Advertisement

ಚೀನಾದ ಕತೆ: ಮೋಡದ ಹುಡುಗಿ

03:50 AM Mar 19, 2017 | Team Udayavani |

ಆಕಾಶದಲ್ಲಿ ಝಿನು ವೆಗಾ ಎಂಬ ಹುಡುಗಿ ದೇವಲೋಕದ ನಕ್ಷತ್ರವಾಗಿದ್ದಳು. ಅವಳು ಕಪ್ಪು ವರ್ಣದ ನೂಲಿನಿಂದ ಮೋಡಗಳನ್ನು ಹೆಣೆಯುತ್ತ ಇದ್ದಳು. ನಿಯು ಲ್ಯಾಂಗ್‌ ಎಂಬ ಹುಡುಗ ಈ ಮೋಡಗಳನ್ನು ಬೆಟ್ಟಗಳ ಕಡೆಗೆ ನೂಕಿ ಮಳೆಯಾಗಿ ಭೂಮಿಯ ಕಡೆಗೆ ಹರಿಸುತ್ತ ಇದ್ದ. ಹೀಗೆ ಬಹುಕಾಲ ನಡೆಯಿತು. ಒಂದು ದಿನ ಅವರು ಒಬ್ಬರನ್ನೊಬ್ಬರು ನೋಡಿಕೊಂಡರು. ಝಿನು ಮುದ್ದಾದ ಮೊಗದ ಸುಂದರ ಹುಡುಗಿ. ನಿಯು ಕೂಡ ಬಲಶಾಲಿಯಾದ ಧೀರ ಹುಡುಗ. ಇಬ್ಬರಿಗೂ ಪರಸ್ಪರ ಮೆಚ್ಚಿಕೆಯಾಯಿತು. ನಿಯು ಅವಳೊಂದಿಗೆ, “”ನಾವಿಬ್ಬರೂ ಮದುವೆ ಮಾಡಿಕೊಳ್ಳೋಣವೇ?” ಎಂದು ಕೇಳಿದ. ಝಿನು, “”ನನಗೇನೋ ಇಷ್ಟವಿದೆ. ಆದರೆ ನಾವು ನಕ್ಷತ್ರಗಳು. ನಮಗೆ ಆಕಾಶದ ಒಡತಿಯೊಬ್ಬಳಿದ್ದಾಳೆ. ಅವಳಲ್ಲಿ ಕೇಳಿ ಸಮ್ಮತಿ ಪಡೆಯದೆ ನಾವು ಒಂದಾಗಬಾರದು. ಈಗಲೇ ಹೋಗಿ ನಮ್ಮ ಪ್ರೀತಿಯನ್ನು ಅವಳ ಬಳಿ ಪ್ರಸ್ತಾಪ ಮಾಡೋಣ” ಎಂದಳು.

Advertisement

ಆದರೆ ಆಕಾಶದ ಒಡತಿ ಅವರಿಬ್ಬರೂ ಮದುವೆಯಾ ಗಲು ಒಪ್ಪಿಕೊಳ್ಳಲಿಲ್ಲ. “”ಪ್ರೀತಿ, ಪ್ರೇಮ ಇದೆಲ್ಲವೂ ಭೂಲೋಕದ ಮನುಷ್ಯರಿಗೆ ಸೀಮಿತವಾ ದುದು. ನೀವು ಮದುವೆ ಮಾಡಿಕೊಂಡರೆ ಆಕಾಶದಲ್ಲಿ ಮೋಡಗಳನ್ನು ಹೆಣೆಯುವ ಕೆಲಸ ಯಾರು ಮಾಡುತ್ತಾರೆ? ಮಳೆಯಿಲ್ಲದೆ ಭೂಮಿಯ ಜೀವರಾಶಿ ನಾಶವಾಗುವುದನ್ನು ನಾನು ಸಹಿಸುವುದಿಲ್ಲ. ಸುಮ್ಮನಿರಿ” ಎಂದಳು. ಆದರೂ ನಿಯುಗೆ ಝಿನುವನ್ನು ಬಿಡಲು ಇಷ್ಟವಿರಲಿಲ್ಲ. “”ಅಮ್ಮಾ, ಹೀಗೆ ಹೇಳಬೇಡಿ. ನಮ್ಮ ಮದುವೆಗೆ ಅನುಮತಿ ನೀಡಿ” ಎಂದು ಮತ್ತೆ ಮತ್ತೆ ಬೇಡಿಕೊಂಡ. ಆಕಾಶದ ಒಡತಿಗೆ ತಾಳಲಾಗದ ಕೋಪ ಬಂತು. “”ನನ್ನ ಮಾತಿಗೆ ಒಪ್ಪಿಕೊಳ್ಳದ ತಪ್ಪಿಗೆ ನೀನು ಭೂಮಿಯಲ್ಲಿ ಒಬ್ಬ ರೈತನ ಮಗನಾಗಿ ಜನಿಸಿ ಕುರಿ ಕಾಯಬೇಕು. ಝಿನು ನನ್ನ ಮಾತನ್ನು ಮೀರದ ಕಾರಣ ಅವಳು ಇಲ್ಲಿಯೇ ಇರಲಿ. ಆದರೆ ನೀನು ಸದಾಕಾಲ ವಿರಹದ ದುಃಖ ವನ್ನು ಅನುಭವಿಸಬೇಕು” ಎಂದು ಶಪಿಸಿ ಭೂಮಿಯೆಡೆಗೆ ತಳ್ಳಿಬಿಟ್ಟಳು. ಝಿನು ಓರ್ವಳೇ ಆಕಾಶದಲ್ಲಿ ಮೋಡಗಳನ್ನು ಹೆಣೆದುಕೊಂಡಿದ್ದಳು.

