Advertisement

ಕೊನೆಗೂ ಕೈ ತಪ್ಪಿದ ಶಿರಾ ಘಟಕ

10:51 AM Jun 20, 2019 | Naveen |

ಹರಿಯಬ್ಬೆ ಹೆಂಜಾರಪ್ಪ
ಚಿತ್ರದುರ್ಗ:
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಾ ಘಟಕವನ್ನು ಚಿತ್ರದುರ್ಗ ವಿಭಾಗ ವ್ಯಾಪ್ತಿಯಿಂದ ತೆಗೆದು ತುಮಕೂರು ವಿಭಾಗ ವ್ಯಾಪ್ತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಸಾರಿಗೆ ಸಚಿವರನ್ನು ಭೇಟಿ ಮಾಡಿ ಶಿರಾ ಘಟಕವನ್ನು ಚಿತ್ರದುರ್ಗದಲ್ಲೇ ಉಳಿಸಿಕೊಳ್ಳುವುದಾಗಿ ಹೇಳಿದ್ದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರ ಪ್ರಯತ್ನ ಫಲ ನೀಡಿಲ್ಲ. ಶಿರಾ ಘಟಕ ವ್ಯಾಪ್ತಿಯಲ್ಲಿ 79 ಮಾರ್ಗಗಳಿದ್ದು, ಸಾರಿಗೆ ಸಂಸ್ಥೆಯ 82 ಬಸ್‌ಗಳು ನಿತ್ಯ ಕಾರ್ಯಾಚರಣೆ ಮಾಡುತ್ತಿದ್ದವು. ಈ ಎಲ್ಲ ಬಸ್‌ಗಳಿಂದ ಚಿತ್ರದುರ್ಗ ವಿಭಾಗಕ್ಕೆ ನಿತ್ಯ 9.15 ಲಕ್ಷ ರೂ. ಆದಾಯ ಬರುತ್ತಿತ್ತು. ಶಿರಾ ಘಟಕವನ್ನು ತುಮಕೂರು ವಿಭಾಗಕ್ಕೆ ಸೇರಿಸುವ ಸಂಬಂಧ ಜೂನ್‌ 19 ರಂದು ಕರಾರಸಾ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ಚಿತ್ರದುರ್ಗ ವಿಭಾಗದಿಂದ ಶಿರಾ ಘಟಕ ಕೈತಪ್ಪಿ ಹೋಗಿದೆ.

ಚಿತ್ರದುರ್ಗ ಘಟಕದ ವ್ಯಾಪ್ತಿಯಲ್ಲಿ 110 ಮಾರ್ಗಗಳಿದ್ದು ಒಟ್ಟು 114 ಬಸ್‌ಗಳು ಕಾರ್ಯಾಚರಣೆ ಮಾಡಿ ನಿತ್ಯ 12.80 ಲಕ್ಷ ರೂ. ಆದಾಯ ಬರುತ್ತಿತ್ತು. ಚಳ್ಳಕೆರೆ ಘಟಕ ವ್ಯಾಪ್ತಿಯಲ್ಲಿ 45 ಬಸ್‌ ಮಾರ್ಗಗಳಿಗೆ 47 ಬಸ್‌ಗಳಿದ್ದು 3.85 ಲಕ್ಷ ರೂ., ಹೊಸದುರ್ಗ ಘಟಕದಲ್ಲಿ 47 ಬಸ್‌ ಮಾರ್ಗಗಳಿದ್ದು 50 ಬಸ್‌ಗಳು ಕಾರ್ಯಾಚರಣೆ ಮಾಡಿ ನಿತ್ಯ 5.37 ಲಕ್ಷ ರೂ.ಗಳ ಆದಾಯ ಬರುತ್ತಿತ್ತು. ತುಮಕೂರು ಜಿಲ್ಲೆಯ ಪಾವಗಡ ಘಟಕದಲ್ಲಿ 47 ಬಸ್‌ ಮಾರ್ಗಗಳಿದ್ದು 49 ಬಸ್‌ಗಳು ಕಾರ್ಯಾಚರಣೆ ಮಾಡಿ ನಿತ್ಯ 5.24 ಲಕ್ಷ ರೂ.ಆದಾಯವನ್ನು ಚಿತ್ರದುರ್ಗ ವಿಭಾಗಕ್ಕೆ ತರುತ್ತಿದ್ದವು. ಚಿತ್ರದುರ್ಗ, ಶಿರಾ, ಪಾವಗಡ, ಹೊಸದುರ್ಗ, ಚಳ್ಳಕೆರೆ ಘಟಕಗಳಿಂದ ನಿತ್ಯ 36.45 ಲಕ್ಷ ರೂ. ಆದಾಯ ಬರುತ್ತಿದ್ದರೂ 36.74 ಲಕ್ಷ ರೂ. ಖರ್ಚಾಗಿ ವಿಭಾಗ ನಷ್ಟದಲ್ಲೇ ನಡೆಯುತ್ತಿತ್ತು. ಶಿರಾ ಘಟಕ ಕೈತಪ್ಪಿ ಹೋಗುತ್ತಿರುವುದರಿಂದ ನಷ್ಟದ ಪ್ರಮಾಣವೂ ಹೆಚ್ಚಾಗಲಿದ್ದು, ಚಿತ್ರದುರ್ಗ ವಿಭಾಗೀಯ ಕಚೇರಿಯೇ ಕೈತಪ್ಪಿ ಹೋದರೂ ಅಚ್ಚರಿ ಇಲ್ಲ.

