Advertisement

ಬಾಲ್ಯ ವೆಂಬ ಭಾವುಕಯಾನ

11:44 PM Feb 09, 2020 | Sriram |

ಬಾಲ್ಯದಲ್ಲಿ ನಮಗೆ ನಮ್ಮ ಬದುಕಿನ ದಟ್ಟ ಅನುಭವವಾಗಿ, ನಮ್ಮ ವ್ಯಕ್ತಿತ್ವ ನಿರ್ಧರಿಸುವ ಅಂಶವಾಗಿ ಜೀವನದುದ್ದಕ್ಕೂ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ. ಆದರೆ ಈಗಿನ ಮಕ್ಕಳು ಸಾಕಷ್ಟು ಅದೃಷ್ಟವಂತರು. ಕಾನ್ವೆಂಟ್‌ ಶಿಕ್ಷಣ, ಮೊಬೈಲ್‌, ಕಂಪ್ಯೂಟರ್‌ ಮುಂತಾದ ಆಧುನಿಕ ಸೌಲಭ್ಯಗಳಿವೆ. ಆದರೆ ಮಕ್ಕಳು ಮಾತ್ರ ಪ್ರಕೃತಿಯ ಮಡಿಲಿನಿಂದ ದೂರವಾಗಿದ್ದಾರೆ. ಹೊಲ, ಗದ್ದೆ, ನದಿ, ಹಕ್ಕಿ, ಮರ ಇವೆಲ್ಲವನ್ನು ಮಕ್ಕಳು ನೋಡುವುದು ಅನಿಮೇಷನ್‌ನಲ್ಲಿ ಮಾತ್ರ.

Advertisement

ನಾವು ಎಷ್ಟೇ ದೊಡ್ಡವರಾಗಿರಬಹುದು. ಆದರೂ ನಾವು ನಮ್ಮ ಬಾಲ್ಯವನ್ನು ಮರೆತಿರುವುದಿಲ್ಲ. ಅದು ನಮ್ಮ ಬದುಕಿನ ನೆನಪುಗಳ ಪುಟದ ಬಂಗಾರದಕ್ಷರ. ಕೆಲವೊಮ್ಮೆ ನಾವು ಏನೂ ಕಾರಣವಿಲ್ಲದೆ ನಮ್ಮ ಬಾಲ್ಯದ ದಿನಗಳೆಡೆಗೆ ಇಣುಕಿ ನೋಡುತ್ತೇವೆ. ನಮಗೆ ಗೊತ್ತಿಲ್ಲದೆ ಮುಖದಲ್ಲಿ ನಗು ಅರಳುತ್ತದೆ.

ಬಾಲ್ಯ ಮನುಷ್ಯನ ಜೀವಿತ ಕಾಲದ ಸುವರ್ಣಾವಧಿ. ಪ್ರತಿಯೊಬ್ಬನೂ ತನ್ನ ಕಿಶೋರಾವಸ್ಥೆಯ ಸವಿನೆನಪುಗಳನ್ನು ಹೃದಯದ ತ್ರಿಜೋರಿಯಲ್ಲಿ ಜತನವಾಗಿರಿಸಿ ತಾನು ತಂದೆಯಾದಾಗ ತನ್ನ ಮಗುವಿನ ಜತೆ ತೊದಲು ಭಾಷೆಯಲ್ಲಿ ಸಂಭಾಷಿಸುತ್ತ ಆ ನೆನಪು, ಅನುಭವಗಳ ತ್ರಿಜೋರಿಯನ್ನು ತೆರೆದು ಪುಳಕಗೊಳ್ಳುತ್ತಾನೆ. ಬಾಲ್ಯದಲ್ಲಿ ಕೆರೆಗಳಲ್ಲಿ ಈಜುತ್ತಾ, ಮೀನು ಹಿಡಿಯುತ್ತಾ ಮರಗಳನ್ನು ಹತ್ತಿ ಹಣ್ಣು ಕೀಳುತ್ತಾ ಗಾಯಮಾಡಿಕೊಂಡು ಸಿಕ್ಕಿದ್ದನ್ನು ಕಬಳಿಸುತ್ತಾ ಆನಂದಿಸುವ ಚಿಂತೆ, ಜವಾಬ್ದಾರಿ, ಹೊಣೆಗಾರಿಕೆಗಳಿಲ್ಲದ ಅದ್ಭುತ ಕ್ಷಣಗಳು.