ನಿಯು ಭೂಮಿಯಲ್ಲಿ ರೈತನ ಮನೆಯಲ್ಲಿ ಜನಿಸಿದ. ಕುರಿ ಹಿಂಡನ್ನು ಮೇಯಿಸಿಕೊಂಡು ಹೆಡ್ಡನ ಹಾಗೆ ತುಂಬ ವರ್ಷಗಳನ್ನು ಕಳೆದ. ಹೀಗಿರಲು ಅವನ ತಂದೆ ತೀರಿಕೊಂಡ. ರೈತನ ಹಿರಿಯ ಮಗ ಗುಣದಲ್ಲಿ ತುಂಬ ಕೆಟ್ಟವನಾಗಿದ್ದ. ಅವನು ತಂದೆ ಗಳಿಸಿಟ್ಟ ಅಪಾರ ಧನರಾಶಿಯನ್ನು ತಾನೊಬ್ಬನೇ ತೆಗೆದುಕೊಂಡ. ಒಂದು ಮುದಿ ದನವನ್ನು ನಿಯುಗೆ ನೀಡಿದ. “”ಇದಿಷ್ಟೇ ನಿನ್ನ ಪಾಲಿಗೆ ಸಿಗುವುದು. ಇದನ್ನು ತೆಗೆದುಕೊಂಡು ದೂರದ ಕಾಡಿಗೆ ಹೋಗಿ ಅಲ್ಲಿಯೇ ಇದ್ದುಕೋ” ಎಂದು ಹೇಳಿ ಮನೆಯಿಂದ ಓಡಿಸಿದ. ನಿಯು ಮುದಿ ದನಕ್ಕೆ ಹುಲ್ಲು, ನೀರು ಕೊಡುತ್ತ ಪ್ರೀತಿಯಿಂದಲೇ ಕಾಡಿಗೆ ಕರೆದುಕೊಂಡು ಬಂದ. ದನ ಕನಿಕರದಿಂದ ಅವನೆಡೆಗೆ ನೋಡುತ್ತ, “”ನನ್ನನ್ನು ಮಮತೆಯಿಂದ ನೋಡಿಕೊಂಡ ನಿನ್ನ ಋಣ ತೀರಿಸಬೇಕಾಗಿದೆ. ಇವತ್ತು ರಾತ್ರೆ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಆಕಾಶದಿಂದ ನಕ್ಷತ್ರಗಳು ಸುಂದರ ಯುವತಿಯರಾಗಿ ಭೂಮಿಗೆ ಬರುತ್ತವೆ. ಸಮೀಪದ ಕೊಳದಲ್ಲಿ ಜಲಕ್ರೀಡೆಯಾಡುತ್ತವೆ. ನೀನು ಅಲ್ಲಿ ಎಲ್ಲಾದರೂ ಅಡಗಿ ಕುಳಿತುಕೋ. ಅವರೆಲ್ಲ ಕೊಳದ ದಡದಲ್ಲಿ ತಮ್ಮ ನಿಲುವಂಗಿಗಳನ್ನು ರಾಶಿ ಹಾಕಿರುತ್ತಾರೆ. ಅದರಿಂದ ಒಂದು ಕೆಂಪು ನಿಲುವಂಗಿಯನ್ನು ಎತ್ತಿ ಮರೆ ಮಾಡಿಕೋ. ಆ ಅಂಗಿ ನಿನ್ನ ಪ್ರೀತಿಯನ್ನು ಗೆದ್ದ ಝಿನು ವೆಗಾ ಎಂಬ ಹುಡುಗಿಯದು. ನಿಲುವಂಗಿ ಸಿಗದೆ ಅವಳಿಗೆ ಸ್ವರ್ಗಕ್ಕೆ ಹೋಗಲು ಅವಕಾಶವಿಲ್ಲ. ಅವಳು ನಿನ್ನ ಹೆಂಡತಿಯಾಗಿ ನಿನ್ನೊಂದಿಗಿರುತ್ತಾಳೆ” ಎಂದು ಹೇಳಿತು.

