Advertisement

“ಆ” ಸಮುದಾಯದ ನಿರ್ಮೂಲನೆಗೆ ಚೀನಾ ಸಂಚು, ಮಕ್ಕಳಾಗದಂತೆ ಮಹಿಳೆಯರಿಗೆ ಆಪರೇಷನ್!

04:36 PM Mar 09, 2021 | Team Udayavani |

ಭಾರತ ಸೇರಿ ರಷ್ಯಾ, ಖಜಕಿಸ್ತಾನ, ಕಿರ್ಗಿಸ್ತಾನ, ಪಾಕಿಸ್ತಾನ, ತಜಕಿಸ್ತಾನ, ಮಂಗೋಲಿಯ, ಅಫ್ಘಾನಿಸ್ತಾನಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಚೀನಾದ ವಾಯುವ್ಯ ಭಾಗದಲ್ಲಿರುವ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಸುಮಾರು 50 ಲಕ್ಷ ಸಂಖ್ಯೆಯಲ್ಲಿ ಇರುವ ಉಯಿಗುರ್ ಮುಸ್ಲಿಮರಿಗೂ ಹಾಗೂ ಚೀನಾಗೂ ಇರುವ ದ್ವೇಷಗಳೇನು..?

Advertisement

ಸೆಂಟ್ರಲ್ ಏಷ್ಯಾದ ಹಲವು ಪುಟ್ಟ ಪುಟ್ಟ ದೇಶಗಳಲ್ಲಿ ಸಾಮಾನ್ಯವಾಗಿ ಉಯಿಗುರ್ ಮುಸ್ಲಿಮರಿದ್ದಾರೆ. ಆದರೇ, ಚೀನಾದ ವಾಯುವ್ಯ ಭಾಗವಾಗಿರುವ ಕ್ಸಿನ್ ಜಿಯಾಂಗ್ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಚೀನಾದಲ್ಲಿ ಈ ಉಯಿಗುರ್ ಮುಸ್ಲಿಮರು ಅಲ್ಪ ಸಂಖ್ಯಾತರು. ಆರಂಭದಿಂದಲೂ ಉಯಿಗುರ್ ಮುಸ್ಲಿಮರ ಮೇಲೆ ಭಿನ್ನ ಧೊರಣೆಯನ್ನು ಚೀನಾ ತೋರಿಸುತ್ತಲೇ ಬಂದಿದೆ.

ಓದಿ :  ಮಿಸ್ ಇಂಡಿಯಾ ಫೈನಲಿಸ್ಟ್ ಜೊತೆ ಜಸ್ಪ್ರೀತ್ ಬುಮ್ರಾ ಮದುವೆ? ಯಾರು ಆ ಚೆಲುವೆ?

ಉಯಿಗುರ್ ಮುಸ್ಲೀಮರ ಮೇಲೆ ಯಾಕಿಷ್ಟು ಕೋಪ..? ಉಯಿಗುರ್ ಮುಸ್ಲೀಮರ ಮೇಲೆ ಚೀನಾ ಹಿಂದಿನಿಂದಲೂ ದಾಳಿ ಮಾಡುತ್ತಿರುವುದರ ಉದ್ದೇಶವೇನು..? ಉಯಿಗುರ್ ಮುಸ್ಲೀಮರು ಮತ್ತು ಚೀನಾ ದೇಶದ ಆಡಳಿತದ ಬಗ್ಗೆ ಇತಿಹಾಸ ಏನು ಹೇಳುತ್ತದೆ..?

ಬುಡಕಟ್ಟು ಜನಾಂಗದವರಂತೆ, ಆದಿವಾಸಿಗಳಂತೆ ಬದುಕುತ್ತಿದ್ದ ಉಯಿಗುರ್ ಮುಸ್ಲಿಮರು ಟರ್ಕಿ ಮೂಲದವರು. ಹತ್ತನೇ ಶತಮಾನದಲ್ಲಿ ಉಯಿಗುರ್ ಮುಸ್ಲಿಮರು ಇಸ್ಲಾಂ ಧರ್ಮ ಸಿದ್ಧಾಂತದ ಪ್ರಭಾವಕ್ಕೊಳಗಾದವರು, ಹದಿನಾರನೇ ಶತಮಾನದಲ್ಲಿ ಸಂಪೂರ್ಣವಾಗಿ ಇಸ್ಲಾಂ ಧರ್ಮದವರಾಗಿ ಗುರುತಿಸಿಕೊಂಡಿದ್ದರು.

