Advertisement

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

11:33 PM Oct 20, 2024 | Team Udayavani |

ಬೆಳಗಾವಿ: 407 ಹೆಕ್ಟೇರ್‌ ಪ್ರದೇಶ ಹಾನಿ
ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಚಿತ್ತ ಮಳೆಗೆ ಕೆಲವೆಡೆ ಕಟಾವಿಗೆ ಬಂದಿದ್ದ ಬೆಳೆಗಳು ನೀರು ಪಾಲಾಗಿದ್ದು ರೈತರು ಆತಂಕದಲ್ಲಿದ್ದಾರೆ. 407 ಹೆಕ್ಟೇರ್‌ ಪ್ರದೇಶದ ಮೆಕ್ಕೆಜೋಳ, ಜೋಳ, ಭತ್ತದ ಬೆಳೆಗಳು ಹಾನಿಗೊಳಗಾಗಿವೆ. ಜಿಲ್ಲೆಯಲ್ಲಿ ಈ ಬಾರಿ ಎಲ್ಲ ಬೆಳೆಗಳು ಉತ್ತಮವಾಗಿ ಬೆಳೆದು ನಿಂತಿವೆ. ಆದರೀಗ ಸುರಿಯುತ್ತಿರುವ ಮಳೆಯಿಂದ ಸ್ವಲ್ಪ ಆತಂಕ ಉಂಟಾಗಿದೆ.

Advertisement

ಧಾರವಾಡ: ನೆಲಗಡಲೆ, ಜೋಳ ನಷ್ಟ
ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು ಹಿಂಗಾರು ಬಿತ್ತನೆಗೆ ಅಡ್ಡಿಯಾಗಿದೆ. 25,525 ಹೆಕ್ಟೇರ್‌ ಭೂ ಪ್ರದೇಶದಲ್ಲಿ ಕೃಷಿ-ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. 1950 ಹೆಕ್ಟೇರ್‌ ಪ್ರದೇಶದಲ್ಲಿ ನೆಲಗಡಲೆ, 10,600 ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನ ಜೋಳ, 12,400 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬೆಳೆ ಮಳೆಯಿಂದ ಹಾನಿಯಾಗಿದೆ.

ರಾಯಚೂರು: ಹತ್ತಿ ಬಿಡಿಸಲಾಗದೆ ಪರದಾಟ
ರಾಯಚೂರು ಜಿಲ್ಲೆಯಲ್ಲಿ ಬೆಳೆದ ಈರುಳ್ಳಿ ಕೊಳೆತು ಹೋಗಿದೆ. ಎಲ್ಲೆಡೆ ಬೆಳೆದು ನಿಂತಿರುವ ಹತ್ತಿ ಬಿಡಿಸಬೇಕಿದ್ದು ಸತತ ಮಳೆಯಿಂದ ಅಡ್ಡಿಯುಂಟಾಗಿದೆ. ಜತೆಗೆ ಹತ್ತಿ ಗಿಡಗಳು ಮಳೆಗೆ ನೆಲಕ್ಕೆ ಉರು ಳಿದ್ದು, ಮೊಳಕೆ ಒಡೆಯುವ ಭೀತಿ ಜತೆಗೆ ಹತ್ತಿ ಕೂಡ ಹಾಳಾಗುತ್ತಿದೆ. ನಿರಂತರ ಮಳೆಯಿಂದ ಹೊಲ ಗಳಲ್ಲಿ ನೀರು ಶೇಖರಣೆ ಯಾಗಿದ್ದು, ನೂರಾರು ಎಕರೆ ಈರುಳ್ಳಿ ಕೊಳೆತು ರೈತರು ಪರದಾಡುವಂತಾಗಿದೆ.

