Advertisement

ಕಾಳಘಟ್ಟ-ಲಂಬಾಣಿಹಟ್ಟಿ ಈಗ ಪ್ರಿಯಾ ನಗರ!

12:31 PM Jul 03, 2019 | Naveen |

ಚಿತ್ರದುರ್ಗ: ಕುಗ್ರಾಮಗಳಲ್ಲಿ ಜನಪ್ರತಿನಿಧಿಗಳು ಮಾತ್ರವಲ್ಲ, ಅಧಿಕಾರಿಗಳೂ ವಾಸ್ತವ್ಯ ಮಾಡಿ ಅಭಿವೃದ್ಧಿ ಪಡಿಸಬಹುದು ಎಂಬುದನ್ನು ಅನೇಕ ಜಿಲ್ಲಾಧಿಕಾರಿಗಳು ಸಾಧಿಸಿ ತೋರಿಸಿದ್ದಾರೆ. ಅಂಥವರಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಕೂಡ ಒಬ್ಬರು.

Advertisement

ಹಿಂದುಳಿದ ಜಿಲ್ಲೆಯಲ್ಲಿ ಅಧಿಕಾರಿಗಳು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿದ್ದಾರೆ. ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಕಳೆದ ಫೆಬ್ರವರಿ 19 ರಂದು ಜಿಲ್ಲೆಯ ಗಡಿ ಭಾಗವಾದ ಹೊಳಲ್ಕೆರೆ ತಾಲೂಕಿನ ಕುಗ್ರಾಮ ಕಾಳಘಟ್ಟ ಲಂಬಾಣಿಹಟ್ಟಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಕುಗ್ರಾಮದ ಜನರ ಸಮಸ್ಯೆ ಆಲಿಸಿ ಪರಿಹಾರವನ್ನೂ ಕಲ್ಪಿಸಿದರು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಿಂದ ಕಾಳಘಟ್ಟ ಲಂಬಾಣಿಹಟ್ಟಿಯ ಚಿತ್ರಣವೇ ಬದಲಾಯಿತು. ಇದರಿಂದ ಖುಷಿಯಾದ ಗ್ರಾಮಸ್ಥರು, ಜಿಲ್ಲಾಧಿಕಾರಿಗಳ ಹೆಸರನ್ನೇ ಗ್ರಾಮಕ್ಕೆ ಇಟ್ಟು ಕೃತಜ್ಞತೆ ಅರ್ಪಿಸಿದ್ದಾರೆ. ಜುಲೈ 1 ರಂದು ಗ್ರಾಮದ ನಾಮಕರಣ ಸಮಾರಂಭವೂ ನಡೆದಿದೆ.

ಕಂದಾಯ ಗ್ರಾಮವಾಗಿ ಪರಿವರ್ತಿಸಿದ್ರು: ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯವನ್ನಷ್ಟೇ ಕೈಗೊಂಡು ಜಿಲ್ಲಾಧಿಕಾರಿಗಳು ಸುಮ್ಮನೆ ಕೂರಲಿಲ್ಲ. ಕಾಳಘಟ್ಟ ಲಂಬಾಣಿಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಿದರು. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮಕ್ಕೆ ತಲುಪಲು ಸರಿಯಾದ ರಸ್ತೆಯೇ ಇರಲಿಲ್ಲ. ಹೇಗೋ ಕಷ್ಟ ಪಟ್ಟು ಗ್ರಾಮ ತಲುಪಿದ ಜಿಲ್ಲಾಧಿಕಾರಿಗಳ ಎದುರು ಗ್ರಾಮಸ್ಥರು, ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಕುಡಿಯಲು ಶುದ್ಧ ನೀರು ದೊರೆಯುತ್ತಿಲ್ಲ, ಪಿಂಚಣಿ ಸೌಲಭ್ಯವೂ ಸಮರ್ಪಕವಾಗಿಲ್ಲ, ಅಂಗನವಾಡಿ ಕೇಂದ್ರ ಶಿಥಿಲಾವಸ್ಥೆಯಲ್ಲಿದೆ ಎಂಬಿತ್ಯಾದಿ ಸಮಸ್ಯೆಗಳ ಸರಮಾಲೆಯನ್ನೇ ಮುಂದಿಟ್ಟರು.

