Advertisement

ಅರುಣಾಚಲ ಕಬಳಿಸಲು ಚೀನಾ ಹುನ್ನಾರ: ಭಾರತದ ಪ್ರತಿತಂತ್ರ ಏನು?

10:46 AM Apr 19, 2017 | |

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಧ್ಯಾತ್ಮಿಕ ಗುರುವಾಗಿ ಗೌರವದಿಂದ ಕಾಣಲ್ಪಡುವ ದಲಾೖಲಾಮಾ ಅವರು ತವಾಂಗ್‌ನ ಬೌದ್ಧ ಮಠಕ್ಕೆ ತೆರಳಿರುವುದು ಇದೇ ಮೊದಲೇನಲ್ಲ.  1984ರಿಂದ ಇದುವರೆಗೆ ಅವರು ಅಲ್ಲಿಗೆ ಆರು ಬಾರಿ ಭೇಟಿ ನೀಡಿದ್ದಾರೆ.

Advertisement

ದಲಾೖಲಾಮಾ ಅವರ ಅರುಣಾಚಲ ಭೇಟಿಯನ್ನೇ ದೊಡ್ಡ ವಿಷಯವನ್ನಾಗಿಸಿ ಎಚ್ಚರಿಕೆ ನೀಡುವ ಚೀನದ ಅಧಟನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಬಗ್ಗಿದವರ ಬೆನ್ನಿಗೊಂದು ಗುದ್ದು ಎನ್ನುವ ಸಿದ್ಧಾಂತವನ್ನು ನಂಬಿಕೊಂಡಂತಿರುವ ಚೀನವನ್ನು ದಿಟ್ಟವಾಗಿ ಎದುರಿಸುವ ಸವಾಲು ನಮ್ಮ ನಾಯಕತ್ವದ ಮುಂದಿದೆ.

ದಲಾೖಲಾಮಾ ಅವರ ಇತ್ತೀಚೆಗಿನ ಅರುಣಾಚಲ ಪ್ರದೇಶ ಭೇಟಿಯನ್ನು ಚೀನ ಅತ್ಯುಗ್ರವಾಗಿ ಆಕ್ಷೇಪಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಧ್ಯಾತ್ಮಿಕ ಗುರುವಾಗಿ ಗೌರವದಿಂದ ಕಾಣಲ್ಪಡುವ ದಲಾೖಲಾಮಾ ಅವರು ತವಾಂಗ್‌ನ ಬೌದ್ಧ ಮಠಕ್ಕೆ ತೆರಳಿರುವುದು ಇದೇ ಮೊದಲೇನಲ್ಲ. 1984ರಿಂದ ಇದುವರೆಗೆ ಅವರು ಅಲ್ಲಿಗೆ ಆರು ಬಾರಿ ಭೇಟಿ ನೀಡಿದ್ದಾರೆ. ದಲಾೖಲಾಮಾರ ತವಾಂಗ್‌ ಭೇಟಿಗೆ ಭಾರತ ಅನುಮತಿ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನ ಎಚ್ಚರಿಕೆ ನೀಡಿತ್ತು. ಈ ಹಿಂದೆ 2009ರಲ್ಲಿ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಹಾಗೂ 2015ರಲ್ಲಿ ನರೇಂದ್ರ ಮೋದಿ ಮತ್ತು ಕಳೆದ ವರ್ಷ ಅಮೆರಿಕದ ರಾಯಭಾರಿ ರಿಚಾರ್ಡ್‌ ವರ್ಮಾ ಅರುಣಾಚಲ ಭೇಟಿ ನೀಡಿದಾಗಲೂ ಚೀನ ವಿರೋಧ ವ್ಯಕ್ತಪಡಿಸಿತ್ತಾದರೂ ಈ ಬಾರಿಯ ಅದರ ಪ್ರತಿಕ್ರಿಯೆ ಬಹಲಷ್ಟು ಉದ್ರೇಕಕಾರಿಯೂ ಉದ್ಧಟತನದಿಂದ ಕೂಡಿದ್ದೂ ಆಗಿತ್ತು. ವಿಶ್ವ ಭೂಪಟದಲ್ಲಿ ಪ್ರಭಾವಿ ಶಕ್ತಿಯಾಗಿ ಉದಯಿಸುತ್ತಿರುವ ಭಾರತಕ್ಕೆ ಈ ರೀತಿಯ ಬೆದರಿಕೆ ಮತ್ತು ಸಂಬಂಧ ಹದಗೆಡುವ ಎಚ್ಚರಿಕೆ ನೀಡುವುದು ಪಂಚಶೀಲ ತತ್ವವನ್ನು ಒಪ್ಪಿಕೊಂಡಿರುವ ದೇಶದ ಶಿಷ್ಟಾಚಾರಕ್ಕೆ ತಕ್ಕುದಾಗಿರಲಿಲ್ಲ. ಭಾರತದ ಪ್ರಧಾನಿಯಾಗಲೀ ಅಥವಾ ಕೇಂದ್ರ ಸರಕಾರದ ಪ್ರಮುಖ ಮಂತ್ರಿಗಳಾಗಲೀ 
ಈ ವಿಷಯದಲ್ಲಿ ಯಾವುದೇ ಹೇಳಿಕೆ ನೀಡಲಿಲ್ಲ ಮತ್ತು ದಲಾೖಲಾಮಾ ಅವರ ಭೇಟಿಯನ್ನು ರದ್ದುಗೊಳಿಸಲೂ ಇಲ್ಲ. ದಲಾೖಲಾಮಾ ಅವರ ಭೇಟಿಯನ್ನು ಚೀನದ ಒತ್ತಡಕ್ಕೆ ಒಳಗಾಗಿ ರದ್ದುಗೊಳಿಸಿದ್ದರೆ ಅರುಣಾಚಲ ಪ್ರದೇಶದ ಮೇಲೆ ಭಾರತದ ಪೂರ್ಣ ಪ್ರಮಾಣದ ಅಧಿಕಾರವಿಲ್ಲ ಎಂಬುದನ್ನು ಒಪ್ಪಿಕೊಂಡಂತಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೋಡಿದರೆ ಚೀನದ ಬೆದರಿಕೆಗೆ ಸೊಪ್ಪು ಹಾಕದಿರುವ ಭಾರತದ ನಡೆ ಶ್ಲಾಘನಾರ್ಹ ಮತ್ತು ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವುದಕ್ಕೆ ತಕ್ಕುದಾಗಿತ್ತು.

