Advertisement

ಒಗ್ಗಟ್ಟಿನ ಕೊರತೆ, ಅತಿಯಾದ ವಿಶ್ವಾಸ ಶಾಪವಾಯ್ತು

03:30 PM May 24, 2019 | Naveen |

ಚಿತ್ರದುರ್ಗ: 2014ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಅಲೆ ಇದ್ದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿ.ಎನ್‌. ಚಂದ್ರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನವರಾದ ಚಂದ್ರಪ್ಪ, ಜಿಲ್ಲೆಯಿಂದ ಕಣಕ್ಕಿಳಿದು ಒಂದು ಲಕ್ಷಕ್ಕೂ ಹೆಚ್ಚು ಮತದ ಅಂತರದಿಂದ ಜಯಶಾಲಿಯಾಗಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದಿಂದ ಈ ಬಾರಿಯೂ ಸ್ಪರ್ಧಿಸಿದ್ದ ಅವರು, ಪುನರಾಯ್ಕೆಯಾಗುವ ಕನಸು ಕಂಡಿದ್ದರು. ಆದರೆ ಈ ಸಲ ಮೋದಿ ಅಲೆ ಹಾಗೂ ಪ್ರಬಲ ಪೈಪೋಟಿಯಿಂದಾಗಿ ಮತ್ತೆ ಸಂಸತ್‌ ಪ್ರವೇಶಿಸುವ ಅವರ ಆಸೆ ಭಗ್ನಗೊಂಡಿದೆ. ಚಂದ್ರಪ್ಪ ಸೋಲಿಗೆ ಹಲವಾರು ಕಾರಣಗಳಿವೆ. ವೈಯಕ್ತಿಕವಾಗಿ ಸರಳ-ಸಜ್ಜನ ಎನ್ನಿಸಿಕೊಂಡು ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಅದು ಮತವಾಗಿ ಪರಿವರ್ತನೆಯಾಗಲೇ ಇಲ್ಲ. ಅಲ್ಲದೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಮುಖಂಡರು, ಮಾಜಿ, ಹಾಲಿ ಶಾಸಕರು ಕ್ರಿಯಾಶೀಲವಾಗಿ ಕೆಲಸ ಮಾಡದೇ ಇರುವುದು ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು.

Advertisement

ಬಿಜೆಪಿ ಕೂಡ ಮಾದಿಗ ಸಮುದಾಯದವರಿಗೆ ಟಿಕೆಟ್ ನೀಡಿದ್ದು, ಮಾದಿಗ ಸಮುದಾಯದವರೇ ಆದ ಚಂದ್ರಪ್ಪಗೆ ಮುಳುವಾಯಿತು. ಶಿರಾ, ಪಾವಗಡ ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಾಗುತ್ತದೆ ಎಂದು ಬಲವಾಗಿ ನಂಬಿ ಕೂರಲಾಯಿತು. ಮಾಜಿ ಶಾಸಕರ ಮೇಲೆ ಹೆಚ್ಚು ಅವಲಂಬಿತವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಅವರು ಸರಿಯಾಗಿ ಕೆಲಸ ಮಾಡಲಿಲ್ಲ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಇಬ್ಬರು, ಜೆಡಿಎಸ್‌ನ ಒಬ್ಬರು ಶಾಸಕರಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮತ ದೊರೆತಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್‌ ಮತಗಳ ಸಂಖ್ಯೆ ಕಡಿಮೆ ಇರುವುದು, ಲಿಂಗಾಯತ ಮತಗಳು ಹೆಚ್ಚಾಗಿ ಬಿಜೆಪಿಗೆ ಬಂದಿರುವುದು. ಲಿಂಗಾಯತ ಸಮುದಾಯ ಕಾಂಗ್ರೆಸ್‌ ವಿರೋಧಿ ಎನ್ನುವಂತೆ ಬಿಂಬಿಸಿದ್ದರಿಂದ ಚಂದ್ರಪ್ಪ ಪರಾಜಯ ಅನುಭವಿಸಬೇಕಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next