ಭಾಲ್ಕಿ: ಮಕ್ಕಳ ಹಕ್ಕು ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಪ್ರಶಾಂತ ಬಿರಾದಾರ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸಹಯೋಗ ಚೈಲ್ಡ್ ಲೈನ್ ಉಪಕೇಂದ್ರ ಭಾಲ್ಕಿಯ ವತಿಯಿಂದ ಆಯೋಜಿಸಿದ್ದ ಚೈಲ್ಡ್ಲೈನ್ ಸೇ ದೋಸ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕು ರಕ್ಷಣೆಯಲ್ಲಿ ಸಾರ್ವಜನಿಕರು ಮುತುವರ್ಜಿ ವಹಿಸಬೇಕು. ಕೆಲ ತಿಳಿವಳಿಕೆ ಇಲ್ಲದ ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದು, ಬಾಲ ಕಾರ್ಮಿಕರನ್ನಾಗಿ ಸೇರಿಸುವುದು ಮುಂತಾದ ತೊಂದರೆಗಳು ಮಕ್ಕಳಿಗೆ ನೀಡುತ್ತಾರೆ. ಸಾರ್ವಜನಿಕರ ಕಣ್ಣಿಗೆ ಇಂತಹ ವ್ಯವಸ್ಥೆ ಕಂಡು ಬಂದಲ್ಲಿ ಚೈಲ್ಡ್ಲೈನ್ ದೂರವಾಣಿ ಸಂಖ್ಯೆ 1098 ಗೆ ಸಂಪರ್ಕಿಸಿದ್ದಲ್ಲಿ ತಕ್ಷಣ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಸಹಯೋಗ ಚೈಲ್ಡ್ಲೈನ್ ಉಪಕೇಂದ್ರದ ಸಂಚಾಲಕ ಸಂದೀಪ ದೇವಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಯೋಗ ಚೈಲ್ಡ್ಲೈನ್ ಉಪಕೇಂದ್ರ ಭಾಲ್ಕಿಯ ಸರಸ್ವತಿ ಭಂಗಾರೆ ಮಕ್ಕಳ ಹಕ್ಕು ರಕ್ಷಣೆ ಬಗ್ಗೆ ಮಾತನಾಡಿದರು. ಸ್ಥಳೀಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ದೀಪಕ ಗಾಯಕವಾಡ, ಶೋಭಾ ಮಾಸಿಮಾಡೆ, ಶಿವಶರಣಪ್ಪ ಸೊನಾಳೆ ಇದ್ದರು. ವಿಜ್ಞಾನ ಶಿಕ್ಷಕ ಪ್ರವೀಣ ಸಿಂಧೆ ಸ್ವಾಗತಿಸಿದರು. ಶಿವಕುಮಾರ ವಾಡಿಕರ ನಿರೂಪಿಸಿದರು. ಆನಂದ ಖಂಡಗೊಂಡ ವಂದಿಸಿದರು.