Advertisement

ಮಕ್ಕಳ ಆಸಕ್ತಿಗೆ ರೆಕ್ಕೆ ಕಟ್ಟಿದ “ರೆಕ್ಕೆ ಕಟ್ಟೋಣ ಬಾ’ 

06:00 AM Jun 29, 2018 | Team Udayavani |

ಗಾಯಗೊಂಡ ಪಕ್ಷಿಗೆ ಆರೈಕೆ ಮಾಡುವ ಗೌತಮನ ಕಥೆ ಮತ್ತು ಅಂಗುಲಿಮಾಲನನ್ನು ತನ್ನ ಸಾತ್ವಿಕತೆಯ ಮೂಲಕವೇ ಎದುರಿಸುವ ಬುದ್ಧನ ಕಥೆಗಳು ನಾಟಕದ ದೃಶ್ಯಗಳಾಗಿ ಮೂಡಿಬರುತ್ತವೆ. ಕೊನೆಯಲ್ಲಿ ಎಲ್ಲ ಮಕ್ಕಳೂ ಕಳ್ಳತನ ತೊರೆದು ಚಿಕ್ಕಪ್ಪನೊಂದಿಗೆ ಕೃಷಿ ಮಾಡಲು ಹೊಲಗಳಿಗೆ ತೆರಳುತ್ತಾರೆ. 

Advertisement

ಶಾಲಾ ಪಾಠದೊಂದಿಗೆ ಮನಸ್ಸನ್ನು ಅರಳಿಸುವ ಕಲೆಯ ಸಾಮೀಪ್ಯವೂ ವಿದ್ಯಾರ್ಥಿಗಳಿಗೆ ಬೇಕು ಎನ್ನುವ ಅರಿವಿನೊಂದಿಗೆ ಬ್ರಹ್ಮಾವರದ ಎಸ್‌. ಎಂ. ಎಸ್‌. ಶಾಲೆಯಲ್ಲಿ “ರೆಕ್ಕೆ ಕಟ್ಟೋಣ ಬಾ’ ಎಂಬ ಹತ್ತು ದಿನಗಳ ಮಕ್ಕಳ ಕೂಟವು ಜರಗಿತು. ಖ್ಯಾತ ರಂಗಕರ್ಮಿ ಡಾ| ಶ್ರೀಪಾದ ಭಟ್‌ ನಿರ್ದೇಶನದಲ್ಲಿ ಶಿಬಿರವು ವಿನ್ಯಾಸಗೊಂಡಿತ್ತು. ಎಸ್‌. ಎಂ. ಎಸ್‌. ಸಮೂಹ ಸಂಸ್ಥೆಗಳ ಒಟ್ಟು ಎಂಭತ್ತು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಮಕ್ಕಳ ಆಸಕ್ತಿಗನುಗುಣವಾಗಿ ಸಂಗೀತ, ಚಿತ್ರಕಲೆ, ನಾಟಕ ಮತ್ತು ನೃತ್ಯ ವಿಭಾಗಗಳಲ್ಲಿ ತರಬೇತಿಯನ್ನು ನೀಡಲಾಗಿತ್ತು. ಪ್ರತಿದಿನ ಬೆಳಗಿನ ಅವಧಿಯಲ್ಲಿ ಸಾಹಿತ್ಯ ಸಂವಾದ, ಸಂಗೀತ ರಸಗ್ರಹಣ, ನೃತ್ಯ ಪ್ರಾತ್ಯಕ್ಷಿಕೆ, ರೇಖಾಚಿತ್ರ ರಚನೆ, ಸಿನೆಮಾ ರಸಗ್ರಹಣ, ಕಥಾಪ್ರಪಂಚ ಮೊದಲಾದ ಸೌಂದರ್ಯ ಶಾಸ್ತ್ರಗಳ ಬಗ್ಗೆ ಆಯಾ ಕ್ಷೇತ್ರದ ಪರಿಣಿತರು ಮಾಹಿತಿ ನೀಡಿದರು. ಮಧ್ಯಾಹ್ನದ ಅವಧಿಯಲ್ಲಿ ಶಿಬಿರಾರ್ಥಿಗಳ ಆಯ್ಕೆಯ ವಿಷಯದಲ್ಲಿ ತರಬೇತಿಯನ್ನು ನೀಡಲಾಯಿತು. ಖ್ಯಾತ ಸಾಹಿತಿಗಳಾದ ಜಯಂತ ಕಾಯ್ಕಿಣಿ ಸಾಹಿತ್ಯ ಸಂವಾದವನ್ನು ನಡೆಸಿಕೊಟ್ಟರೆ, ಸಿನೆಮಾ ರಸಗ್ರಹಣದ ಬಗ್ಗೆ ಸಂವರ್ತ ಸಾಹಿಲ್‌ ಮಾಹಿತಿ ನೀಡಿದರು. ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಾವು ತಯಾರಿಸಿದ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸಿದರು. ಹಾಳಾದ ನೀರಿನ ಟ್ಯಾಂಕನ್ನು ಬಳಸಿ ಸೃಷ್ಟಿಸಿದ ಬುದ್ಧನ ಪ್ರತಿಮೆ ಗಮನ ಸೆಳೆಯಿತು. ಸಂಗೀತ ವಿಭಾಗದ ವಿದ್ಯಾರ್ಥಿಗಳು ತಾವು ಕಲಿತ ಹಾಡುಗಳನ್ನು ಹಾಡಿದರು. ನೃತ್ಯ ವಿಭಾಗದವರು ಮಾನವನ ವಿಕಾಸದೊಂದಿಗೆ ನೃತ್ಯವೂ ವಿಕಾಸಗೊಳ್ಳುತ್ತ ಬಂದ ಹಾದಿಯನ್ನು ತಮ್ಮ ಪ್ರಸ್ತುತಿಯಲ್ಲಿ ತೋರಿಸಿದರು. 