ಬಾಗಲಕೋಟೆ: ಕೊಳೆಯುತ್ತಿದೆ ಈರುಳ್ಳಿ
ಬಾಗಲಕೋಟೆ ಜಿಲ್ಲೆಯ ಮುಧೋಳ ಮತ್ತು ಬಾಗಲಕೋಟೆ ತಾಲೂಕಿನಲ್ಲಿ ಈರುಳ್ಳಿ ಬೆಳೆಗೆ ತೀವ್ರ ಹಾನಿಯಾಗಿದೆ. ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು ಈ ಪೈಕಿ ಶೇ.40ರಷ್ಟು ಈರುಳ್ಳಿ ಕಟಾವು ಮಾಡಿ ಹೊಲದಲ್ಲಿ ಹಾಕಿದ್ದು ಮಾರುಕಟ್ಟೆಗೆ ಸಾಗಿಸಲಾಗದೆ ಹೊಲದಲ್ಲಿ ಕೊಳೆಯುತ್ತಿದೆ. ಕೃಷಿ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಕಬ್ಬು ಕೂಡ ನೀರಲ್ಲಿ ನಿಂತಿವೆ. ಕೃಷಿ ಇಲಾಖೆ ಪ್ರಾಥಮಿಕ ಸಮೀಕ್ಷೆ ಪ್ರಕಾರ 2.56 ಕೋಟಿ ರೂ. ಮೊತ್ತದ 652 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿದೆ.

ಹಾವೇರಿ: ತೋಟಗಾರಿಕೆ ಬೆಳೆಗೆ ಹಾನಿ
ಹಾವೇರಿ ಜಿಲ್ಲೆಯಲ್ಲಿ 1338 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 30.25 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದ್ದು ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಳೆಯಿಂದಾಗಿ ಕಟಾ ವಿಗೆ ಬಂದಿದ್ದ ಮೆಕ್ಕೆಜೋಳ, ಶೇಂಗಾ, ಭತ್ತ, ಈರುಳ್ಳಿ, ಸೋಯಾ ಬಿನ್‌, ಮೆಣಸಿನಕಾಯಿ ಬೆಳೆಗಳು ನೀರಿನಲ್ಲಿ ನಿಂತು ಕೊಳೆಯುವ ಸ್ಥಿತಿ ತಲುಪಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.

Advertisement

ಗದಗ: ನದಿ ಪ್ರವಾಹದಿಂದ ನೆರೆ
ಜಿಲ್ಲೆಯಲ್ಲಿ ಬೆಣ್ಣೆಹಳ್ಳ, ಮಲಪ್ರಭಾ ನದಿ ಪ್ರವಾಹದಿಂದ ನರಗುಂದ, ರೋಣ ತಾ.ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು ನಾಶವಾಗಿವೆ. 1,430 ಹೆ.ಮೆಕ್ಕೆಜೋಳ, 600 ಹೆ.ಉಳ್ಳಾಗಡ್ಡಿ, 500 ಹೆ.ಜೋಳ, 250 ಹೆ.ಮೆಣಸಿನಕಾಯಿ, 200 ಹೆ.ಹತ್ತಿ, 20 ಹೆ.ಶೇಂಗಾ, 15 ಹೆ.ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆ ಹಾನಿಯಾಗಿದೆ.

ಕೊಪ್ಪಳ: 78 ಹಳ್ಳಿಗಳಲ್ಲಿ ಹಾನಿ
ಕೊಪ್ಪಳ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ, ನದಿ ನೀರಿನ ಹರಿವಿನಿಂದ 440 ಹೆಕ್ಟೇರ್‌ ಪ್ರದೇಶದಷ್ಟು ಬೆಳೆ ಹಾನಿಯಾಗಿದೆ. ಮುಂಗಾರು ಹಂಗಾಮಿನ ಫಸಲು ರೈತರ ಕೈಗೆ ಬರುವ ವೇಳೆಗೆ ಹಿಂಗಾರಿ ಮಳೆಯ ಅವಾಂತರದಿಂದ ರೈತ ನಷ್ಟ ಅನುಭವಿಸು ವಂತಾಗಿದೆ. ಮುಂಗಾರಿನ ಫಲ ಹಿಂಗಾರು ಮಳೆಯಲ್ಲಿ ಕೊಚ್ಚಿ ಹೋಯ್ತು ಎನ್ನುವ ಪರಿಸ್ಥಿತಿ ಬಂದಿದೆ. ಜಿಲ್ಲೆಯ ಒಟ್ಟು 12 ಹೋಬಳಿ ವ್ಯಾಪ್ತಿಯ 78 ಹಳ್ಳಿಗಳಲ್ಲಿ ಬೆಳೆ ಹಾನಿಯಾಗಿದೆ.

