Advertisement

ಮಹಿಳಾ ಸ್ವಾತಂತ್ರ್ಯಕ್ಕಾಗಿ ಶರಣರಿಂದ ಹೋರಾಟ

04:59 PM May 04, 2019 | Naveen |

ಚಿತ್ರದುರ್ಗ: 12ನೇ ಶತಮಾನದಲ್ಲೇ ಮಹಿಳೆಯರನ್ನು ಲೌಖೀಕ ಮತ್ತು ಅಲೌಖೀಕ ಸಂಕಷ್ಟದಿಂದ ಹೊರತರಲು ಬಸವಣ್ಣ ಸೇರಿದಂತೆ ಮತ್ತಿತರ ಶರಣರು ಕ್ರಾಂತಿಕಾರಿ ಹೋರಾಟ ನಡೆಸಿದರು ಎಂದು ಲೇಖಕ, ಚಿಂತಕ ಚಂದ್ರಶೇಖರ ತಾಳ್ಯ ಹೇಳಿದರು.

Advertisement

ಇಲ್ಲಿನ ಸೇಂಟ್ ಮೆರೀಸ್‌ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ, ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಶಾಖೆ ಹಾಗೂ ಸೇಂಟ್ ಮೆರೀಸ್‌ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮೊದಲ ಹೆಜ್ಜೆ ಪುಸ್ತಕ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

21ನೇ ಶತಮಾನದಲ್ಲಿ ಆರಂಭವಾದ ಮಹಿಳೆಯರು ಕುರಿತ ಹೋರಾಟ ಇಂದಿಗೂ ಮಹಿಳೆ ಪುರುಷ ಪ್ರಧಾನ ಸಮಾಜದಿಂದ ಹೊರಬರಲು ಆಗುತ್ತಿಲ್ಲ ಏಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು.

ಮಹಿಳೆಯರು ಸಾಕಷ್ಟು ಶಿಕ್ಷಣವಂತರಾಗುತ್ತಿದ್ದಾರೆ. ಆದರೂ ಇಂತಹ ಸಮಾರಂಭಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ. ಕೀಳರಿಮೆ, ಹಿಂಜರಿಕೆ ಏಕೆ ಎನ್ನುವುದು ಗೊತ್ತಾಗುತ್ತಿಲ್ಲ. ಮಹಿಳೆಯರು ಅಪಾರವಾದ ಸಂಕಟ ಅನುಭವಿಸುತ್ತಿದ್ದಾರೆ. ಮನಸ್ಸಿನ ಅಭಿವ್ಯಕ್ತಿ ಚಿಂತನೆಯನ್ನು ಬರವಣಿಗೆ ಮೂಲಕ ಹೊರಹಾಕಬೇಕಾಗಿದೆ. ಮಾತೃ ಸಂಸ್ಕೃತಿಯಿಂದ ಪಿತೃ ಸಂಸ್ಕೃತಿಗೆ ಹೆಣ್ಣು ಜಿಗಿದಾಗಿನಿಂದ ಲೌಖೀಕ ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಇನ್ನು ಮುಂದೆ ಪತಿಯೂ ಕೂಡ ಕಾನೂನು ಸಮ್ಮತಿ ಪಡೆದುಕೊಂಡು ಪತ್ನಿಯನ್ನು ಮುಟ್ಟುವ ಕಾಲ ಬಂದರೂ ಬರಬಹುದು ಆಶ್ಚರ್ಯವಿಲ್ಲ ಎಂದು ಎಸ್‌.ಎಲ್. ಭೈರಪ್ಪ ಹಾಸ್ಯ ಚಟಾಕಿ ಹಾರಿಸುವುದನ್ನು ನಿಜವಾಗಿಯೂ ಬುದ್ಧಿವಂತರು, ಪ್ರಜ್ಞಾವಂತರು, ಸ್ತ್ರೀಯರು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದು ಹಾಸ್ಯವಲ್ಲ. ನೋವಿನ ಸಂಗತಿ. ಭೈರಪ್ಪ 21 ನೇ ಶತಮಾನದ ಮನು ಧರ್ಮಶಾಸ್ತ್ರದ ಆಧುನಿಕ ವಕ್ತಾರ ಎಂದು ಕುಟುಕಿದರು.

ಇಂದಿಗೂ ಬಹಳ ಮಹಿಳೆಯರಿಗೆ ಲೌಖೀಕ ಬಂಧನದಲ್ಲಿದ್ದೇವೆ ಎನ್ನುವುದು ಗೊತ್ತಿಲ್ಲ. ಹೆಣ್ಣು-ಗಂಡು ಎನ್ನುವ ತಾರತಮ್ಯಕ್ಕಿಂತ ಇಬ್ಬರು ಒಂದಾಗಿ ಬದುಕುವ ಸ್ಥಿತಿ ತಂದುಕೊಳ್ಳಬೇಕು. ಪ್ರಶಿಕ್ಷಣಾರ್ಥಿಗಳು ಓದುವುದರ ಕಡೆಗೆ ಹೆಚ್ಚಿನ ಗಮನ ಕೊಡಿ ಎಂದು ಬಿಇಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Advertisement

ಲೇಖಕಿಯರು ಬರೆಯುವುದಕ್ಕಿಂತ ವಿಚಾರ ಗ್ರಹಿಸುವುದು ಮುಖ್ಯ. ಮಹಿಳೆಯರು ಪುರುಷರನ್ನು ದ್ವೇಷಿಸಬಾರದು. ಪುರುಷರು ಕೂಡ ಮಹಿಳೆಯರನ್ನು ದ್ವೇಷಿಸಬಾರದು. ಹೆಣ್ಣು-ಗಂಡು ಇಬ್ಬರು ಸಮಾನರೆ ಎನ್ನುವ ಮನೋಭಾವ ಬೆಳೆಯಬೇಕು ಎಂದು ಹೇಳಿದರು.