ಬೆದರಿಕೆ ತಂತ್ರ
ಆಕ್ರಮಣಕಾರಿ ಸ್ವಭಾವವನ್ನೇ ತನ್ನ ರಾಜತಾಂತ್ರಿಕ ಅಸ್ತ್ರವಾಗಿರಿಸಿಕೊಂಡಿರುವ ಚೀನ ತನ್ನೊಂದಿಗೆ ಗಡಿ ಹಂಚಿಕೊಂಡಿರುವ ಎಲ್ಲ ರಾಷ್ಟ್ರಗಳೊಂದಿಗೆ ದರ್ಪದಿಂದ ನಡೆದುಕೊಳ್ಳುತ್ತಿದೆ. ದಕ್ಷಿಣ ಚೀನ ಸಮುದ್ರದಲ್ಲಿ ತನ್ನ ಸ್ವಾಮ್ಯವನ್ನು ಸ್ಥಾಪಿಸಹೊರಟಿರುವ ಅದರ ವಾದವನ್ನು ತಿರಸ್ಕರಿಸಿದ ಅಂತಾರಾಷ್ಟ್ರೀಯ ನ್ಯಾಯಾಧಿಲಯದ ಆದೇಶವನ್ನೂ ಅದು ಮಾನ್ಯ ಮಾಡಿಲ್ಲ. ವಿಶ್ವ ವ್ಯವಧಿಹಾರಗಳಲ್ಲಿ ಅಮೆರಿಕದ ವಿರುದ್ಧ ತಾನು ಪ್ರಬಲ ಶಕ್ತಿಯಾಗಿ ಹೊರಧಿಹೊಮ್ಮಬೇಕೆಂಬ ಏಕೈಕ ಉದ್ದೇಶದಿಂದ ಚೀನ ವಿಚ್ಛಿದ್ರಕಾರಿ ಶಕ್ತಿಗಳಿಗೆ ಸಹಾಯ ಮಾಡುತ್ತಲೇ ಬಂದಿದೆ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ಥಾನಕ್ಕೆ ಕುಮ್ಮಕ್ಕು ನೀಡುವುದರ ಜತೆಗೆ ದಕ್ಷಿಣ ಕೊರಿಯಾ, ಜಪಾನ್‌, ಅಮೆರಿಕ ಮುಂತಾದ ದೇಶಗಳಿಗೆ ಅಣ್ವಸ್ತ್ರ ಬೆದರಿಕೆ ಹಾಕುತ್ತಿರುವ ಉತ್ತರ ಕೊರಿಯಾದ ಬೆಂಬಲಕ್ಕೆ ಚೀನ ನಿಂತಿದೆ. ಅಂತಾರಾಷ್ಟ್ರೀಯ ನಿಯಮಗಳನ್ನು ಗೌರವಿಸದ ಹಠಮಾರಿ ದೇಶವೆಂಬ ಅಪಖ್ಯಾತಿ ಹೊತ್ತಿರುವ ಉತ್ತರ ಕೊರಿಯಾಗೆ ರಹಸ್ಯವಾಗಿ ಅಣ್ವಸ್ತ್ರ ಸಂಬಂಧಿ ತಂತ್ರಜ್ಞಾನವನ್ನು ನೀಡಿ ಇಂದು ವಿಶ್ವ ಶಾಂತಿಗೆ ಅಪಾಯಕಾರಿಯಾಗುವಂತೆ ಅದನ್ನು ಬೆಳೆಸಿರುವುದು ಚೀನವೇ. 

