Advertisement

ಚಿಕ್ಕೋಡಿ: ಅಪಾಯ ಮಟ್ಟ ಮೀರಿದ ಕೃಷ್ಣೆ-ಉಪನದಿಗಳು

06:03 PM Jul 22, 2024 | Team Udayavani |

■ ಉದಯವಾಣಿ ಸಮಾಚಾರ
ಚಿಕ್ಕೋಡಿ: ಕೃಷ್ಣಾ ನದಿ ಉಗಮಸ್ಥಾನ ಮಹಾಬಳೇಶ್ವರ, ಕೊಯ್ನಾ, ನವಜಾ ಮತ್ತು ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ಹಾಗೂ ರಾಜ್ಯದ ಗಡಿ ಭಾಗದ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ ಮತ್ತು ಹುಕ್ಕೇರಿ ಭಾಗದಲ್ಲಿಯೂ ನಿರಂತರವಾಗಿ ಮಳೆ ಆಗುತ್ತಿದೆ. ಹೀಗಾಗಿ ಕೃಷ್ಣಾ ಮತ್ತು ಉಪನದಿಗಳಿಗೆ 1.05 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಗಳು ಒಡಲು ದಾಟಿ ಹರಿದು ಪಕ್ಕದ ಬೆಳೆಗಳಿಗೆ ನುಗ್ಗಿವೆ.

Advertisement

ಮಹಾರಾಷ್ಟ್ರದ ಕೊಂಕಣ ಭಾಗದ ಮಹಾಬಳೇಶ್ವರ, ಕೊಯ್ನಾ, ನವಜಾ ಹಾಗೂ ಕಾಳಮ್ಮವಾಡಿ ಭಾಗದಲ್ಲಿ ಎರಡು ದಿನಗಳಿಂದ 150 ಮಿಮೀ ಗೂ ಅಧಿಕ ಮಳೆ ಸುರಿಯುತ್ತಿದೆ. ಇದರಿಂದ ಕೃಷ್ಣಾ ನದಿಗೆ ಒಂದೇ ರಾತ್ರಿಯಲ್ಲಿ 21 ಸಾವಿರ ಕ್ಯೂಸೆಕ್‌ ಮತ್ತು ದೂಧಗಂಗಾ ಮತ್ತು ವೇದಗಂಗಾ ನದಿಗೆ 5 ಸಾವಿರ ಕ್ಯೂಸೆಕ್‌ ನೀರು ಹೆಚ್ಚಳವಾಗಿದೆ.

ರಾಜ್ಯದ ಗಡಿ ಭಾಗದಲ್ಲಿ ಮೂರೂ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಇದೇ ರೀತಿ ಹೆಚ್ಚಳವಾಗುತ್ತಾ ಹೋದರೆ ಪ್ರವಾಹ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ದೂಧಗಂಗಾ ನದಿ ನೀರಿನ ಮಟ್ಟ ಹೆಚ್ಚಳದಿಂದ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನಕ್ಕೆ ನೀರು ನುಗ್ಗಿದೆ. ಅದರಂತೆ ಯಕ್ಸಂಬಾ ಮುಲ್ಲಾನಕ್ಕಿದರ್ಗಾಕ್ಕೂ ನೀರು ನೀರು ನುಗ್ಗಿದೆ. ಕೃಷ್ಣಾ ನದಿ ತಟದಲ್ಲಿ ಇರುವ ಕಲ್ಲೋಳ ಗ್ರಾಮದ ದತ್ತ ಮಂದಿರಕ್ಕೆ
ಜಲದಿಗ್ಬಂಧನವಾಗಿದೆ.

