Advertisement

ಆಪರೇಷನ್‌ ಇರಾನಿ ಗ್ಯಾಂಗ್‌ ಸಕ್ಸಸ್‌!

12:00 PM Aug 19, 2019 | Naveen |

ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
‘ಇರಾನಿ ಗ್ಯಾಂಗ್‌’ ಹೆಸರು ಕೇಳಿದರೆ ರಾಜ್ಯದ ಜನ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಖತರನಾಕ್‌ ಸರಗಳ್ಳರು ಅವರು.

Advertisement

ಸರಗಳ್ಳತನ ಪ್ರಕರಣಗಳಲ್ಲಿ ನಾಲ್ಕೈದು ರಾಜ್ಯಗಳಿಗೆ ಬೇಕಾದ ಆರೋಪಿಗಳು ಈ ಗ್ಯಾಂಗ್‌ನಲ್ಲಿದ್ದಾರೆ. ಈ ಸರಗಳ್ಳರಿಗಾಗಿ ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಪೊಲೀಸರು ಇರಾನಿ ಗ್ಯಾಂಗ್‌ ಇರುವ ಊರುಗಳಲ್ಲಿ ವರ್ಷವಿಡೀ ಕಾಯುತ್ತಾರೆ. ಅಂತಹ ಕಳ್ಳರ ಗುಂಪೊಂದನ್ನು ಹಿರಿಯೂರು ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.

ಕಳೆದ ತಿಂಗಳು ಇರಾನಿ ಗ್ಯಾಂಗ್‌ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ವಾಟ್ಸ್‌ಆ್ಯಪ್‌ಗ್ಳಲ್ಲಿ ಇವರ ಕುರಿತು ಸಂದೇಶಗಳು ಹರಿದಾಡಿದ್ದವು. ಅದರಂತೆ ಹಿರಿಯೂರಿನಲ್ಲಿ ನಡೆದ ಸರಗಳ್ಳತನ ಪ್ರಕರಣವೊಂದರ ಬೆನ್ನು ಬಿದ್ದ ಪೊಲೀಸರು ಹೋಗಿ ನಿಂತಿದ್ದು ಇದೇ ಇರಾನಿ ಗ್ಯಾಂಗ್‌ ಅಡ್ಡಾದಲ್ಲಿ.

26 ದಿನಗಳ ಕಾರ್ಯಾಚರಣೆ: ಖತರ್‌ನಾಕ್‌ ಕಳ್ಳರ ಗ್ಯಾಂಗ್‌ ಹೆಡೆಮುರಿ ಕಟ್ಟುವುದು ಸುಲಭದ ಮಾತಾಗಿರಲಿಲ್ಲ. ಹಾಗಾಗಿ ಹಿರಿಯೂರು ಪೊಲೀಸರು ‘ಆಪರೇಷನ್‌ ಇರಾನಿ ಗ್ಯಾಂಗ್‌’ ಹೆಸರಿನಲ್ಲಿ ಸತತ 26 ದಿನ ಕಾರ್ಯಾಚರಣೆ ನಡೆಸಿದರು. ಮೂರು ಸಲ ವಿಫಲರಾಗಿ ನಾಲ್ಕನೇ ಸಲ ಏಳು ಜನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೆಲ್ಲ ಬಹುತೇಕ ಜನರಿಗೆ ಗೊತ್ತಿರುವ ವಿಚಾರ. ಆದರೆ ಹಿರಿಯೂರು ಪೊಲೀಸರು ಆಂಧ್ರಪ್ರದೇಶದ ಗುಂತಕಲ್ನಲ್ಲಿ ನಡೆಸಿದ ಆಪರೇಷನ್‌ ಹೇಗಿತ್ತು ಅನ್ನೋದು ಬಹಳ ಮುಖ್ಯ.

Advertisement

ಹೀಗೆ ನಡೀತು ಆಪರೇಷನ್‌: ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಹಿರಿಯೂರು ಪೊಲೀಸರು ನಡೆಸಿದ ‘ಆಪರೇಷನ್‌ ಇರಾನಿ ಗ್ಯಾಂಗ್‌’ನ ರೋಚಕ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

