Advertisement

ಕೋವಿಡ್‌ ಸಂಕಷ್ಟದಲ್ಲಿ ಮಕ್ಕಳ ಶಿಕ್ಷಣ ಸವಾಲು

11:58 AM Mar 23, 2022 | Team Udayavani |

ಬೆಂಗಳೂರು: ಬೆಂಗಳೂರು ಸ್ಲಂ ಮಹಿಳಾ ಸಂಘಟನೆ ಹಾಗೂ ಆಕ್ಷನ್‌ ಇಂಡಿಯಾ ಮಂಗಳವಾರ ಸಾರ್ವಜನಿಕ ಅಹವಾಲು “ಕೋವಿಡ್‌ ಸಂಕಷ್ಟದಲ್ಲಿ ಮಕ್ಕಳ ಶಿಕ್ಷಣ ಸವಾಲುಗಳು’ ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಸಮಸ್ಯೆಗಳ ಕುರಿತ ಅಹವಾಲುಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.

Advertisement

ಜನತಾ ಕಾಲೋನಿ ನಿವಾಸಿ ಕವಿತಾ ಮಾತನಾಡಿ, ನಾನು ಓದಿಲ್ಲ. ಮಕ್ಕಳು ಕಲಿತು ದೊಡ್ಡ ಉದ್ಯೋಗ ಪಡೆಯಲಿವೆ ಎನ್ನುವ ಕಾರಣಕ್ಕೆ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದೆ. ಕೊರೊನಾ ಬಳಿಕ ಮಕ್ಕಳ ಶಾಲೆಗೆ ಹೋಗಿಲ್ಲ. ಆನ್‌ಲೈನ್‌ ತರಗತಿಯು ತೆಗೆದು ಕೊಂಡಿಲ್ಲ. ಆದರೂ ಶುಲ್ಕದ ಬಾಕಿ ಮೊತ್ತವನ್ನು ಪಾವತಿಸದೆ ತರಗತಿಗೆ ಸೇರ್ಪಡೆಗೊಳಿಸಲು ಸಾಧ್ಯವಿಲ್ಲ ಎನ್ನುವು ದಾಗಿ ಮಕ್ಕಳನ್ನು ಶಾಲೆಯಿಂದ ಹೊರ ಹಾಕಿದ್ದಾರೆ. ವರ್ಗಾವಣೆ ಪ್ರಮಾಣ ಪತ್ರ ಪಡೆಯೋಣವೆಂದರೂ ಶಾಲೆಗಳು ನೀಡುತ್ತಿಲ್ಲ. ಈಗಾಗಲೇ ಮಗುವಿನ ಮೂರು ವರ್ಷದ ಶಿಕ್ಷಣ ಹಾಳಾಗಿದೆ ಎಂದು ಹೇಳಿದರು.

