Advertisement

ಉದ್ಯೋಗ ಖಾತ್ರಿ; ಕೃಷಿಗೆ ಆದ್ಯತೆ

12:41 PM May 15, 2020 | Naveen |

ಚಿತ್ರದುರ್ಗ: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಇರುವುದರಿಂದ ಡಿಸೆಂಬರ್‌ ವರೆಗೆ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಲಾಗುವುದು ಎಂದು ತಾಲೂಕು ಪಂಚಾಯತ್‌ ಇಒ ಕೃಷ್ಣ ನಾಯ್ಕ ಹೇಳಿದರು.

Advertisement

ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಕುರಿತು ತಾಲೂಕಿನ ರೈತರಿಗೆ ಮಾಹಿತಿ ನೀಡುವ ಸಲುವಾಗಿ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಬಾಳೆ, ಪಪ್ಪಾಯಿ, ತೇಗ ಬೆಳೆಯಬಹುದು. ಸಣ್ಣಪುಟ ಲೋಪಗಳಿದ್ದಲ್ಲಿ ಸರಿಪಡಿಸಲಾಗುವುದು. ಎಲ್ಲಾ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸಂಪೂರ್ಣ ಮಾಹಿತಿ ನೀಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸೂಚಿಸಿದರು. ಕೋವಿಡ್ ವೈರಸ್‌ ಭೀತಿ ಇರುವುದರಿಂದ ಯಾರೂ ಸಂಕಷ್ಟಕ್ಕೆ ಒಳಗಾಗುವುದು ಬೇಡ ಎನ್ನುವ ಕಾರಣಕ್ಕಾಗಿ ರಸ್ತೆ, ಚರಂಡಿ, ಸಿಸಿ ರಸ್ತೆ, ಕಾಂಪೌಂಡ್‌ ಸೇರಿದಂತೆ ಎಲ್ಲಾ ಬಗೆಯ ಕಾಮಗಾರಿಗಳನ್ನು 8 ತಿಂಗಳುಗಳ ಕಾಲ ಬಂದ್‌ ಮಾಡಿ ನರೇಗಾ ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಲಾಗುವುದು. ರೈತರು ಉಪಯೋಗ ಪಡೆದುಕೊಳ್ಳಬೇಕು ಎಂದರು.

ತೋಟಗಾರಿಕೆ, ಕೃಷಿ, ರೇಷ್ಮೆ ಬೆಳೆಗಳಿಗೆ ಹೆಚ್ಚಿನ ಅವಕಾಶವಿದೆ. ಇಂಗುಗುಂಡಿಗಳನ್ನು ನಿರ್ಮಾಣ ಮಾಡಬೇಕು. ಈ ಮೂಲಕ ಗ್ರಾಮೀಣ ಭಾಗಗಳಲ್ಲಿ ಮನೆಯ ಬಚ್ಚಲುನೀರು ರಸ್ತೆಗೆ ಹರಿಯದಂತೆ ನೋಡಿಕೊಳ್ಳಬೇಕು. ರೈತರು ತಮ್ಮ ಜಮೀನುಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ಏನೇ ಕೆಲಸ ಮಾಡಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ. ಭೂ ಅಭಿವೃದ್ದಿ, ಅರಣ್ಯ, ರೇಷ್ಮೆ, ತೋಟಗಾರಿಕೆ ಬೆಳೆಗಳು ಸೇರಿದಂತೆ ಉಪಯುಕ್ತವಾದ ಅನೇಕ ಯೋಜನೆಗಳಿವೆ. ಇದಕ್ಕೆ ಸಂಬಂಧಿ ಸಿದಂತೆ ಎಲ್ಲಾ ಇಲಾಖೆಗಳಲ್ಲೂ ಡಾಟಾ ಎಂಟ್ರಿ ಅವಶ್ಯಕತೆಯಿದೆ. ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರಕ್ಕೆ ಕಳುಹಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ರೈತ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ರೈತರ ಜೀವನ ಸುಧಾರಣೆಗೆ ಗಮನ ಕೊಡಿ ನರೇಗಾ ಯೋಜನೆಯಡಿ ಸಿಗುವ ಸವಲತ್ತುಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ರೈತರಿಗೆ ತಲುಪಿಸುವ ವ್ಯವಸ್ಥೆಯಾಗಬೇಕು. ಕೃಷಿ ಹೊಂಡ, ಬದು ನಿರ್ಮಾಣ, ಅರಣ್ಯ, ತೋಟಗಾರಿಕೆ, ರೇಷ್ಮೆ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ರೈತರ ಜೀವನ ಸುಧಾರಣೆಯತ್ತ ಸರ್ಕಾರ ಗಮನ ಕೊಡಬೇಕು. ಭೂಮಿಯಲ್ಲಿ ನೀರು ನಿಲ್ಲುವ ಕೆಲಸ ಮೊದಲು ಆಗಬೇಕು. ಜೊತೆಗೆ ಸಪ್ಲೈ ಬಿಲ್‌ಗ‌ಳು ರೈತರಿಗೆ ನೇರವಾಗಿ ತಲುಪುವಂತಾಗಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next