ನಾಟಕ ವಿಭಾಗದ ವಿದ್ಯಾರ್ಥಿಗಳು ಡಾ| ಆರ್‌. ವಿ. ಭಂಡಾರಿಯವರ ಬೆಳಕಿನ ಕಡೆಗೆ ನಾಟಕವನ್ನು ಪ್ರದರ್ಶಿಸಿದರು. ಬುದ್ಧನ ಕರುಣೆ ಮತ್ತು ಅಕ್ಷರದ ಬೆಳಕು ಇವೆರಡು ಆರ್‌. ವಿ. ಭಂಡಾರಿಯವರ ಬರಹದ ಹಿಂದಿರುವ ಪ್ರಮುಖ ಆಶಯಗಳು. ಈ ನಾಟಕ ರುಂಡಮಾಲೆಯನ್ನು ಧರಿಸಿ, ಜನರನ್ನು ಹಿಂಸಿಸುವ ಅಂಗುಲಿಮಾಲನನ್ನು ಬುದ್ಧ ಬದಲಾಯಿಸಿದಂತೆ ಸುದರ್ಶನನೆಂಬ ಪುಟ್ಟ ಬಾಲಕ ಮಕ್ಕಳ ಕಳ್ಳನೋರ್ವನ ಮನಃಪರಿವರ್ತನೆ ಮಾಡುವ ಕಥಾನಕವನ್ನು ಹೊಂದಿದೆ. ಮಕ್ಕಳ ಕಳ್ಳನ ಕೈಗೆ ಸಿಕ್ಕಿಬೀಳುವ ಸುದರ್ಶನ ಅಕ್ಷರದ ಅರಿವನ್ನು ಅಲ್ಲಿರುವ ಮಕ್ಕಳಲ್ಲಿ ಬಿತ್ತುವ ಮೂಲಕ ಬಿಡುಗಡೆಯ ದಾರಿಯನ್ನು ತೋರಿಸುತ್ತಾನೆ. ನಿಧಾನವಾಗಿ ತಾನು ನೋಡಿದ ನಾಟಕಗಳ ಬಗ್ಗೆ ವರದಿ ನೀಡುತ್ತಲೇ ಕ್ರೂರಿಯಾದ ಚಿಕ್ಕಪ್ಪನನ್ನು ಬದಲಾಯಿಸುತ್ತಾನೆ. ದೇವದತ್ತನಿಂದ ಗಾಯಗೊಂಡ ಪಕ್ಷಿಗೆ ಆರೈಕೆ ಮಾಡುವ ಗೌತಮನ ಕಥೆ ಮತ್ತು ಅಂಗುಲಿಮಾಲನನ್ನು ತನ್ನ ಸಾತ್ವಿಕತೆಯ ಮೂಲಕವೇ ಎದುರಿಸುವ ಬುದ್ಧನ ಕಥೆಗಳು ನಾಟಕದ ದೃಶ್ಯಗಳಾಗಿ ಮೂಡಿಬರುತ್ತವೆ. ನಾಟಕದ ಕೊನೆಯಲ್ಲಿ ಎಲ್ಲ ಮಕ್ಕಳೂ ಕಳ್ಳತನ ತೊರೆದು ಚಿಕ್ಕಪ್ಪನೊಂದಿಗೆ ಕೃಷಿ ಮಾಡಲು ಹೊಲಗಳಿಗೆ ತೆರಳುತ್ತಾರೆ.

