Advertisement

ಚಿಕ್ಕಮಗಳೂರು: ಹೊಸ ಬೋರ್‌ ಕೊರೆಯುವಾಗ ಬತ್ತಿದ ಹಳೆ ಬೋರ್‌ ನಲ್ಲಿ ಚಿಮ್ಮಿದ ನೀರು

02:50 PM Dec 16, 2022 | Team Udayavani |

ಚಿಕ್ಕಮಗಳೂರು: ಸತತ ಬರಗಾಲದಿಂದಾಗಿ ಒಣಗಿದ್ದ ಕೊಳವೆ ಬಾವಿಯೊಂದರ ಪಕ್ಕದಲ್ಲಿ ಹೊಸ ಬೋರ್ ಕೊರೆಸುವಾಗ ಹಳೇ ಬೋರ್‍ ನಲ್ಲಿ ಮುಗಿಲೆತ್ತರಕ್ಕೆ ನೀರು ಚಿಮ್ಮಿರುವ ಆಶ್ಚರ್ಯಕರ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದೆ.

Advertisement

ನೀರು ಬತ್ತಿದ್ದ ಹಳೆ ಬೋರ್‍ ನಲ್ಲಿ ಇದ್ದಕ್ಕಿದ್ದಂತೆ ನೀರು ಚಿಮ್ಮುತ್ತಿರುವುದನ್ನು ಕಂಡ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದ ಶೇಖರಪ್ಪ ಎಂಬುವವರ ಜಮೀನಿನಲ್ಲಿದ್ದ ಹಳೆಯ 150 ಅಡಿ ಆಳದ ಕೊಳವೆ ಬಾವಿಯು ಬಹಳ ವರ್ಷಗಳಿಂದ ಬರಗಾಲದಿಂದಾಗಿ ಬತ್ತಿ ಹೋಗಿತ್ತು. ಈ ವರ್ಷ ಸಮೃದ್ಧ ಮಳೆಯಾದ ಹಿನ್ನೆಲೆ ತೆಂಗಿನ ತೋಟ ಉಳಿಸಿಕೊಳ್ಳುವ ಸಲುವಾಗಿ ಹಳೆಯ ಕೊಳವೆ ಬಾವಿ ಪಕ್ಕ ಹೊಸದಾಗಿ ಮತ್ತೊಂದು ಕೊಳವೆ ಬಾವಿ ಕೊರೆಸಲು ಮುಂದಾದಾಗ ಕೇವಲ 50 ಅಡಿಗೆ ನೀರು ಕಾಣಿಸಿಕೊಂಡಿದೆ. ಹೊಸ ಬೋರ್ ಪಕ್ಕದಲ್ಲಿದ್ದ ಹಳೆಯ ಕೊಳವೆ ಬಾವಿಯಲ್ಲಿ ನೀರು ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದು ನೋಡುಗರಲ್ಲಿ ಆಶ್ಚರ್ಯ ಮೂಡಿದೆ.

ಇದರಿಂದಾಗಿ ಕೇವಲ 200 ಅಡಿ ಕೊರೆಯುವಷ್ಟರಲ್ಲಿ ಬೋರ್‍ವೆಲ್ ಲಾರಿಯವರು ಹರ ಸಾಹಸಪಟ್ಟಿದ್ದರು. ನೀರು ಬೋರ್‍ವೆಲ್ ಲಾರಿಗಿಂತ ಎತ್ತರಕ್ಕೆ ಚಿಮ್ಮುತ್ತಿದ್ದನ್ನು ಕಂಡು ಜಮೀನು ಮಾಲೀಕ ಶೇಖರಪ್ಪ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಬಂದು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನೀರಿನ ವೇಗ ಜಾಸ್ತಿ ಆದ ಕಾರಣ ಹಳೆ ಬೋರ್‌ವೆಲ್ ನ ಕೇಸಿಂಗ್ ಪೈಪ್‍ಗಳನ್ನು ಬಂದ್ ಮಾಡಿ ನಂತರ ಹೊಸ ಬೋರ್ ಕೊರೆದಿದ್ದಾರೆ. ಕಡೂರಿನಲ್ಲಿ ಸತತ ಬರಗಾಲದಿಂದಾಗಿ ತೋಟದಲ್ಲಿದ್ದ ಬೋರ್‍ ಗಳು ನೀರಿಲ್ಲದೆ ಬತ್ತಿದ್ದವು.

Advertisement

2-3 ವರ್ಷಗಳ ಹಿಂದೆ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಆದರೆ, ಕಳೆದ ಹಾಗೂ ಈ ವರ್ಷ ಅರಕೆರೆ ಹಾಗೂ ದೇವನೂರು ಕೆರೆ ತುಂಬಿರುವುದರಿಂದ ಕೇವಲ 50 ಅಡಿಗೆ ನೀರು ಸಿಗುತ್ತಿರುವುದರಿಂದ ರೈತರು ಕೂಡ ಖುಷಿಯಾಗಿದ್ದಾರೆ. ಹಳೆಯ ಕೊಳವೆ ಬಾವಿಯಲ್ಲಿ ಲಾರಿಗಿಂತಲೂ ಎತ್ತರಕ್ಕೆ ನೀರು ಚಿಮ್ಮುತ್ತಿದ್ದು, ಅದನ್ನು ನೋಡಲು ತೋಟಕ್ಕೆ ಜನಸಾಗರವೇ ಹರಿದು ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next