Advertisement

ಆಳ್ವಾಸ್‌ ವಿದ್ಯಾರ್ಥಿ ಸಿರಿಯಲ್ಲಿ ಮಕ್ಕಳ ಯಕ್ಷಗಾನ

06:00 AM Dec 07, 2018 | Team Udayavani |

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡಬಿದಿರೆ ಇದರ ಆಶ್ರಯದಲ್ಲಿ ನಡೆದ ಆಳ್ವಾಸ್‌ ವಿದ್ಯಾರ್ಥಿ ಸಿರಿ  -2018ರಲ್ಲಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ.) ಪೆರ್ಲ ಇಲ್ಲಿನ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನಗೊಂಡಿತು. ಕೆ.ವಿ. ಸುಬ್ಬಣ ಬಯಲು ರಂಗಮಂದಿರದಲ್ಲಿ ಪ್ರದರ್ಶಿತವಾದ “ಅಭಿಮನ್ಯು ಕಾಳಗ’ ಪ್ರಸಂಗ ಕಲಾಪ್ರೇಮಿಗಳನ್ನು ರಂಜಿಸಿತು. 

Advertisement

ಸುಬ್ಬಣಕೋಡಿ ರಾಮಭಟ್ಟರ ನಿರ್ದೇಶನದಲ್ಲಿ ನಡೆದ ಈ ಯಕ್ಷಗಾನ ಬಯಲಾಟಕ್ಕೆ ಪ್ರಸಾದ ಬಲಿಪರು ಭಾಗವತರಾಗಿ ಮಕ್ಕಳು ನಿರ್ವಹಿಸಿದ ಪಾತ್ರಗಳಿಗೆ ಜೀವ ತುಂಬಿದರು.ಚಂದ್ರಶೇಖರ ಭಟ್‌ ಕೊಂಕಣಾಜೆ ಹಾಗೂ ರಾಘವ ಬಲ್ಲಾಳ್‌ ಕಾರಡ್ಕ ಚೆಂಡೆ -ಮದ್ದಳೆಯಲ್ಲಿ ಉತ್ತಮ ಸಾಥ್‌ ನೀಡಿದರು. ಚಕ್ರತಾಳದಲ್ಲಿ ಕೇಂದ್ರದ ಹಳೆ ವಿದ್ಯಾರ್ಥಿಯೂ ಕಟೀಲು ಮೇಳದ ಯುವ ಪುಂಡು ವೇಷಧಾರಿಯೂ ಆದ ಶ್ರೀ ಶಿವಾನಂದ ಬಜಕೂಡ್ಲು ಸಹಕರಿಸಿದರು. 

ಪರಂಪರೆಯ ಪಾಂಡವರ ಒಡ್ಡೋಲಗದ ಮೂಲಕ ಆರಂಭವಾದ ಯಕ್ಷಗಾನದಲ್ಲಿ ಧರ್ಮರಾಯನಾಗಿ ಕು| ಶ್ರಾವಣಿ ಕಾಟುಕುಕ್ಕೆ , ಭೀಮನಾಗಿ ಮಾ| ಸನತ್‌ರಾಜ್‌ ಇಡಿಯಡ್ಕ ಅರ್ಜುನನಾಗಿ ಕು| ಕೀರ್ತನಾ ಕೀರಿಕಾಡು, ನಕುಲ – ಸಹದೇವರಾಗಿ ಮಾ| ನಿರಂಜನ ಕಾರಡ್ಕ ಹಾಗೂ ಮಾ| ಹರ್ಷಲ್‌ ಮಾಯಿಲೆಂಗಿ ತಮ್ಮ ತಾಳ ಜ್ಞಾನವನ್ನು ಪರಂಪರೆಯ ಕ್ರಮವನ್ನು ತೋರಿಸಿಕೊಟ್ಟರು. ಪಾಂಡವರ ಸರ್ವನಾಶವನ್ನೇ ಪಣತೊಟ್ಟ ಕೌರವನಾಗಿ ಮಾ| ಚಿನ್ಮಯ ಕೃಷ್ಣ ಕಡಂದೇಲು ಹಾಗೂ ಗುರು ದ್ರೋಣಾಚಾರ್ಯನಾಗಿ ಮಾ| ಹರ್ಷ ಸಜಂಗದ್ದೆ ಉತ್ತಮ ಆರಂಭವನ್ನು ಕೊಟ್ಟರು. ತೆರೆ ಪರಪಟ್ಟು ಸಹಿತ ರಂಗಸ್ಥಳವೇರಿದ ಸಮಸಪ್ತಕರಾದ ಮಾ| ಅಜೇಯ ಸುಬ್ರಹ್ಮಣ್ಯ ಮೂಡಬಿದಿರೆ ಹಾಗೂ ಮಾ| ವೆಂಕಟ ಯಶಸ್ವಿ ಕಬೆಕ್ಕೋಡು ಬಣ್ಣದ ವೇಷದ ನಡೆಯನ್ನು ಉತ್ತಮವಾಗಿ ಕಲಾಪ್ರೇಕ್ಷಕರಿಗಿತ್ತರು. ಶ್ರೀ ಕೃಷ್ಣನಾಗಿ ಕು| ಭಾಗ್ಯ ಶ್ರೀ ಕುಂಚಿನಡ್ಕ ಉತ್ತಮ ಪ್ರದರ್ಶನ ನೀಡಿದರು. 