ಗಾಳಿಪಟ, ಕಾಗದದ ದೋಣಿ, ಗಿರಿಗಿಟ್ಲೆ, ಗಾಳ ಹಾಕಿ ಮೀನು ಹಿಡಿಯುವುದು ಬಾಲ್ಯದ ಕೆಲವು ಆನಂದದ ಕ್ಷಣಗಳು. ಆಗ ತಿಂಡಿತಿನಿಸುಗಳನ್ನು ಮಣ್ಣಿನ ತಟ್ಟೆಯಲ್ಲಿ ಬಡಿಸುತ್ತಿದ್ದರು. ಪಡುವಣದ ಸೂರ್ಯನೋಕುಳಿ, ಮಿನಾರುಗಳಿಂದ ಹಾರುವ ಪಾರಿವಾರಗಳು, ತೆಂಗಿನ ಮರಗಳ ತುಯ್ದಾಟ, ಹಸಿದ ಹೊಟ್ಟೆಗೆ “ಅನ್ನವೇ ಅನ್ವೇಷಣೆ’ ಎಂಬ ಅರಿವಿನ ಆನಂದದ ಅನುಭವವದು. ಬಡತನ ಕೆಲವೊಮ್ಮೆ ಬಾಲ್ಯದ ಆನಂದಗಳಿಗೆ ಮುಕ್ತತೆ ಒದಗಿಸಿ ಬಂಧನವನ್ನು ಒದಗಿಸಿಬಿಡುತ್ತದೆ. ಶ್ರೀಮಂತರ ಮಕ್ಕಳು ಹೊರಗಡೆ ಆಡುವ ಸ್ವಚ್ಚಂದ ಅನುಭವಗಳಿಂದ ವಂಚಿತರಾದರೆ, ಬಡವರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಾ ಬಟ್ಟೆ, ಪುಸ್ತಕ, ಪೆನ್ನುಗಳನ್ನು ಪಡೆಯಲು ಪರದಾಡುತ್ತಾರೆ. ಹರಿದ ಯೂನಿಫಾರಂ ಧರಿಸಿ, ಬ್ಯಾಗ್‌ ಹೆಗಲಿಗೇರಿಸಿ ಪೆನ್ನು, ಪೆನ್ಸಿಲಿಗಾಗಿ ಅಳುತ್ತಾ ನಿಲ್ಲುವ ಅಸಹಾಯಕ ಪುಟ್ಟ ಹುಡುಗನ ಚಿತ್ರ ಕಣ್ಣ ಮುಂದೆ ಬರುತ್ತದೆ. ಕೆಲವೊಮ್ಮೆ ಈ ಚಿತ್ರ ಸ್ಮರಣೆಯಾಗಿ ಕಣ್ಣೀರ ಬಿಂದುವಾಗಿ ಟಪ್ಪನೆ ಉದುರುತ್ತದೆ.

