Advertisement

ಸಂತ್ರಸ್ತರ ರಕ್ಷಿಸಿದ ಯೋಧರಿಗೆ ಜಿಲ್ಲಾಡಳಿತ ಬೀಳ್ಕೊಡುಗೆ

12:10 PM Aug 14, 2019 | Naveen |

ಚಿಕ್ಕಮಗಳೂರು: ನಿರಂತರ ಮಳೆ, ಕುಸಿಯುತ್ತಿರುವ ಗುಡ್ಡಗಳು, ಉಕ್ಕಿ ಹರಿಯುವ ನದಿ, ಸಂಪರ್ಕಗಳ ಕಡಿತ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ತಮ್ಮ ಜೀವದ ಹಂಗು ತೊರೆದು ಮತ್ತೂಂದಿಷ್ಟು ಜೀವಗಳ ರಕ್ಷಣೆಗೆ ಧಾವಿಸಿದ್ದ ಅರೆಸೇನಾ ಪಡೆಯನ್ನು ಮಂಗಳವಾರ ಜಿಲ್ಲಾಡಳಿತ ಕೃತಜ್ಞತಾ ಪೂರ್ವಕವಾಗಿ ಬೀಳ್ಕೊಟ್ಟಿತು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌, ಸೇನಾ ತಂತ್ರಜ್ಞ ಕಾರ್ಯಪಡೆ ಮುಖ್ಯಸ್ಥ ಕರ್ನಲ್ ಕಮಲೇಶ್‌ ಎಸ್‌.ಬಿಷ್ಟ್ ಮತ್ತು ಕ್ಯಾಪ್ಟನ್‌ ಬಿ.ನಾಗಮಲ್ಲಿಕಾರ್ಜುನ ರಾವ್‌ ಅವರ ನೇತೃತ್ವದ 34 ಮಂದಿ ಸೇನಾ ತಾಂತ್ರಿಕ ಕಾರ್ಯಪಡೆ ಸಿಬ್ಬಂದಿ ಕೈಗೊಂಡ ರಕ್ಷಣಾ ಕಾರ್ಯವನ್ನು ವಿವರಿಸಿ ಅಭಿನಂದಿಸಿದರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಮೂಡಿಗೆರೆ ತಾಲೂಕಿನ ಗ್ರಾಮಗಳಾದ ಆಲೇಕಾನ್‌ ಹೊರಟ್ಟಿ, ದುರ್ಗದಹಳ್ಳಿ, ಅಲಗಡಕದಲ್ಲಿ ಗಾಳಿ, ಮಳೆಗೆ ಸಿಲುಕಿ ಹೊರಜಗತ್ತಿನ ಸಂಪರ್ಕ ವಂಚಿತರಾಗಿ ಆತಂಕದಲ್ಲಿದ್ದ ಕುಟುಂಬಗಳನ್ನು ಪ್ರತಿಕೂಲ ವಾತಾವರಣದ ನಡುವೆಯೂ ರಕ್ಷಿಸಿದ ಸೇನಾ ತಾಂತ್ರಿಕ ಪಡೆಯ ಸಾಹಸವನ್ನು ಮೆಲುಕು ಹಾಕಲಾಯಿತು.