ಶಿರಾ ಘಟಕ ವರ್ಗಾವಣೆಗೆ ಕಾರಣ ಏನು?: ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ. ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ಮೇ 28 ರಂದು ನಡೆದ 440ನೇ ಸಭೆಯಲ್ಲಿ ಶಿರಾ ಘಟಕ ವಾಪಸ್‌ ತೀರ್ಮಾನ ಕೈಗೊಳ್ಳಲಾಗಿದೆ.

ಶಿರಾ ಘಟಕ ಚಿತ್ರದುರ್ಗ ವಿಭಾಗದಿಂದ ದೂರ ಇದ್ದು ಬಸ್‌ಗಳ ಕಾರ್ಯಾಚರಣೆ ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಅನಾನುಕೂಲವಾಗುತ್ತದೆ ಎನ್ನುವ ಕಾರಣ ಹಾಗೂ ಶಿರಾ ಘಟಕ ಭೌಗೋಳಿಕವಾಗಿ ತುಮಕೂರು ಜಿಲ್ಲೆಗೆ ಸೇರಿರುವುದು ಹಾಗೂ ತುಮಕೂರು ವಿಭಾಗಕ್ಕೆ ಸಮೀಪ ಇರುವುದರಿಂದ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿ ಶಿರಾ ಘಟಕವನ್ನು ಪುನಃ ತುಮಕೂರು ಜಿಲ್ಲೆಗೆ ವರ್ಗಾಯಿಸಲಾಗಿದೆ.

Advertisement

ಶಿರಾ ಘಟಕ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ, ಯಂತ್ರೋಪಕರಣ, ಘಟಕದ ಸಮಸ್ತ ಚರಾಸ್ತಿ ಮತ್ತು ಸ್ಥಿರಾಸ್ತಿ, ಬಸ್‌ ನಿಲ್ದಾಣ, ಸಂಚಾರ ನಿಯಂತ್ರಣಾ ಬಿಂದುಗಳನ್ನು ಈ ಕೂಡಲೇ ತುಮಕೂರು ವಿಭಾಗಕ್ಕೆ ವರ್ಗಾಯಿಸುವಂತೆ ಆದೇಶಿಸಲಾಗಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗ ಕಚೇರಿಯನ್ನು 2017ರ ಮೇ 11 ರಂದು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಅಂದು ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಸಾರಿಗೆ ಬಸ್‌ ಡಿಪೋಗಳು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಘಟಕಗಳನ್ನು ಚಿತ್ರದುರ್ಗ ವಿಭಾಗಕ್ಕೆ ಸೇರಿಸಿ ವಿಭಾಗವನ್ನು ಆರಂಭಿಸಲಾಗಿತ್ತು. ಈಗ ಸರ್ಕಾರ ಏಕಾಏಕಿ ಶಿರಾ ಘಟಕವನ್ನು ವಾಪಸ್‌ ಪಡೆದಿರುವುದರಿಂದ ವಿಭಾಗೀಯ ಕಚೇರಿಯನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಶಿರಾ ಘಟಕ ಚಿತ್ರದುರ್ಗ ವಿಭಾಗದಿಂದ ವಾಪಸ್‌ ಹೋಗುತ್ತಿರುವುದು ಆಡಳಿತ ವೈಫಲ್ಯ ಅಲ್ಲ. ಕೆಎಸ್‌ಆರ್‌ಟಿಸಿ ಅಧ್ಯಕ್ಷರ ಆಸೆಯಂತೆ ಶಿರಾ ಘಟಕ ವರ್ಗಾವಣೆಗೆ ಆದೇಶಿಸಲಾಗಿದೆ. ಮುಂದೆ ಜಿಲ್ಲೆಯಲ್ಲಿ ಬೇರೆ ಡಿಪೋ ಆರಂಭಿಸಿ ವಿಭಾಗ ಉಳಿಸುವ ಕಾರ್ಯ ಮಾಡಲಾಗುತ್ತದೆ.
ಪ್ರಸನ್ನಕುಮಾರ್‌ ಬಾಲನಾಯ್ಕ, ನಿಯಂತ್ರಣಾಧಿಕಾರಿ, ಚಿತ್ರದುರ್ಗ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next