Advertisement

ತಮ್ಮ ಮೂಲ ನೆಲೆ ಟರ್ಕಿಯಲ್ಲಿ ಕಂಡ ಕೆಲವು ವ್ಯವಸ್ಥೆಯಲ್ಲಿನ ಪರಿವರ್ತನೆಯಿಂದಾಗಿ ಮಂಗೋಲಿಯಾಗೆ ಬಂದ ಈ ಉಯಿಗುರ್ ಮುಸ್ಲೀಮರ ಮೇಲೆ ಭೀಕರ ದಾಳಿ ನಡೆಯಿತು.  ಮಂಗೋಲಿಯಾದ ನೆಲದಿಂದ ಪಾದಕ್ಕಿತ್ತು ನಿರ್ಜನ ಪ್ರದೇಶವಾಗಿದ್ದ ಚೀನಾದ ಶಿಯು ಎಂದು ಕರೆಯಲ್ಪಡುತ್ತಿದ್ದ ಕ್ಸಿನ್ ಜಿಯಾಂಗ್ ಗೆ ಬಂದು ನೆಲೆ ನಿಂತರು ಈ ಉಯಿಗುರ್ ಮುಸ್ಲಿಮರು.

ಉಯಿಗುರ್ ಮುಸ್ಲಿಮರನ್ನು ಕಂಡರೆ ಚೀನಾಗೆ ಯಾಕೆ ಆಗುತ್ತಿರಲಿಲ್ಲ..!?   

ಆಗಿನ ಕಾಲದಲ್ಲಿ ಚೀನಾದಿಂದ ಪ್ರತ್ಯೇಕವಾಗಿಯೇ ಉಳಿದುಬಿಟ್ಟಿದ್ದ ಕ್ಸಿನ್ ಜಿಯಾಂಗ್ ನಲ್ಲಿ ನೆಲೆ ಕಂಡುಕೊಂಡಿದ್ದ, ಟರ್ಕಿಯಾಗಿ ಮಂಗೋಲಿಯಾದಿಂದ ವಲಸೆ ಬಂದ ಉಯಿಗುರ್ ಮುಸ್ಲಿಮರ ಆಚರಣೆ, ಸಂಪ್ರದಾಯ, ಪದ್ಧತಿಗಳು, ಸಂಸ್ಕೃತಿಗಳು ಚೀನಾಗಿಂತ ವಿಭಿನ್ನವಾಗಿತ್ತು. ಚೀನಾದಿಂದ ಪ್ರತ್ಯೇಕವಾಗಿ ಸ್ವಾತಂತ್ರ್ಯವಾಗಲು ಉಯಿಗುರ್ ಮುಸ್ಲಿಮರು ಬಯಸಿದ್ದರು.

1930ರ ದಶಕದಲ್ಲಿ ಸಿವಿಲ್ ವಾರ್ ಆರಂಭವಾಯಿತು . ಅಂದಿನ ಚೀನಾದ ರಾಜ ಕ್ಯುಮಿತಾಂಗ್ ಹಾಗೂ ಕಮ್ಯೂನಿಷ್ಟರ ನಡುವೆ ನಡೆದ ಕದನದಲ್ಲಿ 1949ರಲ್ಲಿ ಕ್ಸಿನ್ ಜಿಯಾಂಗ್ ಸ್ವತಂತ್ರವಾಯಿತು. ತದನಂತರ ಕ್ಸಿನ್ ಜಿಯಾಂಗ್ ನ್ನು ಪೂರ್ವ ತುರ್ಕಿಸ್ತಾನ್ ಎಂದು ಮರುನಾಮಕರಣ ಮಾಡಲಾಯಿತು. ಮಾವೋತ್ಸೆ ತುಂಗ್,  ಚೀನಾದ  ಅಧಿಕಾರವನ್ನು ಪಡೆದಾಗ ಕ್ಸಿನ್ ಜಿಯಾಂಗ್ ನ್ನು ಚೀನಾಗೆ ಮತ್ತೆ ಸೇರಿಸಿಕೊಂಡ.

