Advertisement

ಕ್ಷೇತ್ರ ತ್ಯಾಗದಿಂದ ಅವನತಿಯತ್ತ ಕಾಂಗ್ರೆಸ್‌: ಅಮೃತ್‌ಶೆಣೈ

04:44 PM Apr 13, 2019 | Naveen |

ತರೀಕೆರೆ: ಜೆಡಿಎಸ್‌ನ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಮೂಲತಃ ಕಾಂಗ್ರೆಸ್ಸಿಗ. ಈ ನಿರ್ಣಯದಿಂದ ಕಾಂಗ್ರೆಸ್‌ ಕಾರ್ಯಕರ್ತರು ನೋವಿನಲ್ಲಿದ್ದು ಮತವನ್ನು ಯಾರಿಗೆ ಚಲಾಯಿಸಬೇಕು ಎಂಬ ಗೊಂದಲಿದ್ದಾರೆ. ಕ್ಷೇತ್ರ ತ್ಯಾಗದಿಂದ ಕಾಂಗ್ರೆಸ್‌ ಅವನತಿ ಹಾದಿಯಲ್ಲಿದೆ ಎಂದು ಸ್ವತಂತ್ರ ಅಭ್ಯರ್ಥಿ
ಅಮೃತ್‌ ಶಣೈ ಪಿ. ಹೇಳಿದರು.

Advertisement

ಪಟ್ಟಣದಲ್ಲಿ ಮತಯಾಚಿಸಿ ಅವರು ಸುದ್ದಿಗಾರರೊದಿಗೆ ಮಾತನಾಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿಗೆ ಪೂರಕ ವಾತಾವರಣವಿತ್ತು. ಚುನಾವಣಾ ಪೂರ್ವ ಮೈತ್ರಿಗಾಗಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದು ಸರಿಯಲ್ಲ. ಹೊಂದಾಣಿಕೆ ಮಾಡಿಕೊಳ್ಳುವ ಮುನ್ನ ಲೋಕಸಭಾ ವ್ಯಾಪ್ತಿಯಲ್ಲಿ ಸಧೃಢವಾಗಿದ್ದ ಕಾಂಗ್ರೆಸ್‌ ಸ್ಥಾನ ಬಿಟ್ಟು ಕೊಡಬಾರದಿತ್ತು ಎಂದರು.

ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದರು ಸಹ ಆ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಮರ್ಥವಾದ ಅಭ್ಯರ್ಥಿ ಇರಲಿಲ್ಲ. ಎರವಲು ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರಿಗೆ ಬಿ.ಫಾರಂ ನೀಡಿ ಸ್ಪರ್ಧಿಸುವಂತೆ ಮಾಡಲಾಗಿದೆ ಎಂದರು.

ಕ್ಷೇತ್ರವನ್ನು ಬಿಟ್ಟು ಕೊಡಬಾರದು ಎಂದು ಎರಡು ಜಿಲ್ಲೆಯ ಕಾಂಗ್ರೆಸ್‌ ಪಕ್ಷದವರು ನಿರ್ಣಯಿಸಿ, ಪಕ್ಷಕ್ಕೆ ಕಳುಹಿಸಿ ಕೊಡಲಾಗಿತ್ತು, ಅಲ್ಲದೆ ಪಕ್ಷದ
ಮುಖಂಡರನ್ನು ಭೇಟಿ ಮಾಡಿ ಕಾರ್ಯಕರ್ತರ ಮನಸ್ಥಿತಿ ವಿವರಿಸಲಾಗಿತ್ತು. ಆದರೆ, ಪಕ್ಷದ ಹೈಕಮಾಂಡ್‌ ಕ್ಷೇತ್ರ ಬಿಟ್ಟು ಕೊಟ್ಟು ಕಾಂಗ್ರೆಸ್‌ಗೆ ಸೀಮಿತವಾಗಿದ್ದ ಮತದಾರರನ್ನು ಸಂಕಷ್ಟಕ್ಕೆ ದೂಡಿತು ಎಂದರು. ತಳಮಟ್ಟದ ಸಂಘಟನೆ ಹೊಂದಿದ್ದ ಕ್ಷೇತ್ರವನ್ನು ಕಾಂಗ್ರೆಸ್‌ ಹೈಕಮಾಂಡ್‌ ಜೆಡಿಎಸ್‌ಗೆ ಧಾರೆ ಎರೆದಿದ್ದು ಅಸಮರ್ಥನೀಯ.ಅಂತಹ ತಪ್ಪು ಪಕ್ಷದಲ್ಲಿ
ಮರುಕಳಿಸಬಾರದು ಎಂಬ ಕಾರಣಕ್ಕಾಗಿ ಮತ್ತು ಕಾಂಗ್ರೆಸ್‌ ಹಿತದೃಷ್ಠಿಯಿಂದ, ಮನನೊಂದ ಕಾಂಗ್ರೆಸ್‌ ಕಾರ್ಯಕರ್ತರ ಪರವಾಗಿ ಸ್ಪರ್ಧೆ ಮಾಡಿದ್ದೇನೆ.
ನಾನು ಪಕ್ಷೇತರ ಅಭ್ಯರ್ಥಿಯೇ ಹೊರತು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಲ್ಲ. ನಿಸ್ವಾರ್ಥ ಹೋರಾಟಕ್ಕಾಗಿ ಚುನಾವಣೆಯಲ್ಲಿದ್ದೇನೆ ಎಂದರು.