ಅದೇ ಪ್ರಕಾರ ನಿಯು ಆಕಾಶದಿಂದ ಬಂದ ಝಿನುವಿನ ನಿಲುವಂಗಿಯನ್ನು ಅಪಹರಿಸಿದ. ವಿಧಿಯಿಲ್ಲದೆ ಅವಳು ಅವನ ಮನೆಗೆ ಬಂದು ಅವನೊಂದಿಗೆ ಸಂಸಾರ ಮಾಡಿದಳು. ಒಂದು ದಿನ ದನವು ನಿಯುವಿನೊಂದಿಗೆ, “”ನನ್ನ ಜೀವನದ ಅಂತ್ಯಕಾಲವು ಸಮೀಪಿಸಿದೆ. ನಾನು ಸತ್ತ ಬಳಿಕ ನೀನು ನನ್ನ ಚರ್ಮವನ್ನು ಸುಲಿದು ಅದರಿಂದ ನಿನಗೆ, ನಿನ್ನ ಹೆಂಡತಿಗೆ ಹಾಗೆಯೇ ಮುಂದೆ ಜನಿಸುವ ಇಬ್ಬರು ಮಕ್ಕಳಿಗೆ ಒಟ್ಟಿಗೆ ಧರಿಸಲು ಬೇಕಾದಷ್ಟು ದೊಡ್ಡ ನಿಲುವಂಗಿಯನ್ನು ಹೊಲಿದುಕೋ. ಆದರೆ ಯಾವ ಕಾಣಕ್ಕೂ ನಿನ್ನ ಹೆಂಡತಿಯ ಕೆಂಪು ಬಣ್ಣದ ನಿಲುವಂಗಿ ಅವಳ ದೃಷ್ಟಿಗೆ ಬೀಳದಂತೆ ನೋಡಿಕೊಳ್ಳಬೇಕು. ಅದನ್ನು ಕಂಡರೆ ಅವಳು ಇಲ್ಲಿರಲು ಒಪ್ಪುವುದಿಲ್ಲ, ಹೊರಟು ಹೋಗುತ್ತಾಳೆ” ಎಂದು ಹೇಳಿ ಕಣ್ಮುಚ್ಚಿತು. ನಿಯು ದನದ ಮಾತಿನಂತೆ ಅದರ ಚರ್ಮವನ್ನು ಸುಲಿದು ನಿಲುವಂಗಿಯನ್ನು ತಯಾರಿಸಿದ. ಮುಂದೆ ಅವರಿಬ್ಬರಿಗೂ ಇಬ್ಬರು ಮಕ್ಕಳು ಜನಿಸಿದರು. 