ಚೀನಾ ಅಂದಾಕ್ಷಣವೇ 1949ರ ಕ್ರಾಂತಿ, ನಂತರದ ಸಾಂಸ್ಕೃತಿಕ ಕ್ರಾಂತಿಯ  ನೆನಪಾಗುತ್ತದೆ. 1949ರಲ್ಲಿ ಚೀನಾ ಕಮ್ಯೂನಿಷ್ಟ್ ಪಕ್ಷದ ನೇತೃತ್ವದಲ್ಲಿ ಕಾಂತ್ರಿಯಾಯಿತು. ಅದನ್ನು ನವ ಪ್ರಜಾಸತ್ತಾತ್ಮಕ ಕ್ರಾಂತಿ ಎಂದು ಕೂಡ ಮಾವೋತ್ಸೆ ತುಂಗ್ ಬಣ್ಣಿಸಿದರು. ಚೀನಾದಂತಹ ಅರೆ ಊಳಿಗಮಾನ್ಯ, ಅರೆ ವಸಾಹುತುಶಾಹಿ ವ್ಯವಸ್ಥೆಯನ್ನು ಬದಲಾಯಿಸಲು ಕಮ್ಯೂನಿಷ್ಟ್ ಕ್ರಾಂತಿಗಳು ಈ ಪದ್ದತಿಯನ್ನು ಅನುಸರಿಸಬೇಕೆಂದು ಮಾವೊ ಸಿದ್ಧಾಂತೀಕರಿಸಿದ್ದನ್ನು ನಾವು ನೆನಪಿಸಿಕೊಳ್ಳಬಹುದು.

ಓದಿ : 154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಕಮಲ್ ಹಾಸನ್ ಮಕ್ಕಳ್‌ ನೀಧಿ ಮಯಂ

ತನ್ನ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಕ್ಸಿನ್ ಜಿಯಾಂಗ್ ಚೀನಾಗೆ ಅನಿವಾರ್ಯವಾಗಿತ್ತು, ಉಯಿಗುರ್ ಮುಸ್ಲೀಮರ ಆದಿವಾಸಿ ಹಾಗೂ ಇಸ್ಲಾಂ ಅರೆ ಪ್ರಭಾವಿತ  ಸಂಸ್ಕೃತಿ ಹಾಗೂ ಪದ್ಧತಿಗಳ ಬಗ್ಗೆ ಚೀನಾಗೆ ಸಂಪೂರ್ಣ ಭಿನ್ನಮತವಿದ್ದಿತ್ತು.

ಬಹಳ ಪ್ರಮುಖವಾಗಿ ನಾವು ಗಮನಿಸಬೇಕಾದ ವಿಚಾರ ಏನೆಂದರೇ, ಮಾವೋತ್ಸೆ ತುಂಗ್ ತನ್ನ ಕೊನೆಯ ದಿನಗಳಲ್ಲಿ ಸಮಾಜವಾದಿ ಸಮಾಜ ನಿರ್ಮಾಣದ ಪ್ರಕ್ರಿಯೆಗಳಲ್ಲಿ ಪಕ್ಷದ ಸಮಿತಿಗಳಲ್ಲಿ ಬಂಡವಾಳ ಶಾಹಿ ಮೌಲ್ಯಗಳು, ಆಚರಣೆಗಳು ಮೇಲುಗೈ ಸಾಧಿಸುತ್ತಿರುವುದು ಹಾಗೆಯೇ ಖಾಸಗಿ ಹಿತಾಸಕ್ತಿಗಳ ಬೆಳವಣಿಗೆಯಾಗುತ್ತಿರುವುದನ್ನು ಗ್ರಹಿಸಿ  ಮಾವೋತ್ಸೆ ತುಂಗ್ ಸಾಂಸ್ಕೃತಿಕ ಕ್ರಾಂತಿಗೆ ಕರೆಕೊಟ್ಟಿದ್ದರು. ಕಮ್ಯೂನಿಷ್ಟ್ ಚರಿತ್ರೆಯಲ್ಲಿಯೇ ಇದೊಂದು ಹೊಸ ಪ್ರಯೋಗವಾಗಿತ್ತು, ಈ ಪ್ರಯೋಗದ ಸಂದರ್ಭದಲ್ಲೇ ಮಾವೋತ್ಸೆ ತುಂಗ್ ನಿಧನರಾದರು. ಹಾಗೂ ಸಾಂಸ್ಕೃತಿಕ ಕ್ರಾಂತಿಯ ಪ್ರಕ್ರಿಯೆಗಳಿಗೆ ಬಾರಿ ಪ್ರಮಾಣದಲ್ಲಿ ಧಕ್ಕೆಯಾಯಿತು. ಇದು ಉಯಿಗುರ್ ಮುಸ್ಲೀಮರ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರಿತು.

