಡನಾರ್ಹವಾಗಿದೆ. ಯಾವುದೋ ಒಂದು ಗುಂಪಿನ ಪ್ರಚೋದನೆಯಿಂದ ಯುವತಿಯ ಸಹೋದರರು ದುಷ್ಕೃತ್ಯಕ್ಕೆ ಕೈಹಾಕಿರುವ ಅನುಮಾನವಿದೆ. ಪಟ್ಟಣದಲ್ಲಿ ಕೆಲವು ಯುವಕರ ಗುಂಪುಗಳು ಸಮಾಜ ಸೇವೆಯ ಹೆಸರಿನಲ್ಲಿ ತಲೆ ಎತ್ತಿವೆ. ಅವು ಪ್ರಚೋದಕ ಕೃತ್ಯಗಳಿಗೆ ಮುಂದಾಗುತ್ತಿವೆ. ದಾಳಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಕಾರಣಕ್ಕೆ ಇಂತಹ ಕೊಲೆ ಘಟನೆಗಳು ನಡೆಯುತ್ತಿವೆ. ಇವುಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕು ಎಂದು ಒತ್ತಾಯಿಸಿದರು.

ಕೋಮು ಶಕ್ತಿಗಳಿಂದ ಕೊಲೆ ಘಟನೆ ದುರ್ಬಳಕೆ:
ಪಟ್ಟಣದಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣವನ್ನು ಕೆಲ ಕೋಮು ಶಕ್ತಿಗಳು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತಿವೆ. ಈ ಹಿಂದೆ ನಡೆದ ಯಾವೊಬ್ಬ ದಲಿತರ ಕೊಲೆ ದೌರ್ಜನ್ಯಗಳ ವಿರುದ್ಧ ಮಾತನಾಡದ ಬಿಜೆಪಿಯವರಿಗೆ ಇದ್ದಕಿದ್ದಂತೆ ದಲಿತ ಯುವಕ ವಿಜಯ್ ಹತ್ಯೆಯಿಂದ ನೋವುಂಟಾಗಿದೆ. ಕೊಲೆಗೀಡಾದ ಯುವಕನ ತಾಯಿಗೆ ಸಾಂತ್ವನ ಹೇಳಲು ಮನೆಗೆ ಬಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬಾಯಿಬಿಟ್ಟರೆ ಹಿಂದು-ಮುಸ್ಲಿಂ ಸಂಘರ್ಷದ ಬಗ್ಗೆ ಬೆಂಕಿ ಕಾರುವ ಆಂದೋಲಾ ಸಿದ್ಧಲಿಂಗ ಸ್ವಾಮೀಜಿಗೂ ದಲಿತ ಯುವಕ ಹಿಂದೂವಾಗಿ ಕಾಣಿಸಿದ್ದಾನೆ. 30/40 ಕ್ರಿಮಿನಲ್ ಪ್ರಕರಣಗಳಿರುವ ಸ್ವಾಮೀಜಿಯೊಬ್ಬ ದಲಿತ ಕುಟುಂಬದ ಕೊಲೆ ಪ್ರಕರಣದಲ್ಲಿ ದಲಿತ-ಮುಸ್ಲಿಂ ಎಂಬ ಕೋಮು ಕಿಡಿ ಹೊತ್ತಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಅವರ ಕೀಳು ಮನಸ್ಥಿತಿ ಅರಿವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಲೆಗೀಡಾದವನು ದಲಿತ ಯುವಕ ಮತ್ತು ಕೊಂದವರು ಮುಸ್ಲೀಮರು. ಅಲ್ಲದೆ ಘಟನೆ ನಡೆದ ಪ್ರದೇಶ ಶಾಸಕ ಪ್ರಿಯಾಂಕ್ ಖರ್ಗೆ ಮತಕ್ಷೇತ್ರ ಎಂಬ ಏಕೈಕ ಕಾರಣಕ್ಕೆ ಬಿಜೆಪಿಗರ ಮನಸ್ಸು ಕೊಲೆ ಘಟನೆ ಖಂಡಿಸಿ ಮೊಸಳೆ ಕಣ್ಣೀರು