Advertisement

ಮಕ್ಕಳ, ಮಹಿಳೆಯರ ಹಕ್ಕು, ರಕ್ಷಣೆ: ಸಂವಾದ

07:55 AM Jul 26, 2017 | Team Udayavani |

ಕುಂದಾಪುರ: ಕುಂದಾಪುರ ತಾಲೂಕಿನ ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ  ಮಕ್ಕಳು ಮತ್ತು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಅವರ ರಕ್ಷಣೆಗೆ ಸಂಬಂಧಿಸಿದ  ಸಮಸ್ಯೆಗಳ ಕುರಿತು  ಸಂವಾದ ಕಾರ್ಯಕ್ರಮ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ತಾಲೂಕು ಹಾಗೂ ಜಿಲ್ಲಾಡಳಿತದ ಪ್ರತಿನಿಧಿಗಳು, ಸಿಡಬ್ಲೂéಸಿ ಸಂಸ್ಥೆ, ತಾಲೂಕು ಪಂಚಾಯತ್‌, ಮಕ್ಕಳ ಸಂಘ, ಮಕ್ಕಳ  ಹಾಗೂ ಮಹಿಳಾ ಮಿತ್ರ ಸಹಭಾಗಿತ್ವದಲ್ಲಿ ಜರಗಿತು.
ಸ್ಥಳೀಯಾಡಳಿತದ ಭಾಗೀದಾರರಾದ ವಿವಿಧ ಇಲಾಖೆಗಳ ಪ್ರತಿನಿಧಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ಜಾರಿಪಡೆಯ ಕಾರ್ಯಾಧ್ಯಕ್ಷೆ ಶಿಲ್ಪಾನಾಗ್‌ ಅವರು ಈ ಸಂವಾದದಲ್ಲಿ ಭಾಗವಹಿಸಿ ತಾಲೂಕಿನ ವಿವಿಧ ತಾ.ಪಂ. ವ್ಯಾಪ್ತಿಯಲ್ಲಿನ  ಮಕ್ಕಳ ಹಕ್ಕು ಹಾಗೂ ರಕ್ಷಣೆ, ಗ್ರಾ.ಪಂ.ವ್ಯಾಪ್ತಿಯ ಸಮಸ್ಯೆಗಳು ಹಾಗೂ ಈ ಬಗ್ಗೆ  ತೆಗೆದುಕೊಂಡ ಕ್ರಮಗಳ ಬಗ್ಗೆ  ವಿವರವಾಗಿ ಸಭೆಯ ಮುಂದಿಟ್ಟರು.
ಮಕ್ಕಳ ಮತ್ತು ಮಹಿಳೆಯರ  ಹಕ್ಕು ಮತ್ತು ರಕ್ಷಣೆಯ ಕುರಿತಾದ  ಐದು ಸಮಸ್ಯೆಗಳ ಬಗ್ಗೆ  ಸಭೆಯಲ್ಲಿ  ಸಂವಾದ ನಡೆಸಲಾಯಿತು.

ಅಪಾಯಕಾರಿ ಕಲ್ಲುಕೋರೆಗಳು
ತಾಲೂಕಿನ  ಹಲವಾರು ಕಡೆಗಳಲ್ಲಿ  ರಕ್ಷಣಾ ಬೇಲಿ ಇಲ್ಲದ ಕಲ್ಲುಕೋರೆಯ ಹೊಂಡ, ಮಳೆಗಾಲದಲ್ಲಿ ತುಂಬಿರುವ ಮದಗಗಳು, ಕೆರೆಗಳಿಗೆ ಮಕ್ಕಳು  ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆಗಳು ನಡೆದಿದೆ. ಈ ನಿಟ್ಟಿನಲ್ಲಿ ಈ ಅಪಾಯಕಾರಿ ಹೊಂಡಗಳ ಪಕ್ಕದಲ್ಲಿ ಸೂಚನಾ ಫಲಕ ಅಥವಾ ತಡೆಗೋಡೆಯನ್ನು ನಿರ್ಮಿಸುವ ಬಗ್ಗೆ  ಕ್ರಮ ತೆಗೆದುಕೊಳ್ಳಬೇಕು , ರಸ್ತೆ ತಿರುವುಗಳಲ್ಲಿ  ಹೆದ್ದಾರಿ ಉಬ್ಬುಗಳನ್ನು ರಚಿಸಬೇಕು  ಎಂದು ಮಕ್ಕಳ ಮಿತ್ರ ಆಲೂರು ಗ್ರಾ.ಪಂ. ವ್ಯಾಪ್ತಿಯ  ಪವನ್‌ ಕುಮಾರ್‌ ಸಭೆಯ ಗಮನಕ್ಕೆ ತಂದರು.