ಚಿಕ್ಕಮಗಳೂರು: ಇಳುವರಿ ಕಡಿಮೆ
ಜಿಲ್ಲೆಯಲ್ಲಿ ಅಡಕೆ, ಕಾಫಿ, ಕಾಳುಮೆಣಸು, ಭತ್ತದ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. ಬಯಲುಸೀಮೆ ಭಾಗದಲ್ಲಿ ಈರುಳ್ಳಿ, ಟೊಮಾಟೊ ಸೇರಿ ಇತರೆ ತರಕಾರಿ ಬೆಳೆ ಗಳು ಕೊಯ್ಲಿಗೆ ಬಂದಿವೆ. ಕೆಲ ರೈತರು ಈರುಳ್ಳಿ ಕೊಯ್ಲು ಮಾಡಿ ಹೊಲದಲ್ಲಿ ಬಿಟ್ಟಿದ್ದು, ಮಳೆ, ಶೀತ ವಾತಾವರಣ ದಿಂದ ಈರುಳ್ಳಿ ಮಣ್ಣು ಪಾಲಾಗುತ್ತಿದೆ. ಟೊಮಾಟೊ, ಕಾಫಿ, ಕಾಳುಮೆಣಸು ಕೂಡ ಮಳೆಯಿಂದ ನಾಶವಾಗುತ್ತಿದೆ.

ಬಳ್ಳಾರಿ: ಮೆಕ್ಕೆಜೋಳಕ್ಕೆ ಭೀತಿ
ಬಳ್ಳಾರಿ ಜಿಲ್ಲೆಯಲ್ಲಿ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳು ಹಾನಿಯಾಗಿವೆ. ಸಂಡೂರು ತಾಲೂಕು ವ್ಯಾಪ್ತಿಯಲ್ಲಿ ಹೂಕೋಸು, ಮೆಕ್ಕೆಜೋಳ, ಟೊಮೆಟೊ, ಬದನೆಕಾಯಿ ಇತರ ಬೆಳೆಗಳು ನಷ್ಟವಾಗಿದೆ. ಇಳುವರಿ ಕುಂಠಿತಗೊಳ್ಳುವ ಭೀತಿ ಎದುರಾಗಿದೆ. ಭತ್ತ ಸಹ ಬೆಳೆದು ನಿಂತಿದ್ದು ಕಟಾವು ಹಂತದಲ್ಲಿದೆ. ಇದೇ ರೀತಿ ಮಳೆ ಸುರಿದರೆ ಅದು ಕೂಡ ಕೈಕೊಡುವ ಸಾಧ್ಯತೆ ಹೆಚ್ಚಿದೆ.

ಶಿವಮೊಗ್ಗ: ಅಡಕೆಗೆ ಕೊಳೆ ಬಾಧೆ
ಶಿವಮೊಗ್ಗದ ಜಿಲ್ಲೆಯ ಭತ್ತಕ್ಕೆ ಕೀಟಬಾಧೆ, ಅಡಕೆಗೆ ಕೊಳೆ ಬಾಧೆ, ಮೆಕ್ಕೆಜೋಳ ಕಟಾವಿಗೆ ತೊಂದರೆಯಾಗಿದೆ. ಮಳೆ ಆಶ್ರಿತ ಭತ್ತಕ್ಕೆ ಅತಿಯಾದ ಮಳೆ, ಅತಿಯಾದ ಬಿಸಿಲಿನಿಂದ ಕೀಟಬಾಧೆ ಹೆಚ್ಚಾಗಿದ್ದು ರೈತರು ಎಷ್ಟೇ ಔಷ ಧ ಹೊಡೆದರೂ ಕಡಿಮೆಯಾಗುತ್ತಿಲ್ಲ.