2019 ಮೇ 25 ರಂದು ಹಿರಿಯೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದ ಬೆನ್ನತ್ತಿದ ಪೊಲೀಸ್‌ ಇಲಾಖೆ, ಎಂಟತ್ತು ಜನರ ತಂಡ ಮಾಡಿ ಆಂಧ್ರಪ್ರದೇಶಕ್ಕೆ ಕಳುಹಿಸಿತು. ಈ ತಂಡಗಳ ಸದಸ್ಯರು ಅನಂತಪುರ ಜಿಲ್ಲೆ ಗುಂತಕಲ್ ಪಟ್ಟಣದಲ್ಲಿರುವ ಇರಾನಿ ಗ್ಯಾಂಗ್‌ ಕಳ್ಳರ ಮನೆಗಳ ಬಳಿ ಬೇರೆ ಬೇರೆ ವೇಷ, ಕೆಲಸದಲ್ಲಿ ಓಡಾಡುತ್ತಾರೆ. ಬೆಳಿಗ್ಗೆ 4 ರಿಂದ ರಾತ್ರಿ 10 ಗಂಟೆವರೆಗೆ ಕಳ್ಳರು ಓಡಾಡುವ ದಾರಿ ಕಾಯುತ್ತಾರೆ. ತರಕಾರಿ ವ್ಯಾಪಾರಿಯಂತೆ, ಹಮಾಲರಂತೆ, ನಿರ್ಗತಿಕನಂತೆ, ಮದುವೆಗೆ ಬಂದ ನೆಂಟನಂತೆ, ಕಲ್ಯಾಣಮಂಟಪದ ಸೆಕ್ಯುರಿಟಿ ಹೀಗೆ ನಾನಾ ವೇಷಗಳಲ್ಲಿ ಕಳ್ಳರ ಸುಳಿವುಗಳನ್ನು ಸಂಗ್ರಹಿಸುತ್ತಾರೆ.

ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವವ ಕಳ್ಳ ಸಜ್ಜದ್‌ ಅಲಿ. ಅವನ ಮನೆ ಎಲ್ಲಿದೆ, ಎಲ್ಲಿ ಹೋಗಿದ್ದಾನೆ, ಊಟಕ್ಕೆ ಯಾವ ಹೋಟೆಲ್ಗೆ ಬರುತ್ತಾನೆ ಎಂಬ ಮಾಹಿತಿ ತಿಳಿದುಕೊಳ್ಳಲು ಹಿರಿಯೂರು ಪೊಲೀಸರು ಸಾವಿರಾರು ರೂ. ವ್ಯಯಿಸಿದ್ದಾರೆ.

ಉರುಳಾಡಿ ಹೋರಾಡಿ ಹಿಡಿದ್ರು: ಸಜ್ಜದ್‌ ಅಲಿ ಸೆರೆ ಹಿಡಿಯಲು ಪೊಲೀಸರು ಬಲೆ ಬೀಸುತ್ತಾರೆ. ಗುಂತಕಲ್ನ ಮಟನ್‌ ಮಾರ್ಕೆಟ್ ಬಳಿ ಸಜ್ಜದ್‌ ಅಲಿ ಬರುತ್ತಾನೆ. ಮಫ್ತಿಯಲ್ಲಿದ್ದ ಪೊಲೀಸರು ಅವನನ್ನು ಹಿಡಿಯುತ್ತಾರೆ. ತಕ್ಷಣ ಅಲ್ಲಿದ್ದ ಮಹಿಳೆಯರು ಮುಗಿ ಬೀಳುತ್ತಾರೆ. ಮಾಂಸದ ತುಂಡುಗಳನ್ನು ತಂದು ಪೊಲೀಸರ ಮೇಲೆ ಸುರಿಯುತ್ತಾರೆ. ಆದರೆ ಯಾವುದಕ್ಕೂ ಜಗ್ಗದ ಪೊಲೀಸರು ಉರುಳಾಡಿ ಹೋರಾಡಿ ಕಡೆಗೂ ಅಲಿಗೆ ಕೈಕೋಳ ತೊಡಿಸುತ್ತಾರೆ. ಆತ ನೀಡಿದ ಮಾಹಿತಿ ಮೇರೆಗೆ ಇನ್ನುಳಿದವರನ್ನೂ ಜೈಲಿಗೆ ಅಟ್ಟುವಲ್ಲಿ ಸಫಲರಾಗಿದ್ದಾರೆ. ಪೊಲೀಸರು ನಡೆಸಿದ ಈ ಕಾರ್ಯಾಚರಣೆಯನ್ನು ಸ್ಥಳೀಯರು ವೀಡಿಯೋ ಮಾಡಿದ್ದಾರೆ. ಅದು ಈಗ ಎಲ್ಲೆಡೆ ಹರಿದಾಡುತ್ತಿದೆ. ವೀಡಿಯೋ ನೋಡಿದರೆ ಯಾರು ಕಳ್ಳ, ಯಾರು ಪೊಲೀಸ್‌ ಅನ್ನೋದೇ ಗೊತ್ತಾಗಲ್ಲ. ಸಜ್ಜದ್‌ ಅಲಿಯ ಕಾಲನ್ನು ಗಟ್ಟಿಯಾಗಿ ಹಿಡಿದ ಎಎಸ್‌ಐ ಒಬ್ಬರು ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ. ಎಎಸ್‌ಐ ಮೇಲೆ ಕಳ್ಳ, ಕಳ್ಳನ ಮೇಲೆ ಪಿಸಿ, ಸತತ 13 ನಿಮಿಷ ಈ ಹೋರಾಟ ನಡೆದಿದೆ. ಇಷ್ಟೆಲ್ಲಾ ಆದರೂ ಅಲ್ಲಿ ನಿಂತು ನೋಡುತ್ತಿದ್ದ ಯಾರೂ ಕೂಡ ಪೊಲೀಸರ ನೆರವಿಗೆ ಬರುವುದಿಲ್ಲ. ಹಾಗಂತ ಕಳ್ಳರ ನೆರವಿಗೂ ಧಾವಿಸುವುದಿಲ್ಲ.

