Advertisement

ವಿದ್ಯಾರ್ಥಿಗಳಲ್ಲಿ ಅಧ್ಯಯನಾಸಕ್ತಿ ಕ್ಷೀಣ: ಡಾ|ಮಲ್ಲಿಕಾರ್ಜುನಪ್ಪ

11:56 AM Jul 26, 2019 | Naveen |

ಚಿತ್ರದುರ್ಗ: ವಿದ್ಯಾರ್ಥಿ ಮತ್ತು ಯುವ ಸಮೂಹದಲ್ಲಿ ಪುಸ್ತಕ ಓದುವ ಆಸಕ್ತಿ, ವ್ಯವಧಾನ ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಾಮಾಜಿಕ ಹಾಗೂ ಆರ್ಥಿಕ ಚಿಂತಕ ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ ಕಳವಳ ವ್ಯಕ್ತಪಡಿಸಿದರು.

Advertisement

ಇಲ್ಲಿನ ವಾಸವಿ ಶಾಲೆಯಲ್ಲಿ ಚಿನ್ಮೂಲಾದ್ರಿ ಕನ್ನಡ ಬಳಗ, ಆರ್ಯವೈಶ್ಯ ಸಾಹಿತ್ಯ ಪರಿಷತ್ತು, ಟೀಕಾ ಸಾಹಿತ್ಯ ಮಾಲೆ ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ| ಟಿ.ವಿ. ಸುರೇಶ ಗುಪ್ತ ಅವರ ‘ಮೇಘ ಪುಷ್ಪ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಾಹಿತಿ ತಂತ್ರಜ್ಞಾನದ ತುತ್ತ ತುದಿಯಲ್ಲಿರುವ ಇಂದಿನ ಕಾಲಘಟ್ಟದಲ್ಲಿ ಜ್ಞಾನ- ವಿಜ್ಞಾನ-ತಂತ್ರಜ್ಞಾನ ಬದುಕನ್ನು ಶೃಂಗರಿಸಬೇಕಿದೆ. ಸಮಯ ಸದ್ವಿನಿಯೋಗವಾಗಬೇಕು. ಸದಭಿರುಚಿ ಪಡೆಯಬೇಕಾದರೆ ಅಧ್ಯಯನ, ಅವಲೋಕನ, ಆಲೋಚನೆ, ಅನುಭವ, ಅಭಿವ್ಯಕ್ತಿ ಬೇಕು. ಅನುಭವವನ್ನು ಹೇಳಿಕೊಳ್ಳುವ ತಹತಹಿಕೆ ಇರಬೇಕು. ಪ್ರೊ| ಟಿ.ವಿ. ಸುರೇಶ ಗುಪ್ತರವರ ಕೃತಿಯಲ್ಲಿ ಅವರ ಜೀವನದ ಅನುಭವಗಳನ್ನು ಬರಹದ ಮೂಲಕ ಹೇಳಿಕೊಂಡಿದ್ದಾರೆ ಎಂದರು.