ಹಾಸನ: ಉದುರುತ್ತಿದೆ ಕಾಫಿ
ಹಾಸನ ಜಿಲ್ಲೆಯಲ್ಲಿ ಕಾಫಿ ಬೆಳೆ ಹಾಗೂ ಮೆಕ್ಕೆಜೋಳದ ಬೆಳೆಗೆ ಹಾನಿಯಾಗಿದೆ. ಮಲೆನಾಡು ತಾಲೂಕುಗಳಾದ ಸಕಲೇಶಪುರ, ಬೇಲೂರು ಹಾಗೂ ಆಲೂರು ಮತ್ತು ಅರಕಲಗೂಡು ತಾಲೂಕಿನ ಕೆಲವು ಹೋಬಳಿಗಳಲ್ಲಿ ಕಾಫಿ ಬೆಳೆಯಲ್ಲಿ ಹಣ್ಣುಗಳಾಗಿದ್ದು, ಇನ್ನು 15 ದಿನಗಳಲ್ಲಿ ಕೊಯ್ಲು ಆರಂಭ ಆಗಬೇಕಾಗಿದೆ. ನಿರಂತರ ಮಳೆಯಿಂದ ಗಿಡಗಳಿಂದ ಕಾಫಿ ಹಣ್ಣು ಉದುರಿ ಮಣ್ಣು ಪಾಲಾಗುತ್ತಿದೆ.

ಚಿತ್ರದುರ್ಗ: ತೆನೆಯಲ್ಲೇ ಮೊಳಕೆ
ಜಿಲ್ಲೆಯಲ್ಲಿ 90,385 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಯಾಗಿದ್ದು ಇಳುವರಿ ಕುಂಠಿತವಾಗಿ ರೈತರಿಗೆ ನಷ್ಟದ ಸಾಧ್ಯತೆ ಹೆಚ್ಚಾಗಿದೆ. ಮೆಕ್ಕೆಜೋಳ, ಹತ್ತಿ, ಶೇಂಗಾ, ಸೂರ್ಯಕಾಂತಿ, ಈರುಳ್ಳಿ, ರಾಗಿ ಪ್ರಮುಖ ಬೆಳೆಗಳಾಗಿದ್ದು, ಕಟಾವಿಗೆ ಬಂದಿರುವ ಮೆಕ್ಕೆಜೋಳ ಒದ್ದೆಯಾಗಿ, ಫಂಗಸ್‌ ಬಂದು ತೆನೆ ಯಲ್ಲೇ ಮೊಳಕೆಯಾಗುವ ಆತಂಕ ಕಾಡುತ್ತಿದೆ.

ದಾವಣಗೆರೆ: ಮೆಕ್ಕೆಜೋಳ ನಷ್ಟ?
ಜಿಲ್ಲೆಯಲ್ಲಿ ಕಟಾವು ಹಂತದಲ್ಲಿರುವ ಮೆಕ್ಕೆಜೋಳ ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಈ ಬಾರಿ ಶೇ.20-30ರಷ್ಟು ಇಳುವರಿ ಕುಂಠಿತ ಸಾಧ್ಯತೆಯಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1.3 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಉತ್ತಮ ಬೆಳೆ ಸಿಗುವ ನಿರೀಕ್ಷೆ ಗರಿಗೆದರಿತ್ತು. ಈಗ ಸುರಿಯುತ್ತಿರುವ ಮಳೆ ನಿರೀಕ್ಷೆಗಳಿಗೆ ತಣ್ಣೀರೆರಚಿದೆ.