ವಿಚಿತ್ರ ಪರಿಸ್ಥಿತಿಯಲ್ಲಿ ಸೆರೆ ಸಿಕ್ಕಿದ ಇರಾನಿ ಗ್ಯಾಂಗ್‌ನ ಓರ್ವ ಮಹಿಳೆ ಸೇರಿದಂತೆ ಏಳು ಜನ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕಾರ್ಯಾಚರಣೆಯಲ್ಲಿ ಇವರೆಲ್ಲ ಭಾಗವಹಿಸಿದ್ರು
ಡಿವೈಎಸ್ಪಿ ಎನ್‌. ರಮೇಶ್‌, ಸಿಪಿಐ ಆರ್‌.ಜಿ. ಚನ್ನೇಗೌಡ, ಐಮಂಗಲ ಪಿಎಸ್‌ಐ ಲಿಂಗರಾಜು, ಅಬ್ಬಿನಹೊಳೆ ಪಿಎಸ್‌ಐ ರಾಘವೇಂದ್ರ, ಹಿರಿಯೂರು ಗ್ರಾಮಾಂತರ ಠಾಣೆ ಪಿಎಸ್‌ಐ ಉಮೇಶ್‌ಕುಮಾರ್‌, ಎಎಸ್‌ಐ ಸಿರಾಜುದ್ದೀನ್‌, ಎಚ್.ಸಿ. ದೇವೇಂದ್ರಪ್ಪ, ಪಿ.ಸಿ. ಹನೀಫ್‌ ಹಡಗಲಿ, ಎನ್‌.ಜೆ. ಪ್ರವೀಣ್‌ಕುಮಾರ್‌, ಎಪಿಸಿ ರಾಘವೇಂದ್ರ, ಜಯರಾಮ್‌, ಖಾಸಿಂ, ಟಿ. ಪ್ರಸನ್ನ, ಧನಂಜಯ ಮತ್ತು ಮಹಿಳಾ ಎಎಸ್‌ಐ ಶಶಿಕಲಾ, ಸಿಬ್ಬಂದಿಗಳಾದ ಮಂಜುಳಾ, ಶಾರದಾ ಇವರೆಲ್ಲ ‘ಆಪರೇಷನ್‌ ಇರಾನಿ ಗ್ಯಾಂಗ್‌’ ಕಾರ್ಯಾಚರಣೆಯಲ್ಲಿದ್ದರು.

ಬಂಧಿತ ಇರಾನಿ ಗ್ಯಾಂಗ್‌ ಕಳ್ಳರು
ಅಬ್ಟಾಸ್‌ ಅಲಿ, ಮಹಮ್ಮದ್‌ ಅಲಿ, ಚಿಂಚುಭಾಯ್‌, ಸೈಯ್ಯದ್‌ ಅಬು ಅಲಿ, ಸಜ್ಜದ್‌ ಅಲಿ, ಶಿಯಾರಾಣಿ, ಶೇಖ್‌ಮುಲ್ಲಾ ನೂರ್‌ಭಾಷಾ ಬಂಧಿತರು. ಪ್ರಮುಖ ಆರೋಪಿ ಅಬ್ಟಾಸ್‌ ಅಲಿ ಅಲಿಯಾಸ್‌ ಸಯ್ಯದ್‌ ಇರಾನಿ ತಲೆಮರೆಸಿಕೊಂಡಿದ್ದಾನೆ. ಇವರ ವಿರುದ್ಧ ಹಿರಿಯೂರು, ಹುಳಿಯಾರು, ಚಿತ್ರದುರ್ಗ, ಭರಮಸಾಗರ, ಹೊಳಲ್ಕೆರೆ, ಚಿಕ್ಕಜಾಜೂರು, ಹೊಸದುರ್ಗ, ಚಳ್ಳಕೆರೆ, ಪಾವಗಡ, ಶಿರಾ, ಮೊಳಕಾಲ್ಮೂರು, ಬಳ್ಳಾರಿ, ಬಡವನಹಳ್ಳಿ, ಆಂಧ್ರ ಪ್ರದೇಶದ ವಿಶಾಖಪಟ್ಟಣ, ಗುತ್ತಿ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಸಾಮಾನ್ಯವಾಗಿ ಬಹುತೇಕ ಪೊಲೀಸ್‌ ಕಾರ್ಯಾಚರಣೆ ‘ಆಪರೇಷನ್‌ ಇರಾನಿ ಗ್ಯಾಂಗ್‌’ ಹೀಗೆಯೇ ಇರುತ್ತದೆ. ಇರಾನಿ ಗ್ಯಾಂಗ್‌ ಬಂಧನದ ವೀಡಿಯೋ ಸಿಕ್ಕಿದ್ದರಿಂದ ಪೊಲೀಸರ ಸಾಹಸ ಎಲ್ಲರಿಗೂ ಗೊತ್ತಾಗಿದೆ. ಪೊಲೀಸ್‌ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ.
ಡಾ| ಕೆ. ಅರುಣ್‌,
 ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next