Advertisement

ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಲಗ್ಗೆ

01:19 PM Jan 02, 2020 | Naveen |

ಚಿತ್ರದುರ್ಗ: ಹೊಸ ವರ್ಷ 2020ರ ಆರಂಭದ ದಿನದಂದು ಕೋಟೆ ನಾಡಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಬಹು ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಅದರಲ್ಲೂ ಒಂದೇ ದಿನ ಅತಿ ಹೆಚ್ಚು ಪ್ರವಾಸಿಗರು ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಭೇಟಿ ನೀಡಿದ್ದು ವಿಶೇಷ.

Advertisement

ಇಲ್ಲಿನ ಕಿರು ಮೃಗಾಲಯ ಸ್ಥಾಪನೆಯಾದ ದಿನದಿಂದ ಇದುವರೆಗೆ ಆಡುಮಲ್ಲೇಶ್ವರದ ಟಿಕೆಟ್‌ ಕೌಂಟರ್‌ ಕಲೆಕ್ಷನ್‌ 1 ಲಕ್ಷ ರೂ. ದಾಟಿರಲಿಲ್ಲ. ಆದರೆ ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ 1.40 ಲಕ್ಷ ರೂ. ಸಂಗ್ರಹವಾಗಿದ್ದು, 3700 ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಹೊಸ ವರ್ಷದ ಜತೆಗೆ ಮಳೆಯಿಂದ ಹಚ್ಚ ಹಸಿರಾಗಿರುವ ಪರಿಸರ, ಅಭಿವೃದ್ಧಿ ಹೊಂದುತ್ತಿರುವ ಮೃಗಾಲಯ ಇದಕ್ಕೆ ಕಾರಣವಿರಬಹುದು. ಮೈಸೂರು ಪ್ರಾಣಿ ಸಂಗ್ರಹಾಲಯದಿಂದ ವಿಶೇಷ ಅತಿಥಿಗಳಾಗಿ ಆಗಮಿಸಿರುವ ವಿಧ ವಿಧದ ಪಕ್ಷಿಗಳು, ಪ್ರಾಣಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಕೋಟೆಗೂ ಲಗ್ಗೆ ಇಟ್ಟ ಪ್ರವಾಸಿಗರ ದಂಡು: ಐತಿಹಾಸಿಕ ನಗರಿ ಚಿತ್ರದುರ್ಗದ ಏಳು ಸುತ್ತಿನ ಕೋಟೆಗೆ ಹೊಸ ವರ್ಷದ ಮೊದಲ ದಿನದಂದು ದಾಖಲೆ ಪ್ರಮಾಣದಲ್ಲೆ ಪ್ರವಾಸಿಗರು ಆಗಮಿಸಿದ್ದಾರೆ.
ಪ್ರತಿ ವರ್ಷ ಈ ದಿನದಂದು ವ್ಯಾಪಕ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಆದರೂ ನಿರೀಕ್ಷೆ ಮೀರಿ ಜನ ಬಂದಿದ್ದರಿಂದ ಪೊಲೀಸರು ಹಾಗೂ ಪುರಾತತ್ವ ಇಲಾಖೆ ಸಿಬ್ಬಂದಿ ಪ್ರವಾಸಿಗರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು.

ಸಾಮಾನ್ಯ ದಿನಗಳಲ್ಲಿ ಸುಮಾರು ಒಂದೂವರೆ ಸಾವಿರ ಪ್ರವಾಸಿಗರು ಬಂದು ಹೋಗುವ ಕೋಟೆಗೆ ಇಂದು 6134 ಪ್ರವಾಸಿಗರು ಬಂದಿದ್ದಾರೆ. ಇದು ಕೌಂಟರ್‌ನಲ್ಲಿ ಮಾರಾಟವಾಗಿರುವ ಟಿಕೆಟ್‌ ಗಳ ಲೆಕ್ಕ ಮಾತ್ರ. ಆದರೆ ವಿಪರೀತ ಜನಸಂದಣಿ ಶುರುವಾಗಿದ್ದರಿಂದ 10 ಟಿಕೆಟ್‌ ತೆಗೆದುಕೊಂಡು 15
ಮಂದಿ ಪ್ರವೇಶಿಸುವುದು, ನೂಕುನುಗ್ಗಲಾಗಿ ಟಿಕೆಟ್‌ ಇಲ್ಲದೆ ಒಳ ಹೋದವರ ಸಂಖ್ಯೆ ಮಾರಾಟವಾದ ಟಿಕೆಟ್‌ಗಿಂತ ಹೆಚ್ಚೇ ಆಗಬಹುದು. ಒಂದು ದಿನದ ಕೌಂಟರ್‌ ಕಲೆಕ್ಷನ್‌ 1.53 ಲಕ್ಷ ರೂ. ಆಗಿದೆ.

Advertisement

ಮಧ್ಯರಾತ್ರಿ 12ಕ್ಕೆ ಮುಗಿಲು ಮುಟ್ಟಿದ ಸಂಭ್ರಮ: ಹೊಸ ವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್‌ 31ರಂದು ಮಧ್ಯರಾತ್ರಿ ಸ್ನೇಹಿತರು, ಕುಟುಂಬದವರು ಸೇರಿ ಹೊಸ ವರ್ಷದ ಮೊದಲ ದಿನವನ್ನು ಸ್ವಾಗತಿಸುವುದು ವಾಡಿಕೆ. ಅದರಂತೆ ಮಂಗಳವಾರ ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಆಗಸದಲ್ಲಿ ಚಿತ್ತಾರ ಮೂಡಿಸುವ ಪಟಾಕಿ ಸಿಡಿಸಿ ಕೇಕೆ ಹಾಕುವ ದೃಶ್ಯಗಳು ಕಂಡು ಬಂದವು. ಜತೆಗೆ ಕೇಕ್‌ ಕತ್ತರಿಸಿ ತಿನ್ನಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು. ಹೊಸ ವರ್ಷದ ಹಿನ್ನೆಲೆಯಲ್ಲಿ ಎಲ್ಲ ಬೇಕರಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೇಕ್‌ ತಯಾರಿಸಿ ಇಟ್ಟುಕೊಳ್ಳಲಾಗಿತ್ತು.

ಇದರ ನಡುವೆ ನಮ್ಮ ಹೊಸ ವರ್ಷ ಯುಗಾದಿಗೆ. ನಾನು ಆಗಲೇ ಸಂಭ್ರಮಿಸುವುದು ಎಂದು ಹೇಳುವ ಒಂದು ವರ್ಗವೂ ಎಲ್ಲವನ್ನೂ ನೋಡುತ್ತಾ ಓಡಾಡುತ್ತಿತ್ತು. ಅನೇಕರು ಸೋಷಿಯಲ್‌ ಮೀಡಿಯಾಗಳಲ್ಲಿ ಕ್ಯಾಲೆಂಡರ್‌ ಬದಲಾಯಿಸುವ ಹೊಸ ವರ್ಷದ ಬಗ್ಗೆ ಆಕ್ಷೇಪ ಎತ್ತಿದ ಪ್ರಸಂಗಗಳೂ ನಡೆದವು.

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next