Advertisement

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು: ಡಾ|ಸುರೇಂದ್ರ ಕುಮಾರ್‌

01:42 PM Jul 30, 2019 | Team Udayavani |

ಮುಂಬಯಿ, ಜು. 29: ಮಹಾನಗರದಲ್ಲಿ ಆಟಿ ಆಚರಣೆಯು ಒಂದು ರೀತಿಯ ಆಡಂಬರದಂತಾಗಿದ್ದು, ಇದನ್ನು ಕಂಡ ಕಿರಿಯರು ಆಟಿ ತಿಂಗಳು ಕಷ್ಟದ ತಿಂಗಳೆಂದು ಭಾವಿಸದೆ ನಮ್ಮ ಹಿರಿಯರು ಮೊದಲು ಈ ರೀತಿ ಬಗೆಬಗೆಯ ತಿಂಡಿ ತಿನಿಸುಗಳಿಂದ ಆಡಂಬರದಲ್ಲಿ ಜೀವನ ನಡೆಸುತ್ತಿದ್ದರು ಅನ್ನುವಷ್ಟಕ್ಕೆ ತಲಪುವಂತಾಗಿದೆ. ಈ ವೇದಿಕೆಯು ಹಿಂದಿನ ಹಿರಿಯರ ಮನೆಯನ್ನು ನೆನಪಿಸುತ್ತಿದ್ದು, ನಿಜವಾಗಿಯೂ ಆಟಿಯ ಅರ್ಥವು ಇಲ್ಲಿ ಕಂಡುಬರುತ್ತಿದೆ. ಮಕ್ಕಳು ಕೇಳುವ ಎಲ್ಲವನ್ನೂ ನೀಡುವುದರ ಬದಲು ಮಕ್ಕಳಿಗೆ ಬೇಕಾದುದನ್ನೇ ನೀಡುವುದರೊಂದಿಗೆ ಅವರ ಪ್ರತಿಭೆಗೆ ಮಾರಕವಾಗದಂತೆ ಒಳ್ಳೆಯ ಮಾರ್ಗದರ್ಶನವನ್ನು ನೀಡಬೇಕಾಗಿದೆ ಎಂದು ಕನ್ನಡಿಗರ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ಅಭಿಪ್ರಾಯಿಸಿದರು.

Advertisement

ಕುಲಾಲ ಸಂಘ ಮುಂಬಯಿ, ಇದರ ಮಹಿಳಾ ವಿಭಾಗದ ವತಿಯಿಂದ ಜು. 28ರಂದು ಅಪರಾಹ್ನ ದಾದರ್‌ ಪಶ್ಚಿಮದ ಡಿಎಸ್‌ ಬಾಬ್ರೆಕರ್‌ ಮಾರ್ಗದ ಐಇಎಸ್‌ ಮೋಡರ್ನ್ ಇಂಗ್ಲಿಷ್‌ ಸ್ಕೂಲ್ ತಳ ಮಹಡಿಯಲ್ಲಿ ಜರಗಿದ ‘ಆಟಿದ ಲೇಸ್‌’ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮ ಹಿರಿಯರ ಸಂಪ್ರದಾಯದಲ್ಲಿ ಮೂಢನಂಬಿಕೆಯ ಬದಲು ಮೂಲ ನಂಬಿಕೆಯಿದೆ. ವೈಜ್ಞಾನಿಕೆ ಹಿನ್ನೆಲೆಯಿದೆ. ಆಟಿದ ಅಮವಾಸ್ಯೆಯಲ್ಲಿ ಹಿರಿಯರನ್ನು ನೆನಪಿಸುತ್ತೇವೆ. ದೈವ ದೇವರು ನಮ್ಮ ಮನೆಯೊಳಗಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಗಮಂಡಲದಂತಹ ಪೂಜೆಯನ್ನು ಮಾಡುವುದಕ್ಕಿಂತ ಬಡ ಮಕ್ಕಳ ಶಿಕ್ಷಣಕ್ಕೆ ಸಹಕರಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಎಲ್. ಕುಲಾಲ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅನಂತರ ಚೆನ್ನೆಮಣೆ ಆಡುವುದರ ಮೂಲಕ ಚಾಲನೆ ನೀಡಿದರು. ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌ ಮಾತನಾಡಿ, ಕೇವಲ ಕೆಲವೇ ದಿನಗಳಲ್ಲಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ಕೇಂದ್ರ ಸಮಿತಿಯ ಮಹಿಳಾ ವಿಬಾಗದ ಸದಸ್ಯರು ಮಾತ್ರವಲ್ಲದೆ ಎಲ್ಲ ಉಪಸಮಿತಿಗಳ ಮಹಿಳಾ ವಿಭಾಗವು ಸಹಕರಿಸಿದೆ ಎಂದು ನುಡಿದು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕಲಾ ಜಗತ್ತು ಚಿಣ್ಣರ ಬಿಂಬದ ಟ್ರಷ್ಟಿ ವಿನೋದಿನಿ ಎಸ್‌. ಹೆಗ್ಡೆ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಆಟಿ ತಿಂಗಳು ದಾರಿದ್ರ್ಯದ ತಿಂಗಳು ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದರೂ, ಇದರ ಮಧ್ಯೆ ಕೆಮಿಕಲ್ನ್ನು ಉಪಯೋಗಿಸುದರಿಂದ ಪ್ರಕೃತಿ ನಿಜವಾದ ಶಕ್ತಿಯನ್ನು ಕಳಕೊಳ್ಳುತ್ತಿದ್ದು, ಇದರಿಂದ ಆರೋಗ್ಯ ಕೆಟ್ಟು ಹೋಗುತ್ತದೆ. ಹಿಂದಿನ ಕಾಲದಲ್ಲಿ ಈ ರೀತಿ ಇರಲಿಲ್ಲ. ಮೊದಲಿನವರು ಶ್ರಮ ಜೀವಿಗಳಾಗಿದ್ದು ಆರೋಗ್ಯವಂತರಾಗಿದ್ದರು ಎಂದರು.