ಯಾದಗಿರಿ: ನೆಲಕಚ್ಚಿದ ಭತ್ತದ ಪೈರು
ಯಾದಗಿರಿ ಜಿಲ್ಲೆಯ ಗುರುಮಠಕಲ್‌, ಶಹಾಪುರ, ಸುರಪುರ ಹಾಗೂ ಯಾದಗಿರಿ, ಹುಣಸಗಿ, ವಡಗೇರಾ ತಾಲೂಕುಗಳಲ್ಲಿ ಸುರಿಯುತ್ತಿರುವ ಮಳೆ ಭತ್ತ ಸೇರಿ ಪ್ರಮುಖ ಬೆಳೆಗಳ ಹಾನಿಗೆ ಕಾರಣವಾಗಿದೆ. ಶಹಾಪುರ ಹಾಗೂ ವಡಗೇರಾ ತಾಲೂಕಿನ ಗದ್ದೆಗಳಿಗೆ ನೀರು ನುಗ್ಗಿದ್ದು, ಭತ್ತದ ಪೈರುಗಳು ನೆಲಕಚ್ಚಿವೆ. ಇದರಿಂದ ಉತ್ತಮ ಇಳುವರಿ ನೀರಿಕ್ಷೆಯಲ್ಲಿದ್ದ ಅನ್ನದಾತನ ಆಸೆ ಕಮರಿದೆ. ತೊಗರಿ ಹಾಗೂ ಹತ್ತಿ ಬೆಳೆಗಳಿಗೂ ಮಳೆ ಸಮಸ್ಯೆಯಾಗಿದೆ.

ಕಲಬುರಗಿ: ತೊಗರಿಗೆ ಕಂಟಕ ತಂದ ವರ್ಷಧಾರೆ
ಕ.ಕರ್ನಾಟಕದ ವಾಣಿಜ್ಯ ಬೆಳೆ ತೊಗರಿಗೆ ಕಂಟಕ ತಂದೊಡ್ಡಿದೆ. ತಗ್ಗು ಪ್ರದೇಶದ ಭೂಮಿಯಲ್ಲಿನ ತೊಗರಿ ಮಳೆ ನೀರಲ್ಲಿ ಸಂಪೂರ್ಣ ಹಾನಿಯಾಗಿದೆ. ಶೇ.20ರಿಂದ 25ರಷ್ಟು ಅಂದರೆ ಸುಮಾರು ಒಂದು ಲಕ್ಷ ಎಕರೆಯಷ್ಟು ತೊಗರಿ ಬೆಳೆ ಹಾನಿ ಯಾಗಿದೆ. ತೊಗರಿ ಬೆಳೆ ಈಗ ನೋಡಲು ಸರಿಯಾಗಿ ದ್ದರೂ ಅತಿ ತೇವಾಂಶ ದಿಂದ ಮುಂದಿನ ದಿನಗಳಲ್ಲಿ ನೆಟೆರೋಗಕ್ಕೆ ಒಳಗಾಗುವ ಆತಂಕ ಕಾಣುತ್ತಿದೆ. ಹತ್ತಿ ಬೆಳೆ ನೀರಲ್ಲಿ ನಿಂತು ಹಾನಿಯಾಗಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಬಿತ್ತನೆ ಯಾಗಬೇಕಿದ್ದ ಜೋಳ ಕೂಡ ಬಿತ್ತನೆ ಸಾಧ್ಯವಾಗಿಲ್ಲ.

