Advertisement

ಐವರು ಇಒಗಳ ವಿರುದ್ಧ ಕ್ರಮಕ್ಕೆ ಶಿಫಾರಸು

04:37 PM Nov 23, 2019 | Naveen |

ಚಿತ್ರದುರ್ಗ: ಜಿಲ್ಲೆಯ ಐವರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅ ಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲು ದಿಶಾ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಸಂಸದ ಎ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಲಾಯಿತು. 2018 ಡಿ.3 ರಂದು ನಡೆದಿದ್ದ ದಿಶಾ ಸಭೆಯ ಅನುಪಾಲನಾ ವರದಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿದ್ದೇವೆ ಎಂದು ಇಒಗಳು ಹೇಳಿದರೆ, ಜಿಪಂ ಸಿಇಒ ಸತ್ಯಭಾಮಾ ನಮ್ಮ ಕಚೇರಿಗೆ ಯಾವುದೇ ವರದಿ ಬಂದಿಲ್ಲ ಎಂದರು. ಆದರೆ, ಸಭೆಯ ನಡಾವಳಿಯಲ್ಲಿ ವರದಿ ನೀಡಿರುವ ಬಗ್ಗೆ ಉಲ್ಲೇಖೀಸಲಾಗಿತ್ತು. ಇದರಿಂದ ಕೆರಳಿದ ಸಂಸದರು ಮೊಳಕಾಲ್ಮೂರು ಇಒ ಹೊರತುಪಡಿಸಿ ಉಳಿದ ಐದು ತಾಲೂಕು ಇಒಗಳ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದರು.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅಳವಡಿಸಿರುವ ನೀರು ಶುದ್ಧೀಕರಣ ಘಟಕಗಳ ನಿರ್ವಹಣೆ ಹಾಗೂ ರಿಪೇರಿ ಕುರಿತ ಚರ್ಚೆಯಲ್ಲಿ ಕೆಆರ್‌ಐಡಿಎಲ್‌ ಅಧಿಕಾರಿಗಳು ಎಲ್ಲವನ್ನೂ ದುರಸ್ತಿ ಮಾಡಿಸಿ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಹಸ್ತಾಂತರಿಸಲು ಸೂಚಿಸಿದರು.

ಎಂಪಿ ಗುಡುಗು: ಸಂಸದ ನಾರಾಯಣಸ್ವಾಮಿ ಅಧಿಕಾರಿಗಳ ವಿರುದ್ಧ ಗುಡುಗಿದರು. ಆರಂಭದಲ್ಲಿ ಕಳೆದ ಐದು ವರ್ಷದ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಎಷ್ಟು ಬಂದಿದೆ. ಎಷ್ಟು ಬಳಕೆಯಾಗಿದೆ. ಯುಸಿ ಕಳಿಸಿರುವ ಮಾಹಿತಿ ಕೇಳಿದರು.

ನಾನು ಗುಮಾಸ್ತನಾಗಿ ಸಭೆ ನಡೆಸುತ್ತಿಲ್ಲ. ಎಲ್ಲದಕ್ಕೂ ಉತ್ತರಬೇಕು. ದೇಶದ ಪ್ರತಿ ನಾಗರಿಕನಿಗೂ ಅಧಿಕಾರಿಗಳನ್ನು ಪ್ರಶ್ನಿಸುವ, ಅವರ ವಿರುದ್ಧ ತನಿಖೆಗೆ ಒಳಪಡಿಸುವ ಹಕ್ಕಿದೆ. ನಾನು ಆಕಾಶದಿಂದ ಬಂದ ಎಂಪಿ ಅಲ್ಲ. ಬೀದಿಯಲ್ಲಿ ಹೋರಾಟ ಮಾಡಿ ಬಂದವನು. ರಾಜಕಾರಣಿಗಳ ರಕ್ಷಣೆ ಇದೆ ಎನ್ನುವುದಾದರೆ ನಿಮ್ಮನ್ನು ಎಲ್ಲಿ, ಹೇಗೆ ಹಿಡಿಯಬೇಕು ಎನ್ನುವುದು ಗೊತ್ತಿದೆ ಎಂದು ಸಭೆಯ ವಿವಿಧ ಸಂದರ್ಭಗಳಲ್ಲಿ ಗುಡುಗಿದರು.