ಅಂಬರ್‌ನಾಥ್‌ ಜೈದೀಪ್‌ ಕನ್‌ಸ್ಟ್ರಕ್ಷನ್‌ ಮಾಲಕರಾದ ಜಗದೀಶ್‌ ಆರ್‌. ಬಂಜನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್‌ ಪ್ರಾಸ್ತಾವಿಕವಾಗಿ ಮಾತನಾಡಿ ಆಟಿಯ ಬಗ್ಗೆ ವಿವರಿಸಿದರು.

Advertisement

ಪತ್ರಕರ್ತ ಬೊಕ್ಕಪಟ್ಣ ದಿನೇಶ್‌ ಕುಲಾಲ್, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಸಾಲ್ಯಾನ್‌, ಸುನಿಲ್ ಸಾಲ್ಯಾನ್‌, ಮಮತಾ ಜಿ. ಸಾಲ್ಯಾನ್‌, ಸಂಘದ ಉಪಾಧಕ್ಷರಾದ ರಘು ಎ. ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್‌, ಗೌರವ ಕೋಶಾಧಿಕಾರಿ ಜಯ ಎಸ್‌. ಅಂಚನ್‌, ಅಮೂಲ್ಯ ಸಂಪಾದಕ ಶಂಕರ್‌ ಮೂಲ್ಯ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿ, ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಆಧುನಿಕ ಸೌಲಭ್ಯದ ಕುಲಾಲ ಭವನಕ್ಕೆ ಎಲ್ಲರ ಸಹಕಾರ ಕೋರಿದರು.

ಮಹಿಳಾ ವಿಭಾಗದ ಕೋಶಾಧಿಕಾರಿ ಲತಾ ಎಸ್‌. ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರನ್ನು ಹಾಗೂ ಸ್ಥಳೀಯ ಸಮಿತಿಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌ ಸ್ವಾಗತಿಸಿದರು ಕಾರ್ಯದರ್ಶಿ ಮಾಲತಿ ಜೆ. ಅಂಚನ್‌ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ರೇಖಾ ಮೂಲ್ಯ ಮತ್ತು ಆಶಾ ಕುಲಾಲ್ ಪ್ರಾರ್ಥನೆಗೈದರು. ಕಾರ್ಯಕಾರಿ ಸಮಿತಿಯ ಮತ್ತು ಉಪಸಮಿತಿಗಳ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಕ್ಕಳಿಂದ ಆಟಿಯ ನೃತ್ಯ ಮತ್ತು ಮಹಿಳೆಯರಿಂದ ಪಾಡ್ದನ ನಡೆಯಿತು.

ಚಿತ್ರ-ವರದಿ: ಈಶ್ವರ ಎಂ. ಐಲ್

Advertisement

Udayavani is now on Telegram. Click here to join our channel and stay updated with the latest news.

Next