Advertisement

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

02:27 AM Sep 21, 2020 | Hari Prasad |

ಬಾಲ್ಯ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ದಶಕಗಳಿಂದಲೂ ಜಾಗೃತಿ, ಅರಿವು ಕಾರ್ಯಕ್ರಮ ನಡೆಯುತ್ತಿದ್ದರೂ ತೆರೆಮರೆಯಲ್ಲಿ ಬಾಲ್ಯವಿವಾಹ ನಡೆಯುತ್ತಲೇ ಇವೆ.  ಕೋವಿಡ್ 19 ಕಾಲದಲ್ಲಂತೂ ಬಾಲ್ಯವಿವಾಹ ಇನ್ನಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಬಾಲ್ಯ ವಿವಾಹ ಪಿಡುಗಿನ ಜಾಗೃತಿಯ ಭಾಗವಾಗಿ ಉದಯವಾಣಿ ಬೆಳಕು ಚೆಲ್ಲುತ್ತಿದೆ.

Advertisement

ಬೆಂಗಳೂರು: ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಭಾರ ಎಂಬ ಭಾವನೆ ಇನ್ನೂ ಸಮಾಜದಿಂದ ದೂರವಾಗಿಲ್ಲ! ಮದುವೆಯ ನಿರ್ದಿಷ್ಟ ವಯಸ್ಸಿಗೆ ಮೊದಲೇ ಬಾಲ್ಯ ವಿವಾಹ ಮಾಡಿಸಿ, ಕೈ ತೊಳೆದುಕೊಳ್ಳುವ ಸಾಮಾಜಿಕ ಪಿಡುಗು ಇಂದಿಗೂ ಜೀವಂತವಾಗಿದೆ.

ಕೋವಿಡ್ 19 ಅವಧಿಯಲ್ಲಿ ರಾಜ್ಯಾದ್ಯಂತ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಘಟನೆಗಳು ಅನೇಕ ನಡೆದಿವೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮುಗಿದಂತೆ ಮಗಳಿಗೆ ಮದುವೆ ಮಾಡುವ ಪ್ರವೃತ್ತಿ ತೆರೆಮರೆಯಲ್ಲಿ ನಡೆಯುತ್ತಲೇ ಇದೆ. ಕುಟುಂಬದಲ್ಲಿನ ಅರಿವಿನ ಕೊರತೆ, ಅನಕ್ಷರತೆ, ಬಡತನ, ಮೂಢನಂಬಿಕೆ, ಸಂಪ್ರದಾಯಗಳು ಇತ್ಯಾದಿ ಹತ್ತಾರು ಕಾರಣಗಳಿಗಾಗಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ.

ಬಾಲ್ಯವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಗ್ರಾಮ, ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿರುವ ಸಮಿತಿ 2 ತಿಂಗಳಿಗೊಮ್ಮೆ, ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿ 3 ತಿಂಗಳಿಗೊಮ್ಮೆ ಹಾಗೂ ರಾಜ್ಯಮಟ್ಟದ ಸಮಿತಿ ಪ್ರತಿ 6 ತಿಂಗಳಿಗೊಮ್ಮೆ ಸಭೆ ನಡೆಸಿ, ಬಾಲ್ಯ ವಿವಾಹ ತಡೆಗೆ ನಿರ್ದಿಷ್ಟ ಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೋರ್‌ ಕಮಿಟಿ ವರದಿ ಸ್ಪಷ್ಟವಾಗಿ ತಿಳಿಸಿದೆ.

ಆದರೆ ಕುಟುಂಬದ ಒತ್ತಡ, ಪಾಲಕ ಪೋಷಕರ ಮೂಢನಂಬಿಕೆ, ಕೆಟ್ಟ ಸಂಪ್ರದಾಯದ ಆಚರಣೆಗಳಿಂದ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹದ ‘ಶಿಕ್ಷೆ’ಯನ್ನು ಹೆತ್ತವರು ಮತ್ತು ಕುಟುಂಬದವರು ಸೇರಿ ನೀಡುತ್ತಿರುವ ಘಟನೆಗಳು ಅಲ್ಲಲ್ಲಿ ನಡೆದಿವೆ.