ಮಸೀದಿಯನ್ನು ಒಡೆದು ಹಾಕಲಾಯಿತು, ಕಮ್ಯೂನಿಷ್ಟ್ ಪಕ್ಷದ ಕಚೇರಿಯನ್ನು ಸ್ಥಾಪಿಸಲಾಯಿತು. ಉಯಿಗುರ್ ಮುಸ್ಲೀಮರು ಅನುಸರಿಸುತ್ತಿದ್ದ ಧಾರ್ಮಿಕ ಹೊತ್ತಿಗೆಗಳಿಗೆ ಬೆಂಕಿಯಿಡಲಾಯಿತು. ಇಷ್ಟೇ ಏಕೆ ಇತ್ತೀಚಿನ ವರ್ಷಗಳಲ್ಲಿನ ಬೆಳವಣಿಗೆಯನ್ನು ಗಮನಿಸುವುದಾದರೇ, ಉಯಿಗುರ್ ಮುಸ್ಲೀಮರನ್ನು ಹತ್ತಿಕ್ಕಲು ಕಮ್ಯೂನಿಷ್ಟ್ ಪಕ್ಷ ಮಸೀದಿಯನ್ನು ಕೆಡವಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿತ್ತು. 1966 ಹಾಗೂ 1976 ರ ಅವಧಿಯಲ್ಲಿ ಚೀನಾದ ಅನೇಕ ಮಸೀದಿಗಳನ್ನು ಕಮ್ಯೂನಿಷ್ಟ್ ಪಕ್ಷ ಸಾಂಸ್ಕೃತಿಕ ಕ್ರಾಂತಿಯ ಹೆಸರಿನಲ್ಲಿ ಧ್ವಂಸ ಮಾಡಿತು. ಚೀನಾದಲ್ಲಿ ಅಕ್ಷರಶಃ ಸಾಂಸ್ಕೃತಿಕ ಕ್ರಾಂತಿಯ ಹೆಸರಿನಲ್ಲಿ ದಬ್ಬಾಳಿಕೆ ನಡೆದಿತ್ತು.

ಓದಿ : ಪುತ್ತೂರು: ಯುವತಿಯರೇ ಹೆಚ್ಚಿರುವ ಬಸ್‌ನಲ್ಲಿ ಅಸಭ್ಯ ವರ್ತನೆ : ಆರೋಪಿ ಬಂಧನ

ಇದು ಚೀನಾದಲ್ಲಿ ಅಲ್ಪ ಸಂಖ್ಯಾತರ ಮೇಲೆ ಕಮ್ಯೂನಿಷ್ಟ್ ಪಕ್ಷ ಮಾಡಿದ ದಾಳಿಗೆ ಒಂದು ಉದಾಹರಣೆ ಅಷ್ಟೇ. ಮಸೀದಿಯನ್ನು ಧ್ವಂಸಗೊಳಿಸಿದಲ್ಲಿ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ಅಗತ್ಯವಿಲ್ಲವಾಗಿತ್ತು ಇದು ಅಲ್ಪ ಸಂಖ್ಯಾತರ ಮೇಲೆ ಕಮ್ಯೂನಿಷ್ಟ್ ಸರ್ಕಾರ ಮಾಡುತ್ತಿರುವ ನಿರಂತರ ದಾಳಿ ಅಲ್ಲದೇ ಮತ್ತೇನಲ್ಲ ಎಂದು ಆ ಭಾಗದ ಸ್ಥಳೀಯರು ಹೇಳಿಕೊಂಡಿದ್ದ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದವು.