ಅಭಿಮನ್ಯುವಾಗಿ ಮೊದಲಿಗೆ ರಂಗವೇರಿದ ಮಾ| ಚಿತ್ತರಂಜನ್‌ ಕಡಂದೇಲು ಬಹುಮುಖ ಪ್ರತಿಭಾವಂತ. ಉತ್ತಮ ನಾಟ್ಯ ಹಾಗೂ ಮಾತುಗಳಿಂದ ದೊಡ್ಡಪ್ಪನಿಂದ ಅಪ್ಪಣೆ ಪಡೆದು ಹೊರಟನಾದರೂ ತಾಯಿ ಸುಭದ್ರೆಯ ಮಾತೃ ವಾತ್ಸಲ್ಯದ ಕಟ್ಟುಪಾಡಿಗೆ ಒಳಗಾಗುವ ಸನ್ನಿವೇಶವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದರು. ಸುಭದ್ರೆಯಾಗಿ ಕು| ಸ್ಮತಿ ಮಾಯಿಲೆಂಗಿ ಮಾತೃತ್ವದ ಅಕ್ಕರೆಯನ್ನು, ಕಳೆದುಹೋಗುವ ಏಕಮಾತ್ರ ಪುತ್ರನ ಪುತ್ರ ಶೋಕವನ್ನು ಮನಮುಟ್ಟುವಂತೆ ಅಭಿನಯಿಸಿದರು.

ಮುಂದಿನ ಅರ್ಧ ವೀರಾವೇಶದ ಅಭಿಮನ್ಯುವಾಗಿ ಚುರುಕು ನಡೆಯ ಮಾ| ಸ್ವಸ್ತಿಕ್‌ ಶರ್ಮ ಉತ್ತಮ ದಿಗಿಣಗಳನ್ನು ಪ್ರದರ್ಶಿಸಿ ರಂಜಿಸಿದರು. ಸಾರಥಿಯಾಗಿ ಮಾ| ದತ್ತೇಶ್‌ ಮಾವಿನಕಟ್ಟೆ ದಿಗಿಣಗಳನ್ನು ಉಣಬಡಿಸಿದರು. ಕರ್ಣನಾಗಿ ಮಾ| ರೂಪೇಶ್‌, ಸೈಂಧವನಾಗಿ ಮಾ| ಸನತ್‌ ಇಡಿಯಡ್ಕ, ಕೋಟೆ ಬಲಗಳಾಗಿ ಮಾ| ನಿರಂಜನ ಕಾರಡ್ಕ, ಮಾ| ಹರ್ಷಲ್‌ ಮಾಯಿಲೆಂಗಿ ಹಾಗೂ ದುಶ್ಯಾಸನ, ಸುಃಸಳರಾಗಿ ಅವನಿಕಾ ಕಾಟುಕುಕ್ಕೆ ಮತ್ತು ಕು| ವೀಕ್ಷಿತಾ ಪೆರುವಾಯಿ ಪಾತ್ರ ನಿರ್ವಹಿಸಿದರು. ಲಕ್ಷಣ ಕುಮಾರನಾಗಿ ಕು| ಅಭಿ ಮೂಡಬಿದಿರೆ ಚುರುಕಾಗಿ ಪಾತ್ರ ವಹಿಸಿದರು. 

Advertisement

ಬಾಲಕೃಷ್ಣ ಪೆರ್ಲ 

Advertisement

Udayavani is now on Telegram. Click here to join our channel and stay updated with the latest news.

Next