ಎಐಸಿಸಿ ಸದಸ್ಯನಾಗಿ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದ ಜನರ ಬಗ್ಗೆ ತೋರಿದ ನಿರ್ಲಕ್ಷತೆ ಬಗ್ಗೆ ಮತದಾರರ ಮನ ಮುಟ್ಟುವ ಕೆಲಸ ಮಾಡಿದ್ದೇನೆ.
ಶೋಭಾ ಕರಂದ್ಲಾಜೆ ಅವರಿಗೆ ಸ್ವಪಕ್ಷೀಯರೆ ಗೋಬ್ಯಾಕ್‌ ಶೋಭಾ ಎನ್ನುವ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಸಂಸದೆ ಶೋಭಾ ಸೋಲಿಗೆ ಕ್ಷೇತ್ರದಲ್ಲಿ ಪೂರಕ ವಾತಾವರಣವಿತ್ತು. ಅದನ್ನು ಬಳಸಿಕೊಳ್ಳುವಲ್ಲಿ ಪಕ್ಷ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳಿಬ್ಬರು ಅ ಧಿಕಾರದಲ್ಲಿದ್ದವರು. ಆದರೂ ಜಿಲ್ಲೆಯ ಜನತೆಗೆ ಯಾವುದೇ ಕೊಡುಗೆ ನೀಡಿಲ್ಲ.
ಅಲ್ಲಿನ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಕಾರ್ಮಿಕರಿಗೆ ಕೂಲಿ ಸಿಗದಂತಾಗಿದೆ. ಮರಳು ದೊರೆಯದೆ
ಹಲವಾರು ಕಟ್ಟಡಗಳು, ಆಶ್ರಯ ಮನೆಗಳು ನಿರ್ಮಾಣ ಹಂತದಲ್ಲಿಯೇ ಉಳಿದಿವೆ. ಪ್ರಮೋದ್‌ ಮಧ್ವರಾಜ್‌ ಅಧಿಕಾರದಲ್ಲಿದ್ದಾಗ ಇದಕ್ಕೆ ಶೋಭಾ
ಕರಂದ್ಲಾಜೆ ಕಾರಣವೇನೆಂಬುದು ಹೇಳಲಿಲ್ಲ ಎಂದು ಟೀಕಿಸಿದರು.

ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. 7 ಕುಟುಂಬದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅವರ ಕಣ್ಣೀರೋಸುವ ಕೆಲಸವನ್ನು ಈರ್ವರು ಮಾಡಲಿಲ್ಲ. ಆಧುನಿಕ ತಂತ್ರಜ್ಞಾನ ಹೊಂದಿದ್ದರು ಕೂಡ ಅವರನ್ನು ಕಂಡು ಹಿಡಿಯುವಲ್ಲಿ ಸಫಲರಾಗಿಲ್ಲ. ಚುನಾವಣೆಯ
ನಂತರ ಮೀನುಗಾರರು ನಾಪತ್ತೆಯಾಗಿರುವ ಬಗ್ಗೆ ನ್ಯಾಯಾಲಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಮೊಕದ್ದಮೆ ದಾಖಲು ಮಾಡುತ್ತೇನೆ
ಎಂದರು.

ಉಡುಪಿ ಜಿಲ್ಲೆ ವಿದ್ಯಾವಂತರನ್ನು ಉತ್ಪಾದಿಸುವ ಕಾರ್ಖಾನೆ. ವಿದ್ಯಾವಂತರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಸೃಷ್ಠಿಗೆ ವಿಪುಲವಾದ ಅವಕಾಶವಿದ್ದರೂ
ಸಹ ಸಾಫ್ಟ್‌ವೇರ್‌, ಐಟಿ ಪಾರ್ಕ್‌ಗಳ ಸ್ಥಾಪನೆ ಮಾಡುವಲ್ಲಿ ಕೇಂದ್ರ ವಿಫಲವಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಉಡುಪಿ ಇನ್ನೂ ಒಂದೆರಡು
ದಶಕಗಳಲ್ಲಿ ವೃದ್ಧಾಶ್ರಮವಾಗಲಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿವೆ. ಕಾಫಿ ಅಡಿಕೆ, ತೆಂಗು, ಮೆಣಸು ರೈತರು ಸಂಕಷ್ಟದಲ್ಲಿದ್ದಾರೆ. ಆತ್ಮಹತ್ಯೆಯ ದಾರಿಯಲ್ಲಿದ್ದಾರೆ ಇದಕ್ಕೆ ಬ್ಯಾಂಕ್‌ ಮತ್ತು ಖಾಸಗಿ ಲೇವಾದೇವಿಯವರು ಕಾರಣ. ರೈತರು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಬ್ಯಾಂಕಿನ ನೀತಿ ಕಠಿಣವಿದೆ. ಇದನ್ನು ಸರಳೀಕರಣಗೊಳಿಸಬೇಕಾಗಿದೆ. ದೇಶದ ಆರ್ಥಿಕ
ನೀತಿ ರೈತರಿಗೆ ಪೂರಕವಾಗಿರಬೇಕು ಎಂದರು. ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಜಿಲ್ಲೆ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶಗಳಿವೆ. ಈ ಭಾಗವನ್ನು ವಿಶ್ವ ವಿಖ್ಯಾತ ಪ್ರವಾಸಿ ತಾಣ ಮಾಡುವುದು ತಮ್ಮ ಗುರಿ. ಮತದಾರರು ನನ್ನನ್ನು ಆಯ್ಕೆ ಮಾಡಿದಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.
ಮನಃಶಾಸ್ತ್ರಜ್ಞೆ ಜಯಶ್ರೀಭಟ್‌, ಅಬುಬೂಕರ್‌, ವರದರಾಜ್‌ ಹಲವಾರು ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next