ಆಲೇಕಾನ್‌ ಹೊರಟ್ಟಿ ಗುಡ್ಡ ಕುಸಿತದಿಂದ ನಡುಗಡ್ಡೆಯಾಗಿತ್ತು. ಮಳೆಯ ಹೊಡೆತಕ್ಕೆ ರಸ್ತೆ ಕುಸಿದು ನಾಶವಾಗಿತ್ತು. ಅಲ್ಲಿನ 76 ಮಂದಿ ನಿವಾಸಿಗಳು ಹೊರಹೋಗಲಾಗದೆ, ಒಳಗಿರಲಾರದೆ ಅತಂತ್ರ ಸ್ಥಿತಿಯಲ್ಲಿ ಆತಂಕಕ್ಕೊಳಗಾಗಿದ್ದರು. ಅವರುಗಳನ್ನು ಹೆಲಿಕಾಪ್ಟರ್‌ ಮೂಲಕ ಹೊರಕ್ಕೆ ತರುವ ಪ್ರಯತ್ನ ಪ್ರತಿಕೂಲ ಹವಾಮಾನದಿಂದ ಕೈಗೂಡಲಿಲ್ಲ. ಇಂತಹ ಸ್ಥಿತಿಯಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ಅನುಭವ ಹೊಂದಿರುವ ಸೇನಾ ಕಾರ್ಯಪಡೆಯ ಮುಖ್ಯಸ್ಥ ಕಮಲೇಶ್‌ ಎಸ್‌.ಬಿಷ್ಟ್ ಎಲ್ಲಾ ರೀತಿಯ ನೈಸರ್ಗಿಕ ಅಡೆತಡೆ ದಾಟಿ ಆ ಜನರನ್ನು ರಕ್ಷಿಸುವ ಕೆಲಸಕ್ಕೆ ತಮ್ಮ ಪಡೆಯನ್ನು ಸಜ್ಜುಗೊಳಿಸಿದರು ಎಂದು ಡಾ| ಕುಮಾರ್‌ ಹೇಳಿದರು.

ಒಟ್ಟು 8 ಕಿ.ಮೀ.ದೂರವನ್ನು ನಡೆದು ಕ್ರಮಿಸಬೇಕಾಗಿತ್ತು. ಮಣ್ಣು ಕುಸಿತದಿಂದ ರಸ್ತೆ ನಾಶವಾಗಿತ್ತು. ಕಾಡಿನಲ್ಲಿ ಕಾಲುಹಾದಿ ನಿರ್ಮಿಸಿಕೊಂಡು ಪ್ರತಿ 200 ಮೀಟರ್‌ಗೆ ಒಂದು ಹಗ್ಗ ಕಟ್ಟಿಕೊಂಡು 75 ಜನರನ್ನು ಹೊರತರಬೇಕಾಯಿತು. ಸ್ಥಳೀಯ ಸಾಮಗ್ರಿಗಳನ್ನೇ ಬಳಸಿ ತಮ್ಮ ತಾಂತ್ರಿಕ ಕೌಶಲ್ಯದಿಂದ ಆ.11 ರಂದು ಈ ಪಡೆ ಸಣ್ಣ ಸೇತುವೆ ಹಾಗೂ ಕಾಲುಸಂಕಗಳನ್ನು ನಿರ್ಮಿಸಿಕೊಂಡು 6 ಗಂಟೆಗಳ ಕಾಲ 8 ಕಿ.ಮೀ.ದೂರ ನಡೆದು ಗ್ರಾಮ ಪ್ರವೇಶಿಸಿತು ಎಂದರು.

Advertisement

ವೈದ್ಯಕೀಯ ನೆರವನ್ನು ತಕ್ಷಣ ನೀಡಬೇಕಾದ ಅಗತ್ಯವಿದ್ದ 6 ಮಂದಿ ಹಿರಿಯರನ್ನು 8 ಕಿ.ಮೀ.ದೂರ ಹೊತ್ತು ಸಾಗಿಸಿ ರಕ್ಷಿಸಲಾಯಿತು. ಈ ಹಂತದಲ್ಲಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅರ್ಧ ದಾರಿ ವರೆಗೆ ಈ ಪಡೆಯ ಜೊತೆಯಲ್ಲೆ ಇದ್ದರೆ, ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಹರೀಶ್‌ ಪಾಂಡೆ ಅವರ ಪ್ರೋತ್ಸಾಹ ಮತ್ತು ನೆರವನ್ನು ತಾಂತ್ರಿಕ ಪಡೆ ನೆನೆದುಕೊಂಡಿತು. ಕಂದಾಯ ಉಪವಿಭಾಗಾಧಿಕಾರಿ ಕೆ.ಎಚ್. ಶಿವಕುಮಾರ್‌ ಈ ಕಾರ್ಯಪಡೆ ಜೊತೆ ಇದ್ದು, ಕುಟುಂಬಗಳ ರಕ್ಷಣೆಗೆ ನೆರವಾದರು.

