Advertisement

ಕೋಟೆನಾಡಲ್ಲೂ ಬಾಲ್ಯವಿವಾಹ ಪಿಡುಗು

06:55 PM Sep 23, 2020 | Suhan S |

ಚಿತ್ರದುರ್ಗ: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ, ಮಕ್ಕಳಿಗೆ ಮದುವೆ ಮಾಡಬೇಡಿ, ಅವರ ಭವಿಷ್ಯಕ್ಕೆ ಕಲ್ಲು ಹಾಕಬೇಡಿ ಎಂದು ಸರ್ಕಾರ ಸಾರಿ ಹೇಳುತ್ತಿರುವುದು ಕೇಳಿಸುತ್ತಿದೆ. ಆದರೆ ಮನಸ್ಸಿಗೆ ಮಾತ್ರ ನಾಟುತ್ತಿಲ್ಲ. ಜನರು ಈ ಅನಿಷ್ಟ ಪದ್ಧತಿಯಿಂದ ದೂರ ಸರಿಯುತ್ತಿಲ್ಲ ಎನ್ನುವುದಕ್ಕೆ ಹಲವು ನಿದರ್ಶನಗಳು ಬೆಳಕಿಗೆ ಬಂದಿವೆ.

Advertisement

ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಮಾರ್ಚ್‌ತಿಂಗಳಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿ ಯಾರೂ ಕೂಡ ಮನೆಯಿಂದ ಹೊರಬರಬೇಡಿ ಎಂದು ಎಲ್ಲೆಡೆ ಬಂದೋಬಸ್ತ್ ಮಾಡಿದ್ದ ಸಂದರ್ಭವನ್ನೇ ದುರುಪಯೋಗ ಮಾಡಿಕೊಂಡ ಕೆಲವರು ಸದ್ದಿಲ್ಲದೆ ಮಕ್ಕಳ ಮದುವೆ ಮಾಡಿ ಮುಗಿಸಲು ಮುಂದಾಗಿದ್ದರು ಎಂಬುದು ಆತಂಕಕಾರಿ ಸಂಗತಿ. 2020 ಮಾರ್ಚ್‌ನಿಂದ ಮೇ ತಿಂಗಳರೆಗಿನ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ, ವಿವಿಧ ಹಂತದ ಅಧಿಕಾರಿಗಳು 50 ಬಾಲ್ಯವಿವಾಹ ಪ್ರಕರಣಗಳನ್ನು ತಡೆಹಿಡಿದು ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಏಳು ಬಾಲಕಿಯರನ್ನು ಬಾಲ್ಯವಿವಾಹದಿಂದ ರಕ್ಷಿಸಿದ್ದಾರೆ. ಇದೇ ವಿಚಾರಕ್ಕೆ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ಭಾಗಗಳಲ್ಲಿ ಕದ್ದು ಮುಚ್ಚಿ ಬಾಲ್ಯವಿವಾಹ ಮಾಡುವ ಪ್ರಯತ್ನಗಳು ಆಗಾಗ ನಡೆಯುತ್ತವೆ. ಹೊಸದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ತಾಲೂಕು ವ್ಯಾಪ್ತಿಗಳಲ್ಲಿ ಇದು ಕೊಂಚ ನಿಯಂತ್ರಣದಲ್ಲಿದೆ.

ಬಾಲ್ಯವಿವಾಹ ಮಾಡುವ ತುರ್ತಾದರೂ ಏನು?:ಮೊಳಕಾಲ್ಮೂರು ಭಾಗದ ಕೆಲ ಗ್ರಾಮಗಳಲ್ಲಿ ಸಣ್ಣವಯಸ್ಸಿನ ಮಕ್ಕಳ ಮದುವೆಗೆ ಆಗಾಗ ಪ್ರಯತ್ನ ನಡೆಯುತ್ತಲೇ ಇರುತ್ತವೆ. ಸರ್ಕಾರ, ಅಧಿಕಾರಿಗಳು, ಮಾಧ್ಯಮಗಳು, ಪ್ರಜ್ಞಾವಂತರು ಎಷ್ಟು ಎಚ್ಚರಿಸಿದರೂ ಪ್ರಯೋಜನವಾಗುತ್ತಿಲ್ಲ. ಮಲೆನಾಡಿನ ಚಿಕ್ಕಮಗಳೂರು, ಬೆಂಗಳೂರು ಕಡೆಗೆ ಉದ್ಯೋಗಕ್ಕಾಗಿ ವಲಸೆ ಹೋಗುವ ಸಂದರ್ಭ ಮಕ್ಕಳ ರಕ್ಷಣೆಗಾಗಿ, ಪೋಷಕರು ತಮ್ಮ ಜವಾಬ್ದಾರಿ ಕಳೆದುಕೊಳ್ಳುವ ಸಲುವಾಗಿ ಮಕ್ಕಳ ಮದುವೆಗೆ ಮುಂದಾಗುತ್ತಿದ್ದಾರೆ. ಮಕ್ಕಳು ಪ್ರೀತಿ, ಪ್ರೇಮದಲ್ಲಿ ಬಿದ್ದು ಕೈಬಿಟ್ಟು ಹೋಗುತ್ತಾರೆ, ಇದರಿಂದ ಊರಿನಲ್ಲಿ ಮಾನ ಹೋಗುತ್ತದೆ