ಸೋವಿಯೆತ್‌ ಒಕ್ಕೂಟದಿಂದ ಪ್ರತ್ಯೇಕವಾದ ಪುಟ್ಟ ರಾಷ್ಟ್ರಗಳಾದ ತಜಾಕಿಸ್ಥಾನ ಮತ್ತು ಕಿರ್ಗಿಸ್ಥಾನ್‌ ಗಳ ಮೇಲೆ ಒತ್ತಡ ಹೇರಿ, ಬೆದರಿಸಿ ಅವುಗಳಿಂದ ಅನುಕ್ರಮವಾಗಿ ಸುಮಾರು 1,122 ಚ.ಕಿ.ಮೀ. ಮತ್ತು 1,250 ಚ.ಕಿ.ಮೀ. ಭೂ ಪ್ರದೇಶವನ್ನು ಚೀನ ಕಬಳಿಸಿದೆ. ಕಳೆದ ವರ್ಷ ದಲಾೖಲಾಮಾರನ್ನು ಆಹ್ವಾನಿಸಿದ ಕಾರಣಕ್ಕಾಗಿ ಬೌದ್ಧ ಮತಾವಲಂಬಿಗಳು ಬಹುಸಂಖ್ಯಾತರಿರುವ ಮಂಗೋಲಿಯಾಕ್ಕೆ ಅದು ಆರ್ಥಿಕ ದಿಗ½ಂದನ ವಿಧಿಸಿತು. ಕೊರೆಯುವ ಚಳಿಯಲ್ಲಿ ಇಂಧನ ಕೊರತೆಯಿಂದ ಕಂಗಾಲಾದ ಮಂಗೋಲಿಯಾ ಆಗ ವಾಯುಮಾರ್ಗವಾಗಿ ಇಂಧನ ಪೂರೈಸುವಂತೆ ಭಾರತಕ್ಕೆ ಮೊರೆ ಇಡಬೇಕಾಯಿತು. ನೆರೆಹೊರೆಯ ರಾಷ್ಟ್ರಗಳ ಮೇಲೆ ಚೀನ ದಾರ್ಷ್ಟ್ಯದಿಂದ ವರ್ತಿಸಿ ತನ್ನ ಭೂದಾಹ ಪ್ರದರ್ಶಿಸಿರುವ ಉದಾಹರಣೆಗಳು ಒಂದೆರಡಲ್ಲ.

