Advertisement

3 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ

07:37 PM Dec 13, 2019 | Naveen |

ಚಳ್ಳಕೆರೆ: ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಸೌಲಭ್ಯ ಒದಗಿಸಲು ನಗರಸಭೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. 3 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ ಎಂದು ನಗರಸಭೆ ಪ್ರಭಾರಿ ಪೌರಾಯುಕ್ತ ಪಿ. ಪಾಲಯ್ಯ ತಿಳಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ 2020-21ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಚಳ್ಳಕೆರೆ ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ನಾಗರಿಕರು ಉತ್ತಮವಾದ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಮರಣ ಸಂದರ್ಭದಲ್ಲಿ ನೆರವಾಗಲು ಆ್ಯಂಬುಲೆನ್ಸ್‌ ವ್ಯವಸ್ಥೆ, ಕೊಳಚೆ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ, ಆಸ್ಪತ್ರೆ ಸೌಲಭ್ಯ, ಪಾವಗಡ ರಸ್ತೆಯಲ್ಲಿನ ನಗರಸಭೆ ಕಟ್ಟಡದಲ್ಲಿರುವ ಹೊಯ್ಸಳ ಸೌಹಾರ್ದ ಬ್ಯಾಂಕ್‌ ಅನ್ನು ಮತ್ತೆ ನಗರಸಭೆಗೆ ವಹಿಸಿಕೊಳ್ಳುವ ಕುರಿತು, ಇಂದಿರಾ ಶಾಪಿಂಗ್‌ ಕಾಂಪ್ಲೆಕ್ಸ್‌ ನೆಲಸಮಗೊಳಿಸಿ ಅತ್ಯಾಧುನಿಕ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣ, ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಸಾರ್ವಜನಿಕರು ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸಲು ನಗರಸಭೆ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದರು.

ನಗರಸಭೆ ಸದಸ್ಯ ಬಿ.ಟಿ. ರಮೇಶ್‌ ಗೌಡ ಮಾತನಾಡಿ, ನೆಹರೂ ವೃತ್ತದಲ್ಲಿನ ಇಂದಿರಾ ಶಾಪಿಂಗ್‌ ಕಾಂಪ್ಲೆಕ್ಸ್‌ ಕಟ್ಟಡ ನಿರ್ಮಾಣವಾಗಿ 35 ವರ್ಷ ಕಳೆದಿದೆ. ಕಟ್ಟಡದ ಕೆಲವು ಭಾಗ ಈಗಾಗಲೇ ಬಿರುಕು ಬಿಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್‌ ಸಹ ವರದಿ ನೀಡಿದ್ದು, ಕೂಡಲೇ ಸದರಿ ಕಟ್ಟಡವನ್ನು ನೆಲಸಮಗೊಳಿಸಿ ಸೂಪರ್‌ ಮಾರ್ಕೆಟ್‌ ನಿರ್ಮಿಸಬೇಕು. ಇದರಿಂದ ನಗರಸಭೆ ಆದಾಯವೂ ಹೆಚ್ಚಳವಾಗುತ್ತದೆ ಎಂದು ಸಲಹೆ ನೀಡಿದರು.

ಸದಸ್ಯ ವಿರೂಪಾಕ್ಷ ಮಾತನಾಡಿ, ಕಚೇರಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಕೆಲಸ ಕಾರ್ಯಗಳು ಆಗದೆ ವಿಳಂಬವಾಗುತ್ತಿದೆ. ಜವಾಬ್ದಾರಿಯುತ ಅಧಿಕಾರಿಗಳೇ ಕಚೇರಿಯಲ್ಲಿ ಇರುವುದಿಲ್ಲ ಈ ಬಗ್ಗೆ ಗಮನ ಹರಿಸಬೇಕೆಂದರು. ಸದಸ್ಯೆ ಕವಿತಾ ಬೋರಯ್ಯ ಮಾತನಾಡಿ, ನಗರದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಪ್ರತಿನಿತ್ಯ ನಾಗರಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತಿನಿತ್ಯ ಎರೆಡರೆಡು ವಾರ್ಡ್ ಗಳಲ್ಲಾದರೂ ಫಾಗಿಂಗ್‌ ಮಾಡಿಸುವಂತೆ ತಿಳಿಸಿದರು.

ಸದಸ್ಯೆ ನಿರ್ಮಲಾ ಮಾತನಾಡಿ, ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಡಬೇಕೆಂದರು. ಸದಸ್ಯ ಟಿ. ಮಲ್ಲಿಕಾರ್ಜುನ, ವೆಂಕಟೇಶ್ವರನಗರ ಎರಡು ಕಿಮೀ ದೂರವಿದ್ದು, ಪ್ರತಿನಿತ್ಯ ಅಲ್ಲಿ ಅಪಘಾತ ನಡೆಯುತ್ತಿದೆ. ಹಾಗಾಗಿ ಅಲ್ಲಿ ಆಸ್ಪತ್ರೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

Advertisement

ನಗರಸಭೆ ಮಾಜಿ ಸದಸ್ಯ ಎಂ.ಚೇತನ್‌ಕುಮಾರ್‌ ಮಾತನಾಡಿ, ನಗರಸಭೆ ವ್ಯಾಪ್ತಿಯ ನೂತನ ಬಡಾವಣೆಗಳಲ್ಲಿ ಹಲವಾರು ಲೋಪ ದೋಷಗಳಿವೆ. ನಗರಸಭೆ ನಿಯಮಗಳನ್ನು ಖಾಸಗಿ ಲೇಔಟ್‌ನವರು ಪಾಲಿಸುತ್ತಿಲ್ಲವೆಂದು ಆರೋಪಿಸಿದರು. ಸದಸ್ಯ ವೈ. ಪ್ರಕಾಶ್‌, ಕೆ. ವೀರಭದ್ರಪ್ಪ, ಶಿವಕುಮಾರ್‌, ಸಿ. ಶ್ರೀನಿವಾಸ್‌, ಹೊಯ್ಸಳ ಗೋವಿಂದ ಮಾತನಾಡಿದರು. ಮಾಜಿ ಸದಸ್ಯ ಆರ್‌. ಪ್ರಸನ್ನಕುಮಾರ್‌, ಡಿ.ಕೆ. ಸೋಮಶೇಖರ್‌, ಎಸ್‌. ಮುಜೀಬ್‌, ನೇತಾಜಿ ಪ್ರಸನ್ನ ಮಾತನಾಡಿದರು.

ಪೂರ್ವಭಾವಿ ಸಭೆಯಲ್ಲಿ ನಗರಸಭಾ ಸದಸ್ಯರಾದ ಸುಮಾ ಭರಮಣ್ಣ, ಸುಜಾತಾ ಪಾಲಯ್ಯ, ಸಾವಿತ್ರಮ್ಮ, ಸಾಕಮ್ಮ, ಆರ್‌. ಮಂಜುಳಾ, ಜೈತುಂಬಿ, ಸುಮಾ ಆಂಜನೇಯ, ಮುಖಂಡರಾದ ಭರಮಣ್ಣ, ಪಾಲಯ್ಯ, ಆರ್‌. ಜಗದೀಶ್‌ ನಗರಸಭೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next