Advertisement

ಕರ್ತವ್ಯದಲ್ಲಿ ಪ್ರಾಮಾಣಿಕತೆ-ನಿಷ್ಠೆ ಪಾಲಿಸಿ

12:32 PM Jun 08, 2019 | Naveen |

ಚಿತ್ರದುರ್ಗ: ಪೊಲೀಸ್‌ ಸೇವೆಗೆ ಅಣಿಯಾಗುತ್ತಿರುವ ನೂತನ ಪೊಲೀಸರು ಯಾವುದೇ ಆಸೆ, ಆಮಿಷಕ್ಕೊಳಗಾಗಿ ಭ್ರಷ್ಟಾಚಾರದ ಸುಳಿಗೆ ಸಿಲುಕದೆ, ಕರ್ತವ್ಯದಲ್ಲಿ ಪ್ರಾಮಾಣಿಕತೆ, ನಿಷ್ಠೆ ಪಾಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್ ಕುಮಾರ್‌ ಹೇಳಿದರು.

Advertisement

ಹಿರಿಯೂರು ತಾಲೂಕಿನ ಐಮಂಗಲದ ಪೊಲೀಸ್‌ ತರಬೇತಿ ಶಾಲೆಯಲ್ಲಿ ಪೊಲೀಸ್‌ ತರಬೇತಿ ಪೂರ್ಣಗೊಳಿಸಿದ 352 ಪ್ರಶಿಕ್ಷಣಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್‌ ಇಲಾಖೆ ಶಿಸ್ತಿಗೆ ಹೆಸರಾಗಿದೆ. ಪೊಲೀಸ್‌ ಕರ್ತವ್ಯವೆಂದರೆ ಹಗಲು, ರಾತ್ರಿಯ ಪರಿವಿಲ್ಲದೆ ಜನರ ಪ್ರಾಣ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗೆ ಪಣತೊಡುವ ಅತಿ ದೊಡ್ಡ ಕರ್ತವ್ಯವಾಗಿದೆ. ಎಂಟು ತಿಂಗಳುಗಳ ಕಾಲ ಪೊಲೀಸ್‌ ತರಬೇತಿ ಪೂರ್ಣಗೊಳಿಸಿ ನಾಡಿನ ಸೇವೆಗೆ ಅಣಿಯಾಗುತ್ತಿರುವ ಪ್ರಶಿಕ್ಷಣಾರ್ಥಿಗಳು ಶಿಸ್ತು, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದರು.

ಪೊಲೀಸ್‌ ಕರ್ತವ್ಯ ಎಂಬುದು ಒಂದು ಧರ್ಮ. ಈ ಧರ್ಮ ಕಾಪಾಡಲು ನಿಷ್ಠೆಯಿಂದ ಸದಾ ಸನ್ನದ್ಧರಾಗಿರಬೇಕಾಗುತ್ತದೆ. ಸಮಾಜದಲ್ಲಿ ಪೊಲೀಸ್‌ ಸಮವಸ್ತ್ರಕ್ಕೆ ತನ್ನದೇ ಆದ ಗೌರವ ಇದೆ. ಈ ಗೌರವವನ್ನು ಪೊಲೀಸ್‌ ಕರ್ತವ್ಯ ನಿರತರು ಕಾಪಾಡುವುದು ಕರ್ತವ್ಯವಾಗಿದೆ. ಕರ್ತವ್ಯದ ಸಮಯದಲ್ಲಿ ಹಲವು ಪ್ರಭಾವ, ಒತ್ತಡಗಳ ಕಾರಣದಿಂದ ಆಸೆ, ಆಮಿಷಗಳಿಗೆ ಒಳಗಾಗಿ ಭ್ರಷ್ಟಾಚಾರದ ಕೂಪಕ್ಕೆ ಸಿಲುಕಬೇಡಿ ಎಂದು ಹೇಳಿದರು.

ಪೊಲೀಸ್‌ ಕರ್ತವ್ಯಕ್ಕೆ ನೇಮಕಗೊಂಡವರು ತಮ್ಮ ಕುಟುಂಬದೊಂದಿಗೆ ಹಬ್ಬ, ಹರಿದಿನಗಳಲ್ಲಿ ಭಾಗಿಯಾಗಿ ಆಚರಿಸುವ ಆಸೆ ಇಟ್ಟುಕೊಳ್ಳಬೇಡಿ. ಈ ನಾಡು ನಿರ್ಭಯವಾಗಿ ಹಬ್ಬ-ಹರಿದಿನ ಆಚರಿಸಲು ಪೊಲೀಸರು ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ. ಸಾರ್ವಜನಿಕ ಹಿತ ರಕ್ಷಣೆಯೇ ಪೊಲೀಸರ ಪ್ರಮುಖ ಗುರಿಯಾಗಿದೆ. ಇದಲ್ಲದೆ ತಮ್ಮ ಕುಟುಂಬ ಹಾಗೂ ಮಕ್ಕಳಿಗೂ ಸಮಯ ಮೀಸಲಿಡಿ. ನೂತನವಾಗಿ ಪೊಲೀಸ್‌ ಕರ್ತವ್ಯಕ್ಕೆ ಅಣಿಯಾಗುತ್ತಿರುವ ಅಭ್ಯರ್ಥಿಗಳು ತಮ್ಮ ದೇಹದಾಡ್ಯರ್ತೆ ಹಾಗೂ ಆರೋಗ್ಯವನ್ನು ನಿವೃತ್ತಿಯವರೆಗೂ ಕಾಯ್ದುಕೊಳ್ಳುವುದು ಅಗತ್ಯ ಎಂದರು.