ಪೋಷಕಿ ಗಾಯತ್ರಿ ಮಾತನಾಡಿ, ಕೋವಿಡ್‌ ಪೂರ್ವದಲ್ಲಿ ನಾನು ಹಾಗೂ ಪತಿ ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದೇವೆ. ನನಗೆ ನಿತ್ಯ 500 ರೂ. ಹಾಗೂ ಪತಿಗೂ ಉತ್ತಮ ವೇತನ ಸಿಗುತ್ತಿತ್ತು. ಮನೆ ಬಾಡಿಗೆ, ರೇಷನ್‌, ನೀರಿನ ಹಾಗೂ ವಿದ್ಯುತ್‌ ಬಿಲ್‌ ಪಾವತಿಸಿದ ಮೂವರು ಮಕ್ಕಳನ್ನು ಸಮೀಪದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದೆ. ಕೊರೊನಾ ಬಳಿಕ ನನ್ನ ವೇತನ 220 ರೂ. ಹಾಗೂ ಪತಿ ಸಂಬಳ ಇಳಿಕೆಯಾಯಿತು. ಇದರಿಂದ ಬಾಡಿಗೆ ಪಾವತಿಸಿ, ಮನೆ ನಡೆಸುವುದು ಕಷ್ಟವಾಗಿದೆ. ಶುಲ್ಕ ಪಾವತಿಸಿಲ್ಲ ಎಂದು ಪರೀಕ್ಷೆ ಸಂದರ್ಭದಲ್ಲಿ ಶಾಲೆಯವರು ಮಕ್ಕಳನ್ನು ತರಗತಿಯಿಂದ ಹೊರಗೆ ಹಾಕಿದ್ದಾರೆ. ಎಷ್ಟೇ ಕಾಡಿಬೇಡಿದರೂ ಮಕ್ಕಳನ್ನು ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ ಎಂದು ಅಹವಾಲು ಅಧಿಕಾರಿಗಳಿಗೆ ಸಲ್ಲಿಸಿದರು. ವಿದ್ಯಾರ್ಥಿ ಕಿಶೋರ್‌ ಮಾತನಾಡಿ, ನನಗೆ ಅಪ್ಪ ಹಾಗೂ ಅಮ್ಮ ಇಬ್ಬರು ಇಲ್ಲ. ಅಜ್ಜಿ ನೋಡಿಕೊಳ್ಳುತ್ತಿದ್ದಾರೆ. ಅವರಿಗೂ ವಯಸ್ಸು ಆಗಿದೆ. ಕೊರೊನಾ ಸಂದರ್ಭದಲ್ಲಿ ಶುಲ್ಕ ಪಾವತಿ ಮಾಡಲಾಗದ ಹಿನ್ನೆಲೆ ಶಾಲೆಯನ್ನು ಬದಲಾಯಿಸಿದೆ. ಮನೆಯಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಇರಲು ಕಷ್ಟ ಸಾಧ್ಯವಾದ ಹಿನ್ನೆಲೆ ಅಜ್ಜಿ ವಸತಿ ನಿಲಯ ಹೊಂದಿ ರುವ ಶಾಲೆಗೆ ಸೇರ್ಪಡೆ ಮಾಡಿದ್ದಾರೆ. ಅಲ್ಲಿಯೂ ಶುಲ್ಕ ಪಾವತಿ ಮಾಡಿಲ್ಲ. ತರಗತಿಗೆ ಕುಳಿತು ಕೊಳ್ಳಲು ಅವಕಾಶ ನೀಡಿಲ್ಲ. ಸಮಸ್ಯೆ ಅರಿತ ಅಜ್ಜಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಹಣ ವಿಲ್ಲದೆ ನಾನು ಶಿಕ್ಷಣದಿಂದ ವಂಚಿತನಾಗುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಥಮಿಕ ಶಿಕ್ಷಣ ಇಲಾಖೆಯ ನರಸಿಂಹಯ್ಯ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿನ ತರಗತಿ ಶುಲ್ಕ ಬಾಕಿಯಿದ್ದರೂ, ಪೋಷಕರು ವರ್ಗಾವಣೆ ಪತ್ರ ನೀಡಬೇಕು. ಈ ಬಗ್ಗೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ. ಒಂದು ವೇಳೆ ಆಡಳಿತ ಮಂಡಳಿ ವರ್ಗಾವಣೆ ನೀಡಿದೆ ಹೋದರೆ ಆಯಾ ಕ್ಷೇತ್ರದ ಬಿಇಒ ಅವರನ್ನು ಸಂಪರ್ಕಿಸಿ. ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಲು ಸಾಧ್ಯವಿದೋ ಅದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು. ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಂಜುಮಾನ್‌ ಮಾತನಾಡಿ, ಅಲ್ಪಾಸಂಖ್ಯಾತರ ನಿಗಮ ದಿಂದ ಅಲ್ಪಸಂಖ್ಯಾಕರಿಗೆ ವಿವಿಧ ಯೋಜನೆಗಳಿವೆ. ಕೋವಿಡ್‌ ಬಳಿಕ ಸ್ವ ಉದ್ಯೋಗವನ್ನು ಪ್ರಾರಂಭಿ ಸಲು ಉತ್ತೇಜನ ನೀಡಲಾಗುತ್ತಿದೆ ಹಾಗೂ ಇತರೆ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳ ಸಂರಕ್ಷಣಾ ಸಂಸ್ಥೆ ನಿರ್ದೇಶಕಿ ಕವಿತಾ ರತ್ನಾ, ಐಟಿ ಫ‌ರ್‌ ಚೇಂಜ್‌ ನಿರ್ದೇಶಕ ಗುರು ಕಾಶಿನಾಥ್‌, ಕಾನೂನು ಸಂರಕ್ಷಣಾ ವಿಭಾಗದ ವಿನಯ ಕೆ. ಶ್ರೀನಿವಾಸ್‌ ಉಪಸ್ಥಿತರಿದ್ದರು. ಝಾನ್ಸಿ ಸ್ವಾಗತಿಸಿದರು, ನಂದಿನಿ ಕಾರ್ಯಕ್ರಮ ನಿರ್ವಹಿಸಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next