Advertisement

ವರದಿಯಾದ ಪ್ರಕರಣಗಳು: ಕಳೆದ 5 ವರ್ಷಗಳಲ್ಲಿ ರಾಜ್ಯಾದ್ಯಂತ 453 ಬಾಲ್ಯವಿವಾಹ ನಡೆದಿವೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು 276 ಎಫ್ಐಆರ್‌ ಹಾಕಲಾಗಿದೆ ಮತ್ತು ಗ್ರಾಮ, ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಮಟ್ಟದ ಅಧಿಕಾರಿಗಳು ವಿವಿಧ ಎನ್‌ಜಿಒ ಸಹಕಾರದೊಂದಿಗೆ 5,860 ಬಾಲ್ಯವಿವಾಹಗಳನ್ನು ತಡೆದಿದ್ದಾರೆ.

ಆದರೆ, ಕೋವಿಡ್‌-19 ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳ ಬಾಳಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. 2020ರ ಫೆಬ್ರವರಿಯಿಂದ ಜೂನ್‌ (ಲಾಕ್‌ಡೌನ್‌ ಅವಧಿ ಸೇರಿ) ವರೆಗೆ ರಾಜ್ಯದಲ್ಲಿ 1,353 ಬಾಲ್ಯ ವಿವಾಹವನ್ನು ತಡೆಯಲಾಗಿದೆ. 112 ಬಾಲ್ಯ ವಿವಾಹ ನಡೆದಿದೆ ಹಾಗೂ 65 ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಎಫ್ಐಆರ್‌ ದಾಖಲಾಗಿದೆ.

ಮೈಸೂರಿನಲ್ಲಿ 17, ಮಂಡ್ಯ ಹಾಗೂ ರಾಮನಗರದಲ್ಲಿ ತಲಾ 11, ಬೆಳಗಾವಿಯಲ್ಲಿ 9, ಹಾಸನದಲ್ಲಿ 8, ಚಿಕ್ಕಬಳ್ಳಾಪುರದಲ್ಲಿ 7, ಬಳ್ಳಾರಿ ಹಾಗೂ ಚಿಕ್ಕಮಗಳೂರಿನಲ್ಲಿ 6 ಸೇರಿ ರಾಜ್ಯಾದಂತ ಲಾಕ್‌ಡೌನ್‌ ಅವಧಿಯಲ್ಲಿ 112 ಬಾಲ್ಯ ವಿವಾಹ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿಅಂಶ ಆತಂಕ ಸೃಷ್ಟಿಸಿದೆ.

ಲಾಕ್‌ಡೌನ್‌ ಅವಧಿಯಲ್ಲೇ ಹೆಚ್ಚು ಬಾಲ್ಯವಿವಾಹ: ಕೋವಿಡ್ 19ನಿಂದ ಮಾರ್ಚ್‌ ತಿಂಗಳ ಅಂತ್ಯದಲ್ಲಿ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿತ್ತು. ಜೂನ್‌ ಅಂತ್ಯದವರೆಗೂ ಒಂದಲ್ಲ ಒಂದು ರೀತಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಅಧಿಕಾರಿಗಳು ಕೋವಿಡ್ 19 ತಡೆ ಕಾರ್ಯದಲ್ಲಿ ನಿರತರಾಗಿದ್ದರು. ಅದಲ್ಲದೆ ಮದುವೆಗೆ ನಿರ್ದಿಷ್ಟ ಸಂಖ್ಯೆಯಲ್ಲೇ ಜನ ಸೇರಬೇಕೆಂಬ ನಿರ್ಬಂಧವನ್ನೂ ವಿಧಿಸಲಾಗಿತ್ತು.

ಹೀಗಾಗಿ ಬಾಲ್ಯ ವಿವಾಹದ ಪ್ರಕರಣಗಳು ಎಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳಲ್ಲೇ ಹೆಚ್ಚು ದಾಖಲಾಗಿದೆ. ಏಪ್ರಿಲ್‌ ತಿಂಗಳಲ್ಲಿ 118 ಬಾಲ್ಯ ವಿವಾಹ ತಡೆದಿದ್ದು, 11 ಬಾಲ್ಯ ವಿವಾಹ ನಡೆದಿದೆ, 7ರಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. ಮೇ ತಿಂಗಳಲ್ಲಿ 542 ಬಾಲ್ಯ ವಿವಾಹ ನಡೆದಿದೆ, 37 ಬಾಲ್ಯ ವಿವಾಹ ತಡೆಯಲಾಗಿದೆ ಹಾಗೂ 20 ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಎಫ್ಐಆರ್‌ ದಾಖಲಿಸಲಾಗಿದೆ. ಜೂನ್‌ ತಿಂಗಳಲ್ಲಿ 533 ಬಾಲ್ಯ ವಿವಾಹ ತಡೆದಿದ್ದು, 45 ಬಾಲ್ಯವಿವಾಹ ನಡೆದಿದ್ದು, 26 ಎಫ್ಐಆರ್‌ ದಾಖಲಿಸಲಾಗಿದೆ.