ಇದಕ್ಕೆ  ಧ್ವನಿಯಾಗಿ ಮಾತನಾಡಿದ ತ್ರಾಸಿ  ಮಕ್ಕಳ ಮಿತ್ರ ಶರತ್‌ ಮೊವಾಡಿ  ಅವರು  ಶಾಲಾ ವಠಾರದಲ್ಲಿ ವಿದ್ಯುತ್‌ ಕಂಬಗಳು ಬಹಳಷ್ಟು  ಅಪಾಯಕಾರಿಯಾಗಿ ಇರುವುದು ಕೆಲವು ಕಡೆ ಕಂಡು ಬಂದಿರುತ್ತದೆ. ತೆರೆದ ಬಾವಿ, ಕಲ್ಲುಕೋರೆಗಳು  ಮಳೆಗಾಲದಲ್ಲಿ  ಮಕ್ಕಳಿಗೆ ಸಮಸ್ಯೆ ತಂದಿರುವ ಬಗ್ಗೆ  ಈಗಾಗಲೇ ಹಲವಾರು ದುರ್ಘ‌ಟನೆಗಳೇ ಸಾಕ್ಷಿಯಾಗಿದೆ.  ಕೆಲವು ಕಡೆಗಳಲ್ಲಿ ಶಾಲೆಯ ಬಳಿ ನಿರ್ಮಿಸಿರುವ  ನೀರಿನ ಟ್ಯಾಂಕ್‌ಗೆ ಅಳವಡಿಸಿರುವ ಮೆಟ್ಟಿಲಿನಲ್ಲಿ ಮಕ್ಕಳು ಹತ್ತಿ ಅಪಾಯವನ್ನು ತಂದುಕೊಳ್ಳುತ್ತಿರುವುದು ಕಂಡು ಬಂದಿರುತ್ತದೆ . ಈ ಬಗ್ಗೆ  ಸೂಕ್ತ  ಕ್ರಮವನ್ನು ಕೈಗೊಳ್ಳಬೇಕಾಗಿದೆ  ಎಂದರು.

ಸಿಡಬ್ಲ್ಯುಸಿ ಸಂಸ್ಥೆಯ ಕೃಪಾ ಅವರು ತಾಲೂಕಿನಲ್ಲಿ ಗುರುತಿಸಲಾದ ಅಪಾಯಕಾರಿ ಕಲ್ಲು ಕೋರೆಗಳು, ಮದಗಗಳು, ಕೊಜೆ ಹೊಂಡಗಳು, ಕಾಲುಸಂಕಗಳು, ನದಿಗಳ ಬಗ್ಗೆ  ಅಂಕಿ ಅಂಶಗಳನ್ನು ನೀಡಿದರು. ಅಲ್ಲದೇ ಸಮಸ್ಯೆ ಪರಿಹರಿಸಿದ  ಪ್ರದೇಶಗಳ ಬಗ್ಗೆಯೂ ವಿವರಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳ ಪರವಾಗಿ ಬೀಜಾಡಿ ಗ್ರಾ.ಪಂ.ಸದಸ್ಯ ರವೀಂದ್ರ ದೊಡ್ಮನೆ ಕೋಟೇಶ್ವರದ ಕೋಟಿಲಿಂಗೇಶ್ವರ ಕೆರೆಗೆ ಶಾಶ್ವತ‌ ಆವರಣಗೋಡೆಯನ್ನು ರಚಿಸಬೇಕು ಎನ್ನುವ ಮನವಿಯನ್ನು ಮಾಡಿದರು. ಕೊರ್ಗಿ ಗ್ರಾ.ಪಂ.ಉಪಾಧ್ಯಕ್ಷ  ಗೌರೀಶ್‌ ಹೆಗ್ಡೆ ಅವರು ಕಲ್ಲುಕೋರೆಗಳಿಗೆ ತಡೆಗೋಡೆಯನ್ನು ಯಾರು  ನಿರ್ಮಿಸಬೇಕು ಎನ್ನುವ ಬಗ್ಗೆ  ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು. ಅಂಪಾರು ಗ್ರಾ.ಪಂ. ಉಪಾಧ್ಯಕ್ಷ ಕಿರಣ್‌ ಹೆಗ್ಡೆ ಅಭಿಪ್ರಾಯ ಮಂಡಿಸಿ ಅಪಾಯಕಾರಿ ಕಲ್ಲುಕೋರೆಗಳಿಗೆ ಅನುಮತಿಯನ್ನು ನೀಡುವ ಸಂದರ್ಭದಲ್ಲಿಯೇ ಗ್ರಾ.ಪಂ. ಷರತ್ತುಗಳಿಗೆ ಒಳಪಡಿಸಿದ್ದಲ್ಲಿ  ಈ ಸಮಸ್ಯೆ ನಿಯಂತ್ರಣಕ್ಕೆ ತರಲು ಸಾಧ್ಯ ಎಂದರು.