ಡಾ| ಶ್ರೀಪಾದ ಭಟ್ಟರ ಮಾರ್ಗದರ್ಶನ ಮತ್ತು ವಿನ್ಯಾಸದಲ್ಲಿ ಭುವನ್‌ ಮಣಿಪಾಲ ಅವರು ನಾಟಕವನ್ನು ನಿರ್ದೇಶಿಸಿದ್ದರು. ರಂಗಸಜ್ಜಿಕೆ ದಾಮು ಹೊನ್ನಾವರ ಮತ್ತು ಪ್ರಶಾಂತ ಉದ್ಯಾವರ ಅವರದು. ರಾಜು ಮಣಿಪಾಲ ಅವರ ಬೆಳಕಿನ ಸಂಯೋಜನೆ ನಾಟಕಕ್ಕೆ ಹೊಸದೊಂದು ಮೆರಗು ನೀಡಿತ್ತು. 

ಸಂಗೀತದಲ್ಲಿ ಗಣೇಶ ಎಂ. ಅವರು ನೆರವು ನೀಡಿದರು. ಮಕ್ಕಳ ಲವಲವಿಕೆಯ ಅಭಿನಯ ನಾಟಕವನ್ನು ಅಪ್ಯಾಯಮಾನವಾಗಿಸಿತು. ನೃತ್ಯವಿಭಾಗದಲ್ಲಿ ಪ್ರಶಾಂತ ಉದ್ಯಾವರ, ಬನ್ನಂಜೆ ಶ್ರೀಧರ ರಾವ್‌, ಸಂಗೀತ ವಿಭಾಗದಲ್ಲಿ ವಿಲ್ಸನ್‌ ಒಲಿವೆರಾ, ರಾಜೇಶ್‌, ಕರಕುಶಲ ಮತ್ತು ಚಿತ್ರಕಲಾ ವಿಭಾಗದಲ್ಲಿ ವಾಣಿ ಬೈಕಾಡಿ ಮತ್ತು ನಾಗಭೂಷಣ ಮಕ್ಕಳನ್ನು ತರಬೇತುಗೊಳಿದ್ದರು. ಸಂಗಮ ಕಲಾವಿದರು, ಮಣಿಪಾಲ ಇದರ ಬಳಗದವರು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಿದರು. ನಮ್ಮ ಮಕ್ಕಳ ಧ್ವನಿಯು ಭಾಷೆ ಮತ್ತು ಸಾಹಿತ್ಯದ ಆದೃìತೆಯಿಲ್ಲದೇ ಕರ್ಕಶವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಆಂಗ್ಲಮಾಧ್ಯಮ ಶಾಲೆಯೊಂದರಲ್ಲಿ ಇಂತಹ ಶಿಬಿರವನ್ನು ಆಯೋಜಿಸಿದ ಪ್ರಾಂಶುಪಾಲರು ಮತ್ತು ಶಾಲಾಭಿವೃದ್ಧಿ ಸಮಿತಿಯವರ ಬದ್ಧತೆ ಸ್ತತ್ಯಾರ್ಹವಾಗಿದೆ.

ಸುಧಾ ಆಡುಕಳ 

Advertisement
Advertisement

Udayavani is now on Telegram. Click here to join our channel and stay updated with the latest news.

Next