ಚೀನಿಯ ಹಾನ್ ಸಮುದಾಯದವರನ್ನು ಆ ಭಾಗದಲ್ಲಿ ವಾಸಿಸುವಂತೆ ಮಾಡಿ ಕಮ್ಯೂನಿಷ್ಟ್ ಚೀನಾ ಉಯಿಗುರ್ ಮುಸ್ಲೀಮರ ಮೇಲೆ ಮತ್ತೆ ಪರೋಕ್ಷವಾಗಿ ದಾಳಿ ಮಾಡಿದ್ದನ್ನು ಕೂಡ ನಾವು ಇತಿಹಾಸದಲ್ಲಿ ಗಮನಿಸಬಹುದು.

ಉಯಿಗುರ್ ಮುಸ್ಲೀಮರನ್ನು ಮತಾಂತರಗೊಳಿಸುವಂತೆ ಮತ್ತೆ ಚೀನಾ ದಬ್ಬಾಳಿಕೆ ಮಾಡಲು ಮುಂದಾದದನ್ನು ಗಮನಿಸಬೇಕಾಗುತ್ತದೆ. ಅಲ್ಪ ಸಂಖ್ಯಾತರಾಗಿದ್ದ ಉಯಿಗುರ್ ಮುಸ್ಲೀಮರಲ್ಲಿ ಕೆಲವರು ಉಗ್ರತ್ವ ಧೋರಣೆಗೆ ಒಳಗಾದರು.

1990 ರಲ್ಲಿ ಸೋವಿಯತ್ ಒಕ್ಕೂಟ ಪತನವಾದಾಗ ಹಲವು ದೇಶಗಳು ಸೋವಿಯತ್ ಒಕ್ಕೂಟದಿಂದ ಹೊರಬಂದು ಸ್ವತಂತ್ರ ರಾಷ್ಟ್ರಗಳಾದವು. ಇದು ಉಯಿಗುರ್ ಮುಸ್ಲೀಮರ ಮೇಲೂ ಪ್ರಭಾವ ಬೀರಿತು. ಉಯಿಗುರ್ ಸಮುದಾಯದವರಲ್ಲಿ ಪತ್ಯೇಕ ರಾಷ್ಟ್ರದ ಚಿಂತನೆ ಹುಟ್ಟಿಸುವಂತೆ ಮಾಡಿದ್ದಲ್ಲದೇ, ಅದನ್ನು ಕಾರ್ಯ ರೂಪಕ್ಕೆ ತರುವಲ್ಲಿ ಉಯಿಗುರ್ ಮುಸ್ಲೀಮರು ಗುಂಪುಗಳನ್ನು ಕಟ್ಟಿಕೊಂಡರು, ಪತ್ಯೇಕತವಾದಗಳನ್ನು ಮಾಡುವುದಕ್ಕೆ ಆರಂಭಿಸಿದರು. ಸೆಂಟ್ರಲ್ ಏಷ್ಯಾದ ಹಲವು ರಾಷ್ಟ್ರಗಳಲ್ಲಿದ್ದ ಉಯಿಗುರ್ ಮುಸ್ಲೀಮರ ಬೆಂಬಲವನ್ನು ಪಡೆದುಕೊಂಡರು, ಉಯಿಗುರ್ ಮುಸ್ಲೀಮರ ಪತ್ಯೇಕತೆಯ ಸಿದ್ಧಾಂತ ಗಟ್ಟಿಯಾಗುತ್ತಿರುವಾಗ ಚೀನಾದ ಕಮ್ಯೂನಿಷ್ಟ್ ಸರ್ಕಾರ ಅಲ್ಲಿ ದಮನಕಾರಿ ನೀತಿಯನ್ನು ಮತ್ತಷ್ಟು ಭದ್ರಗೊಳಿಸಲು ಮುಂದಾಯಿತು.