Advertisement

ಗೋಪಾಡಿ ಗ್ರಾ.ಪಂ.ನ ಸುರೇಶ್‌ ಶೆಟ್ಟಿ  ಅವರು ತಮ್ಮ ಅಭಿಪ್ರಾಯ ಮಂಡಿಸಿ ಪ್ರಸ್ತುತ ರಾ.ಹೆ.ಯ ಪಕ್ಕದಲ್ಲಿಯೇ ಹಲವಾರು ಶಾಲೆಗಳು ಕಾರ್ಯಾಚರಿಸುತ್ತಿವೆ. ರಸ್ತೆ ದಾಟಿ ಮಕ್ಕಳು ಶಾಲೆಗೆ ಬರುವುದರಿಂದ  ಈ ಭಾಗದಲ್ಲಿ ಎನ್‌.ಎಚ್‌.ಗೆ ಸ್ಕೈ ವಾಕ್‌ ನಿರ್ಮಿಸಬೇಕು ಎಂದರು.

ಕಲ್ಲುಕೋರೆ ಹಾಗೂ ಇತರ ಸಮಸ್ಯೆಗಳ ಬಗ್ಗೆ  ಸಂವಾದದಲ್ಲಿ  ಕೇಳಿ ಬಂದ ವಿಚಾರಗಳನ್ನು  ಅವಲೋಕಿಸಿ ಮಾತಾನಡಿದ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್‌ ಅವರು ಕಲ್ಲುಕೋರೆಯ ಬಗ್ಗೆ  ಮುಚ್ಚುವ ಬಗ್ಗೆ  ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ  ಜಾರಿಪಡೆಯನ್ನು  ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ಹಂತದಲ್ಲಿ  ಸಮಿತಿಗಳನ್ನು ರಚಿಸಿಕೊಂಡು  ಮುಖ್ಯವಾಗಿ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಲು ಸಿದ್ಧತೆೆಯನ್ನು ತೆಗೆದು ಕೊಂಡಿದ್ದೇವೆ. ಕಲ್ಲುಕೋರೆಗಳಿಗೆ ಅನುಮತಿಯನ್ನು ನೀಡುವಾಗ   ಷರತ್ತು ಗಳನ್ನು ಒಳಪಡಿಸಬೇಕು. ಜಿಲ್ಲೆ ಯಲ್ಲಿ  ಈಗಾಗಲೇ ಪಾಳು ಬಿದ್ದಿರುವ  ಕಲ್ಲುಕೋರೆಗಳಿಗೆ ತಡೆಗೋಡೆಯನ್ನು ಕಲ್ಪಿಸುವ ಬಗ್ಗೆ ಜಿಲ್ಲಾ ಧಿಕಾರಿಗಳ ನೇತೃತ್ವದಲ್ಲಿ  ಕ್ರಮತೆಗೆದುಕೊಳ್ಳಲಾಗಿದ್ದು  ರೂ.85 ಲಕ್ಷ  ಈ ಬಗ್ಗೆ ಅನುದಾನ ಬಿಡುಗಡೆಯಾಗಿರುತ್ತದೆ. ಮದಗಗಳ ಬಗ್ಗೆ ಹೇಗೆ ರಕ್ಷಣಾ ಕಾರ್ಯವನ್ನು ಮಾಡುವ ಬಗ್ಗೆ  ಚಿಂತನೆಗಳು ನಡೆದಿದೆ. ರಾ.ಹೆದ್ದಾರಿಯ ಪಕ್ಕದಲ್ಲಿರುವ ಶಾಲೆಗಳಿಗೆ ರಸ್ತೆ ದಾಟಿ ಮಕ್ಕಳು ಬರಲು  ಸ್ಕೈ ವಾಕ್‌ಗಳನ್ನು ನಿರ್ಮಿಸುವ ಬಗ್ಗೆ ಈಗಾಗಲೇ  ರಾ. ಹೆ. ಪ್ರಾಧಿಕಾರಕ್ಕೆ  ತಿಳಿಸಲಾಗಿದೆ ಎಂದರು.

