Advertisement

ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗದ ಪಾತ್ರ ಅಪಾರ

04:03 PM Jul 20, 2019 | Naveen |

ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅತೀ ಮುಖ್ಯವಾದದ್ದು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದಿಂದ ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ, ಪತ್ರಕರ್ತರಿಗೆ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ಮುದ್ರಣ ಮಾಧ್ಯಮ ಹಿಂದಿನಿಂದಲೂ ಇದೆ. ನಂತರ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಹುಟ್ಟಿಕೊಂಡಿತು. ಆದರು ಸಹ, ಮುದ್ರಣ ಮಾಧ್ಯಮ ಸರಳ ಭಾಷೆ ಹಾಗೂ ನಿಖರತೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ದೃಶ್ಯ ಮಾಧ್ಯಮಗಳಲ್ಲಿ ಭಾಷೆಯ ಹಿಡಿತವಿಲ್ಲದೆ ಒಂದೇ ವಿಷಯವನ್ನು ಅತಿರೇಖವಾಗಿ ಬಿಂಬಿಸಲಾಗುತ್ತಿದೆ. ಅದೇ ರೀತಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಹಲವು ಸುದ್ದಿಗಳು ಸತ್ಯವೋ ಅಸತ್ಯವೋ ಎಂಬ ಸಂಶಯ ಜನರಲ್ಲಿ ಕಾಡುತ್ತವೆ ಎಂದರು.

ಮುದ್ರಣ ಮಾಧ್ಯಮ ಇನ್ನಷ್ಟು ಗಟ್ಟಿಗೊಳ್ಳಬೇಕು ಹಾಗೂ ಸತ್ಯಕ್ಕೆ ಹತ್ತಿರವಾಗಬೇಕು. ಒಂದು ಸುಳ್ಳು ಸುದ್ದಿ ಸಮಾಜದ ಮೇಲೆ ಗಾಢ ಪರಿಣಾಮ ಬೀರುತ್ತದೆ. ಆದ್ದರಿಂದ, ಒಂದು ವಿಷಯವನ್ನು ಸುದ್ದಿ ಮಾಡಬೇಕಾದರೆ ಅತ್ಯಂತ ಎಚ್ಚರ ವಹಿಸಬೇಕು ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಬರೆಯಬೇಕೆಂದು ಕಿವಿಮಾತು ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ ಮಾತನಾಡಿ, ದೇಶದಲ್ಲಿ ಅನೇಕ ಜಾತಿ, ಮತಗಳಿವೆ. ಧರ್ಮಕ್ಕೆ ಅನುಸಾರವಾದ ಧರ್ಮಗ್ರಂಥಗಳಿವೆ. ಆದರೆ, ಇಡೀ ಭಾರತೀಯರಿಗೆ ಸಂವಿಧಾನವೇ ಪವಿತ್ರ ಗ್ರಂಥ. ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರೂ ಆಧಾರ ಸ್ತಂಭಗಳ ಜೊತೆಗೆ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕಾರ್ಯ ನಿರ್ವಹಿಸುತ್ತಿರುವುದು ಈ ರಂಗದ ಮಹತ್ವ ತಿಳಿಸುತ್ತದೆ ಎಂದರು.

ಪತ್ರಿಕಾ ರಂಗ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾದ ವಾಕ್‌ ಸ್ವಾತಂತ್ರ್ಯದ ವಿಧಿಯಡಿ ಕಾರ್ಯನಿರ್ವಹಿಸುತ್ತದೆ. ಹಾಗಂತ ಏನು ಬೇಕಾದರೂ ಬರೆಯಲು ಸಾಧ್ಯವಿಲ್ಲ. ಅದು ನಿರ್ಬಂಧನೆಗಳನ್ನು ಒಳಗೊಂಡಿದೆ. ಪತ್ರಿಕಾ ರಂಗ ಎಂದಾಕ್ಷಣ ಮಹಾತ್ಮ ಗಾಂಧೀಜಿ ಆಫ್ರಿಕಾ ದೇಶದಲ್ಲಿ ಹುಟ್ಟುಹಾಕಿದ ಇಂಡಿಯನ್‌ ಓಪಿನಿಯನ್‌ ಪತ್ರಿಕೆ. ಅದು ಇಡೀ ಆಫ್ರಿಕಾ ದೇಶಕ್ಕೆ ಮಾದರಿಯಾಯಿತು. ಅದೇ ರೀತಿ, ಭಾರತದಲ್ಲಿ ಹುಟ್ಟುಹಾಕಿದ ಯಂಗ್‌ ಇಂಡಿಯಾ ಮತ್ತು ಹರಿಜನ ಪತ್ರಿಕೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪತ್ರಿಕಾ ರಂಗ ಇರುವುದು ಹಣ ಗಳಿಸಲು ಅಲ್ಲ. ಜನರ ಸೇವೆಗೆ ಎಂಬ ಮಹಾತ್ಮ ಗಾಂಧೀಜಿ ಹೇಳಿಕೆ ಅಕ್ಷರಶಃ ಸತ್ಯ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ತಿಪ್ಪೇರುದ್ರಪ್ಪ ಮಾತನಾಡಿದರು. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್‌ ಉಪನ್ಯಾಸ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿಎನ್‌ಎ ಮೊದಲಿಯಾರ್‌ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತ ಅನಂತನಾಡಿಗ್‌, ಸರ್ಕಾರಿ ಮಲ್ಲೇಗೌಡ ಆಸ್ಪತ್ರೆ ಮರಣೋತ್ತರ ಪರೀಕ್ಷಾ ಸಹಾಯಕ ಜೆ.ಚನ್ನಕೇಶವ, ಸ್ಫಟಿಕ್‌ ಹೇರ್‌ಸ್ಟೈಲ್ ಮಾಲಿಕ ಸಿ.ಎನ್‌.ವರದರಾಜ್‌ ಅವರನ್ನು ಸನ್ಮಾನಿಸಲಾಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್ಕುಮಾರ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ವೆಂಕಟೇಶ್‌, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳ ಹುಲ್ಲಳ್ಳಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್‌, ಖಜಾಂಚಿ ಎಂ.ಬಿ.ಅಶೋಕ್‌ಕುಮಾರ್‌, ಕಾರ್ಯದರ್ಶಿ ಗಿರೀಶ್‌ ಬೀರೂರು, ಎನ್‌.ಆರ್‌.ಪುರ ತಾಲೂಕು ಅಧ್ಯಕ್ಷ ನಾಗರಾಜ್‌ಗೌಡ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next