Advertisement

ಚೀನದ ವಿರುದ್ಧ ರಾಜನಾಥ್‌ ಗುಡುಗು: ಡಿಜಿಟಲ್‌ ಪೆಟ್ಟು ಕೂಡ ಮುಖ್ಯ

02:19 AM Sep 17, 2020 | Hari Prasad |

ನಾಲ್ಕು ತಿಂಗಳಿಂದ ಪೂರ್ವ ಲಡಾಖ್‌ನಲ್ಲಿ ಭಾರತ-ಚೀನ ನಡುವಿನ ಬಿಕ್ಕಟ್ಟು ಮುಂದುವರಿದಿದೆ.

Advertisement

ಈ ವಿಚಾರದಲ್ಲಿ ಎರಡೂ ಸರಕಾರಗಳ ನಡುವೆ, ಸೇನೆಗಳ ನಡುವೆ ಹಲವು ಸುತ್ತಿನ ಮಾತುಕತೆಗಳೂ ನಡೆದಿವೆಯಾದರೂ ಶೀಘ್ರದಲ್ಲೇ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಗಡಿ ಸಂಘರ್ಷದ ವಿಚಾರವಾಗಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ಲೋಕಸಭೆಯಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ.

ಲಡಾಖ್‌ ಪರಿಸ್ಥಿತಿ ನಮಗೆ ಸವಾಲಾಗಿದೆ ಎನ್ನಲು ಹಿಂಜರಿಯುವುದಿಲ್ಲ, ಎಂದೂ ಹೇಳಿರುವ ಅವರು, ಭಾರತ ಶಾಂತಿಗೂ ಸಿದ್ಧವಿದೆ, ಶಸ್ತ್ರವೆತ್ತಲೂ ತಯಾರಿದೆ ಎಂಬ ಕಠಿನ ಸಂದೇಶವನ್ನು ಚೀನಕ್ಕೆ ಕಳುಹಿಸಿದ್ದಾರೆ.

ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಚೀನ ಭಾರೀ ಪ್ರಮಾಣದಲ್ಲಿ ತನ್ನ ಸೇನೆಯನ್ನು ಜಮಾವಣೆ ಮಾಡಿದೆ.

Advertisement

ಕಾಲಕಾಲಕ್ಕೆ ಭಾರತದೊಂದಿಗೆ ಗಡಿ ವಿಚಾರದಲ್ಲಿ ಕುತಂತ್ರದ ನಡೆಗಳನ್ನು ಇಡುತ್ತಾ ಬರುತ್ತಿದ್ದ ಚೀನ ಈ ಬಾರಿಯಂತೂ ಹದ್ದುಮೀರುತ್ತಿದೆ. ಕುತಂತ್ರದಿಂದ ನಮ್ಮ ಸೈನಿಕರ ಮೇಲೆ ದಾಳಿ ಮಾಡಿ ಅದಕ್ಕೆ ತಾನು ಭಾರೀ ಬೆಲೆಯನ್ನೂ ತೆತ್ತರೂ ಸುಮ್ಮನೆ ಕೂಡುತ್ತಿಲ್ಲ. ಈ ವಿಚಾರವಾಗಿ

ಮಾತನಾಡಿದ ರಕ್ಷಣ ಸಚಿವರು, ನಮ್ಮ ಪಡೆಗಳು ಚೀನಕ್ಕೆ ಮರೆಯಲಾಗದ ಪೆಟ್ಟು ನೀಡಿವೆ ಎಂದೂ ಹೇಳಿದ್ದಾರೆ.

ಈ ಬಾರಿಯಂತೂ ಭಾರತದ ಎದಿರೇಟುಗಳು ಚೀನಕ್ಕೆ ಭಾರೀ ನೋವು ಕೊಡುತ್ತಿವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸಂಘರ್ಷದ ವೇಳೆ ತನ್ನ 45ಕ್ಕೂ ಅಧಿಕ ಸೈನಿಕರು ಮೃತಪಟ್ಟರೂ ಚೀನ ಈ ವಿಚಾರ ತನ್ನ ನಾಗರಿಕರಿಗೆ ತಲುಪದಂತೆ ಮುಚ್ಚಿಟ್ಟಿತು. ಭಾರತವು ಗಡಿರೇಖೆಯುದ್ದಕ್ಕೂ ನಿರ್ಮಿಸುತ್ತಿರುವ ರಸ್ತೆಗಳು, ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳು ಡ್ರ್ಯಾಗನ್‌ ರಾಷ್ಟ್ರದ ನಿದ್ದೆಗೆಡಿಸಿರುವುದು ಇದಕ್ಕೆ ಒಂದು ಕಾರಣವಾದರೆ, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಜಗತ್ತು ವ್ಯಸ್ತವಾಗಿರುವ ಸಮಯದಲ್ಲಿ ತನ್ನ ವಿಸ್ತರಣಾಕಾಂಕ್ಷೆಯನ್ನು ಈಡೇರಿಸಿಕೊಳ್ಳಬೇಕು ಎನ್ನುವ ಅದರ ದುರ್ಬುದ್ಧಿ ಈ ಬೆಳವಣಿಗೆಗೆ ಮತ್ತೂಂದು ಕಾರಣ.