ಓದಿ : 2+3+4 ಫಾರ್ಮುಲಾದ ಬಗ್ಗೆ ಕೋರ್ಟ್ ಗೆ ಹೋದವರಿಗೆ ಗೊತ್ತಿರಬಹುದು: ಕುಮಾರಸ್ವಾಮಿ

ಉಯಿಗುರ್ ಮುಸ್ಲೀಮರು ಹಾಗೂ ಚೀನಿ ಹಾನ್ ಸಮುದಾಯದವರೊಂದಿಗೆ ಸೈದ್ಧಾಂತಿಕ ಭಿನ್ನಮತದ ಕಾರಣದಿಂದಾಗಿ ದೊಡ್ಡಮಟ್ಟದ ಘರ್ಷನೆ ನಡೆಯಿತು, 2009 ರಲ್ಲಿ ಪ್ರಾದೇಶಿಕ ರಾಜಧಾನಿ ಉರುಮ್ಕಿಯಲ್ಲಿ ಗಲಭೆಗಳು ಭುಗಿಲೆದ್ದಾಗ ಅಕ್ಷರಶಃ ಅಲ್ಲಿ ಬೆಂಕಿಯ ಕುದಿಯಂತಹ ಪರಿಸ್ಥಿತಿ ಉಂಟಾಗಿತ್ತು, 197 ಮಂದಿ ಸಾವನ್ನಪ್ಪಿದರು ಮತ್ತು 1,600 ಕ್ಕೂ ಹೆಚ್ಚು ಜನರು ಹಲವಾರು ದಿನಗಳ ಕಾಲ ನಡೆದ ದಂಗೆ ಮತ್ತು ದಾಳಿಯಲ್ಲಿ ಗಾಯಗೊಂಡರು.   ಮುಂದಿನ ವರ್ಷಗಳಲ್ಲಿ ಚೀನಾ ಭಯಾನಕ ದಾಳಿಗಳಿಗೆ ಸಾಕ್ಷಿಯಾಗಬೇಕಾಯಿತು  ಉರುಮ್ಕಿಯಲ್ಲಿ  ನಡೆದ ಆತ್ಮಹತ್ಯಾ ಕಾರು ಬಾಂಬ್ ಸ್ಫೋಟಗಳು,  ಕುನ್ಮಿಂಗ್ ರೈಲ್ವೆ ನಿಲ್ದಾಣದಲ್ಲಿ 31 ಜನರು ಸಾವನ್ನಪ್ಪಿದ ಚಾಕು ಭಯಾನಕ ದಾಳಿ ಸೇರಿ ಹಲವು ಭಯೋತ್ಪಾದಕ ಘಟನೆಗಳು ಸಂಭವಿಸಿದವು.

ಈ ಬೆಳವಣಿಗೆಯ ನಂತರ ಮತ್ತೆ ಚೀನಿ ಸರ್ಕಾರ ಉಯಿಗುರ್ ಮುಸ್ಲೀಮರ ಧಾರ್ಮಿಕ ಆಚರಣೆಗೆ, ಸಂಪ್ರದಾಯಗಳಿಗೆ ಬೇಲಿ ಹಾಕುವುದಕ್ಕೆ ಮುಂದಾಯಿತು. ಒಂದು ರೀತಿಯಲ್ಲಿ ಉಯಿಘರ್ ಮುಸ್ಲೀಮರ ಧಾರ್ಮಿಕ ಭಾವನೆಯನ್ನೇ ಕಮ್ಯೂನಿಷ್ಟ್ ನೀತಿ ಕೊಲೆ ಮಾಡಿದಂತೆ ಮಾಡಿತು. ಕುರಾನ್ ಓದುವುದಕ್ಕೆ, ಗಡ್ಡ ಬಿಡುವುದಕ್ಕೆ, ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದಕ್ಕೆ, ಧಾರ್ಮಿಕ ಆಚರಣೆಗಳನ್ನು ಆಚರಿಸುವುದಕ್ಕೆ ಕಡಿವಾಣ ಹಾಕುವುದರೊಂದಿಗೆ ಉಯಿಗುರ್ ಮುಸ್ಲೀಮರ ಮೇಲೆ ಅಮಾನುಷವಾಗಿ ಹಿಂಸೆಯನ್ನು ನೀಡಿತು.