ಈ ಗ್ರಾಮದ 48 ವರ್ಷದ ನಾರಾಯಣಗೌಡ ಪಾರ್ಶ್ವವಾಯು ಪೀಡಿತರಾಗಿದ್ದು, ಅವರನ್ನು ರಕ್ಷಿಸಲು ಸ್ಥಳೀಯವಾಗಿ ಸಿಕ್ಕ ವಸ್ತುಗಳಿಂದಲೆ ಸ್ಟ್ರೆಚರ್‌ ನಿರ್ಮಿಸಿ ಹೊತ್ತು ತಂದು ಎಲ್ಲಾ 76 ಮಂದಿಯನ್ನು ಪರಿಹಾರ ಕೇಂದ್ರಕ್ಕೆ ತಂದು ಸೇರಿಸಲಾಯಿತು.

ಆನಂತರ ಎದುರಾದದ್ದು ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಮತ್ತು ಅಲಗಡಕ ಗ್ರಾಮದಲ್ಲಿ ಸಿಕ್ಕಿಹಾಕಿಕೊಂಡು ನೆರವಿನ ನಿರೀಕ್ಷೆಯಲ್ಲಿದ್ದ 2 ಕುಟುಂಬಗಳು. ವಯಸ್ಸಾದವರೇ ಹೆಚ್ಚಾಗಿದ್ದ ಈ ಕುಟುಂಬಗಳಲ್ಲಿ ಒಬ್ಬರು ಕ್ಯಾನ್ಸರ್‌ಪೀಡಿತರಾದರೆ, ಮತ್ತೂಬ್ಬರು ಬೆನ್ನುಹುರಿ ಸಮಸ್ಯೆಯಿಂದ ನರಳುತ್ತಿದ್ದರು. ಅಷ್ಟೂ ಮಂದಿಯನ್ನು ನಿಸರ್ಗದ ಎಲ್ಲಾ ರೀತಿಯ ವೈಪರೀತ್ಯಗಳನ್ನು ಎದುರಿಸಿ ಪರಿಹಾರ ಕೇಂದ್ರಕ್ಕೆ ತಂದು ಆಶ್ರಯ ಒದಗಿಸಲಾಯಿತು. ಜಿಲ್ಲಾಡಳಿತದ ಮನವಿ ಆಧರಿಸಿ ಈ ಕಾರ್ಯಪಡೆ ಆ.10 ರಂದು ಜಿಲ್ಲೆಗೆ ಧಾವಿಸಿ ರಾತ್ರಿ, ಹಗಲೆನ್ನದೆ ಜಿಲ್ಲೆಯ ಜನತೆಯ ರಕ್ಷಣೆಗೆ ಮುಂದಾಯಿತೆಂದು ಡಾ| ಕುಮಾರ್‌ ವಿವರಿಸಿದರು.

ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಮಳೆ ಕಡಿಮೆಯಾಗಿದೆ. ರಕ್ಷಣಾ ಕಾರ್ಯ ಬಹುತೇಕ ಮುಕ್ತಾಯವಾದ ಹಿನ್ನೆಲೆಯಲ್ಲಿ ಮತ್ತೆ ಅಗತ್ಯಬಿದ್ದರೆ ಕರೆಸಿಕೊಳ್ಳಬಹುದು. ಹಾಗಾಗಿ, ಮಂಗಳವಾರ ಈ ಪಡೆ ಹಿಂತಿರುಗುತ್ತಿದೆ ಎಂದು ತಿಳಿಸಿದರು. ನಂತರ ಹಸ್ತಲಾಘವ ನೀಡಿ, ಜೊತೆಗೆ ಒಂದು ಶ್ಲಾಘನಾ ಪತ್ರವನ್ನು ಕೈಗಿತ್ತು ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next