Advertisement

ಅಧ್ಯಯನ-ಅನುಷ್ಠಾನ ಅಗತ್ಯ

11:30 AM Oct 10, 2019 | |

ಚಿತ್ರದುರ್ಗ: ಯುವಕರು ಕಷ್ಟಗಳನ್ನು ಎದೆಗುಂದದೆ ಎದುರಿಸಬೇಕು. ಸಮಾಜದಲ್ಲಿ ಜೀವನೋತ್ಸಾಹ ತುಂಬುವ ಕೆಲಸ ಮಾಡಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ಮುರುಘಾ ಮಠದ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಯುವಜನ ಮೇಳದಲ್ಲಿ ಅವರು ಮಾತನಾಡಿದರು. ಯುವ ವಿಜ್ಞಾನಿಗಳ ಸತತ ಪ್ರಯತ್ನದಿಂದ ಭಾರತ ದೇಶ ಪೋಲಿಯೋ ಮುಕ್ತವಾಗಿದೆ.

ಯುವಕರು ಸಮಯವನ್ನು ಸಾತ್ವಿಕವಾಗಿ ಬಳಸಿಕೊಳ್ಳಬೇಕು. ಆದರ್ಶ ವ್ಯಕ್ತಿಗಳ ಜೀವನ ವಿಚಾರವನ್ನು ಓದಬೇಕು. ವಿಚಾರಗಳು ಜಗತ್ತನ್ನು ಗೆಲ್ಲುತ್ತವೆ. ಕಂದಾಚಾರಗಳ ವಿರುದ್ಧ ಜಾಗೃತಿ ಮೂಡಿಸಿ ಅನ್ಯಾಯದ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು. ಆದರ್ಶಗಳಿಗಾಗಿ ಬದುಕಬೇಕು. ಅಧ್ಯಯನ ಮತ್ತು ಅನುಷ್ಠಾನ ನಮ್ಮ ಜೊತೆಗಿರಬೇಕು ಎಂದರು.

ಭಗೀರಥ ಮಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಯುವ ಪೀಳಿಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಮಗೆ ಜೀವನೋತ್ಸಾಹ ಬೇಕು. ಪ್ರತಿ ಕ್ಷಣ ಹೊಸತನ್ನು ಯೋಚಿಸಬೇಕು. ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಮನಸ್ಸನ್ನು ಚಂಚಲತೆಯ ಕಡೆ ಬಿಡಬಾರದು. ಉತ್ಸಾಹಶಾಲಿಗಳಾಗಬೇಕು. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಎಲ್ಲರ ಬದುಕಿನಲ್ಲಿ ಸಮಸ್ಯೆಗಳಿರುವಂತೆ ಯುವಜನತೆಗೂ ಸಮಸ್ಯೆಗಳಿವೆ. ಯುವಕರು ತಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಂಡು ಸಾಹಸ ಪ್ರದರ್ಶಿಸಬೇಕಿದೆ ಎಂದರು.

Advertisement

ಕೆಲವು ಯುವಕರು ದುಸ್ಸಾಹಸ ಮಾಡಲು ಹೊರಟಿದ್ದಾರೆ. ಸ್ಟಂಟ್‌ ಮಾಡಿ ಬದುಕು ಕಳೆದುಕೊಳ್ಳಬೇಡಿ. ಸಾಹಸ ಮಾಡಬೇಕೆ ಹೊರತು ದುಸ್ಸಾಹಸ ಮಾಡಬಾರದು. ಮೋಸ ಮತ್ತು ವಂಚನೆ ಖನ್ನತೆಗೆ ಕರೆದುಕೊಂಡು ಹೋಗುತ್ತದೆ. ಆದ್ದರಿಂದ ಯಾರಿಗೂ ವಂಚನೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿದರು. ರಾಷ್ಟ್ರಪತಿ ಪೊಲೀಸ್‌ ಪದಕ ಪುರಸ್ಕೃತ ಪಾಪಣ್ಣ, ಡಿಆರ್‌ ಡಿವೈಎಸ್ಪಿ ಜಿ.ಎಂ. ತಿಪ್ಪೇಸ್ವಾಮಿ, ಡೆವಲಪರ್‌ ಎಚ್‌.ಸಿ. ಪ್ರಭಾಕರ್‌, ಧಾರವಾಡ ಬಸವ ಕೇಂದ್ರದ ಬಸವಂತ ತೋಟದ್‌ ಅವರನ್ನು ಸನ್ಮಾನಿಸಲಾಯಿತು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಉಪಸ್ಥಿತರಿದ್ದರು.

ಜೀ ಟೀವಿಯ ಸರಿಮಗಪ ಪ್ರತಿಭೆ ಬಳ್ಳಾರಿಯ ಜ್ಞಾನೇಶ್‌ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಯುವ ಮುಖಂಡ ಜಿತೇಂದ್ರ ಎನ್‌.
ಹುಲಿಕುಂಟೆ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next