ಹಾಕುತ್ತಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಮತ್ತು ಅದರ ಕೋಮುವಾದ ರಾಜಕೀಯವನ್ನು ಬಯಲಿಗೆಳೆದು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ಸಹಿಸದ ಸಂಘ ಪರಿವಾರದ ಕುನ್ನಿಗಳು, ಹೇಗಾದರೂ ಮಾಡಿ ಚಿತ್ತಾಪುರ ಮತಕ್ಷೇತ್ರದಲ್ಲಿ ಕೋಮು ಸಂಘರ್ಷದ ಕಿಡಿ ಹೊತ್ತಿಸಬೇಕು ಎಂದು ಕಳೆದ ಹಲವು ತಿಂಗಳಿಂದ ಪ್ರಯತ್ನ ನಡೆಸುತ್ತಿವೆ. ಈಗ ಈ ದಲಿತ ಯುವಕನ ಕೊಲೆ ಘಟನೆ ಮೃಷ್ಟಾನ್ನವಾಗಿ ಕಂಡಿದ್ದು, ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೇಟ್ ಮಾಡಿಯೇ ಹೇಳಿಕೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಮೊಸಲಗಿ, ಚಿತ್ತಾಪುರದಲ್ಲಿ ದಲಿತ-ಮುಸ್ಲಿಂ ಅಷ್ಟೇಯಲ್ಲ ಹಿಂದು-ಮುಸ್ಲಿಂ ಮಧ್ಯೆಯೂ ಸೌಹಾರ್ಧತೆ ಕಾಪಾಡಿಕೊಂಡು ಬಂದಿದ್ದೇವೆ. ವಿಜಯ್‌ನನ್ನು ಕೊಂದವರನ್ನು ಬಂಧಿಸಲಾಗಿದ್ದು, ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯಿಂದ 4.12 ಲಕ್ಷ ರೂ. ಪರಿಹಾರ ಚೆಕ್ ವಿತರಿಸಲಾಗಿದೆ. ಇನ್ನುಳಿದ ಮೊತ್ತವೂ ದೊರಕಿಸುತ್ತೇವೆ. ಅವರಿಗೆ ಸರ್ಕಾರಿ ನೌಕರಿ ಕೊಡಿಸಲು ಹೋರಾಡುತ್ತೇವೆ. ಈ ಮಧ್ಯೆ ಘಟನೆಯನ್ನು ಮುಸ್ಲೀಮ ಬುದ್ದಿಜೀವಿಗಳು ಖಂಡಿಸಿದ್ದಾರೆ. ಸ್ಥಳೀಯ ಮುಸ್ಲಿಂ ಮುಖಂಡರೂ ಕೂಡ ಇದನ್ನು ವಿರೋಧಿಸುತ್ತಾರೆ ಎಂಬ ಭರವಸೆ ನನಗಿದೆ. ಯಾವೂದೇ ಕಾರಣಕ್ಕೂ ಚಿತ್ತಾಪುರದಲ್ಲಿ ಕೋಮುವಾದ ಬೆಳೆಯಲು ಅವಕಾಶ ನೀಡುವುದಿಲ್ಲ. ಯಾವೂದೇ ಶಕ್ತಿ ಹಿಂದು-ಮುಸ್ಲಿಂ ಮಧ್ಯೆ ಕದನ ಸೃಷ್ಠಿಸಲು ಷಢ್ಯಂತ್ರ ನಡೆಸಲಿ ಅದನ್ನು ನಾವು ಸಂಘಟಿತರಾಗಿ ಹಿಮ್ಮೆಟ್ಟಿಸುತ್ತೇವೆ ಎಂದರು. ಚಿತ್ತಾಪುರ ಮತಕ್ಷೇತ್ರದಲ್ಲಿ ಕೋಮು ಗಲಬೆಗಳಾದರೆ ಅದಕ್ಕೆ ಬಿಜೆಪಿ ನಾಯಕರನ್ನು ಮತ್ತು ಆಂದೋಲಾ ಸಿದ್ದಲಿಂಗ ಸ್ವಾಮೀಜಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

Advertisement

ದಲಿತ ಸೇನೆಯ ನಗರ ಸಮಿತಿ ಅಧ್ಯಕ್ಷ ರಘುವೀರ ಪವಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next