Advertisement

ಟಿಬೆಟ್‌ ಮೇಲೆ ಆಕ್ರಮಣ
1912ರಿಂದಲೂ ಸಂಪೂರ್ಣವಾಗಿ ಸ್ವತಂತ್ರವಾಗಿದ್ದ ಹಾಗೂ ಭಿನ್ನ ಸಂಸ್ಕೃತಿಯ ದೇಶವಾದ ಟಿಬೆಟ್‌ ಮೇಲೆ ಚೀನ 1950ರಲ್ಲಿ ಆಕ್ರಮಣ ಮಾಡಿ ತನ್ನ ದೇಶಕ್ಕೆ ಸೇರ್ಪಡೆ ಮಾಡಿಕೊಂಡಿತು. ಸ್ವಾಯತ್ತ ಶಾಸಿತ ರಾಜ್ಯವಾಗಿದ್ದ ಟಿಬೆಟ್‌ ಮೇಲಿನ ಆಕ್ರಮಣವನ್ನು ಭಾರತ ವಿರೋಧಿಸದೇ ಇದ್ದುದರಿಂದ ಆಗ ವಿಶ್ವದ ಅನ್ಯ ರಾಷ್ಟ್ರಗಳು ಸುಮ್ಮನಾದವು. ಇದು ಭಾರತ ಎಸಗಿದ ಐತಿಹಾಸಿಕ ಪ್ರಮಾದ ಎಂಬುದು ಈಗ ಸಾಬೀತಾಗುತ್ತಿದೆ. ಟಿಬೆಟನ್ನು ತನ್ನ ಭಾಗವಾಗಿಸಿಕೊಂಡ ಬಳಿಕ ಈಗ ಚೀನ, ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ ಎಂಬ ವಿತಂಡ ವಾದ ಮಂಡಿಸುವ ಮೂಲಕ ಸಂಪೂರ್ಣ ಅರುಣಾಚಲ ಪ್ರದೇಶ ತನ್ನದೆಂದು ಹೇಳುತ್ತಿದೆ. ಆರನೇ ದಲಾೖಲಾಮಾ ಅವರು ತವಾಂಗ್‌ನಲ್ಲಿ ಜನಿಸಿದರೆಂಬ ನೆಲೆಯಲ್ಲಿ ತವಾಂಗ್‌ ಸೇರಿದಂತೆ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ ಎಂದು ಅದು ಕರೆಯುತ್ತಿದೆ. ಟಿಬೆಟ್‌ನ ಲ್ಹಾಸಾದ ಅನಂತರ ಅತಿ ದೊಡ್ಡ ಬೌದ್ಧ ಮಠವೆನಿಸಿದ ತವಾಂಗ್‌ನ ಮಠಕ್ಕೆ ಟಿಬೆಟ್‌ ನೊಂದಿಗೆ ಇರುವ ಶತಮಾನಗಳ ಐತಿಹಾಸಿಕ ಸಂಬಂಧವನ್ನು ಧರ್ಮಕ್ಕೆ ಮಾನ್ಯತೆ ಕೊಡದ ಕಮ್ಯುನಿ… ರಾಷ್ಟ್ರ ಚೀನ ತನ್ನ ವಿಸ್ತಾರವಾದಿ ನೀತಿಗೆ ಸಹಾಯಕವಾಗಿ ಬಳಸಿಕೊಳ್ಳುತ್ತಿದೆ ಎನ್ನುವುದು ಚೋದ್ಯದ ಸಂಗತಿ.

