ಮಹಾರಾಷ್ಟ್ರ: ಗಡಿ ರಕ್ಷಣೆ ಇರಲಿ, ನೈಸರ್ಗಿಕ ವಿಕೋಪಗಳ ಸಂದರ್ಭವೇ ಇರಲಿ ನಮ್ಮ ಸೈನಿಕರ ನಿಸ್ವಾರ್ಥ ಸೇವೆ ಸಂಕಷ್ಟಕ್ಕೆ ಒಳಗಾಗಿರುವವರ ಪರವಾಗಿಯೇ ಇರುತ್ತದೆ. ಈ ಸಲ ವರುಣನ ಮುನಿಸಿಗೆ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಹಲವಾರು ಪ್ರದೇಶಗಳಲ್ಲಿ ಭೀಕರ ಪ್ರವಾಹ ಎದುರಾಗಿದೆ. ಈ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳ ಯೋಧರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಗಳು ರಾತ್ರಿ ಹಗಲೆನ್ನದೆ ಪರಿಹಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಸಂಕಷ್ಟದಲ್ಲಿ ಸಿಲುಕಿರುವವರ ಪಾಲಿಗೆ ಇವರೇ ಆಪತ್ಬಾಂಧವರು. ಪುಣೆಯಲ್ಲಿ ಮಹಿಳೆಯೊಬ್ಬರು ತಮ್ಮನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿಯ ಪಾದ ಮುಟ್ಟು ನಮಸ್ಕರಿಸಿದ ವಿಡಿಯೋ ಒಂದು ದೇಶದ ಗಮನವನ್ನು ಸೆಳೆಯುತ್ತಿದೆ. ಅದೇ ರೀತಿಯಲ್ಲಿ ಪುಣೆಯ ಸಾಂಗ್ಲಿಯಲ್ಲಿರುವ ಗಾಂವ್ ಭಾಗ್ ಪ್ರದೇಶದಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದ ಸೇನೆಯ ಯೋಧರೊಬ್ಬರಿಗೆ ಬಾಲಕನೊಬ್ಬ ಹಸ್ತಲಾಘವ ನೀಡಿ ‘ಆಪ್ ಬಹುತ್ ಅಚ್ಛೇ ಕಾಮ್ ಕರ್ತೇ ಹೋ…’ (ನೀವು ಬಹಳ ಚೆನ್ನಾಗಿ ಕೆಲಸ ಮಾಡುತ್ತೀರಿ) ಎಂದು ಹೆಳಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಒಟ್ಟಿನಲ್ಲಿ ತಮ್ಮ ಮನೆಮಂದಿಯ ಚಿಂತೆಯನ್ನು ತೊರೆದು ಕಷ್ಟದಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಧಾವಿಸಿ ಹಗಲಿರುಳೆನ್ನದೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಯೋಧರಿಗೆ ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ಇಂತಹ ಘಟನೆಗಳು ನೈತಿಕ ಸ್ಥೈರ್ಯವನ್ನು ತುಂಬುವುದಂತೂ ಸುಳ್ಳಲ್ಲ.