Advertisement

ಮೈತ್ರಿಗೆ ಮುನ್ನಡೆ ಕನಸು; ಕಮಲಕ್ಕೆ ಗೆಲ್ಲುವ ಹುಮ್ಮಸ್ಸು

03:51 PM Apr 25, 2019 | Team Udayavani |

ಚಿತ್ರದುರ್ಗ: ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. 70.64 ರಷ್ಟು ಮತದಾನವಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ. 68.26ರಷ್ಟು ಮತ ಚಲಾವಣೆಯಾಗಿದ್ದು, ಸರಾಸರಿ ಮತದಾನಕ್ಕಿಂತ ಶೇ. 2.38 ರಷ್ಟು ಮತದಾನ ಕಡಿಮೆಯಾಗಿದೆ. ಇದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಮತ್ತು ಬಿಜೆಪಿ ಅಭ್ಯರ್ಥಿಗಳಲ್ಲಿ ಯಾರೇ ಗೆದ್ದರೂ ಕನಿಷ್ಠ ಹತ್ತು ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಬಹುದು ಎಂಬ ಚರ್ಚೆ ನಡೆದಿದೆ. ಅಲ್ಲದೆ ಬೂತ್‌, ಗ್ರಾಮ, ಹೋಬಳಿ, ವಿಧಾನಸಭಾವಾರು ತಾವೆಷ್ಟು ಮತ ಪಡೆದಿದ್ದೇವೆಂದು ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಲೆಕ್ಕ ಹಾಕುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವ್ಯಾವ ಮತಗಟ್ಟೆಗಳಲ್ಲಿ, ಊರುಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಎಷ್ಟು ಮತ ಪಡೆದರು ಎನ್ನುವುದನ್ನು ತಾಳೆ ಹಾಕಿ ನೋಡಲಾಗುತ್ತಿದೆ.

ಕಲ್ಲೇನಹಳ್ಳಿ ಮತಗಟ್ಟೆಯಲ್ಲಿ ಹೆಚ್ಚು ಮತದಾನ: ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಲೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 4 ರಲ್ಲಿ ಅತಿ ಹೆಚ್ಚು ಅಂದರೆ ಶೇ. 91.89 ರಷ್ಟು ಮತದಾನವಾಗಿದೆ. ಈ ಮತಗಟ್ಟೆಯಲ್ಲಿ 224 ಪುರುಷರು ಹಾಗೂ 232 ಮಹಿಳಾ ಮತದಾರರ ಪೈಕಿ ಒಟ್ಟು 456 ಮತದಾರರಿದ್ದರು. ಅವರಲ್ಲಿ 206 ಪುರುಷ ಹಾಗೂ 213 ಮಹಿಳೆಯರು ಸೇರಿದಂತೆ ಒಟ್ಟು 419 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಓಬಣ್ಣನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 263 ರಲ್ಲಿ ಕೇವಲ ಶೇ. 0.88 ರಷ್ಟು ಮತದಾನವಾಗಿ ಅತಿ ಕಡಿಮೆ ಮತದಾನವಾಗಿದೆ. ಈ ಗ್ರಾಮದಲ್ಲಿ ಹಲವು ಕಾರಣಗಳಿಗಾಗಿ ಮತದಾನವನ್ನು ಬಹಿಷ್ಕರಿಸಲಾಗಿತ್ತು. 287 ಪುರುಷ ಹಾಗೂ 280 ಮಹಿಳೆಯರು ಸೇರಿದಂತೆ ಒಟ್ಟು 567 ಮತದಾರರಿದ್ದರು. ಇಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿ ಒಟ್ಟು ಐವರು ಮತದಾರರಷ್ಟೇ ಮತ ಚಲಾವಣೆ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಚಿತ್ರದುರ್ಗ ನಗರದ ಸಿ.ಕೆ. ಪುರ ಸರಸ್ವತಿ ಕಾನೂನು ಕಾಲೇಜು ಮತಗಟ್ಟೆ ಸಂಖ್ಯೆ 221 ರಲ್ಲಿ ಶೇ. 48.13 ರಷ್ಟು ಕಡಿಮೆ ಮತದಾನವಾಗಿದೆ. ರಾಜಕೀಯ ಪಂಡಿತರು ಕೂಡಿಸಿ ಕಳೆಯುವ ಹಾಗೂ ತಾಳೆ ಹಾಕುವುದರಲ್ಲಿ ಮಗ್ನರಾಗಿದ್ದು, ಚುನಾವಣಾ ಫಲಿತಾಂಶ ಅವರೆಲ್ಲರ ಲೆಕ್ಕಾಚಾರಗಳನ್ನು ಉಲಾr ಮಾಡಿದರೂ ಅಚ್ಚರಿ ಇಲ್ಲ.

ಎರಡೂ ಸೇರಿದ್ರೆ ಬಿಜೆಪಿಗಿಂತ ಜಾಸ್ತಿ!: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ 82,896 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ ಅಭ್ಯರ್ಥಿ ಕೆ.ಸಿ. ವೀರೇಂದ್ರ (ಪಪ್ಪಿ) ಅವರನ್ನು 32,985 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಎಚ್.ಎ. ಷಣ್ಮುಖಪ್ಪ 49,014 ಮತಗಳನ್ನು ಪಡೆದಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಗಳು 98,925 ಮತ ಪಡೆದಿದ್ದರು. ಆ ಇಬ್ಬರು ಪಡೆದ ಮತಗಳು ಬಿಜೆಪಿ ಅಭ್ಯರ್ಥಿಗಿಂತ 16,029 ಮತಗಳಷ್ಟು ಜಾಸ್ತಿ. ಇದು ಮೈತ್ರಿ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಗೆಲುವಿಗೆ ಪ್ಲಸ್‌ ಪಾಯಿಂಟ್ ಆಗಬಹುದು ಎಂಬ ವಾದವನ್ನು ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮುಂದಿಡುತ್ತಿದ್ದಾರೆ.

Advertisement

ಮೋದಿ ಹವಾ, ಯುವ ಮತದಾರರು, ಇಬ್ಬರೂ ಮಾದಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಾಗಿರುವುದರಿಂದ ಯಾರೇ ಗೆದ್ದರೂ ಮಾದಿಗ ಸಮುದಾಯದವರೇ ಆಗಿರುತ್ತಾರೆ ಎಂಬ ಮಾತು ಕೂಡ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಕ್ಷೇತ್ರಕ್ಕೆ ಆಗಮಿಸಿ ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ವಿಜಯ ಸಂಕಲ್ಪ ಸಮಾವೇಶ ನಡೆಸಿದ್ದರು. ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌ ಮತ್ತಿತರ ನಾಯಕರು ಕೂಡ ಆಗಮಿಸಿ ಪರಿವರ್ತನಾ ಸಮಾವೇಶ ನಡೆಸಿದ್ದರು. ಎರಡೂ ಸಮಾವೇಶಗಳು ಚಿತ್ರದುರ್ಗ ನಗರದಲ್ಲೇ ನಡೆದಿದ್ದರಿಂದ ಮತದಾರರ ಒಲವು ಯಾರ ಕಡೆ ಇದೆ ಎಂದು ತಕ್ಷಣಕ್ಕೆ ಹೇಳುವುದು ಕಷ್ಟ.

•ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next