ದ.ಕನ್ನಡ: ತೋಟಗಾರಿಕಾ ಬೆಳೆಗೆ ಹಾನಿ
ದ.ಕನ್ನಡ ಜಿಲ್ಲೆಯಲ್ಲಿ 61.948 ಹೆಕ್ಟೆರ್‌ ಭತ್ತ ಕೃಷಿಗೆ ಮತ್ತು 24.612 ಹೆಕ್ಟೇರ್‌ ತೋಟ ಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಮಂಗ ಳೂರು ತಾ.29.89 ಹೆಕ್ಟೇರ್‌ ಭತ್ತ ಕೃಷಿ, ತೋಟ ಗಾರಿಕೆ ಬೆಳೆ 3.570 ಹೆ., ಬಂಟ್ವಾಳ ತಾ.1.44 ಹೆ. ಮತ್ತು 7.230 ಹೆ., ಪುತ್ತೂರಿನಲ್ಲಿ 0.57 ಮತ್ತು 3.610 ಹೆ., ಬೆಳ್ತಂಗಡಿ ಯಲ್ಲಿ 13.948 ಮತ್ತು 1.156 ಹೆ., ಸುಳ್ಯ ದಲ್ಲಿ 0 ಮತ್ತು 0.591, ಮೂಡು ಬಿದಿರೆ ಯಲ್ಲಿ 1.77 ಹೆ. ಮತ್ತು 1.535 ಹೆ., ಕಡಬದಲ್ಲಿ 0, 2.020 ಹೆ., ಮೂಲ್ಕಿ ಯಲ್ಲಿ 13.89 ಹೆ. ಮತ್ತು 0 ಹೆ., ಉಳ್ಳಾಲ ದಲ್ಲಿ 0.404 ಹೆ. ಮತ್ತು 4.900 ಹೆಕ್ಟೇರ್‌ ಹಾನಿ.

ತುಮಕೂರು: ರಾಗಿ, ಹತ್ತಿಗೆ ತೊಂದರೆ
ತುಮಕೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ರಾಗಿ ಬೆಳೆಗೆ ಹಾನಿಯಾಗುತ್ತಿದೆ. ತೆನೆ ಬಂದಿರುವ ಕಡೆಗಳಲ್ಲಿ ತೊಂದರೆ ಇಲ್ಲ, ಆದರೆ ತಡವಾಗಿ ರಾಗಿ ಬಿತ್ತನೆ ಮಾಡಿರುವ ಕಡೆಗಳಲ್ಲಿ ರಾಗಿ ಬೆಳೆಗೆ ತೊಂದರೆ ಉಂಟಾಗಿದೆ. ಜೊತೆಗೆ ಶೇಂಗಾ ಬೆಳೆಗೆ ತೀವ್ರ ಮಳೆಯಿಂದ ತೊಂದರೆ ಉಂಟಾಗುತ್ತಿದೆ. ಹತ್ತಿ ಬೆಳೆಗೂ ಹಾನಿಯಾಗಿದೆ, ಜಿÇÉೆಯ ಶಿರಾದಲ್ಲಿ ನಾಲ್ಕು ಎಕರೆ ಹತ್ತಿ ಬೆಳೆ ನಾಶ ವಾಗಿದೆ.

ಕೋಲಾರ: ನೆಲಕಚ್ಚಿದ
ರಾಗಿ, ಟೊಮೆಟೋ ಬೆಳೆ
ಕೋಲಾರ ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚುವಂತ ವಾತಾವರಣ ನಿರ್ಮಾಣವಾಗಿದೆ.
ಜಿಲ್ಲೆಯು ಈವರೆವಿಗೂ ಮಳೆ ಅಭಾವ ಎದುರಿಸುತ್ತಿದ್ದು, ಇದೀಗ ಚಂಡಮಾರುತ ಪ್ರಭಾವದಿಂದ ಸುರಿಯುತ್ತಿರುವ ಜಡಿ ಮಳೆಯು ಪ್ರಮುಖ ತೋಟಗಾರಿಕೆ ಬೆಳೆ ಟೊಮೇಟೋ ಸೇರಿದಂತೆ ಇನ್ನಿತರ ಬೆಳೆಗಳನ್ನು ಹಾನಿಪಡಿಸುತ್ತಿದೆ. ರಾಗಿ ಬೆಳೆಯು ಬಹುತೇಕ ಪೈರು ಬಿಡುವ ಹಂತದಲ್ಲಿ ಒಣಗುತ್ತಿತ್ತು. ಈಗ ಸುರಿಯುತ್ತಿರುವ ಜಡಿ ಮಳೆಯಿಂದ ಚೇತರಿಸಿಕೊಳ್ಳಲಾಗದೆ ನೆಲಕಚ್ಚುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next