ಮಕ್ಕಳ, ಮಹಿಳೆಯರ ಮೇಲೆ ದೌರ್ಜನ್ಯ  
ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ  ವಿಷಯ ಮಂಡಿಸಿದ  ಮಕ್ಕಳ ಮಿತ್ರ  ಮಹಮ್ಮದ್‌ ಇರ್ಷಾದ್‌  ಇಂದು ಸಮಾಜದಲ್ಲಿ   ಹೆಣ್ಣು ಮಕ್ಕಳಂತೆ ಗಂಡು ಮಕ್ಕಳ ಮೇಲೂ  ದೌರ್ಜನ್ಯ ನಡೆಯುತ್ತಿದೆ. ಇಂತಹ ದೌರ್ಜನ್ಯಗಳು ನಡೆಯದಂತೆ  ಕ್ರಮ ತೆಗೆದುಕೊಳ್ಳಬೇಕು  ಎಂದರು.  ಈ ಬಗ್ಗೆ   ಮಕ್ಕಳ ಮಿತ್ರ ಹಾಗೂ ಕಾಳಾವರ ಗ್ರಾ.ಪಂ. ಸದಸ್ಯ ವಕ್ವಾಡಿ ಸತೀಶ್‌ ಪೂಜಾರಿ ಅವರು ಮಾತನಾಡಿ, ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ  ಲೈಂಗಿಕ ಕಿರುಕುಳ ನೀಡುವವರಿಗೆ  ಕೇವಲ ಪೋಕೊÕà ಕಾಯಿದೆಯನ್ನು ಹಾಕುವುದು ಮಾತ್ರವಲ್ಲ  ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. 

ಕುಂಭಾಶಿಯ ದೇವಸ್ಥಾನದ ಬಳಿ  ಹೊಟ್ಟೆಪಾಡಿಗಾಗಿ ಕೆಲಸ ನಿರ್ವಹಿಸುವ ಮಕ್ಕಳಿಗೆ ನೀಡುತ್ತಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಕುಂದಾಪುರದ ಕೆಲವು ಕಡೆಗಳಲ್ಲಿ ಅನೇಕ ಮಕ್ಕಳು  ಭಿಕ್ಷಾಟನೆಯಲ್ಲಿ  ತೊಡಗಿಕೊಂಡಿರುವುದು ಕಂಡುಬಂದಿದೆ ಇದನ್ನು ನಿಲ್ಲಿಸಬೇಕು  ಹಾಗೂ  ಸರಕಾರಿ ಶಾಲೆಗಳಿಗೆ ಸುಮಾರು 2 ಕಿ.ಮೀ. ದೂರದ ಊರುಗಳಿಂದ ಬರುವ ಮಕ್ಕಳಿಗೆ ಬಸ್ಸಿನ ಸೌಲಭ್ಯ ಕಲ್ಪಿಸಬೇಕು  ಎಂದರು.

ಸಂವಾದವನ್ನು ಆಲಿಸಿದ  ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌ ಅವರು ರಾ.ಹೆ. ಬದಿಯಲ್ಲಿ  ಮಕ್ಕಳು ಭಿಕ್ಷಾÒಟನೆಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದ ಮಾಹಿತಿ ತತ್‌ಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಸರಕಾರಿ ಶಾಲೆಗಳಿಗೆ  2 ಕಿ.ಮೀ. ದೂರದಿಂದ ಬರುವ  ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಬೇಕು .  ಮಾಡದೇ ಇರುವ ಬಗ್ಗೆ ದೂರು ಬಂದಲ್ಲಿ   ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಉಳಿದಂತೆ ತಾಲೂಕಿನ  ಗ್ರಾ.ಪಂ. ವ್ಯಾಪ್ತಿಗಳಲ್ಲಿ  ಅಂಗಡಿಗಳಲ್ಲಿ  ಅಕ್ರಮ ಮದ್ಯ ಮಾರಾಟ, ಜೂಜಾಟ, ಶೌಚಾಲಯದ ಸಮಸ್ಯೆ,ಕುಡಿಯುವ ನೀರಿನ ಸಮಸ್ಯೆ, ಸಮುದ್ರ ಪಕ್ಕದಲ್ಲಿರುವ ಶಾಲೆಗಳ ಸಮಸ್ಯೆ, ಬಗ್ಗೆ  ವಲಸೆ ಕಾರ್ಮಿಕರ ವಸತಿ ಸಮಸ್ಯೆ  ಮಕ್ಕಳ ಶಿಕ್ಷಣ ಮೊದಲಾದ ಸಮಸ್ಯೆ ಕುರಿತು  ಸಮಗ್ರ ಸಂವಾದ ನಡೆಯಿತು.