ಚೀನ ಕೇವಲ ತನ್ನ ಸೈನ್ಯದ ಮೂಲಕ ಮಾತ್ರವಲ್ಲ, ವಿವಿಧ ರೂಪದಲ್ಲೂ ಭಾರತದ ವಿರುದ್ಧ ಸಂಚು ರೂಪಿಸುತ್ತಿರುವುದರಿಂದಾಗಿ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ, ಮುಂದೆಯೂ ಕೈಗೊಳ್ಳಬೇಕಿದೆ. ಭಾರತದ ಬಳಕೆದಾರರ ಮಾಹಿತಿ ಕದಿಯುತ್ತಿರುವ ಅನೇಕ ಚೀನಿ ಆ್ಯಪ್‌ಗಳನ್ನು ನಿಷೇಧಿಸಿದ್ದು ಈ ನಿಟ್ಟಿನಲ್ಲಿ ಮೊದಲ ಯಶಸ್ವಿ ಹೆಜ್ಜೆ. ಆದಾಗ್ಯೂ ಈ ಕಂಪೆನಿಗಳು, ತಾವು ಚೀನದೊಂದಿಗೆ ಭಾರತೀಯರ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ ಎಂದು ಎಷ್ಟೇ ವಾದಿಸಿದರೂ, ವಾಸ್ತವವೇ ಬೇರೆ ಎನ್ನುವುದು ಭಾರತಕ್ಕೆ ಸ್ಪಷ್ಟವಾಗಿ ಅರಿವಿದೆ.

ಚೀನಿ ಸರಕಾರದ ಜತೆ ಸಂಪರ್ಕದಲ್ಲಿರುವ ಜೆನ್‌ಹುವಾ ಟಾಡಾ ಇನ್ಫಾರ್ಮೇಷನ್‌ ಟೆಕ್ನಾಲಜಿ ಕೋ ಲಿಮಿಟೆಡ್‌ ಎನ್ನುವ ಕಂ±ನಿಯು, ಭಾರತದ ಸುಮಾರು 10 ಸಾವಿರಕ್ಕೂ ಅಧಿಕ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಡೇಟಾ ಕಲೆಹಾಕುತ್ತಿದೆ ಎನ್ನುವ ಸತ್ಯ ಕೆಲದಿನಗಳ ಹಿಂದೆ ಬಯಲಾಗಿದೆ. ಪ್ರಧಾನಿ, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಅವರ ಕುಟುಂಬಸ್ಥರು, ಮಿಲಿಟರಿ, ಉದ್ಯಮಿಗಳು, ಸಂಸದರು ಹಾಗೂ ಕೆಲವು ಪಾತಕಿಗಳ ಆನ್‌ಲೈನ್‌ ಡೇಟಾವನ್ನೂ ಈ ಸಂಸ್ಥೆ ಕಲೆಹಾಕಿದೆಯಂತೆ.

ಭಾರತದ ಸೈಬರ್‌ ಶಕ್ತಿ ಎಷ್ಟು ಬಲಿಷ್ಠವಾಗಿದೆ ಎನ್ನುವ ವಿಶ್ಲೇಷಣೆಯನ್ನೂ ಈ ಸಂಸ್ಥೆ ಮಾಡುತ್ತಿದೆ ಎಂದು ವರದಿಯಾಗಿದೆ. ಇದೆಲ್ಲವನ್ನೂ ಗಮನಿಸಿದಾಗ, ಚೀನ ಭಾರತವನ್ನು ತನ್ನ ಪ್ರಬಲ ಪ್ರತಿಸ್ಪರ್ಧಿ ಎಂದು ಪರಿಗಣಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ, ಗಡಿ ಭಾಗದಲ್ಲಷ್ಟೇ ಅಲ್ಲದೇ ಈ ರೀತಿಯ ಚೀನದ ಡಿಜಿಟಲ್‌ ಕಳ್ಳಮಾರ್ಗಗಳಿಗೆ ಮತ್ತಷ್ಟು ಬಲವಾದ ಪೆಟ್ಟುಕೊಡಲು ಭಾರತ ಮುಂದಾಗಬೇಕಿರುವ ಸಮಯವಿದು.

Advertisement

Udayavani is now on Telegram. Click here to join our channel and stay updated with the latest news.

Next