ಬಾಲ್ಯ ವಿವಾಹದ ಕರಾಳತೆ
ಪಾಲಕ, ಪೋಷಕರು ಹೆಣ್ಣು ಮಕ್ಕಳನ್ನು ಸಾಕುವುದು ಕಷ್ಟ ಅಥವಾ ಇನ್ಯಾವುದೋ ಕಾರಣಕ್ಕೆ ಬಾಲ್ಯ ವಿವಾಹ ಮಾಡಿ ಕೈತೊಳೆದುಕೊಳ್ಳುತ್ತಾರೆ. ಇದು ಹಳೇ ಮೈಸೂರು, ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ. ಬಾಲ್ಯ ವಿವಾಹವಾದ ಹೆಚ್ಚಿನ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ.

ಆಕಸ್ಮಿಕ ಘಟನೆಯಿಂದ ವಿಧವೆಯಾದರೆ ಭವಿಷ್ಯದ ಬದುಕು ಅತ್ಯಂತ ಕಷ್ಟಕರವಾಗಿರುತ್ತದೆ. ಬಾಲ್ಯ ವಿವಾಹದಲ್ಲಿ ಗಂಡ ಬಿಡುವ ಪ್ರಕರಣ ಹೆಚ್ಚಿರುತ್ತದೆ. ಕೂಲಿ ಕೆಲಸದ ಅನಿವಾರ್ಯ ಸೃಷ್ಟಿಯಾಗುತ್ತದೆ. ಅನಾರೋಗ್ಯ, ಭ್ರೂಣ ಹತ್ಯೆ ಹಾಗೂ ಗಂಡು ಎರಡು ಅಥವಾ ಮೂರನೇ ಮದುವೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿವಾಹಿತ ಬಾಲಕಿಯರ ಸಶಕ್ತೀಕರಣ ಯೋಜನೆಯ ಸಂಚಾಲಕ ವಾಸುದೇವ ಶರ್ಮಾ ಮಾಹಿತಿ ನೀಡಿದರು.

ಬಾಲ್ಯ ವಿವಾಹಕ್ಕೆ ಶಿಕ್ಷೆಯೂ ಆಗಿದೆ
ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2016ರ ಪ್ರಕಾರ ಪ್ರತಿ ಬಾಲ್ಯ ವಿವಾಹವು ಪ್ರಾರಂಭದಿಂದಲೇ ಅನೂರ್ಜಿತವಾಗುತ್ತದೆ. ಬಾಲ್ಯ ವಿವಾಹ ಕಂಡುಬಂದಲ್ಲಿ ಆಯಾ ಪೊಲೀಸ್‌ ಠಾಣೆಯ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಅವಕಾಶವಿದೆ. ಈ ಕಾಯ್ದೆಯಡಿ ಮಹಿಳೆಯರೂ ಜೈಲು ವಾಸ ಶಿಕ್ಷೆಗೆ ಅರ್ಹರಾಗಿರುತ್ತಾರೆ.

2011ರ ನವೆಂಬರ್‌ನಲ್ಲಿ ಮಹಿಳಾ, ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಡಿ ಬಾಲ್ಯ ವಿವಾಹ ನಿಷೇಧ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ. ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಸಮಿತಿಗಳು ನಿರಂತರವಾಗಿ ಶ್ರಮಿಸುತ್ತಿವೆ.