ನೀರಿನಲ್ಲಿ ಮುಳುಗಡೆಯಾಗಿರುವ ಎಲ್ಲ ದೇವಸ್ಥಾನಗಳಿಗೆ ಭಕ್ತರ ದರ್ಶನ ನಿರ್ಬಂಧಿಸಲಾಗಿದ್ದು, ಎಲ್ಲ ಕಡೆ ಪೊಲೀಸ್‌
ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

6 ಸೇತುವೆ ಮುಳುಗಡೆ: ಕೃಷ್ಣಾ, ದೂಧಗಂಗಾ ನದಿ ನೀರಿನ ಮಟ್ಟದಲ್ಲಿ ಗಣನೀಯ ಹೆಚ್ಚಳವಾಗುತ್ತಿರುವ ಪರಿಣಾಮ ಕುಡಚಿ ಸೇತುವೆ ಮತ್ತು ಚಿಕ್ಕೋಡಿ ತಾಲೂಕಿನ ಯಕ್ಸಂಬಾ-ದಾನವಾಡ ಸೇತುವೆ ಮುಳುಗುವ ಭೀತಿ ಇದೆ. ಈ ಸೇತುವೆ ಮುಳುಗಿದರೆ ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತವಾಗುತ್ತದೆ. ಈಗಾಗಲೇ ಚಿಕ್ಕೋಡಿ ಉಪವಿಭಾಗದ ಆರು ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ.

Advertisement

ದೂಧಗಂಗಾ ನದಿಯ ಚಿಕ್ಕೋಡಿ ತಾಲೂಕಿನ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಬಾರವಾಡ-ಕುನ್ನೂರ,ಜತ್ರಾಟ-ಭೀವಸಿ, ಕೃಷ್ಣಾ ನದಿಯ ಮಾಂಜರಿ-ಬಾವನ ಸವದತ್ತಿ ಸೇತುವೆಗಳು ಮುಳುಗಿವೆ. ಎಲ್ಲ ಸೇತುವೆಗಳ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಸೇತುವೆ ಹತ್ತಿರ ಜಿಲ್ಲಾಡಳಿತ ಬಿಗಿ ಭದ್ರತೆ ಒದಗಿಸಿದೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 81 ಸಾವಿರ ಕ್ಯೂಸೆಕ್‌ ನೀರು ಹರಿದು ಬಂದರೆ, ದೂಧಗಂಗಾ ಮತ್ತು ವೇದಗಂಗಾ ನದಿಗೆ 24 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1.05 ಲಕ್ಷ ಕ್ಯೂಸೆಕ್‌ ನೀರು ಹರಿದು ಹಿಪ್ಪರಗಿ ಬ್ಯಾರೇಜ್‌ಗೆ ಹೋಗುತ್ತಿದೆ. ಹಿಪ್ಪರಗಿ ಬ್ಯಾರೇಜ್‌ ದಿಂದ 87 ಸಾವಿರ ಕ್ಯೂಸೆಕ್‌ ನೀರು ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿದೆ ಎಂದು ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ತಿಳಿಸಿದ್ದಾರೆ.

ಮಳೆ ವಿವರ
ಮಹಾರಾಷ್ಟ್ರದ ಜಲಾನಯನ ಪ್ರದೇಶವಾದ ಕೊಯ್ನಾ-107 ಮಿಮೀ, ವಾರಣಾ-75ಮಿಮೀ, ಕಾಳಮ್ಮವಾಡಿ-64 ಮಿಮೀ, ಮಹಾಬಳೇಶ್ವರ-158 ಮಿಮೀ, ನವಜಾ-127ಮಿಮೀ, ರಾಧಾನಗರಿ-97 ಮಿಮೀ, ಸಾಂಗಲಿ-09 ಮಿಮೀ, ಕೊಲ್ಲಾಪೂರ-29 ಮಿಮೀ ಮಳೆ ಆಗಿದೆ. ಚಿಕ್ಕೋಡಿ-14.2 ಮಿಮೀ, ಅಂಕಲಿ-9.2 ಮಿಮೀ, ನಾಗರಮುನ್ನೊಳ್ಳಿ-10.4 ಮಿಮೀ, ಸದಲಗಾ-11.8 ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next