Advertisement

ಐಮಂಗಲ ಪೊಲೀಸ್‌ ತರಬೇತಿ ಶಾಲೆ ಪ್ರಾಂಶುಪಾಲ ಪಿ. ಪಾಪಣ್ಣ ಮಾತನಾಡಿ, ಶಾಲೆಯಿಂದ ಸದ್ಯ 4ನೇ ತಂಡದಲ್ಲಿ 352 ಪ್ರಶಿಕ್ಷಣಾರ್ಥಿಗಳ 8 ತಿಂಗಳ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಪೊಲೀಸ್‌ ಕಾನ್ಸ್‌ಟೇಬಲ್ ಹುದ್ದೆಗೆ ಬೆಂಗಳೂರು ನಗರ ಮತ್ತು ಜಿಲ್ಲೆ ವಿಭಾಗ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆಯ್ಕೆಯಾದ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಈ ಪೈಕಿ 322 ಗ್ರಾಮೀಣ ಪ್ರದೇಶದವರಾದರೆ, 30 ಅಭ್ಯರ್ಥಿಗಳು ನಗರ ಪ್ರದೇಶದವರಾಗಿದ್ದಾರೆ. ಪೊಲೀಸ್‌ ಕಾನ್ಸ್‌ಟೇಬಲ್ ಹುದ್ದೆ ತರಬೇತಿಗೆ ಬಂದವರ ಪೈಕಿ ಇಂಜಿನಿಯರಿಂಗ್‌ ಪದವಿ ಪಡೆದ 3 ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿಯ 36, ಪದವಿ-248, ಬಿಇಡಿ-17, ಐಟಿಐ, ಡಿಪ್ಲೋಮಾ-11, ಪಿಯುಸಿ ವಿದ್ಯಾರ್ಹತೆಯ 37 ಅಭ್ಯರ್ಥಿಗಳು ಆಯ್ಕೆಯಾಗಿ ತರಬೇತಿ ಪಡೆದಿದ್ದಾರೆ. ಪ್ರಶಿಕ್ಷಣಾರ್ಥಿಗಳಿಗೆ ರಸ್ತೆ ಸುರಕ್ಷತೆ, ಅಬಕಾರಿ, ಪ್ರಥಮ ಚಿಕಿತ್ಸೆ, ಭಯೋತ್ಪಾದಕರ ನಿಯಂತ್ರಣ, ಅಗ್ನಿಶಾಮಕ, ಕಾನೂನು ಅರಿವು, ಶಾಂತಿ ಸುವ್ಯವಸ್ಥೆ, ಸೈಬರ್‌ ಕ್ರೈಂ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ, ತಂಬಾಕು ನಿಯಂತ್ರಣ ಕಾಯ್ದೆ, ವ್ಯಕ್ತಿತ್ವ ವಿಕಸನ, ಒತ್ತಡ ನಿವಾರಣೆ, ಯೋಗ ಹೀಗೆ ಹಲವಾರು ವಿಷಯಗಳಲ್ಲಿ ತಜ್ಞರಿಂದ, ಒಳಾಂಗಣ ಮತ್ತು ಹೊರಾಂಗಣದ ತರಬೇತಿ ನೀಡಲಾಗಿದೆ. ಈವರೆಗೆ ಶಾಲೆಯಲ್ಲಿ 1,317 ಪ್ರಶಿಕ್ಷಣಾರ್ಥಿಗಳು, 956 ಅಧಿಕಾರಿಗಳಿಗೆ ಇಲ್ಲಿ ತರಬೇತಿ ನೀಡಲಾಗಿದೆ ಎಂದರು. ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಎಸ್‌ಪಿ ಡಾ| ಅರುಣ್‌ ಭಾಗವಹಿಸಿದ್ದರು. ತರಬೇತಿ ಶಾಲೆಯ ಕಾನೂನು ಅಧಿಕಾರಿ ಕೆ.ಎಸ್‌.ಸತೀಶ್‌ ಸ್ವಾಗತಿಸಿದರು. ಪೊಲೀಸ್‌ ಉಪಾಧೀಕ್ಷಕ ಶ್ರೀನಿವಾಸ ವಿ. ಯಾದವ್‌ ವಂದಿಸಿದರು. ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಪರೇಡ್‌ ಕಮಾಂಡರ್‌ ದರ್ಶನ್‌ ಎಸ್‌.ಎಸ್‌. ನೇತೃತ್ವದಲ್ಲಿ ನಿರ್ಗಮನ ಪಥಸಂಚಲನ ಆಕರ್ಷಕವಾಗಿ ಮೂಡಿಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next