ಟಿಬೆಟ್‌ನಲ್ಲಿ ಹೆಚ್ಚುತ್ತಿರುವ ಜನವಿರೋಧವನ್ನು ನಿಯಂತ್ರಿಸಲು ಅಸಫ‌ಲವಾಗಿರುವ ಚೀನಕ್ಕೆ ಅಭದ್ರತೆ ಕಾಡುತ್ತಿದೆ. ಅದರ ಆಕ್ರಮಣಕಾರಿಯ ನೀತಿಯ ವಿರುದ್ಧ ಪ್ರತಿಭಟನೆಯಲ್ಲಿ ಸಾವಿರಾರು ಟಿಬೆಟಿಯನ್ನರು ಆತ್ಮಾಹುತಿ ಮಾಡಿಕೊಂಡಿದ್ದಾರೆ. ಚೀನೀಯರು ಮತ್ತು ಹೊರಗಿನ ಜನರನ್ನು ಟಿಬೆಟ್‌ನಲ್ಲಿ ನೆಲೆಗೊಳಿಸಿ ಟಿಬೆಟಿಯನರ ಸಂಸ್ಕೃತಿ ಮತ್ತು ಬಂಡಾಯವನ್ನು ಶಾಶ್ವತವಾಗಿ ಅಳಿಸುವ  ಸರ್ವ ಪ್ರಯತ್ನದಲ್ಲಿ ಚೀನ ತೊಡಗಿದೆ. ಟಿಬೆಟಿಯನ್ನರ ಆಶೋತ್ತರಗಳನ್ನು ಬಲಿಕೊಟ್ಟು, ಸಾಮಾನ್ಯ ಜನತೆಯ ಮೇಲೆ ದೌರ್ಜನ್ಯ ಎಸಗುತ್ತಿರುವ ಚೀನ ಈಗ ಅರುಣಾಚಲ ಪ್ರದೇಶದಲ್ಲಿನ ಜನರು ಭಾರತದ ಆಡಳಿತೆಯಿಂದ ಬೇಸತ್ತಿದ್ದಾರೆ ಎನ್ನುವ ದುಷ್ಪ್ರಚಾರದಲ್ಲಿ ತೊಡಗಿದೆ. ಟಿಬೆಟಿಯನ್ನರ ವಿರೋಧವನ್ನು ಬಲಪೂರ್ವಕವಾಗಿ ಹತ್ತಿಕ್ಕಿ, ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಟಿಬೆಟ್‌ ನ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ನಷ್ಟ ಮಾಡಿದೆ. ಕಾರ್ಮಿಕರ, ನಾಗರಿಕರ ಹಕ್ಕುಗಳನ್ನು ಮೊಟಕುಗೊಳಿಸಿ, ಜೀತದಾಳುಗಳಂತೆ ಕಡಿಮೆ ವೇತನಕ್ಕೆ ದುಡಿಸಿ, ಅಗ್ಗದ ವೆಚ್ಚದಲ್ಲಿ ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಿಸಿ ದಕ್ಕಿದ ಅಭೂತಪೂರ್ವ ಆರ್ಥಿಕ ಬಲದಿಂದ ತನ್ನ ಹಾದಿಗೆ ಅಡ್ಡವಾಗಿರುವ ರಾಷ್ಟ್ರಗಳನ್ನದು ಬೆದರಿಸುತ್ತಿದೆ. ಏಕಚೀನ ಸಿದ್ಧಾಂತವೇ ತನ್ನ ಮುಖ್ಯ ಹಿತಾಸಕ್ತಿ ಎಂದು ಪ್ರತಿಪಾದಿಸುತ್ತಾ ವಿಶ್ವದ ಯಾವುದೇ ರಾಷ್ಟ್ರ ಈ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು ಎನ್ನುತ್ತಿದೆ ಅದು. ಆದರೆ ಅನ್ಯ ರಾಷ್ಟ್ರಗಳ ಮುಖ್ಯ ಹಿತಾಸಕ್ತಿಗಳಿಗೆ ವಿರುದ್ಧ ನಡೆದುಕೊಳ್ಳಬಾರದೆನ್ನುವ ಕನಿಷ್ಠ ಸೌಜನ್ಯವೂ ಆ ದೇಶಕ್ಕಿಲ್ಲ.

ಹಿತಾಸಕ್ತಿ ಸಂಘರ್ಷ
ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ದುಬಾರಿ ವೆಚ್ಚದ ಚೀನ-ಪಾಕ್‌ ಇಕನಾಮಿಕ್‌ ಕಾರಿಡಾರ್‌ಗೆ ಭಾರತದ ವಿರೋಧ, ಏಷ್ಯದ ದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಒನ್‌ ಬೆಲ್ಟ… ಒನ್‌ ರೋಡ್‌ ಕುರಿತು ಭಾರತದ ನಿರಾಸಕ್ತಿ ಮತ್ತು ಸಂಶಯದೃಷ್ಟಿ ದುರಂಹಕಾರಿ ಚೀನೀ ನಾಯಕರ ಕಣ್ಣು ಕೆಂಪಗಾಗಿಸಿದೆ. ಚೀನೀ ನಾಯಕ ಕ್ಸಿ ಜಿನ್‌ ಪಿಂಗ್‌ ಅವರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧುರ ವೈಯಕ್ತಿಕ ಸಂಬಂಧ ಸ್ಥಾಪಿಸಲು ಯತ್ನಿಸಿದ್ದು ಫ‌ಲಿಸಿಲ್ಲ. ವಿಶ್ವ ಸಂಸ್ಥೆಯಲ್ಲಿ ಉಗ್ರವಾದಿ ಅಜರ್‌ ಮಸೂದ್‌ ನಿಷೇಧ, ತನ್ನ ಭದ್ರತಾ ಮಂಡಳಿ ಸದಸ್ಯತ್ವ ಕುರಿತಂತೆ ರಾಜತಾಂತ್ರಿಕ ಮಟ್ಟದಲ್ಲಿ ಹಲವಾರು ಸುತ್ತಿನ ಮಾತುಕತೆಗಳ ಮೂಲಕ ಮನವರಿಕೆ ಮಾಡುವ ಭಾರತದ ಪ್ರಯತ್ನಗಳಿಗೆ ಚೀನ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಒಟ್ಟಿನಲ್ಲಿ ಉಭಯ ದೇಶಗಳು ಒಂದನ್ನೊಂದು ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ. ಟಿಬೆಟ್ಟಿನಲ್ಲಿ ಅಗತ್ಯಕ್ಕಿಂತ ಅಧಿಕ ಸೈನ್ಯ ಸಂಖ್ಯಾಬಲದ ಉಪಸ್ಥಿತಿ, ಭಾರತದ ಗಡಿ ಪ್ರದೇಶದವರೆಗೆ ಚೀನದ ಅತ್ಯಾಧುನಿಕ ರಸ್ತೆ, ರೈಲು ಸಂಪರ್ಕ ಅಭಿವೃದ್ಧಿ ಭಾರತದ ಸುರಕ್ಷಾ ಚಿಂತೆಯನ್ನು ಹೆಚ್ಚಿಸಿದೆ. 