ಎಂಬ ಆತಂಕದಲ್ಲೂ ಹಲವು ಪೋಷಕರು ಮಕ್ಕಳ ಮದುವೆ ಮಾಡುವ ಆಲೋಚನೆ ಮಾಡುತ್ತಾರೆ. ಮತ್ತೂಂದೆಡೆ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಪ್ರೌಢ ಹಾಗೂ ಕಾಲೇಜು ಶಿಕ್ಷಣಕ್ಕೆ ದೂರದ ಊರುಗಳಿಗೆ ಹೋಗುವ ಸಂದರ್ಭ ಬಂದಾಗಲೂ ಮಕ್ಕಳನ್ನು ಮದುವೆ ಮಾಡಲು ಮುಂದಾಗುತ್ತಾರೆ ಎಂಬುದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ತರ್ಕ.

ಲಾಕ್‌ಡೌನ್‌ ಸಂದರ್ಭದಲ್ಲೇ ಬಾಲ್ಯವಿವಾಹ ಜಾಸ್ತಿ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಎಲ್ಲಿಯೂ ಜನ ಸಂಚಾರ ಇಲ್ಲದಂತಾಗಿತ್ತು. ಅಧಿಕಾರಿಗಳು ಕೂಡ ಒಂದು ಕಡೆಯಿಂದ ಮತ್ತೂಂದು ಕಡೆಗೆ ಓಡಾಡುವುದಿಲ್ಲ. ಈಗ ಮದುವೆ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ ಪೋಷಕರು ಲಾಕ್‌ಡೌನ್‌ ಸಂದರ್ಭ ಬಳಸಿಕೊಂಡು ಮದುವೆ ಮಾಡಲು ಮುಂದಾಗಿದ್ದರು ಎನ್ನುವುದಕ್ಕೆ ಈಗ ಅಧಿಕಾರಿಗಳು ತಡೆಹಿಡಿದಿರುವ 50 ಪ್ರಕರಣಗಳು ಸಾಕ್ಷಿಯಾಗಿವೆ.

Advertisement

ನೆರವಿಗೆ ಬಂತು ಸಹಾಯವಾಣಿ: ಸರ್ಕಾರ ಮಕ್ಕಳ ನೆರವಿಗಾಗಿ ರೂಪಿಸಿರುವ 1098 ಮಕ್ಕಳ ಸಹಾಯವಾಣಿಗೆ ಬಂದಿರುವ ಕರೆಗಳ ಜಾಡು ಹಿಡಿದು ಬಾಲ್ಯವಿವಾಹ ತಡೆಯಲಾಗಿದೆ. ಸಾಮಾನ್ಯವಾಗಿ ಬೆಳಗಿನ ಜಾವ 4 ರಿಂದ 5 ಅಥವಾ ಮಧ್ಯರಾತ್ರಿ ವೇಳೆಗೆ ಹೆಚ್ಚು ಮದುವೆಗಳು ನಡೆಯುತ್ತಿದ್ದವು ಎನ್ನುವುದು ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕೋಟೆನಾಡಿನಲ್ಲಿ ಬಾಲ್ಯವಿವಾಹ ಪಿಡುಗು ಇನ್ನೂ ಜೀವಂತವಾಗಿದ್ದು, ಅದಕ್ಕೆ ತಡೆ ಹಾಕಲು ಮತ್ತಷ್ಟು ಶ್ರಮ ಅಗತ್ಯ.

ಬಾಲ್ಯವಿವಾಹ ಪ್ರಕರಣಗಳ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ತಡೆಯುವ ಕೆಲಸ ಒಂದೆಡೆಯಾದರೆ, ಮದುವೆ ತಡೆದ ಮಕ್ಕಳಿಗೆ 18 ವರ್ಷ ಪೂರ್ಣವಾಗುವವರೆಗೆ ಆಗಾಗ ಅವರ ಮನೆ, ಶಾಲೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದೇವೆ. ಇದರಿಂದ ಮಕ್ಕಳನ್ನು ಬಾಲ್ಯದಲ್ಲೇ ಮದುವೆಗೆ ದೂಡುವ ಪೋಷಕರ ಆಲೋಚನೆಯಲ್ಲಿ ಬದಲಾವಣೆ ತರಬಹುದು. ವೆಂಕಟಲಕ್ಷ್ಮೀ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

 

-ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next