ಈ ಕಾರ್ಯಕ್ರಮದಲ್ಲಿ  ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಎಸ್‌.ಮೊಗವೀರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಯ್ಲಿ,  ಮಕ್ಕಳ ಮಿತ್ರ ಜ್ಯೋತಿ, ರಾಜೇಂದ್ರ ಬಿಜೂರು, ದೇವಿ  ಮೊದಲಾದವರು ಉಪಸ್ಥಿತರಿದ್ದರು.
ಸಿಡಬ್ಲೂéಸಿ ಸಂಸ್ಥೆಯ ಶ್ರೀನಿವಾಸ ಗಾಣಿಗ ಸ್ವಾಗತಿಸಿ, ಕಾರ್ಯಕ್ರಮ ವನ್ನು ನಿರ್ವಹಿಸಿದರು. ಸಿಡಬ್ಲೂéಸಿ ಸಂಸ್ಥೆಯ ದಾಮೋದರ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಧ್ಯೇಯ ಉದ್ದೇಶಗಳನ್ನು  ಮಂಡಿಸಿದರು. ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಗ್ರಾ.ಪಂ. ಜನಪ್ರತಿನಿಧಿಗಳು, ಅಧಿಕಾರಿಗಳು, ಮಕ್ಕಳ ಮಿತ್ರ ಪ್ರತಿನಿಧಿಗಳು ಭಾಗವಹಿಸಿದ್ದರು.

ಅಪಾಯಕಾರಿ ಕಲ್ಲುಕೋರೆಗಳು, ಮದಗಗಳು
ತಾಲೂಕಿನಲ್ಲಿ ಒಟ್ಟು 14 ಅಪಾಯಕಾರಿ  ಕಲ್ಲುಕೋರೆಗಳಿದ್ದು  ಇವುಗಳಲ್ಲಿ 2 ಕಲ್ಲುಕೋರೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. 12 ಅಪಾಯಕಾರಿ  ಮದಗಗಳಲ್ಲಿ  ಒಂದು ಮದಗಗಳ ಸಮಸ್ಯೆ ಪರಿಹರಿಸಲಾಗಿದೆ. ಅಪಾಯಕಾರಿ 3 ತೆರೆದ ಬಾವಿಗಳಲ್ಲಿ ಒಂದಕ್ಕೆ ತಡೆಗೋಡೆ ರಚಿಸಲಾಗಿದೆ. ಸುಮಾರು ಅಪಾಯಕಾರಿ 18 ನದಿ, ತೊರೆಗಳಿಗೆ ಸೇತುವೆ , ಕಾಲುಸಂಕ, ಕಿರು ಸೇತುವೆ ನಿರ್ಮಿಸಬೇಕಾಗಿದ್ದು,  ಈ ತನಕ  ಒಂದು ನದಿಗೆ ಕಿರು ಸೇತುವೆ ನಿರ್ಮಿಸಲಾಗಿದೆ. ಉಳಿದಂತೆ 15 ಕೆರೆಗಳು, ಒಂದು ಕೊಜೆಹೊಂಡ, ಮೂರು ಇಂಗುಗುಂಡಿ,  13 ಕಾಲುಸಂಕ, ಸಮುದ್ರ ಪಕ್ಕದ ಶಾಲೆಗೆ ಆವರಣವನ್ನು  ನಿರ್ಮಿಸಬೇಕಾಗಿರುವ ಕುರಿತು ಸಭೆಯ ಗಮನಕ್ಕೆ  ತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next