ಸಮಕಾಲೀನ ಮಹಿಳಾ ಕಥಾ ಸಾಹಿತ್ಯ ಹೊಸ ನೋಟಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ, ಜಿಲ್ಲೆಯಲ್ಲಿ 300 ಮಹಿಳೆಯರು ಕಥೆಗಳನ್ನು ಬರೆಯುತ್ತಿದ್ದಾರೆ. 700 ಕಥಾಸಂಕಲನಗಳಿವೆ. ಮಹಿಳೆಯರ ಸಂವೇದನೆಯನ್ನು ಬರೆಯುವವರು ಹೆಚ್ಚು ದಾಖಲಾಗುತ್ತಿಲ್ಲ. ಮಹಿಳಾ ಬರಹಗಾರ್ತಿಯರಿಗೂ ಪ್ರೇರಕ ಶಕ್ತಿ ಬೇಕಾಗಿದೆ ಎಂದರು.

12ನೇ ಶತಮಾನದಲ್ಲೇ 35ಕ್ಕೂ ಹೆಚ್ಚು ಮಹಿಳೆಯರು ಕಥೆಗಳನ್ನು ಬರೆದಿದ್ದಾರೆ. ಎಲ್ಲಿಯೂ ದಾಖಲಾಗಿಲ್ಲ. ಶೈಕ್ಷಣಿಕ ವಲಯಕ್ಕೆ ಮಹಿಳೆಯರ ಬರವಣಿಗೆ ಪ್ರವೇಶಿಸುತ್ತಿಲ್ಲ. ಬರವಣಿಗೆಯೇ ಬಂಡಾಯ, ಮಾತೆ ಬಂಡಾಯ ಎನ್ನುವಾಗ ಸ್ತ್ರೀಯರ ಬರವಣಿಗೆ ಇನ್ನು ಏಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ. ಇದಕ್ಕೆ ಮಹಿಳೆ ಎನ್ನುವ ನಿರ್ಲಕ್ಷೆ, ಅಸಡ್ಡೆ ಕಾರಣವಿರಬಹುದು ಹಾಗಾಗಿ ಕಥೆಗಳಿಗೆ ಅಭಿವ್ಯಕ್ತಿ ಬೇಕು ಎಂದರು.

ಜೀವನ ಅನುಭವ ಎಷ್ಟು ಮುಖ್ಯವೋ, ಬರವಣಿಗೆ, ಓದು ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ದೇಹ ಮತ್ತು ಮನಸ್ಸನ್ನು ಒಂದು ಮಾಡಿ ಮಾತುಗಳನ್ನು ಕೇಳುವುದೇ ನಿಜವಾದ ಅನುಭವ. ಮಹಿಳೆಯರು ಎಚ್ಚರವಾದಾಗ ಆಲೋಚನೆ ಬದಲಾಗುತ್ತದೆ. ಚರಿತ್ರೆ, ಇತಿಹಾಸ, ಪರಂಪರೆಯನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳನ್ನು ಎಚ್ಚರಿಸಿದರು.

ಕುವೆಂಪುರವರ ನಾಯಿಬುತ್ತಿ, ಮೊದಲ ಹೆಜ್ಜೆ ಪುಸ್ತಕಕ್ಕೆ ಹತ್ತಿರವಾದ ಸಂಬಂಧವಿದೆ. ಕಾವ್ಯದಲ್ಲಿದ್ದಂತೆ ಕಥೆಗಳಲ್ಲಿಯೂ ಕಾಡುವ ಗುಣವಿರಬೇಕು. ಪ್ರತಿಯೊಂದನ್ನು ಯೋಚಿಸಿ ಪ್ರಶ್ನಿಸುವ ಶಕ್ತಿ ಕಥೆ, ಬರವಣಿಗೆ, ಅಭಿವ್ಯಕ್ತಿಯಲ್ಲಿರಬೇಕು. ಆಚಾರ-ಸಂಪ್ರದಾಯ-ನಂಬಿಕೆಗಳನ್ನು ಪರಾಮರ್ಶಿಸಿ ತರ್ಕಕ್ಕೆ ಕೊಡೊಯ್ಯಬೇಕು. ಮಹಿಳಾ ಬರಹಗಾರರಿಗೂ ದೊಡ್ಡ ಜವಾಬ್ದಾರಿ ಇರುವುದರಿಂದ ಬದಲಾವಣೆಯ ಕಾಲಘಟ್ಟದಲ್ಲಿ ಹಳೆ ತಲೆಮಾರಿಗೆ ಇನ್ನು ಜೋತು ಬೀಳಬಾರದು. ವಿಜ್ಞಾನದ ಮೂಲಕ ಮೌಡ್ಯಗಳನ್ನು ನಂಬಿ ಮೋಸ ಹೋಗುವುದು ನಿಲ್ಲಬೇಕು ಎಂದು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಶಾಖೆ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್‌, ಲೇಖಕಿ ಪದ್ಮಿನಿ ನಾಗರಾಜು, ಉಪನ್ಯಾಸಕ ಡಾ| ಎಸ್‌.ಎನ್‌. ಹೇಮಂತರಾಜು, ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ, ಸಿ.ಬಿ. ಶೈಲಾ, ಡಿ. ಮಂಜುಳಾ, ಶಶಿಕಲಾ ರವಿಶಂಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next