ಕೊಪ್ಪಳ ಜಿಲ್ಲೆಯಲ್ಲಿ 2012- 13ರಲ್ಲಿ ನಡೆದ ಬಾಲ್ಯವಿವಾಹ ಪ್ರಕರಣದಲ್ಲಿ ವರನಿಗೆ 2 ವರ್ಷ ಜೈಲು, 30 ಸಾವಿರ ರೂ. ದಂಡ. ಬಾಲಕಿಯ ತಾಯಿ ಮತ್ತು ಚಿಕ್ಕಮ್ಮನಿಗೂ 2 ವರ್ಷ ಜೈಲು, ತಲಾ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಇದೇ ಜಿಲ್ಲೆಯಲ್ಲಿ 2013- 14ರಲ್ಲಿ ನಡೆದ ಪ್ರಕರಣದಲ್ಲಿ ಬಾಲಕ ಮತ್ತು ಬಾಲಕಿಯ ಪೋಷಕರಿಗೆ ತಲಾ 2 ವರ್ಷ ಜೈಲು ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಚಿಕ್ಕಬಳ್ಳಾಪುರ ಜಿÇÉೆಯಲ್ಲಿ 2015-16ನೇ ಸಾಲಿನಲ್ಲಿ ನಡೆದ ಪ್ರಕರಣದಲ್ಲಿ ಪೋಷಕರಿಗೆ 45 ಸಾವಿರ ರೂ. ದಂಡ ವಿಧಿಸಲಾಗಿತ್ತು.

ಹೆಣ್ಣು ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಬಾಲ್ಯ ವಿವಾಹವನ್ನು ತಡೆಗಟ್ಟುವ ಕಾರ್ಯ ಆಗಲೇ ಬೇಕು. ಸಾಮಾನ್ಯವಾಗಿ ಏಪ್ರಿಲ್‌, ಮೇ ಹಾಗೂ ಜೂನ್‌ನಲ್ಲಿ ಮದುವೆಗಳು ಹೆಚ್ಚಾಗುತ್ತವೆ. ಇದೇ ಅವಧಿಯಲ್ಲಿ ಬಾಲ್ಯ ವಿವಾಹವೂ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಬಾಲ್ಯ ವಿವಾಹ ತಡೆಯುವ ಕಾರ್ಯ ಆಗಲೇ ಬೇಕು.
– ವಾಸುದೇವ ಶರ್ಮಾ, ಸಂಯೋಜಕ, ವಿವಾಹಿತ ಬಾಲಕಿಯರ ಸಶಕ್ತಿಕರಣ ಯೋಜನೆ

ಕೋವಿಡ್ 19 ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಕೊರೊನಾ ತಡೆ ಕಾರ್ಯದಲ್ಲಿದ್ದುದರಿಂದ ಬಾಲ್ಯ ವಿವಾಹ ಹೆಚ್ಚಾಗಿದೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಚೈಲ್ಡ್‌ ರೈಟ್‌ ಟ್ರಸ್ಟ್‌ನಿಂದ ಸಾಕಷ್ಟು ಅರಿವು ಕಾರ್ಯ ಮಾಡಲಾಗುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆ ಇಡೀ ಸಮಾಜದ ಜವಾಬ್ದಾರಿಯಾಗಬೇಕು. ಬಾಲ್ಯ ವಿವಾಹ ಪಿಡುಗು ಸಮಾಜದಿಂದಲೇ ದೂರಾಗಬೇಕು.
– ನಾಗಸಿಂಹ ಜಿ.ರಾವ್‌, ನಿರ್ದೇಶಕ ಚೈಲ್ಡ್‌ ರೈಟ್‌ ಟ್ರಸ್ಟ್‌

ಕೋವಿಡ್‌-19ರ ಸಂದಿಗ್ಧದಲ್ಲಿ ಅನೇಕ ಕಾರಣಗಳಿಗೆ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿದೆ. ಅನೇಕ ಕಡೆ ತಡೆಯಲಾಗಿದೆ. ಜಿಲ್ಲಾವಾರು ಅತ್ಯಂತ ಜಾಗೃತಿಯ ಕಾರ್ಯಚರಣೆ ಮಾಡುತ್ತಿದ್ದೇವೆ. ಬಾಲ್ಯವಿವಾಹವಾದರೆ ಫೋಕ್ಸೋ ಕಾಯ್ದೆಯಡಿ ಬಾಲಕ, ಬಾಲಕಿಯರಿಬ್ಬರ ಮೇಲೂ ಪ್ರಕರಣ ದಾಖಲಾಗುತ್ತದೆ.
– ಆಂಥೋನಿ ಸೆಬಾಸ್ಟಿನ್‌, ಅಧ್ಯಕ್ಷ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next