ಗ್ರಾಮಸ್ಥರ ಅಹವಾಲುಗಳನ್ನು ಸಮಾಧಾನ ಚಿತ್ತದಿಂದ ಆಲಿಸಿದ ಜಿಲ್ಲಾಧಿಕಾರಿಗಳಿಗೆ 212 ಅರ್ಜಿಗಳು ಸಲ್ಲಿಕೆಯಾಗಿದ್ದವು. ಬಹುತೇಕ ಜನರ ಬೇಡಿಕೆ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಿ ಎಂಬುದಾಗಿತ್ತು. ಗ್ರಾಮಸ್ಥರಿಗೆ ಭರವಸೆ ನೀಡಿ ಹಿಂದಿರುಗಿದ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ದೃಢಸಂಕಲ್ಪ ಮಾಡಿದರು.

ಜಿಲ್ಲಾಡಳಿತದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಮೂರ್‍ನಾಲ್ಕು ತಿಂಗಳಲ್ಲೇ ಕಾಳಘಟ್ಟ ಲಂಬಾಣಿ ಹಟ್ಟಿ ಅಭಿವೃದ್ಧಿ ಪಥದತ್ತ ಸಾಗಿದೆ. ಸುಸಜ್ಜಿತ ಡಾಂಬರ್‌ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭಗೊಂಡಿದೆ. ಗ್ರಾಮದ ಅರ್ಹ 50 ಜನರಿಗೆ ಮಾಸಾಶನ ಮಂಜೂರು ಮಾಡಲಾಗಿದ್ದು, ಫಲಾನುಭವಿಗಳಿಗೆ ಹೆಲ್ತ್ ಕಾರ್ಡ್‌ ವಿತರಿಸಲಾಗಿದೆ. ಕೃಷಿಹೊಂಡ ನಿರ್ಮಾಣದಂತಹ ಕಾಮಗಾರಿ ಕೈಗೊಂಡು ಅಭಿವೃದ್ಧಿ ಪರ್ವವನ್ನು ಆರಂಭಿಸಲಾಗಿದೆ.

Advertisement

ಏನೇನು ಅಭಿವೃದ್ಧಿ ಕಾರ್ಯ?: ಕಾಳಘಟ್ಟದಿಂದ ಕಾಳಘಟ್ಟ ಲಂಬಾಣಿಹಟ್ಟಿಗೆ 1.10 ಕೋಟಿ ರೂ. ವೆಚ್ಚದಲ್ಲಿ 2.2 ಕಿಮೀ ಸಂಪರ್ಕ ರಸ್ತೆ, ಸಾಸಲು ಗ್ರಾಮದಿಂದ ಕಾಳಘಟ್ಟ ಲಂಬಾಣಿಹಟ್ಟಿಗೆ 1.10 ಕೋಟಿ ರೂ. ವೆಚ್ಚದಲ್ಲಿ 2.2 ಕಿಮೀ ಕೂಡು ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 10 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, 5 ಲಕ್ಷ ರೂ. ವೆಚ್ಚದಲ್ಲಿ ಶಾಂತಿಸಾಗರದಿಂದ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಪೈಪ್‌ಲೈನ್‌ ಇತರೆ ಕಾಮಗಾರಿಗೆ 15 ಲಕ್ಷ ರೂ. ಮಂಜೂರು ಮಾಡಲಾಗಿದೆ. 13 ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ ಸೌಲಭ್ಯ ಕಲ್ಪಿಸಲಾಗಿದೆ. 29 ಜನರಿಗೆ ವೃದ್ಧಾಪ್ಯ ವೇತನ, ಇಬ್ಬರಿಗೆ ಮನಸ್ವಿನಿ, ಆರು ಫಲಾನುಭವಿಗಳಿಗೆ ವಿಧವಾ ವೇತನ ಮಂಜೂರಾಗಿದೆ. 340 ಫಲಾನುಭವಿಗಳಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಹೆಲ್ತ್ ಕಾರ್ಡ್‌ ವಿತರಣೆ, 28 ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next