ಆಗ ನಮಗೆ ಮ್ಯಾಗಜಿನ್‌ ಕೊಡಿಸುವಷ್ಟು ಪೋಷಕರು ಮೆಚೂರ್‌x ಆಗಿರಲಿಲ್ಲ. ಫ್ಯಾಮಿಲಿ ಪ್ಲಾನಿಂಗ್‌ ಪ್ರಜ್ಞೆ ಜಾಗೃತವಾದುದು ತೊಂಬತ್ತರ ದಶಕದಲ್ಲಿ ಅದೂ ವಿದ್ಯಾವಂತರಲ್ಲಿ. ಅದಕ್ಕಿಂತ ಮೊದಲು ಮದುವೆಯಾದ ಬಹಳಷ್ಟು ಪೋಷಕರಿಗೆ ಎಂಟರಿಂದ ಹತ್ತು ಮಕ್ಕಳು ಇದ್ದರು. ಇಷ್ಟು ಮಕ್ಕಳನ್ನು ಹಡೆದ ತಾಯಿ ಜರ್ಜರಿತಳಾಗಿ ಸದಾ ಕಾಯಿಲೆಯಿಂದ ನರಳುತ್ತಿದ್ದಳು. “ಹುಟ್ಟಿಸಿದ ದೇವ ಹುಲ್ಲು ಮೇಯಿಸಲಾರ’ ಎಂಬ ವಿಚಿತ್ರ ಮೂರ್ಖ ನಂಬಿಕೆಗಳಿಗೆ ಬಲಿಯಾಗಿ ದೊಡ್ಡ ಕುಟುಂಬದ ಹೊಣೆಯಿಂದ ತಾನೂ ನರಳುತ್ತಾ ತಮ್ಮ ಮಕ್ಕಳನ್ನು ನರಳಿಸುತ್ತಾ ಹಬ್ಬ, ಮದುವೆಗಳಿಗೆ ಸಾಲ ಮಾಡಿ ತಮ್ಮ ಸ್ವಯಂಕೃತ ಅಪರಾಧಗಳಿಗೆ “ಅವನನ್ನು’ ದೂಷಿಸುತ್ತಾ ಈ ಕಷ್ಟಗಳ ಪರಿಹಾರಕ್ಕೆ ದುಂದುವೆಚ್ಚದ ಸಮಾರಂಭ ಮಾಡುತ್ತಾ ಸ್ವಾನುಕಂಪದಲ್ಲಿ ನರಳುವ “ಟಿಪಿಕಲ್‌ ಭಾರತೀಯನ’ ಮನಃಸ್ಥಿತಿ ಹಲವು ಜನರಲ್ಲಿತ್ತು. ತಮ್ಮ ಆದಾಯಕ್ಕೆ ಅನುಗುಣವಾಗಿ ತಮ್ಮ ಪರಿವಾರವನ್ನು ವಿಸ್ತರಿಸುವ ತಾರ್ಕಿಕ ಲೆಕ್ಕಾಚಾರ ಆಗಿನ ಜನರಲ್ಲಿ ಇರಲಿಲ್ಲ. ಆದರೆ ಆಗಿನವರು ತುಂಬಾ ಪ್ರಾಮಾಣಿಕರಾಗಿದ್ದರು. ತಮ್ಮ ಪರಿವಾರವನ್ನು ಸುಖವಾಗಿಡಲು ಶಕ್ತಿಮೀರಿ ದುಡಿಯುತ್ತಿದ್ದರು. ಈಗಿನವರಂತೆ ದುರಾಸೆ, ವಿಲಾಸಿ ಜೀವನ, ಶೋಕಿಗಳಿಗೆ ಬಲಿಯಾಗುತ್ತಿರಲಿಲ್ಲ. ತಾವು ಹಸಿವಿನಿಂದ ಇದ್ದು ತಮ್ಮ ಮಕ್ಕಳ ಹೊಟ್ಟೆ ತುಂಬಿಸಿ ಸಾರ್ಥಕತೆ ಪಡೆಯುತ್ತಿದ್ದರು. ಆದರೆ ಇಂದು ನಾವು ನಮ್ಮ ವೈಫ‌ಲ್ಯಕ್ಕೆ ತಂದೆ ತಾಯಿಯವರನ್ನು ಹೊಣೆಗಾರರನ್ನಾಗಿಸುತ್ತೇವೆ. ತಮ್ಮ ಸೋಲು, ವೈಫ‌ಲ್ಯಗಳಿಗೆ ಸ್ವಲ್ಪ ಮಟ್ಟಿಗೆ ತಂದೆ, ತಾಯಿಯ “ಅತಾರ್ಕಿಕ’ ನಿರ್ಧಾರ ಕಾರಣ ಎಂದು ಅವರನ್ನು ದೂಷಿಸುತ್ತೇವೆ. ನಾವು ನಮಗಿಂತ ಕೆಟ್ಟ ಬಾಲ್ಯ, ಬಡತನವನ್ನು ಕಂಡವರ ಬಗ್ಗೆ ಯೋಚಿಸುವುದೇ ಇಲ್ಲ.

Advertisement

ಹೀಗೆ ಬಾಲ್ಯದಲ್ಲಿ ನಮ್ಮ ಬದುಕಿನ ದಟ್ಟ ಅನುಭವವಾಗಿ ನಮ್ಮ ವ್ಯಕ್ತಿತ್ವ ನಿರ್ಧರಿಸುವ ಅಂಶವಾಗಿ ಜೀವನದುದ್ದಕ್ಕೂ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ. ಈಗಿನ ಮಕ್ಕಳು ಮಾತ್ರ ಅದೃಷ್ಟವಂತರು. ಅವರಿಗೆ ಕಾನ್ವೆಂಟ್‌ ಶಿಕ್ಷಣ, ಮೊಬೈಲ್‌, ಕಂಪ್ಯೂಟರ್‌ ಮುಂತಾದ ಆಧುನಿಕ ಸೌಲಭ್ಯಗಳು ಇವೆ. ಆದರೆ ಈ ಮಕ್ಕಳು ಮಾತ್ರ ಪ್ರಕೃತಿ ಮಾತೆಯ ಮಡಿಲಿನಿಂದ ದೂರವಾಗಿದ್ದಾರೆ. ಹೊಲ, ಗದ್ದೆ, ನದಿ, ಹಕ್ಕಿ, ಮರ ಇವುಗಳನ್ನು ಈ ಮಕ್ಕಳು ನೋಡುವುದು ಅನಿಮೇಷನ್‌ ರೂಪದಲ್ಲಿ ಮಾತ್ರ.

- ಜಯಾನಂದ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next