ದಲಾೖಲಾಮಾ ಅವರ ಅರುಣಾಚಲ ಭೇಟಿಯನ್ನೇ ದೊಡ್ಡ ವಿಷಯವನ್ನಾಗಿಸಿ ಎಚ್ಚರಿಕೆ ನೀಡುವ ಚೀನದ ಅಧಟನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಅದರ ಹೊಸ ಅವತಾರವನ್ನು ಗಮನಿಸಿದರೆ, ಎರಡು ದಶಕಗಳ ಹಿಂದೆ ಅಂದಿನ ರಕ್ಷಣಾ ಮಂತ್ರಿ ಜಾರ್ಜ್‌ ಫ‌ರ್ನಾಂಡಿಸ್‌ ಅವರು “ಚೀನವೇ ಭಾರತದ ನಂಬರ್‌ ವನ್‌ ಶತ್ರು ಅಂದದ್ದು ನಿಜ ಎಂಬುದು ಅರಿವಾಗುತ್ತದೆ. 1962ರ ಯುದ್ಧದ ಸಮಯದಲ್ಲಿದ್ದ ದಯನೀಯ ಸ್ಥಿತಿಯಲ್ಲಿ ಭಾರತ ಈಗ ಇಲ್ಲ. ಇತಿಹಾಸದಿಂದ ಪಾಠ ಕಲಿತಿರುವ ಭಾರತ ಸಂಭಾವ್ಯ ಆಕ್ರಮಣವನ್ನು ಎದುರಿಸಲು ಸುಪರ್‌ಸಾನಿಕ್‌ ಬ್ರಹ್ಮೋಸ್‌ ಕ್ಷಿಪಣಿ ಸಹಿತ ಅತ್ಯಾಧುನಿಕ ಟ್ಯಾಂಕ್‌ಗಳನ್ನು ಗಡಿಯಲ್ಲಿ ನಿಯೋಜಿಸಿ ಸ್ವರಕ್ಷಣೆಗೆ ಸಿದ್ದವಾಗಿದೆ. ಇಂತಹ ದುಸ್ಸಾಹಸಗಳಿಂದ ಉಭಯ ದೇಶಗಳಿಗೂ ನಷ್ಟ ಆಗುತ್ತದೆ ಎನ್ನುವುದನ್ನು ಚೀನೀಯರು ಮನಗಾಣಬೇಕು. ಬಗ್ಗಿದವರ ಬೆನ್ನಿಗೊಂದು ಗುದ್ದು ಎನ್ನುವ ಸಿದ್ಧಾಂತವನ್ನು ನಂಬಿಕೊಂಡಂತಿರುವ ಚೀನವನ್ನು ದಿಟ್ಟವಾಗಿ ಎದುರಿಸುವ ಸವಾಲು ನಮ್ಮ ನಾಯಕತ್ವದ ಮುಂದಿದೆ.

 ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next