ಬೋಧಕನಿಗೆ, ಅಧ್ಯಾಪಕನಿಗೆ ಭಾಷೆಯೇ ಶೃಂಗಾರ. ಸಮುದ್ರಕ್ಕೆ ಅಲೆ, ಆಕಾಶಕ್ಕೆ ಸೂರ್ಯ-ಚಂದ್ರ ಶೃಂಗಾರವಿದ್ದಂತೆ ಲೇಖಕ, ಬರಹಗಾರನಿಗೆ ಕೃತಿಯೇ ಶೃಂಗಾರವಾಗಿರಬೇಕು. ಕೃತಿಯನ್ನು ಆರಾಧಿಸುವ ಸಹೃದಯ ಮನಸ್ಸುಗಳು ಬೇಕು. ಓದಿನ ಬಗ್ಗೆ ತಾತ್ಸಾರ ಸರಿಯಲ್ಲ. ಮಾಹಿತಿ ತಂತ್ರಜ್ಞಾನದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಮಾಹಿತಿ ನೀಡುವುದೆಲ್ಲವೂ ಜ್ಞಾನವಲ್ಲ. ಆದರೆ ಜ್ಞಾನ ಮಾಹಿತಿ ನೀಡುತ್ತದೆ. ಪುಸ್ತಕದ ಓದು ಮನಸ್ಸಿಗೆ ಧ್ಯಾನಸ್ಥ ಸ್ಥಿತಿಯನ್ನು ಕೊಡುತ್ತದೆ. ಯಾವ ಸಾಹಿತ್ಯಕ್ಕೆ ಸಮಾಜದಲ್ಲಿ ಪರಿವರ್ತನೆ ತರುವ ಬದ್ಧತೆ ಇರುವುದಿಲ್ಲವೋ ಅಂತಹ ಬರಹಗಳು ಸಾಮಾಜಿಕ ನೆಲೆಯಲ್ಲಿ ಒಪ್ಪಿತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಜ್ಞಾನ ರತ್ನಗಳನ್ನು ಬೆಳೆಸಿಕೊಳ್ಳುವ ವಿಧಾನವನ್ನು ಇಂದಿನ ಯುವ ಸಮೂಹಕ್ಕೆ ಹೇಳಿಕೊಡಬೇಕಾಗಿದೆ. ಅಭಿವೃದ್ಧಿಗೆ ಪೂರಕವಾದ ಮೀಮಾಂಸೆಯನ್ನು ಕಟ್ಟಿಕೊಡುವ ಜವಾಬ್ದಾರಿ ಲೇಖಕ, ಬರಹಗಾರನ ಮೇಲಿದೆ. ಪುಸ್ತಕ, ಕೃತಿಗಳು ಉದ್ಯಮವಾಗಿ ವ್ಯಾಪಾರೀಕರಣಕ್ಕೊಳಪಟ್ಟಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಕೂಡ ವ್ಯಾಪಾರೀಕರಣವಾಗಬಹುದು. ಒಂದು ವೇಳೆ ವ್ಯಾಪಾರೀಕರಣವಾದರೂ ಶೋಷಣೆಯಾಗುವುದು ಇನ್ನೂ ಅಪಾಯಕಾರಿ. ಪುಸ್ತಕ ಪ್ರಕಟಣೆಯ ನಂತರ ಸರಕಾಗಿ ಕೂರುವ ಬದಲು ಓದುಗರಿಗೆ ಜ್ಞಾನ ನೀಡುವಂತಾಗಬೇಕು. ವಿದ್ಯಾರ್ಥಿಗಳಿಗೆ ಕೊಡುತ್ತಿರುವ ಪಠ್ಯ ಗಟ್ಟಿತನ ಹೊಂದಿಲ್ಲ. ಶ್ರೇಷ್ಠತೆಯ ಹೆಸರಿನಲ್ಲಿ ಸಂಕೀರ್ಣತೆ ಆಚರಿಸುವವರು ಹೆಚ್ಚಾಗಿದ್ದಾರೆ ಎಂದು ವಿಷಾದಿಸಿದರು.

ಲೇಖಕ ಪ್ರೊ| ಎಚ್. ಲಿಂಗಪ್ಪ ಮಾತನಾಡಿ, ನೂರಾ ಐದು ಪುಟಗಳ ‘ಮೇಘ ಪುಷ್ಪ’ದಲ್ಲಿ ಬದುಕಿನ ಕಥನಗಳ ಚಿತ್ರಣವನ್ನು ಕಾಣಬಹುದು. ಪ್ರೊ| ಟಿ.ವಿ. ಸುರೇಶ ಗುಪ್ತರವರು ಸೃಜನಶೀಲ ಲೇಖಕ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಎಲ್ಲ ಅಂಕಣಗಳನ್ನೂ ಸಾಂದರ್ಭಿಕವಾಗಿ ಬರೆದಿದ್ದಾರೆ. ದುರ್ಗವನ್ನು ಪರಿಚಯಿಸಿದ್ದಾರೆ. ಕೆಲವೊಂದು ಹೋಟೆಲ್ ಹಾಗೂ ಅಲ್ಲಿನ ವಿಶೇಷ ತಿಂಡಿಗಳ ಪರಿಚಯವೂ ಇದರಲ್ಲಿದೆ. ತಮ್ಮ ಬಾಲ್ಯದ ನೆನಪುಗಳನ್ನು ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.

Advertisement

ಚಿನ್ಮೂಲಾದ್ರಿ ಕನ್ನಡ ಬಳಗದ ಅಧ್ಯಕ್ಷ ರಾಮಲಿಂಗ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್‌.ಎನ್‌. ಕಾಶಿ ವಿಶ್ವನಾಥ ಶೆಟ್ಟಿ, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಲ್. ಸುರೇಶ್‌ರಾಜು,

ಆರ್ಯವೈಶ್ಯ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಸುಜಾತಾ ಪ್ರಾಣೇಶ್‌, ಜಿಲ್ಲಾ ಫಾರ್ಮಸಿಸ್ಟ್‌ ಅಸೋಸಿಯೇಷನ್‌ ಅಧ್ಯಕ್ಷ ಪಿ.ಎನ್‌. ಮೋಹನ್‌ಕುಮಾರ್‌ ಗುಪ್ತ, ಕೃತಿಕಾರ ಪ್ರೊ| ಟಿ.ವಿ. ಸುರೇಶ್‌ ಗುಪ್ತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next