Advertisement

ವೈದ್ಯಕೀಯ ವ್ಯವಸ್ಥೆ ಬಗ್ಗೆ ದಿಗ್ಭ್ರಮೆ: ಇತ್ತಿಚೆಗೆ ಪಾವಗಡದಲ್ಲಿ ಸಭೆ ನಡೆಸಿದೆ. ಈ ವೇಳೆ ಅಲ್ಲಿನ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಪ್ರತಿ ತಿಂಗಳು 30 ರಿಂದ 40 ಮಹಿಳೆಯರು ಗರ್ಭಕೋಶ ತೆಗೆಸಲು ಬರುತ್ತಾರೆ. ರಕ್ತಹೀನತೆಯಿಂದ ಬಳಲುತ್ತಿರುವವರು ಪ್ರತಿ ವರ್ಷ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಚಿಕಿತ್ಸೆ ಪಡೆಯುತ್ತಾರೆ ಎಂಬ ಮಾಹಿತಿ ನೀಡಿದರು.

ಇಷ್ಟೆಲ್ಲಾ ಕೇಳಿ ನನಗೆ ಸಂಬಂಧ ಇಲ್ಲ ಎನ್ನುವಂತಿದ್ದರೆ ನಾನು ಈ ಭೂಮಿಯಲ್ಲಿ ಹುಟ್ಟಿದ್ದೇ ವ್ಯರ್ಥವಾಗುತ್ತದೆ. ನಮಗೆ, ಸರ್ಕಾರಕ್ಕೆ ಅಧಿಕಾರಿಗಳಿಗೆ ಮನುಷ್ಯತ್ವವೇ ಇಲ್ಲವೇ ಅನ್ನಿಸುತ್ತದೆ ಎಂದರು.

ಇನ್ನೂ ಚಿತ್ರದುರ್ಗ ಜಿಲ್ಲೆಯ ಬಗ್ಗೆ ಮಾಹಿತಿ ಪಡೆದ ಸಂಸದರು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 9,308 ಮಹಿಳೆಯರಿಗೆ ಸಿಜೇರಿಯನ್‌ ಮೂಲಕ ಹೆರಿಗೆ ಮಾಡಿಸಲಾಗಿದೆ ಎಂಬ ವರದಿ ನೀಡಿದರು. ಇದರಿಂದ ಕೆರಳಿದ ಸಂಸದರು, ಈ ಪ್ರಮಾಣ ಯಾಕೆ ಕಡಿಮೆ ಆಗುತ್ತಿಲ್ಲ. ಶೇ.60 ರಿಂದ 70ರಷ್ಟು ಸಿಜೇರಿಯನ್‌ ಆಗುತ್ತಿದೆ. ಸಿಜೇರಿಯನ್‌ ಪ್ರಮಾಣ ಶೇ. 25ಕ್ಕೆ ಇರಬೇಕು ಎಂದು ಡಿಎಚ್‌ಒ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ಪ್ರಶ್ನಿಸಿದರು. ಜಿಲ್ಲೆಯಲ್ಲಿ 1042 ಮಹಿಳೆಯರು ಈ ವರ್ಷ ಗರ್ಭಕೋಶ ತೆಗೆಸಿಕೊಂಡಿದ್ದಾರೆ ಎಂಬ ಮಾಹಿತಿಗೆ ಕಾರಣ ಪತ್ತೆ ಹಚ್ಚಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಿರಿ ಎಂದು ತಾಕೀತು ಮಾಡಿದರು.

ತಾಲೂಕು ಆಸ್ಪತ್ರೆಗಳನ್ನು ಸಬಲೀಕರಣ ಮಾಡಿ ಜಿಲ್ಲಾಸ್ಪತ್ರೆಗೆ ಇರುವ ಹೊರೆ ಕಡಿಮೆ ಮಾಡಿ. ನಗರ ಆರೋಗ್ಯ ಕೇಂದ್ರಗಳು ದಿನದ 24 ಗಂಟೆಯೂಕಾರ್ಯನಿರ್ವಹಿಸಿದರೆ ಜಿಲ್ಲಾಸ್ಪತ್ರೆ ಸಂಜೆ ಹೊತ್ತಿಗೆ ಬ್ಯುಸಿಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ದಿಶಾ ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌, ಜಿಲ್ಲಾ ಧಿಕಾರಿ ವಿನೋತ್‌ ಪ್ರಿಯಾ, ಜಿಪಂ ಸಿಇಒ ಸತ್ಯಭಾಮಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next