ಉಯಿಗುರ್ ಮುಸ್ಲೀಮರಿಗೆ ಭೀಕರ ಚಿತ್ರಹಿಂಸೆ ಕೊಡುವುದಕ್ಕೆ ಚೀನಾ ಸರ್ಕಾರ ಮುಂದಾಗುತ್ತದೆ. ಚೀನಾದ ಕಮ್ಯೂನಿಷ್ಟ್ ಧೋರಣೆಯನ್ನು ಹೇರುವುದನ್ನು ಈಗಲೂ ಮಾಡಲಾಗುತ್ತಿದೆ ಎನ್ನುವ ವಿಚಾರಗಳು ನಮಗೆ ಅಂತರ್ಜಾಲಗಳಲ್ಲಿ, ಇತಿಹಾಸದ ಸಾಕ್ಷಿಯಾಗಿರುವ ಪುಸ್ತಕಗಳಲ್ಲಿ ದೊರಕುತ್ತದೆ. ಕ್ಸಿನ್ ಜಿಯಾಂಗ್ ನಲ್ಲಿ ಈ ಉಯಿಗುರ್ ಮುಸ್ಲೀಮರನ್ನು ಜೈಲಿನಲ್ಲಿ ಕೂಡಿದ ಹಾಗೆ ಕೂಡಿ ಅವರ ಗಡ್ಡಗಳನ್ನು ಬೋಳಿಸಿ, ಚಿತ್ರಹಿಂಸೆ ಕೊಟ್ಟು ಚೀನಾದ ಕಮ್ಯೂನಿಷ್ಟ್ ಸಿದ್ಧಾಂತವನ್ನು ಹೇರಲಾಗುತ್ತಿದೆಯಂತೆ.

ಓದಿ : “ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

ಚೀನಿ ವಿಚಾರಗಳನ್ನು ಒಪ್ಪಿಕೊಂಡರೆ, ಒಂದು ಸಮಿತಿಯೊಂದರ ಮುಂದೆ ಕರೆತಂದು ಆ ವ್ಯಕ್ತಿಯನ್ನು ಆ ಸಮಿತಿ ಪರಿಶೀಲನೆಗೆ ಒಳಪಡಿಸುತ್ತದೆ. ಆ ವ್ಯಕ್ತಿಯ ಮೇಲೆ ಸಮಿತಿ ಸಂಪೂರ್ಣ ನಿಗಾ ವಹಿಸುತ್ತದೆ. ಆ ವ್ಯಕ್ತಿ ಬದಲಾಗಿದ್ದಾನೆ ಎಂಬುದನ್ನು ಗಮನಿಸಿದ ಮೇಲೆ ಅವನನ್ನು ಪ್ರಮಾಣೀಕರಿಸುವುದರ ಮೂಲಕ ಆ ಘೋರ ಬ್ರೈನ್ ವಾಷ್ ಮಾಡುವ ಬೆಂಕಿಯ ಒಲೆಯಂತಹ ಕ್ಯಾಂಪ್ ನಿಂದ ಹೊರಗೆ ಕಳುಹಿಸಲಾಗುತ್ತದೆ. ಅಷ್ಟೋತ್ತಿಗಾಗಲೇ ಆತ ಅರ್ಧ ಬೆಂದಿರುತ್ತಾನೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.

ಉಯಿಗುರ್ ಮುಸ್ಲೀಮರಿಗೆ ಹುಟ್ಟಿದ ಮಕ್ಕಳನ್ನು ತಂದೆ ತಾಯಿಯಿಂದ ಪ್ರತ್ಯೇಕಿಸುವುದರ ಮೂಲಕ ಆ ಎಳೆಯ ಕೂಸುಗಳ ಮೇಲೆ ಚೀನಾದ ಕಮ್ಯೂನಿಷ್ಟ್ ವಿಚಾರಗಳನ್ನು ಹೇರುತ್ತದೆ ಚೀನಾ ಸರ್ಕಾರ. ತುಂಬಾ ಅಸಹನೀಯ ಹಾಗೂ ಅಮಾನವೀಯ ಸಂಗತಿ ಏನೆಂದರೇ, ಉಯಿಗುರ್ ಮುಸ್ಲೀಮರ ಸಮುದಾಯವನ್ನೇ ನಿರ್ಮೂಲನೆ ಮಾಡುವ ಉದ್ದೇಶದಿಂದ ಆ ಸಮುದಾಯದ ಮಹಿಳೆಯರಿಗೆ ಬಲವಂತವಾಗಿ ಮಕ್ಕಳಾಗದಂತೆ ಆಪರೇಷನ್ ಮಾಡಲಾಗುತ್ತದೆ ಎಂದರೆ ಅದೆಷ್ಟು ಚಿತ್ರಹಿಂಸೆಯಿರಬಹುದು..? ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.

ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ   

ಓದಿ : ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹುಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!

Advertisement

Udayavani is now on Telegram. Click here to join our channel and stay updated with the latest news.

Next