ಹಲವು ವರ್ಷಗಳು ಕಳೆದವು. ಒಂದು ದಿನ ನಿಯು ಬಿದಿರಕ್ಕಿ ತರಲು ಕಾಡಿಗೆ ಹೋಗಿದ್ದ. ಮನೆಯಲ್ಲಿದ್ದ ಝಿನುವಿಗೆ ಅವನು ಅಡಗಿಸಿಟ್ಟಿದ್ದ ತನ್ನ ಕೆಂಪು ನಿಲುವಂಗಿ ಕಾಣಿಸಿತು. ಆಗ ಅವಳಿಗೆ ತಾನು ದೇವಲೋಕದ ಕಡೆಗೆ ಹೋಗಬೇಕೆಂಬ ಬಯಕೆಯುಂಟಾಯಿತು. ನಿಲುವಂಗಿಯನ್ನು ಧರಿಸಿ ಹೊರಡಲು ಸಿದ್ಧಳಾದಳು. ಅಷ್ಟರಲ್ಲಿ ಕಾಡಿಗೆ ಹೋಗಿದ್ದ ನಿಯು ಮರಳಿಬಂದ. ನಡೆದುದನ್ನು ತಿಳಿದು, “”ನೀನಿಲ್ಲದೆ ನನಗೆ ಇಲ್ಲಿ ಬದುಕುವ ಶಕ್ತಿಯಿಲ್ಲ. ನಿನ್ನೊಂದಿಗೆ ಮಕ್ಕಳನ್ನೂ ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು. ನಮ್ಮ ದನದ ಚರ್ಮದಿಂದ ತಯಾರಿಸಿದ ನಿಲುವಂಗಿಯನ್ನು ನಾವು ಧರಿಸಿಕೊಳ್ಳುತ್ತೇವೆ. ನೀನು ಕೆಂಪು ನಿಲುವಂಗಿ ಧರಿಸಿ ನಮ್ಮ ಕೈ ಹಿಡಿದುಕೋ. ಆಗ ನಿನ್ನೊಂದಿಗೇ ನಮಗೂ ಅಲ್ಲಿಗೆ ಹೋಗುವ ಸಾಮರ್ಥ್ಯ ಲಭಿಸುತ್ತದೆ” ಎಂದು ಹೇಳಿದ.

Advertisement

ಝಿನು ಈ ಮಾತಿಗೆ ಒಪ್ಪಿದಳು. ನಿಯು ಚರ್ಮದ ನಿಲುವಂಗಿ ಧರಿಸಿ, ಒಳಗೆ ಮಕ್ಕಳನ್ನು ಸೇರಿಸಿಕೊಂಡ. ಝಿನು ಗಂಡನ ಕೈ ಹಿಡಿದುಕೊಂಡಳು. ಆಕಾಶ ಮಾರ್ಗದಲ್ಲಿ ಹಾರುವ ಶಕ್ತಿ ಅವಳಿಗೆ ಬಂದಿತ್ತು. ಅವರು ಸಂಚರಿಸುತ್ತ ದೇವಲೋಕಕ್ಕೆ ಹೋಗುತ್ತಿದ್ದಾಗ ಪ್ರಮಾದವೊಂದು ನಡೆಯಿತು. ನಿಲುವಂಗಿಯೊಳಗಿದ್ದ  ನಿಯು ಜಾರಿ ಭೂಮಿಗೆ ಬಿದ್ದುಬಿಟ್ಟ. ಝಿನು ಮಕ್ಕಳೊಂದಿಗೆ ಸ್ವರ್ಗ ಸೇರಿದಳು. ಮತ್ತೆ ಮೋಡಗಳನ್ನು ಹೆಣೆಯುವ ಕಾಯಕದಲ್ಲಿ ತೊಡಗಿದಳು. ಆದರೂ ಗಂಡನ ಮೇಲೆ ಅವಳಿಗೆ ಅತಿಶಯ ಪ್ರೀತಿ ಇತ್ತು. ಆಕಾಶದ ಒಡತಿ ಇದನ್ನು ಅರ್ಥ ಮಾಡಿಕೊಂಡಳು. ಪ್ರತೀ ವರ್ಷ ಏಳನೆಯ ತಿಂಗಳ ಏಳನೆಯ ದಿನದಂದು ರಾತ್ರೆ ನಕ್ಷತ್ರಗಳಿಂದ ಭೂಮಿಯ ವರೆಗೆ ಒಂದು ಸೇತುವೆ ಕಟ್ಟಿದಳು. ಅದರಲ್ಲಿ ಝಿನು ಮಕ್ಕಳೊಂದಿಗೆ ಭೂಮಿಗೆ ಹೋಗಿ ಗಂಡನ ಜೊತೆಗೆ ಒಂದು ದಿನ ಇದ್ದು ಬರಲು ಅವಕಾಶ ಮಾಡಿಕೊಟ್ಟಳು.

ಪರಾಶರ

Advertisement

Udayavani is now on Telegram. Click here to join our channel and stay updated with the latest news.

Next